ದಕ್ಷಿಣ ಭಾರತದ ಪ್ರಸಿದ್ಧ ರಾಮಕ್ಷೇತ್ರ ಭದ್ರಾಚಲಂಗೆ ಕರ್ನಾಟಕದಿಂದ ನೇರ ರೈಲು ಸಂಪರ್ಕ; ಇಲ್ಲಿದೆ ವಿವರ
ತೆಲಂಗಾಣದ ಯಾತ್ರಾ ಸ್ಥಳ ಭದ್ರಾಚಲಂಗೆ ಕರ್ನಾಟಕದಿಂದ ರೈಲಿನಲ್ಲಿ ಹೋಗಬಹುದು. ಬೆಳಗಾವಿಯಿಂದ ಹುಬ್ಬಳ್ಳಿ ಬಳ್ಳಾರಿ ಮಂತ್ರಾಲಯ ರಾಯಚೂರು ಯಾದಗಿರಿ ಮಾರ್ಗವಾಗಿ ಈ ರೈಲು ಭದ್ರಾಚಲಂ ತಲುಪಲಿದೆ.
ಬೆಳಗಾವಿ: ದಕ್ಷಿಣ ಭಾರತದ ಪ್ರಸಿದ್ದ ರಾಮಕ್ಷೇತ್ರವಾಗಿರುವ ತೆಲಂಗಾಣದ ಭದ್ರಾಚಲಂಗೆ ಕರ್ನಾಟಕದಿಂದ ನೇರ ಸಂಪರ್ಕ ರೈಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈಗಾಗಲೇ ಬೆಳಗಾವಿ ಹಾಗೂ ಕಾಜಿಪೇಟೆ ನಡುವೆ ಇರುವ ವಿಶೇಷ ರೈಲನ್ನೇ ಭದ್ರಾಚಲಂವರೆಗೂ ವಿಸ್ತರಣೆ ಮಾಡಲಾಗಿದೆ. ಫೆ.4ರ ಭಾನುವಾರದಿಂದಲೇ ವಿಶೇಷ ರೈಲು ಸಂಚಾರ ಶುರುವಾಗಿದೆ. ಫೆಬ್ರವರಿ ಮಾಸಾಂತ್ಯದವರೆಗೂ ಈ ವಿಶೇಷ ರೈಲು ಬೆಳಗಾವಿಯಿಂದ ಭದ್ರಾಚಲಂವರೆಗೆ ಸಂಚರಿಸಲಿದ್ದು, ಆನಂತರ ಪ್ರತಿಕ್ರಿಯೆ ನೋಡಿಕೊಂಡು ವಿಸ್ತರಣೆ ಮಾಡಲಾಗುತ್ತದೆ.
ಟ್ರೆಂಡಿಂಗ್ ಸುದ್ದಿ
ಹೈದ್ರಾಬಾದ್ ಕೇಂದ್ರಿತ ದಕ್ಷಿಣ ಮಧ್ಯೆ ರೈಲ್ವೆಯು ಈಗಾಗಲೇ ಬೆಳಗಾವಿಯಿಂದ ಕಾಜಿಪೇಟ್ ಹಾಗೂ ಕಾಜಿಪೇಟ್ ನಿಂದ ಬೆಳಗಾವಿವರೆಗೂ ಎಕ್ಸ್ಪ್ರೆಸ್ ರೈಲು ಸಂಚಾರ ಇದೆ. ಈ ರೈಲು ಕಾಜಿಪೇಟ್ನಿಂದ ಭದ್ರಾಚಲಂವರೆಗೆ ತಲುಪಿಲಿದೆ. ಅಲ್ಲಿಂದಲೇ ಹೊರಟು ಕಾಜಿಪೇಟ್ ಮಾರ್ಗವಾಗಿ ಬೆಳಗಾವಿಗೆ ಆಗಮಿಸಲಿದೆ.
ಬೆಳಗಾವಿ ಕಾಜಿಪೇಟ್ ವಿಶೇಷ ರೈಲು( ಗಾಡಿ ಸಂಖ್ಯೆ 07335) ಬೆಳಗಾವಿಯಿಂದ ಮಧ್ಯಾಹ್ನ12:30 ಗಂಟೆಗೆ ಹೊರಡುತ್ತದೆ. ಹೈದ್ರಾಬಾದ್ ಮಾರ್ಗವಾಗಿ ಮರು ದಿನ ಬೆಳಿಗ್ಗೆ 7.33ಕ್ಕೆ ಗಂಟೆಗೆ ಕಾಜಿಪೇಟೆ ನಿಲ್ದಾಣವನ್ನು ತಲುಪುತ್ತದೆ. ಅಲ್ಲಿಂದ ಬೆಳಿಗ್ಗೆ 7.35ಕ್ಕೆ ಹೊರಟು ವಾರಂಗಲ್, ಕೇಸಮುದ್ರಮ್, ಮೆಹಬುಬಾಬಾದ್ ಹಾಗೂ ದೊಮಕಲ್ ಮಾರ್ಗವಾಗಿ ಭದ್ರಾಚಲಂ ರೋಡ್ ಅನ್ನು ಬೆಳಗ್ಗೆ 11:30 ಕ್ಕೆ ತಲುಪಲಿದೆ.
ಅಲ್ಲಿಂದ ಸಂಜೆ 4.35ಕ್ಕೆ ಹೊರಟು ದೊಮಕಲ್, ಮೆಹಬುಬಾಬಾದ್, ಕೆಸಸಮುದ್ರಂ, ವಾರಂಗಲ್ ಮಾರ್ಗವಾಗಿ ಕಾಜಪೇಟ್ಗೆ ರಾತ್ರಿ 7.18ಕ್ಕೆ ಆಗಮಿಸಲಿದೆ. ರಾತ್ರಿ 7.20ಕ್ಕೆ ಕಾಜಿಪೇಟ್ನಿಂದ ಹೊರಟು ಮರು ದಿನ ಮಧ್ಯಾಹ್ನ 3:55ಕ್ಕೆ ಬೆಳಗಾವಿ ತಲುಪಲಿದೆ.
ಈ ರೈಲು ಬೆಳಗಾವಿ, ಲೋಂಡಾ, ಹುಬ್ಬಳ್ಳಿ, ಗದಗ, ಕೊಪ್ಪಳ, ಹೊಸಪೇಟೆ, ಬಳ್ಳಾರಿ, ಮಂತ್ರಾಲಯ, ರಾಯಚೂರು, ಯಾದಗಿರಿ, ಸೇಡಂ ಮಾರ್ಗವಾಗಿ ಸಂಚರಿಸಲಿದೆ.
ಬೆಳಗಾವಿ ಭದ್ರಾಚಲಂರೋಡ್ ವಿಶೇಷ ರೈಲು ಒಟ್ಟು 1093 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ. ಬೆಳಗಾವಿ ಭದ್ರಾಚಲಂ ರೋಡ್ ವಿಶೇಷ ರೈಲಿನ ಸರಾಸರಿ ವೇಗ ಗಂಟೆಗೆ 47.84 ಕಿಮೀ. ಕ್ರಮಿಸಲಿದೆ ಎಂದು ತಿಳಿಸಲಾಗಿದೆ.