ಧೋನಿ ಸಿಟ್ಟಿಗೆದ್ದಿದ್ದನ್ನು ಎಂದೂ ನೋಡೇ ಇರಲಿಲ್ಲ, ಆದರೆ ಅವತ್ತು...; ಮಾಹಿಯ 2ನೇ ಮುಖ ಬಹಿರಂಗಪಡಿಸಿದ ರೈನಾ
Apr 21, 2024 04:32 PM IST
ಧೋನಿಯ 2ನೇ ಮುಖ ಬಹಿರಂಗಪಡಿಸಿದ ರೈನಾ
- MS Dhoni: ಐಪಿಎಲ್ 2014ರ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ತಂಡದ ವಿರುದ್ಧ ಸೋತ ನಂತರ ಸಿಎಸ್ಕೆ ನಾಯಕ ಎಂಎಸ್ ಧೋನಿ ಕೋಪಗೊಂಡಿದ್ದರು ಎಂದು ತಂಡದ ಮಾಜಿ ಆಟಗಾರ ಸುರೇಶ್ ರೈನಾ ಹೇಳಿದ್ದಾರೆ.
ಎಂಎಸ್ ಧೋನಿ ಎಂದರೆ ಮೊದಲು ನೆನಪಾಗೋದೇ ಅವರ ಶಾಂತ ಸ್ವಭಾವ ಹಾಗೂ ಕೂಲ್ ಕ್ಯಾಪ್ಟನ್ಸಿ. ತಾಳ್ಮೆಯಿಂದಲೇ ಮೈದಾನದಲ್ಲಿ ಎಲ್ಲವನ್ನೂ ತಾಳೆ ಹಾಕಿ ತಂಡವನ್ನು ಮುನ್ನಡೆಸುವ ಚಾಣಾಕ್ಷತನದಿಂದಾಗಿ ಕ್ಯಾಪ್ಟನ್ ಕೂಲ್ ಎಂಬ ಹೆಸರು ಗಳಿಸಿದ್ದಾರೆ. ಭಾರತ ಕ್ರಿಕೆಟ್ ತಂಡ ಕಂಡ ಯಶಸ್ವಿ ನಾಯಕನಾಗಿರುವ ಧೋನಿ, ಐಪಿಎಲ್ನಲ್ಲಿಯೂ ಸಿಎಸ್ಕೆ ತಂಡವನ್ನು ದಾಖಲೆಯ 5 ಟ್ರೋಫಿಯತ್ತ ಮುನ್ನಡೆಸಿದ್ದಾರೆ. ಹಾಗಂತಾ ಧೋನಿ ತಾಳ್ಮೆ ಕಳೆದುಕೊಳ್ಳುವುದಿಲ್ಲ ಎಂದಲ್ಲ. ಕೆಲವೊಮ್ಮೆ ಮಾಹಿ ತಾಳ್ಮೆ ಕಳೆದುಕೊಂಡ ಅಪರೂಪದ ಘಟನೆಗಳು ಕೂಡಾ ನಡೆದಿವೆ. ಈ ಕುರಿತ ಒಂದು ಸಂದರ್ಭವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಬಹಿರಂಗಪಡಿಸಿದ್ದಾರೆ.
ಸಿಎಸ್ಕೆ ತಂಡದ ಡ್ರೆಸ್ಸಿಂಗ್ ರೂಮ್ನಲ್ಲಿ ನಡೆದ ಘಟನೆಯೊಂದರ ಕುರಿತು ಸುರೇಶ್ ರೈನಾ ವಿವರಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಲಾಲಾಂಟಾಪ್ ಅವರೊಂದಿಗೆ ಮಾತನಾಡಿದ ರೈನಾ, ಐಪಿಎಲ್ 2014ರ ಆವೃತ್ತಿಯ ಪಂದ್ಯವೊಂದನ್ನು ನೆನಪಿಸಿಕೊಂಡಿದ್ದಾರೆ. ಆ ಆವೃತ್ತಿಯ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಸಿಎಸ್ಕೆ ತಂಡವನ್ನು ಸೋಲಿಸಿತ್ತು. ಆ ಪಂದ್ಯದ ಬಳಿಕ ಮಾಹಿ ಸಂಪೂರ್ಣ ಕೋಪಗೊಂಡಿದ್ದರಂತೆ.
ಪಂದ್ಯದಲ್ಲಿ ಪಂಜಾಬ್ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಕೇವಲ 58 ಎಸೆತಗಳಲ್ಲಿ 122 ರನ್ ಸಿಡಿಸುವ ಮೂಲಕ ಅಬ್ಬರಿಸಿದ್ದರು. ಹೀಗಾಗಿ ಪಂಜಾಬ್ ಕೇವಲ 6 ವಿಕೆಟ್ ನಷ್ಟಕ್ಕೆ 226 ರನ್ ಗಳಿಸಿತ್ತು. ಇದಕ್ಕೆ ಪ್ರತಿಯಾಗಿ ಸಿಎಸ್ಕೆ ಪರ ರೈನಾ 25 ಎಸೆತಗಳಲ್ಲಿ 87 ರನ್ ಗಳಿಸಿದ್ದರು. ಚೆನ್ನೈ ನಾಯಕ ಧೋನಿ 31 ಎಸೆತಗಳಲ್ಲಿ 42 ರನ್ ಗಳಿಸಿದರು. ರೈನಾ ಏಕಾಂಗಿ ಹೋರಾಟದ ಹೊರತಾಗಿಯೂ ಸಿಎಸ್ಕೆ 24 ರನ್ಗಳಿಂದ ಪಂದ್ಯದಲ್ಲಿ ಸೋಲು ಕಂಡಿತು.
ಹೆಲ್ಮೆಟ್ ಮತ್ತು ಪ್ಯಾಡ್ ಎಸೆದಿದ್ದ ಮಾಹಿ
ಪಂದ್ಯದಲ್ಲಿ ಅನಿರೀಕ್ಷಿತ ಸೋಲಿನ ನಂತರ ಡ್ರೆಸ್ಸಿಂಗ್ ಕೋಣೆಯಲ್ಲಿ ಧೋನಿ ತಮ್ಮ ಹೆಲ್ಮೆಟ್ ಮತ್ತು ಪ್ಯಾಡ್ಗಳನ್ನು ಎಸೆದು ಆಕ್ರೋಶ ಹೊರಹಾಕಿದ್ದರು ಎಂದು ರೈನಾ ಹೇಳಿದ್ದಾರೆ. ಸಿಎಸ್ಕೆ ಬ್ಯಾಟರ್ಗಳಿಂದ ಹೆಚ್ಚು ರನ್ ಹರಿದು ಬರಲಿಲ್ಲ ಎಂಬ ಹತಾಶೆಯನ್ನು ತಮ್ಮ ನಡೆಯಲ್ಲೇ ಧೋನಿ ತೋರಿಸಿಕೊಂಡಿದ್ದರು ಎಂದು ರೈನಾ ಹೇಳಿದ್ದಾರೆ.
ಇದನ್ನೂ ಓದಿ | ಐಪಿಎಲ್ ಅಲ್ಲದೆ, ಟಿ20 ಕ್ರಿಕೆಟ್ ಚರಿತ್ರೆಯಲ್ಲಿ ಹೊಸ ವಿಶ್ವದಾಖಲೆ ನಿರ್ಮಿಸಿದ ಎಸ್ಆರ್ಹೆಚ್; ಈ ದಾಖಲೆ ಬರೆದ ವಿಶ್ವದ ಮೊದಲ ತಂಡ
“ಧೋನಿ ಅಷ್ಟು ಕೋಪಗೊಂಡಿರುವುದನ್ನು ನಾನು ಯಾವತ್ತೂ ನೋಡಿಲ್ಲ. ಆ ಪಂದ್ಯದ ನಂತರ ಅವರು ಆ ಕೋಪವನ್ನು ಹೊರಹಾಕಿದ್ದರು. 'ನಾವು ರನ್ ಗಳಿಸುತ್ತಿಲ್ಲ ಎಂಬ ರೀತಿಯಲ್ಲಿ ಅವರಿದ್ದರು. ಅವರು ತಮ್ಮ ಪ್ಯಾಡ್ ಮತ್ತು ಹೆಲ್ಮೆಟ್ ಅನ್ನು ಡ್ರೆಸ್ಸಿಂಗ್ ಕೋಣೆಯಲ್ಲಿ ಎಸೆದರು. ನಾವು ಗೆಲ್ಲಬೇಕಿದ್ದ ಪಂದ್ಯವನ್ನು ಸೋತಿದ್ದಾಕ್ಕಾಗಿ ಅವರು ಕಿರಿಕಿರಿಗೊಂಡಿದ್ದರು. ನಾವು ಸೋಲಬಾರದಿದ್ದ ಪಂದ್ಯವನ್ನು ಸೋತಿದ್ದಕ್ಕಾಗಿ ಅವರು ಕೋಪಗೊಂಡರು. ಇಲ್ಲದಿದ್ದರೆ, ನಾವು ಆ ವರ್ಷ ಕೂಡಾ ಐಪಿಎಲ್ ಗೆಲ್ಲುತ್ತಿದ್ದೆವು,” ಎಂದು ರೈನಾ ಹೇಳಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಆ ಪಂದ್ಯದಲ್ಲಿ 87 ರನ್ ಗಳಿಸಿದ ಕುರಿತು ಮಾತನಾಡಿದ ಸಿಎಸ್ಕೆ ಮಾಜಿ ಬ್ಯಾಟರ್, “ಪಂದ್ಯಕ್ಕಿಂತ ಹಿಂದಿನ ದಿನ, ನಾನು ವಿಶೇಷ ಪ್ರದರ್ಶನ ನೀಡುವಂತೆ ಕನಸು ಕಂಡಿದ್ದೆ. ನಾನು ಚೆಂಡನ್ನು ಫುಟ್ಬಾಲ್ನಂತೆ ನೋಡುತ್ತಿದ್ದೆ. ನನ್ನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ನನಗೆ ಅನಿಸುತ್ತಿತ್ತು,” ಎಂದು ರೈನಾ ಹೇಳಿದ್ದಾರೆ.