Prashanth Sambargi: ಶಿವರಾಜ್ಕುಮಾರ್ ವಿರುದ್ಧದ ಪೋಸ್ಟ್ ಡಿಲೀಟ್ ಮಾಡಿ ಅವರೊಂದಿಗಿನ ಫೋಟೋ ಹಂಚಿಕೊಂಡ ಪ್ರಶಾಂತ್ ಸಂಬರ್ಗಿ
ತಂದೆಯ ಬಯಕೆಯಂತೆ ಶಿವರಾಜ್ಕುಮಾರ್ ರಾಜಕೀಯದಿಂದ ದೂರವಾಗಿದ್ದಾರೆ. ನಾನು ಅವರ ಬಗ್ಗೆ ಬರೆದಿರುವ ನನ್ನ ಪೋಸ್ಟನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ ಮತ್ತು ಶಿವಣ್ಣ ಮತ್ತು ಅವರ ಅಭಿಮಾನಿಗಳಿಗೆ ನೋಯಿಸಬಾರದು ಎಂದು ನಾನು ಬಯಸುತ್ತೇನೆ ಎಂಬುದಾಗಿ ಬರೆದುಕೊಂಡಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸ್ಪರ್ಧಿಗಳ ಅಬ್ಬರದ ಪ್ರಚಾರದ ಜೊತೆಗೆ ಟೀಕೆ ಪ್ರತಿಟೀಕೆಗಳು ಕೂಡಾ ಜೋರಾಗುತ್ತಿವೆ. ಈ ಬಾರಿ ಕೂಡಾ ಸ್ಟಾರ್ ಪ್ರಚಾರಕರು ಪಕ್ಷಗಳ ಪರ ಕ್ಯಾಂಪೇನ್ ಮಾಡಿ ಗಮನ ಸೆಳೆದಿದ್ದರು. ಅದರಲ್ಲಿ ಸ್ಯಾಂಡಲ್ವುಡ್ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದರು. ಇದೇ ವಿಚಾರವಾಗಿ ಮಾಜಿ ಬಿಗ್ ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ಶಿವರಾಜ್ಕುಮಾರ್ ಬಗ್ಗೆ ವ್ಯಂಗ್ಯವಾಡಿದ್ದರು.
ಇದನ್ನೂ ಓದಿ: ದರ್ಶನ್ ಫೋಟೋ ಮೇಲೆ ಲವ್ ಯೂ ಎಂದು ಆಟೋಗ್ರಾಫ್ ಬರೆದ ಸುದೀಪ್; ಇದು ಕನಸೋ ನನಸೋ ಗೊತ್ತಾಗ್ತಿಲ್ಲ ಎಂದ ಅಭಿಮಾನಿಗಳು
''ಶಿವಣ್ಣ ಎಂದಿಗೂ ಸಿನಿಮಾ ಸ್ಕ್ರಿಪ್ಟ್ ಕೇಳುವುದಿಲ್ಲ. ಅವರಿಗೆ ಪೇಮೆಂಟ್ ಬಹಳ ಮುಖ್ಯ, ಒಪ್ಪಿಕೊಂಡಿದ್ದ ಸಿನಿಮಾ ಮಾಡ್ತಾರೆ, ತುಂಬಾ ಎಮೋಷನಲ್ ಜೀವಿ, ನಟಿಸಿದ ಸಿನಿಮಾ ಫ್ಲಾಪ್ ಆದ್ರೂ ಅವರು ಕೇರ್ ಮಾಡುವುದಿಲ್ಲ. ಮತ್ತೆ ಪೇಮೆಂಟ್ ಪಡೆದು ಮುಂದಿನ ಸಿನಿಮಾ ಸೈನ್ ಮಾಡ್ತಾರೆ. ಅದೇ ಫಾರ್ಮುಲಾ ರಾಜಕೀಯದಲ್ಲೂ ಅನುಸರಿಸುತ್ತಿದ್ದಾರೆ. ಕ್ಯಾಂಡಿಡೇಟ್ ಗೆದ್ರೆ ಏನು ಸೋತ್ರೆ ಏನು ಎಲ್ಲಾ ಒಂದೇ, ಸೋತರೆ ಏನು ಎಲ್ಲವೂ ಒಂದೇ, ಏನೋ ಹೇಳ್ತಾರಲ್ಲ ಗೆದ್ರೆ ಬೆಟ್ಟ ಇಲ್ಲಾಂದ್ರೆ.. ಬಂತಾ ಪ್ಯಾಕೆಟ್ ಸರಿ ಆಲ್ರೈಟ್ ಮುಂದಕ್ಕೆ ಹೋಗೋಣ'' ಎಂದು ಪ್ರಶಾಂತ್ ಸಂಬರ್ಗಿ ವ್ಯಂಗ್ಯವಾಗಿ ಬರೆದುಕೊಂಡಿದ್ದರು. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಶಿವರಾಜ್ಕುಮಾರ್ ಅಭಿಮಾನಿಗಳು ಸಂಬರ್ಗಿ ವಿರುದ್ಧ ಕೆರಳಿದ್ದರು. ಕೂಡಲೇ ಕ್ಷಮೆ ಯಾಚಿಸಬೇಕೆಂಬ ಪಟ್ಟು ಹಿಡಿದಿದ್ದರು.
ತಮ್ಮ ವಿರುದ್ಧದ ಈ ಆರೋಪಕ್ಕೆ ಶಿವಣ್ಣ ಕೂಡಾ ಪ್ರತಿಕ್ರಿಯಿಸಿ ''ಹೌದಾ, ನಮಗೆ ಹಣ ಮುಖ್ಯ ಅಂತಾ? ಹಾಗಿದ್ರೆ ನಮ್ಮ ಬಳಿ ದುಡ್ಡಿಲ್ವಾ? ದಯವಿಟ್ಟು ಈ ಪದಗಳನ್ನು ಹಿಂತೆಗೆದುಕೊಳ್ಳಿ. ಹೀಗೆ ಮಾತನಾಡುವುದು ತಪ್ಪು. ನನ್ನ ಕೈಯಲ್ಲಿ ಹೆಚ್ಚು ಸಿನಿಮಾಗಳಿವೆ ಎಂದ ಮಾತ್ರಕ್ಕೆ ಬೇಡದಿರುವುದನ್ನೆಲ್ಲಾ ಮಾತನಾಡುವುದು ಸರಿಯಲ್ಲ. ನಾನು ಹಣ ಪಡೆದು ಪ್ರಚಾರ ಮಾಡಲು ಬಂದಿಲ್ಲ. ಹೃದಯದ ಮಾತು ಕೇಳಿ ಬಂದಿದ್ದೇನೆ. ಮನುಷ್ಯನಾಗಿ ಬಂದಿದ್ದೇನೆ, ಪ್ರೀತಿ, ವಿಶ್ವಾಸ ನಂಬಿಕೆಗಾಗಿ ಬಂದಿದ್ದೇನೆ. ನಾನು ಇಲ್ಲಿ ಜಗದೀಶ್ ಶೆಟ್ಟರೆ ಹೊರತುಪಡಿಸಿ ಬೇರೆ ಯಾರ ಬಗ್ಗೆಯೂ ಮಾತನಾಡಿಲ್ಲ'' ಎಂದು ಪ್ರತಿಕ್ರಿಯಿಸಿದ್ದರು.
ಮದುವೆ ಆಗಲೆಂದೇ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದೀರ ಎಂದವರಿಗೆ ಕಾನೂನು ಪಾಠ ಮಾಡಿದ ಖುಷ್ಬೂ ಸುಂದರ್
ಸೋಷಿಯಲ್ ಮೀಡಿಯಾದಲ್ಲಿ ತಮ್ಮ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ತಾವು ಮಾಡಿದ ಪೋಸ್ಟ್ ಡಿಲೀಟ್ ಮಾಡಿರುವ ಪ್ರಶಾಂತ್ ಸಂಬರ್ಗಿ, ಶಿವಣ್ಣ ಜೊತೆಗಿನ ಫೋಟೋಗಳನ್ನು ಹಂಚಿಕೊಂಡು ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ. ''ಶಿವಣ್ಣ ಮತ್ತೆ ಇನೊಬ್ಬ ನಮ್ಮ ಆಪ್ತಮಿತ್ರ ನೊಂದಿಗೆ ಇದೀಗ ತಾನೇ ಮಾತನಾಡಿದೆ.ಶಿವಣ್ಣ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಸ್ನೇಹಿತರನ್ನು ಹೊಂದಿದ್ದಾರೆ. ತಂದೆಯ ಬಯಕೆಯಂತೆ ಅವರು ರಾಜಕೀಯದಿಂದ ದೂರವಾಗಿದ್ದಾರೆ. ನಾನು ಅವರ ಬಗ್ಗೆ ಬರೆದಿರುವ ನನ್ನ ಪೋಸ್ಟನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ ಮತ್ತು ಶಿವಣ್ಣ ಮತ್ತು ಅವರ ಅಭಿಮಾನಿಗಳಿಗೆ ನೋಯಿಸಬಾರದು ಎಂದು ನಾನು ಬಯಸುತ್ತೇನೆ'' ಎಂಬುದಾಗಿ ಬರೆದುಕೊಂಡಿದ್ದಾರೆ.