ಚೆಪಾಕ್ ಅಭಿಮಾನಿಗಳಿಗೆ ಪ್ರಾಂಕ್ ಮಾಡಿದ ಜಡೇಜಾ; ಕ್ಷಣಮಾತ್ರದಲ್ಲೇ ಬ್ಯಾಟ್ ಹಿಡಿದು ಮೈದಾನಕ್ಕಿಳಿದ್ರು ತಲಾ, Video
Apr 09, 2024 02:59 PM IST
ಚೆಪಾಕ್ ಅಭಿಮಾನಿಗಳಿಗೆ ಪ್ರಾಂಕ್ ಮಾಡಿದ ಜಡೇಜಾ
- MS Dhoni: ಚೆಪಾಕ್ ಮೈದಾನದಲ್ಲಿ ಸೇರಿದ್ದ ಅಭಿಮಾನಿಗಳಿಗೆ ರವೀಂದ್ರ ಜಡೇಜಾ ಪ್ರಾಂಕ್ ಮಾಡಿದ್ದಾರೆ. ಎಂಎಸ್ ಧೋನಿ ಬದಲಿಗೆ ತಾವು ಬ್ಯಾಟಿಂಗ್ ಮಾಡುವುದಾಗಿ ಮೈದಾನಕ್ಕಿಳಿದಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳಿರಲು ಪ್ರಮುಖ ಕಾರಣ ಎಂಎಸ್ ಧೋನಿ. ಪ್ರತಿ ಬಾರಿಯೂ ಸಿಎಸ್ಕೆ ಪಂದ್ಯ ನಡೆಯುವಾಗ, ಅಭಿಮಾನಿಗಳು ಧೋನಿ ಬ್ಯಾಟಿಂಗ್ ಮಾಡುವುದನ್ನು ನೋಡಲು ಕಾತರದಿಂದ ಕಾಯುತ್ತಿರುತ್ತಾರೆ. ಈ ಆವೃತ್ತಿಯಲ್ಲಿ ಸಿಎಸ್ಕೆ ತಂಡವು ಚೆನ್ನೈನ ಚೆಪಾಕ್ ಮೈದಾನದಲ್ಲಿ ಮೂರು ಪಂದ್ಯಗಳಲ್ಲಿ ಆಡಿತು. ಮೊದಲ ಎರಡು ಪಂದ್ಯಗಳಲ್ಲಿಯೂ ಮಾಹಿ ಬ್ಯಾಟಿಂಗ್ ಮಾಡಿರಲಿಲ್ಲ. ಆದರೆ ಸೋಮವಾರ ಆಡಿದ ಮೂರನೇ ಪಂದ್ಯದಲ್ಲಿ 42 ವರ್ಷ ವಯಸ್ಸಿನ ಅನುಭವಿ ಆಟಗಾರ ಬ್ಯಾಟ್ ಹಿಡಿದು ಮೈದಾನಕ್ಕಿಳಿದರು. ಈ ಕ್ಷಣಕ್ಕಾಗಿ ಕಾಯುತ್ತಿದ್ದ ಚೆನ್ನೈ ಅಭಿಮಾನಿಗಳು ಹುಚ್ಚೆದ್ದು ಕುಣಿದರು. ಆದರೆ, ಮಾಹಿ ಮೈದಾನಕ್ಕಿಳಿಯುವ ಮುನ್ನ ಚೆನ್ನೈ ಡಕೌಟ್ ಬಳಿ ನಾಟಕೀಯ ಬೆಳವಣಿಗೆ ನಡೆಯಿತು.
ಏಪ್ರಿಲ್ 8ರ ಸೋಮವಾರ ಚೆಪಾಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸಿಎಸ್ಕೆ ತಂಡ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಆಡಿತು. ಪಂದ್ಯದಲ್ಲಿ ಚೇಸಿಂಗ್ ವೇಳೆ ಶಿವಂ ದುಬೆ ಔಟಾದ ಬಳಿಕ, ಸಿಎಸ್ಕೆ ಅಭಿಮಾನಿಗಳು ಧೋನಿ ಮೈದಾನಕ್ಕಿಳಿಯುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಒಂದು ಕ್ಷಣ ರವೀಂದ್ರ ಜಡೇಜಾ ಬ್ಯಾಟ್ ಹಿಡಿಕೊಂಡು ಬಂದರು. ಆದರೆ, ಅದು ಚೆಪಾಕ್ ಅಂಗಣದಲ್ಲಿ ಸೇರಿದ್ದ ಅಭಿಮಾನಿಗಳಿಗೆ ಜಡ್ಡು ಮಾಡಿದ ಪ್ರಾಂಕ್ ಆಗಿತ್ತು. ಆದರೆ, ಈ ರೀತಿ ಪ್ರಾಂಕ್ ಮಾಡಲು ಹೇಳಿದ್ದು ಧೋನಿಯೇ ಎಂಬುದನ್ನು ಪಂದ್ಯದ ಬಳಿಕ ತುಷಾರ್ ದೇಷಪಾಂಡೆ ಹೇಳಿದ್ದಾರೆ.
ಕೆಕೆಆರ್ ವಿರುದ್ಧ ಸಿಎಸ್ಕೆ ಬ್ಯಾಟಿಂಗ್ ಮಾಡುತ್ತಿದ್ದಾಗ, 17ನೇ ಓವರ್ನಲ್ಲಿ ಶಿವಂ ದುಬೆ ಔಟಾದರು. ಈ ವೇಳೆ ಜಡೇಜಾ ಬ್ಯಾಟಿಂಗ್ ಮಾಡಲು ಬರುತ್ತಿರುವ ವಿಡಿಯೋ ಇಂಟರ್ನೆಟ್ನಲ್ಲಿ ಸದ್ದು ಮಾಡುತ್ತಿದೆ. ಜಡೇಜಾ ಮೈದಾನಕ್ಕಿಳಿಯಲು ಬಂದಾಗ, ಸಿಎಸ್ಕೆ ಡಗೌಟ್ನಲ್ಲಿ ಕೆಲವು ಆಟಗಾರರು ಇದನ್ನು ನೋಡಿ ಆಶ್ಚರ್ಯಚಕಿತರಾದರು. ಅತ್ತ, ಧೋನಿ ಬ್ಯಾಟಿಂಗ್ ಮಾಡುವುದಕ್ಕಾಗಿ ಒಂಟಿ ಕಾಲಲ್ಲಿ ನಿಂತು ಕಾಯುತ್ತಿದ್ದ ಕಾಯುತ್ತಿದ್ದ ಪ್ರೇಕ್ಷಕರು ಕೂಡಾ ಅಸಮಾಧಾನಗೊಂಡರು. ಅಭಿಮಾನಿಗಳನ್ನು ಪ್ರಾಂಕ್ ಮಾಡಲು ಕಾಯುತ್ತಿದ್ದ ಜಡೇಜಾ, ತಿರುಗಿ ನಗುತ್ತಾ ಪೆವಿಲಿಯನ್ ಕಡೆಗೆ ನಡೆದರು. ಅಷ್ಟರಲ್ಲೇ ದಿಗ್ಗಜ ಕ್ರಿಕೆಟಿಗ ಧೋನಿ ಮೈದಾನಕ್ಕಿಳಿದರು. ಆಗ ಮೈದಾನದಲ್ಲಿ ಜೋರಾದ ಶಿಳ್ಳೆ, ಕೇಕೆ ಕೇಳಿಬಂತು.
ಇದನ್ನೂ ಓದಿ | ಕೆಕೆಆರ್ ಸಿಡಿಗುಂಡುಗಳ ಅಜೇಯ ಓಟಕ್ಕೆ ಬ್ರೇಕ್; ತವರಿನಲ್ಲಿ ಸತತ ಮೂರನೇ ಗೆಲುವು ಸಾಧಿಸಿದ ಸಿಎಸ್ಕೆ
ಚೆನ್ನೈ ತಂಡದ ಗೆಲುವಿಗೆ ಮೂರು ರನ್ ಅಗತ್ಯವಿದ್ದಾಗ, ಚೆಪಾಕ್ ಪ್ರೇಕ್ಷಕರಿಂದ ಹರ್ಷೋದ್ಘಾರ ಮೊಳಗಿತು. ಇದಕ್ಕೆ ಕಾರಣ, ಅಭಿಮಾನಿಗಳ ನೆಚ್ಚಿನ ತಲಾ ಧೋನಿ ಮೈದಾನಕ್ಕಿಳಿದಿದ್ದು. ಸಿಎಸ್ಕೆ ಮಾಜಿ ನಾಯಕ ಕಳೆದ ಐಪಿಎಲ್ ಬಳಿಕ ತಮ್ಮ ಅತ್ಯಂತ ನೆಚ್ಚಿನ ಮೈದಾನದಲ್ಲಿ ಬ್ಯಾಟಿಂಗ್ ಮಾಡಿದ್ದು ಇದೇ ಮೊದಲು.
ಧೋನಿ ಪಂದ್ಯವನ್ನು ಫಿನಿಶ್ ಮಾಡುತ್ತಾರೆ ಎಂದೇ ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ, ಮಾಹಿ ಮಾತ್ರ ಯುವ ನಾಯಕ ಋತುರಾಜ್ ಗಾಯಕ್ವಾಡ್ಗೆ ಗೆಲುವಿನ ಹೊಡೆತವಾಡಲು ಅವಕಾಶ ನೀಡಿದರು. ಅದರಂತೆ ಬೌಂಡರಿ ಬಾರಿಸಿ ತಂಡವನ್ನು ಗೆಲ್ಲಿಸಿದರು. 58 ಎಸೆತಗಳಲ್ಲಿ 67 ರನ್ ಗಳಿಸುವ ಮೂಲಕ ತಂಡವನ್ನು ಅಜೇಯವಾಗಿ ಮುನ್ನಡೆಸಿದರು.
ಅಜೇಯ ತಂಡವಾಗಿದ್ದ ಕೆಕೆಆರ್ ವಿರುದ್ಧ ಗೆಲುವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಆಡಿದ ಐದು ಪಂದ್ಯಗಳಲ್ಲಿ ಮೂರನೇ ಗೆಲುವು ಸಾಧಿಸಿದ ತಂಡವು ಆರು ಅಂಕ ಪಡೆದಿದೆ. ತವರಿನಲ್ಲಿ ನಡೆದ ಎಲ್ಲಾ ಪಂದ್ಯಗಳಲ್ಲಿ ಗೆದ್ದ ತಂಡವು, ತವರಿನ ಹೊರಗೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಮುಗ್ಗರಿಸಿದೆ.