ರಣಜಿಗೆ ಚಕ್ಕರ್, ಐಪಿಎಲ್ ಜಾಹೀರಾತು ಶೂಟಿಂಗ್ಗೆ ಹಾಜರ್; ಇದು ಶ್ರೇಯಸ್ ಅಯ್ಯರ್ ಒಂದು ಸುಳ್ಳಿನ ಕಥೆ
Feb 26, 2024 10:00 AM IST
ರಣಜಿಗೆ ಚಕ್ಕರ್, ಐಪಿಎಲ್ಗೆ ಹಾಜರ್; ಇದು ಶ್ರೇಯಸ್ ಅಯ್ಯರ್ ಒಂದು ಸುಳ್ಳಿನ ಕಥೆ
- Shreyas Iyer : ಇಂಗ್ಲೆಂಡ್ ಎದುರಿನ ಮೊದಲ ಎರಡು ಟೆಸ್ಟ್ಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ಶ್ರೇಯಸ್ ಅಯ್ಯರ್, ಕೊನೆಯ ಮೂರು ಪಂದ್ಯಗಳಿಗೆ ತನಗೆ ಬೆನ್ನು ನೋವು ಎಂದು ಹೊರಬಿದ್ದರು. ಆದರೆ ಕೆಕೆಆರ್ ತಂಡದ ನಾಯಕ ಹೇಳಿದ್ದೆಲ್ಲವೂ ಸುಳ್ಳು ಎಂಬುದು ಈಗ ಗೊತ್ತಾಗಿದೆ.
ಐಪಿಎಲ್ 2024 (IPL 2024) ಆರಂಭಕ್ಕೆ ತಿಂಗಳಿಂತ ಕಡಿಮೆ ಅವಧಿ ಇದೆ. ಟೂರ್ನಿಯ ಆರಂಭಿಕ 21 ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ಮಾರ್ಚ್ 22ರಿಂದ ನಗದು ಸಮೃದ್ಧ ಲೀಗ್ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಟ ನಡೆಸಲಿವೆ. ಐಪಿಎಲ್ ವೇಳಾಪಟ್ಟಿ ಪ್ರಕಟಗೊಂಡ ತಕ್ಷಣವೇ ಕ್ರಿಕೆಟಿರ್ಸ್ ಜಾಹೀರಾತು ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲಿ ಶ್ರೇಯಸ್ ಅಯ್ಯರ್ ಕೂಡ ಒಬ್ಬರು ಎಂಬುದು ಅಚ್ಚರಿ ಮೂಡಿಸಿದೆ.
ಅಯ್ಯರ್ ಹೇಳಿದ್ದು ಸುಳ್ಳು
ಫೆಬ್ರವರಿ 23ರಿಂದ ಆರಂಭಗೊಂಡ ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ತಂಡದ ಪರ ಆಡಲು ಹಿಂದೇಟು ಹಾಕಿದ್ದರು. ಬರೋಡಾ ವಿರುದ್ಧದ ಪಂದ್ಯಕ್ಕೂ ಮುನ್ನ ತನಗೆ ಬೆನ್ನು ನೋವು ಎಂದು ಹೇಳಿ ಹಿಂದೆ ಸರಿದರು. ಇಂಗ್ಲೆಂಡ್ ಎದುರಿನ ಮೊದಲ ಎರಡು ಟೆಸ್ಟ್ಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ಅಯ್ಯರ್, ಕೊನೆ ಮೂರು ಪಂದ್ಯಗಳಿಗೆ ತನಗೆ ಬೆನ್ನು ನೋವು ಎಂದು ಹೊರಬಿದ್ದರು. ಆದರೆ ಕೆಕೆಆರ್ ತಂಡದ ನಾಯಕ ಅಯ್ಯರ್ ಹೇಳಿದ್ದೆಲ್ಲವೂ ಸುಳ್ಳು ಎಂಬುದು ಈಗ ಗೊತ್ತಾಗಿದೆ.
ರಣಜಿ ಕ್ವಾರ್ಟರ್ಫೈನಲ್ ಪಂದ್ಯದಿಂದ ಹಿಂದೆ ಸರಿದ ಬೆನ್ನಲ್ಲೇ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಬಿಸಿಸಿಐಗೆ ಇ-ಮೇಲ್ ಒಂದನ್ನು ಕಳುಹಿಸಿತ್ತು. ಅವರಿಗೆ ಗಾಯದ ಸಮಸ್ಯೆ ಇಲ್ಲ. ಸಂಪೂರ್ಣ ಫಿಟ್ ಆಗಿದ್ದಾರೆ. ಆಯ್ಕೆ ಲಭ್ಯರಿದ್ದಾರೆ ಎಂದು ಆ ಮೇಲ್ನಲ್ಲಿ ಉಲ್ಲೇಖಿಸಿತ್ತು. ಈ ಬಗ್ಗೆ ಈಗಲೂ ದೊಡ್ಡ ಚರ್ಚೆ ನಡೆಯುತ್ತಿದೆ. ಅಲ್ಲದೆ, ರಣಜಿ ಆಡುವಂತೆ ಬಿಸಿಸಿಐ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿತ್ತು. ಆದರೆ ಇಲ್ಲದ ಗಾಯವನ್ನು ಉಲ್ಲೇಖಿಸಿ ರಣಜಿಗೆ ಚಕ್ಕರ್ ಹಾಕಿ, ಐಪಿಎಲ್ ಜಾಹೀರಾತು ಚಿತ್ರೀಕರಣಗಳಿಗೆ ಹಾಜರ್ ಆಗಿದ್ದಾರೆ. ಸದ್ಯ ಅಯ್ಯರ್ರನ್ನು ಸೆಂಟ್ರಲ್ ಕಾಂಟ್ರಾಕ್ಟ್ನಿಂದ ಕೈಬಿಡಲು ಬಿಸಿಸಿಐ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
ರಣಜಿಗೆ ಚಕ್ಕರ್, ಐಪಿಎಲ್ಗೆ ಹಾಜರ್
ಗಾಯವೆಂದು ಹೇಳಿದ ಮೇಲೆ ಅದಕ್ಕೆ ತಕ್ಕಂತೆ ಚಿಕಿತ್ಸೆ ಪಡೆಯುತ್ತಾರೆ ಎಂದುಕೊಂಡಿದ್ದ ಕೆಲವರಿಗೆ ಈಗ ಅಚ್ಚರಿಯಾಗಿದೆ. ಗಾಯದ ನೆಪದಲ್ಲಿ ಭಾರತ ತಂಡದಿಂದ ಬೇರ್ಪಟ್ಟಿದ್ದಕ್ಕೆ ಕ್ರಿಕೆಟ್ ಪ್ರೇಮಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾಹೀರಾತಿನ ಶೂಟಿಂಗ್ನಲ್ಲಿ ಬ್ಯುಸಿಯಾಗಿರುವ ವಿಡಿಯೋ ವೈರಲ್ ಆಗುತ್ತಿದ್ದು, ಅಯ್ಯರ್ ಲುಂಗಿ ಧರಿಸಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಐಪಿಎಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕರಾಗಿರುವ ಅಯ್ಯರ್, ಇದೇ ಬೆನ್ನು ನೋವಿನ ಕಾರಣ ಕಳೆದ ಆವೃತ್ತಿಯಲ್ಲಿ ಕಣಕ್ಕಿಳಿದಿರಲಿಲ್ಲ. ಆದರೆ ಈ ಅವರೇ ತಂಡವನ್ನು ಮುನ್ನಡೆಸಲಿದ್ದಾರೆ.
ಶ್ರೇಯಸ್ ಅಯ್ಯರ್ ಮಾತ್ರವಲ್ಲ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್, ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಮತ್ತು ಲಕ್ನೋ ಸೂಪರ್ ಜೇಂಟ್ಸ್ ನಾಯಕ ಕೆಎಲ್ ರಾಹುಲ್ ಕೂಡ ಜಾಹೀರಾತು ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದಾರೆ. ಅವರ ವಿಡಿಯೋ ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪಂತ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಹಾರ್ದಿಕ್ ಟೆಸ್ಟ್ ತಂಡದ ಭಾಗವಲ್ಲ. ಆದರೆ ಟೆಸ್ಟ್ ತಂಡದ ಭಾಗವಾಗಿದ್ದ ರಾಹುಲ್ ಕೂಡ ಗಾಯವೆಂದು ಹೇಳಿ ಶೂಟಿಂಗ್ನಲ್ಲಿ ಬ್ಯುಸಿಯಾಗಿರುವುದು ಅಚ್ಚರಿ ಮೂಡಿಸಿದೆ.
IPL, 2024
SRH
159/10
19.3 Overs
KKR
6/0
(0.5)
VIEW FULL SCORECARD