ಕನ್ನಡ ಸುದ್ದಿ  /  ಕರ್ನಾಟಕ  /  Neha Hiremath: ನೇಹಾ ಕೊಲೆಗಾರನಿಗೆ ಉಗ್ರ ಶಿಕ್ಷೆ, ರಾಜಕೀಯ ಬಳಕೆ ಏಕೆ, ಸಿಎಂ ಪ್ರಶ್ನೆ; ಡಿಜಿಪಿ ಎಲ್ಲಿದ್ದಾರೆ, ಬೊಮ್ಮಾಯಿ ಆಕ್ರೋಶ

Neha Hiremath: ನೇಹಾ ಕೊಲೆಗಾರನಿಗೆ ಉಗ್ರ ಶಿಕ್ಷೆ, ರಾಜಕೀಯ ಬಳಕೆ ಏಕೆ, ಸಿಎಂ ಪ್ರಶ್ನೆ; ಡಿಜಿಪಿ ಎಲ್ಲಿದ್ದಾರೆ, ಬೊಮ್ಮಾಯಿ ಆಕ್ರೋಶ

ಹುಬ್ಬಳ್ಳಿಯಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆಯಾಗಲಿದೆ. ಆದರೆ ಈ ಪ್ರಕರಣ ರಾಜಕೀಯಗೊಳಿಸುವುದು ಏಕೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರೆ, ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಡಿಜಿಪಿ ಎಲ್ಲಿ ಹೋಗಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಶಿಸಿದ್ದಾರೆ.

ಕೊಲೆಯಾದ ನೇಹ, ಸಿಎಂ ಸಿದ್ದರಾಮಯ್ಯ ಪ್ರಶ್ನೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಎದಿರೇಟು.
ಕೊಲೆಯಾದ ನೇಹ, ಸಿಎಂ ಸಿದ್ದರಾಮಯ್ಯ ಪ್ರಶ್ನೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಎದಿರೇಟು.

ಮೈಸೂರು:‍ ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಕೊಲೆಗಾರರನ್ನು ಕೂಡಲೇ ಬಂಧಿಸಲಾಗಿದೆ. ಇದು ಲವ್ ಜಿಹಾದ್ ಪ್ರಕರಣವಲ್ಲ. ಸರ್ಕಾರ ತನಿಖೆಯನ್ನು ಗಂಭೀರವಾಗಿ ಕೈಗೊಂಡಿದ್ದು. ಕೊಲೆಗಾರನಿಗೆ ಉಗ್ರ ಶಿಕ್ಷೆ ನೀಡಲು ಪ್ರಯತ್ನ ಮಾಡಲಾಗುವುದು. ಆದರೆ ಪ್ರತಿಪಕ್ಷಗಳು ನೇಹಾಹಿರೇಮಠ ಅವರ ಕೊಲೆ ಪ್ರಕರಣವನ್ನು ರಾಜಕೀಯಕ್ಕೆ ಬಳಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು ಮೈಸೂರಿನ ತಮ್ಮ ನಿವಾಸದಲ್ಲಿ ಶನಿವಾರ ಮಾಧ್ಯಮ ದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಕೊಲೆ ಪ್ರಕರಣವನ್ನು ಉಗ್ರವಾಗಿ ಖಂಡಿಸಿದರು.

ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಎಲ್ಲಾ ಕಾಲದಲ್ಲಿಯೂ ಕೊಲೆಗಳಾಗಿವೆ. ಹಾಗೆಂದು ಕಾನೂನು ಸುವ್ಯವಸ್ಥೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕರ್ನಾಟಕದಲ್ಲಿ ಇರುವಷ್ಟು ಶಾಂತಿ ಸುವ್ಯವಸ್ಥೆ ಬೇರೆ ರಾಜ್ಯಗಳಲ್ಲಿಲ್ಲ. ನಾವು ಯಾವುದೇ ಕೃತ್ಯ ನಡೆದರೂ, ಅದನ್ನು ತೀವ್ರವಾಗಿ ಖಂಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ರಾಜಕೀಯಕ್ಕಾಗಿ ಒಬ್ಬರ ಸಾವನ್ನು ಬಳಸಿಕೊಳ್ಳುವುದು ದುರ್ದೈವ. ಇದು ಖಂಡನೀಯ. ರಾಜ್ಯಾದ್ಯಂತ ಪ್ರತಿಭಟನೆಗಳಾಗುತ್ತಿರುವ ಬಗ್ಗೆ ಮಾತನಾಡಿ ಇದರ ಪರಿಣಾಮ ಸರ್ಕಾರದ ಮೇಲೆ ಆಗುವುದಿಲ್ಲ ಎಂದರು.

ಇದು ಲವ್‌ ಜಿಹಾದ್‌ ಪ್ರಕರಣವಲ್ಲ. ಈಗಾಗಲೇ ಘಟನೆ ನಡೆದ ಕೆಲ ಹೊತ್ತಿನಲ್ಲಿಯೇ ಆರೋಪಿಯನ್ನು ಬಂಧಿಸಲಾಗಿದೆ. ಹುಬ್ಬಳ್ಳಿ ಧಾರವಾಡ ಪೊಲೀಸರು ನ್ಯಾಯಯುತ ತನಿಖೆ ನಡೆಸುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಗೃಹ ಸಚಿವರು ಹೇಳೋದೇನು

ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹತ್ಯೆ ಪ್ರಕರಣದ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು, ಎಬಿವಿಪಿಯವರಿಗೆ ಮತ್ತು ಬಿಜೆಪಿಗೆ ಪ್ರಕರಣದ ಸತ್ಯಾಸತ್ಯತೆ ಗೊತ್ತಿಲ್ಲ. ಇದರಲ್ಲಿ ಬಿಜೆಪಿಯವರು ರಾಜಕೀಯ ಮಾಡಲು ಹೊರಟಿದ್ದಾರೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ನನಗೂ ಜವಾಬ್ಧಾರಿ ಇದೆ. ಜವಾಬ್ಧಾರಿತನದಿಂದ ನಡೆದುಕೊಳ್ಳುತ್ತಿದ್ದು, ನಮಗೆ ಬಂದಿರುವ ವರದಿಯನ್ನು ನಾವು ತಿಳಿಸಿದ್ದೇವೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.

ಪ್ರಕರಣದ‌ ಕುರಿತು ಪೊಲೀಸರು ಕೂಲಂಕುಶವಾಗಿ ತನಿಖೆ ನಡೆಸುತ್ತಾರೆ. ಬಳಿಕ ಸತ್ಯಾಂಶ ಹೊರಬರಲಿದೆ. ನನ್ನ ಹೇಳಿಕೆಯಿಂದ ಯುವತಿಯ ತಂದೆ-ತಾಯಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಆದರೆ, ಸತ್ಯವನ್ನು ಮುಚ್ಚಿಡಲು ಆಗುವುದಿಲ್ಲ ಎಂದು ಹೇಳಿದರು.

ಡಿಜಿಪಿ ಎಲ್ಲಿದ್ದಾರೆ: ಬೊಮ್ಮಾಯಿ ಪ್ರಶ್ನೆ

ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ಕೊಲೆಯಾಗಿದೆ. ವಿದ್ಯಾರ್ಥಿನಿ ಕೊಲೆ ನಡೆದ ದಿನವೇ ರಾತ್ರಿ ಗದಗನಲ್ಲಿ ದುಷ್ಕರ್ಮಿಗಳು ಅಷ್ಟೊಂದು ಧೈರ್ಯದಿಂದ ಕೊಲೆ ಮಾಡುತ್ತಾರೆ ಎಂದರೆ ಅವರಿಗೆ ಈ ಸರ್ಕಾರದಲ್ಲಿ ಮೊದಲು ಯಾರಿಗೆ ರಕ್ಷಣೆ ಸಿಗುತ್ತಿದೆ. ಕೊಲೆಗಡುಕರು ಹಂತಕರು ರಾಜ್ಯದ ಮೊದಲ ಪ್ರಜೆಗಳಾಗಿದ್ದಾರೆ. ರಾಜಕಿಯ ಬೆಂಬಲ ಅವರಿಗೆ ಇದೆ. ನೇರವಾಗಿ ಆಡಳಿತದ ವೈಫಲ್ಯದ ಜೊತೆಗೆ ಮತ ಬ್ಯಾಂಕ್ ತುಷ್ಟೀಕರಣದಿಂದ ಈ ರೀತಿಯ ಘಟನೆಗಳು ನಡೆಯುತ್ತಿವೆ. ಸಾಮೂಹಿಕ ಹತ್ಯೆಗಳು ರಾಜಾರೋಷವಾಗಿ ನಡೆಯುತ್ತಿವೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಕಾನೂನು ಕೊಲೆಗಡುಕರ ಸೇವಕ ಈ ಸರ್ಕಾರ ಬಂದ ಮೇಲೆ ಸಮಾಜ ಘಾತುಕರು ದರೋಡೆಕೊರರು ಸಮಾಜದ ಒಳಗೆ ಬಂದಿದ್ದಾರೆ. 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಬೇಕು ಎಂದು ಗದಗದಲ್ಲಿ ಆಗ್ರಹಿಸಿದರು.

ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವರು ನೇಹಾ ಕೊಲೆ ಪ್ರಕರಣವನ್ನು ವೈಯಕ್ತಿಕ ಘಟನೆ ಅಂತ ಎಷ್ಡು ಸರಳವಾಗಿ ಹೇಳುತ್ತಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅಪರಾಧಿಗಳ ಸೇವಕನಾಗಿದೆ. ಕಾನೂನು ಹದಗೆಟ್ಟಾಗ ಕ್ರಿಮಿನಲ್ ಗಳು ರಾಜಾರೋಷವಾಗಿ ತಿರುಗಾಡುತ್ತಾರೆ. ಮುಖ್ಯಮಂತ್ರಿಗಳು ಒಂದು ಟ್ವೀಟ್ ಮಾಡಿದರೆ ನಿಮ್ಮ ಕೆಲಸ ಮುಗಿಯಿತೇ. ಗದಗ ನಗರದ‌ ಜನರು ಸಂಪೂರ್ಣ ಭಯ ಭೀತರಾಗಿದ್ದಾರೆ. ಯಾವ ರಾಜ್ಯದಲ್ಲಿ ಜನರು ರಾತ್ರಿ ನೆಮ್ಮದಿಯಿಂದ ಮಲಗಲು ಸಾಧ್ಯವಿಲ್ಲವೊ ಅದನ್ನು ಜಂಗಲ್ ರಾಜ್ಯ ಎನ್ನಲಾಗುತ್ತದೆಯೇ ಎಂದು ರಾಜ್ಯ ಸರ್ಕಾರದ ವಿರುದ್ದ ಕಟು ಶಬ್ದಗಳಿಂದ ಟೀಕಿಸಿದರು.

ಜನರ ಮಾನ ಪ್ರಾಣ ಕಾಪಾಡುವಲ್ಲಿ ಈ ಸರ್ಕಾರ ಸಂಪೂರ್ಣ ಎಡವಿದೆ. ಹಿಂದೆ ಆಗಿಲ್ವಾ ಎಂದು ಸರ್ಕಾರ ಈಗಿನ ಘಟನೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿದೆ. ನಮ್ಮ ಅವಧಿಯಲ್ಲಿ ಚಿಕ್ಕಮಗಳೂರಿನಲ್ಲಿ ಹೆಣ್ಣು ಮಗಳ ಮೇಲೆ ಅತ್ಯಾಚಾರ ನಡೆದಾಗ ನಾವು ಅವನನ್ನು ಗಲ್ಲಿಗೇರಿಸುವಂತೆ ಕ್ರಮ ಕೈಗೊಂಡಿದ್ದೇವೆ. ಹುಬ್ಬಳ್ಳಿ ಪ್ರಕರಣದಲ್ಲಿಯೂ ಅದೇ ರೀತಿ ಆಗಲಿ ಎಂದು ಆಗ್ರಹಿಸಿದರು.

ಡಿಜಿಪಿ, ಐಜಿಪಿ ಎಲ್ಲಿದ್ದಾರೆ. ಉತ್ತರ ಕರ್ನಾಟಕ ಭಾಗಕ್ಕೆ ಒಮ್ಮೆಯಾದರೂ ಒಂದು ರೌಡಿಗಳ ಪರೇಡ್ ಮಾಡಿದ್ದೀರಾ ? ಗದಗನಲ್ಲಿ ರೌಡಿಗಳ ಪರೇಡ್ ಮಾಡಿಸಿದ್ದೀರಾ ಎಂದು ಖಾರವಾಗಿ ಪ್ರಶ್ನಿಸಿದರು.

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point