ಕನ್ನಡ ಸುದ್ದಿ  /  ಚುನಾವಣೆಗಳು  /  Vishwanath Politics: ಕಾಂಗ್ರೆಸ್‌ ತೆಕ್ಕೆಗೆ ಹೊರಳಿದ್ದ ಅಡಗೂರು ವಿಶ್ವನಾಥ್‌ ಮತ್ತೆ ಜಾ.ದಳ ಬೆಂಬಲಕ್ಕೆ ನಿಂತಿರುವುದು ಏಕೆ?

Vishwanath Politics: ಕಾಂಗ್ರೆಸ್‌ ತೆಕ್ಕೆಗೆ ಹೊರಳಿದ್ದ ಅಡಗೂರು ವಿಶ್ವನಾಥ್‌ ಮತ್ತೆ ಜಾ.ದಳ ಬೆಂಬಲಕ್ಕೆ ನಿಂತಿರುವುದು ಏಕೆ?

ರಾಜಕಾರಣದಲ್ಲೂ ಯಾರೂ ಶಾಶ್ವತ ಮಿತ್ರರೂ ಅಲ್ಲ. ಶತ್ರುಗಳೂ ಅಲ್ಲ. ಹಿರಿಯ ರಾಜಕಾರಣಿ ಎಚ್‌.ವಿಶ್ವನಾಥ್‌ ಅವರಿಗೆ ಈ ಮಾತು ಹೆಚ್ಚು ಅನ್ವಯಿಸಬಹುದು.

ಲೋಕಸಭೆ ಚುನಾವಣೆಯಲ್ಲಿ ಜಾ.ದಳ ಬೆಂಬಲಿಸಿದ ಮಾಜಿ ಸಚಿವ ಎಚ್‌.ವಿಶ್ವನಾಥ್‌ ಅವರಿಗೆ ಎಚ್.ಡಿ.ಕುಮಾರಸ್ವಾಮಿ ಹಸ್ತಲಾಘವ.
ಲೋಕಸಭೆ ಚುನಾವಣೆಯಲ್ಲಿ ಜಾ.ದಳ ಬೆಂಬಲಿಸಿದ ಮಾಜಿ ಸಚಿವ ಎಚ್‌.ವಿಶ್ವನಾಥ್‌ ಅವರಿಗೆ ಎಚ್.ಡಿ.ಕುಮಾರಸ್ವಾಮಿ ಹಸ್ತಲಾಘವ.

ಮೈಸೂರು: ನೇರ, ನಿಷ್ಠುರ ಮಾತುಗಳ ಮೂಲಕ ಕರ್ನಾಟಕದ ರಾಜಕಾರಣದಲ್ಲಿ ಸದಾ ಸುದ್ದಿಯಲ್ಲಿರುವ ಹಿರಿಯ ರಾಜಕಾರಣಿ ಅಡಗೂರು ಎಚ್‌ ವಿಶ್ವನಾಥ್‌ ಲೋಕಸಭೆ ಚುನಾವಣೆಗೆ ಮತ್ತೆ ಬೆಂಬಲವನ್ನು ಜಾ.ದಳಕ್ಕೆ ಘೋಷಿಸಿದ್ದಾರೆ. ಅಡಗೂರು ವಿಶ್ವನಾಥ್‌ ಈಗಿರುವ ಜನಪ್ರತಿನಿಧಿಗಳಲ್ಲಿ ಖರ್ಗೆ ಅವರನ್ನು ಬಿಟ್ಟರೆ ಅತ್ಯಂತ ಹಿರಿಯರು. 1978 ರಲ್ಲಿ ಕಾಂಗ್ರೆಸ್‌ ಶಾಸಕರಾದವರು. ಬಳಿಕ ಕೆಆರ್‌ನಗರ ಕ್ಷೇತ್ರವನ್ನು ಮೂರು ಬಾರಿ ಪ್ರತಿನಿಧಿಸಿ, ಮೈಸೂರು ಸಂಸದರೂ ಆಗಿದ್ದರು. ಆನಂತರ ಜಾ.ದಳ ಸೇರಿದ್ದ ಅವರು ಹುಣಸೂರು ಕ್ಷೇತ್ರದಿಂದ ಶಾಸಕರಾದರು. 2019ರಲ್ಲಿ ಆಗಿನ ಕಾಂಗ್ರೆಸ್‌ ಜಾ.ದಳ ಸಮ್ಮಿಶ್ರ ಸರ್ಕಾರ ಕೆಡವಿದ ಶಾಸಕರ ಪಟ್ಟಿಯಲ್ಲಿ ಇವರೂ ಇದ್ದರು. ಆನಂತರ ಬಿಜೆಪಿ ಸೇರಿ ಹುಣಸೂರು ಕ್ಷೇತ್ರದಿಂದಲೇ ಮರು ಚುನಾವಣೆ ಎದುರಿಸಿದರೂ ಗೆಲ್ಲಲು ಆಗಲಿಲ್ಲ. ಸಚಿವ ಸ್ಥಾನವೂ ವಿಶ್ವನಾಥ್‌ ಅವರಿಗೆ ಸಿಕ್ಕಿರಲಿಲ್ಲ. ಆನಂತರ ಎಂಎಲ್ಸಿಯಾಗಿ ಸಾಹಿತಿಗಳ ಕೋಟಾದಡಿ ನೇಮಕ ಮಾಡಲಾಗಿತ್ತು. ಇದಾದ ಬಳಿಕ ಬಿಜೆಪಿಯಿಂದ ದೂರವೇ ಉಳಿದ ವಿಶ್ವನಾಥ್‌ ಕಾಂಗ್ರೆಸ್‌ ಕಡೆಗೆ ವಾಲಿದ್ದರು. ಮೋದಿ ವಿರುದ್ದ ಟೀಕಾಪ್ರಹಾರ ಮುಂದುವರೆಸಿದ್ದರು. ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ಏಕಾಏಕಿ ಯೂ ಟರ್ನ್‌ ಹೊಡೆದು ಮತ್ತೆ ಜಾ.ದಳ ಕಡೆಗೆ ವಾಲಿದ್ದಾರೆ. ಇದು ರಾಜಕೀಯವಾಗಿ ಚರ್ಚೆಗೂ ಗ್ರಾಸವಾಗಿದೆ. ಮೂಲಕ ಜಾ.ದಳ ಬಿಜೆಪಿ ಮೈತ್ರಿ ಬೆಂಬಲಿಸಿದ್ದಾರೆ. ಇದಕ್ಕೆ ಕಾರಣಗಳು ಹಲವು.

  • ವಿಶ್ವನಾಥ್‌ ಅವರು ಮೈಸೂರು- ಕೊಡಗು ಸಂಸದರಾಗಿ ಈ ಭಾಗದಲ್ಲಿ ರಾಜಕಾರಣದಲ್ಲಿ ಸಕ್ರಿಯರು. ಅವರು ಈ ಹಿಂದೆ ಪ್ರತಿನಿಧಿಸುವ ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರ ಮಂಡ್ಯ ಲೋಕಸಭಾ ಕ್ಷೇತ್ರದ ಭಾಗ. ಕುಮಾರಸ್ವಾಮಿ ಅವರು ಈಗ ಮಂಡ್ಯ ಕ್ಷೇತ್ರದ ಅಭ್ಯರ್ಥಿಯಾಗಿದ್ದರಿಂದ ಅವರನ್ನು ಬೆಂಬಲಿಸಿದ್ದಾರೆ.
  • ವಿಶ್ವನಾಥ್‌ ಅವರ ಮಗ ಅಮಿತ್‌ ದೇವರಹಟ್ಟಿ ಹಿಂದೆ ಜಿಪಂ ಸದಸ್ಯರಾಗಿದ್ದವರು. ಅವರಿಗೆ ರಾಜಕೀಯ ಭವಿಷ್ಯ ಗಮನದಲ್ಲಿಟ್ಟುಕೊಂಡು ಜಾ.ದಳ ಬೆಂಬಲಿಸಿರುವ ಸಾಧ್ಯತೆ ಅಧಿಕ.
  • ಮುಂದೆ ವಿಧಾನಸಭೆ ಚುನಾವಣೆಗೆ ಟಿಕೆಟ್‌ ಕೇಳುವುದು ಇಲ್ಲವೇ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಮಗನನ್ನು ಜಾ.ದಳದಿಂದ ಗೆಲ್ಲಿಸಿ ಅಧ್ಯಕ್ಷ ಸ್ಥಾನ ಮಾಡುವ ಸಾಧ್ಯತೆಗಳೂ ಹೆಚ್ಚಾಗಿವೆ.
  • ಈ ಬಾರಿ ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಮಗನಿಗೆ ಕಾಂಗ್ರೆಸ್‌ನಿಂದ ಟಿಕೆಟ್‌ ಕೇಳಿದ್ದರು. ಆದರೆ ಸಿಎಂ ಸಿದ್ದರಾಮಯ್ಯ ಅವರಿಂದ ಪೂರಕ ಸ್ಪಂದನೆ ಸಿಗದೇ ಇರುವುದು ಅವರ ಅಸಮಾಧಾನಕ್ಕೆ ಕಾರಣವಾಗಿತ್ತು
  • ಸಿದ್ದರಾಮಯ್ಯ ಅವರು ಮಗನ ಭವಿಷ್ಯದ ಕುರಿತು ಯಾವುದೇ ರೀತಿಯಲ್ಲೂ ಭರವಸೆ ನೀಡದೇ ಇದ್ದುದರಿಂದ ಕಾಂಗ್ರೆಸ್‌ನಿಂದ ವಿಮುಖರಾದರು. ಆನಂತರ ಮೈಸೂರಲ್ಲಿ ಎಂ.ಲಕ್ಷ್ಮಣ್‌ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿಸಿದ್ದರು. ಚಾಮರಾಜನಗರ ಲೋಕಸಭೆ ಕ್ಷೇತ್ರಕ್ಕೆ ಸಚಿವ ಮಹದೇವಪ್ಪ ಅವರ ಪುತ್ರನಿಗೆ ಅವಕಾಶ ನೀಡಿದಂತೆ ನನ್ನ ಮಗನಿಗೆ ಮೈಸೂರಲ್ಲಿ ಅವಕಾಶ ಮಾಡಿಕೊಡಿ ಎನ್ನುವ ಬೇಡಿಕೆಗೆ ಮಾನ್ಯತೆ ಸಿಕ್ಕಿರಲಿಲ್ಲ.
  • ಅಸಮಾಧಾನಗೊಂಡಿದ್ದ ವಿಶ್ವನಾಥ್‌ ಅವರು ಖುದ್ದು ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದ್ದರು. ಮೈಸೂರಿನಲ್ಲಿ ರಾಜವಂಶಸ್ಥರಿಗೆ ಮತ ನೀಡಿ ಎಂದು ಬಹಿರಂಗವಾಗಿಯೇ ಹೇಳಿದ್ದರು.
  • ವಿಧಾನಪರಿಷತ್‌ ಸದಸ್ಯರಾಗಿ ಬಿಜೆಪಿ ನೇಮಕ ಮಾಡಿದೆ. ಅದೇ ಪಕ್ಷದ ವಿರುದ್ದ ವಿಶ್ವನಾಥ್‌ ಟೀಕಾ ಪ್ರಹಾರ ನಡೆಸಿದ್ದರಿಂದ ಬಿಜೆಪಿ ಮುಖಂಡರು ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದರು. ಸದ್ಯ ಕರ್ನಾಟಕದಲ್ಲಿ ರಾಜ್ಯಪಾಲರು ಬಿಜೆಪಿಯವರೇ ಇರುವುದರಿಂದ ಎಂಎಲ್ಸಿ ಸ್ಥಾನದಿಂದ ವಜಾ ಮಾಡುವ ಆತಂಕವೂ ವಿಶ್ವನಾಥ್‌ ಅವರಿಗೆ ಇತ್ತು. ಮೈತ್ರಿಗೆ ಬೆಂಬಲಿಸಿ ಸದ್ಯ ಅದರಿಂದ ಪಾರಾಗಬಹುದು ಎನ್ನುವ ಲೆಕ್ಕಾಚಾರವೂ ಹೊಸ ನಿರ್ಧಾರದ ಹಿಂದೆ ಇರಬಹುದು.