Anupam Kher on Prakash Raj: ‘ಸುಳ್ಳೇ ಅವರ ಜೀವನವಾಗಿದೆ!’; ಪ್ರಕಾಶ್ ರಾಜ್ ‘ನಾನ್ಸೆನ್ಸ್’ ಮಾತಿಗೆ ಅನುಪಮ್ ಖೇರ್ ಟಕ್ಕರ್!
Feb 18, 2023 11:08 AM IST
‘ಸುಳ್ಳೇ ಅವರ ಜೀವನ ಆಗಿದೆ!’; ಪ್ರಕಾಶ್ ರಾಜ್ ‘ನಾನ್ಸೆನ್ಸ್’ ಮಾತಿಗೆ ಅನುಪಮ್ ಖೇರ್ ಟಕ್ಕರ್!
- ಕಾಶ್ಮೀರ್ ಫೈಲ್ಸ್ ಸಿನಿಮಾ ಬಿಡುಗಡೆ ಆದಾಗಿನಿಂದಲೂ ಪ್ರಕಾಶ್ ರಾಜ್ ಒಂದಲ್ಲ ಒಂದು ರೀತಿ ಟೀಕೆ ಮಾಡುತ್ತಲೇ ಬಂದಿದ್ದಾರೆ. ಇದೀಗ ಈ ಟೀಕಾಪ್ರಹಾರಕ್ಕೆ ಅನುಪಮ್ ಖೇರ್ ಪ್ರತ್ಯುತ್ತರ ನೀಡಿದ್ದಾರೆ.
Anupam Kher on Prakash Raj: ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಕಳೆದ ವರ್ಷ ಬಿಡುಗಡೆ ಆಗಿದ್ದ ‘ಕಾಶ್ಮೀರ ಫೈಲ್ಸ್’ ಸಿನಿಮಾ ಇನ್ನೂ ಸುದ್ದಿಯಲ್ಲಿದೆ. ಈ ಸಿನಿಮಾ ಬಗ್ಗೆ ಪರ ವಿರೋಧ ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಮುನ್ನೆಲೆಗೆ ಬರುತ್ತಲೇ ಇರುತ್ತವೆ. ಸಿನಿಮಾ ಬೆಂಬಲಿಸುವ ಬಳಗ ಒಂದೆಡೆಯಿದ್ದರೆ, ಟೀಕಿಸುವ ಸಮೂಹವೂ ಮತ್ತೊಂದೆಡೆ. ಆ ಪೈಕಿ ಬಹುಭಾಷಾ ನಟ ಪ್ರಕಾಶ್ ರಾಜ್ ಈ ಸಿನಿಮಾ ಬಿಡುಗಡೆ ಆದಾಗಿನಿಂದಲೂ ಒಂದಲ್ಲ ಒಂದು ರೀತಿ ಟೀಕೆ ಮಾಡುತ್ತಲೇ ಬಂದಿದ್ದಾರೆ. ಈಗಲೂ ಅದನ್ನು ಮುಂದುವರಿಸಿದ್ದಾರೆ. ಇದೀಗ ಈ ಟೀಕಾಪ್ರಹಾರಕ್ಕೆ ‘ಕಾಶ್ಮೀರ ಫೈಲ್ಸ್’ ಚಿತ್ರದಲ್ಲಿ ನಟಿಸಿದ ಅನುಪಮ್ ಖೇರ್ ಪ್ರತ್ಯುತ್ತರ ನೀಡಿದ್ದಾರೆ.
ಕೇರಳದ ತಿರುವನಂತಪುರದ ಮಾತೃಭೂಮಿ ಅಂತಾರಾಷ್ಟ್ರೀಯ ಉತ್ಸವದಲ್ಲಿ ಭಾಗವಹಿಸಿದ್ದ ಪ್ರಕಾಶ್ ರಾಜ್, "ಕಾಶ್ಮೀರ್ ಫೈಲ್ಸ್ ಒಂದು ನಾನ್ಸೆನ್ಸ್ ಸಿನಿಮಾ. ಆದರೆ, ಆ ಚಿತ್ರವನ್ನು ನಿರ್ಮಿಸಿದವರು ಯಾರು ಎಂಬುದು ನಮಗೆ ತಿಳಿದಿರುವ ವಿಚಾರ. ಈ ನಾಚಿಗೆ ಇಲ್ಲದ ಚಿತ್ರಕ್ಕೆ ಅಂತಾರಾಷ್ಟ್ರೀಯ ಸಿನಿಮಾ ತೀರ್ಪುಗಾರರು ಉಗಿದಿದ್ದಾರೆ. ಇತ್ತ ನನಗೇಕೆ ಆಸ್ಕರ್ ಸಿಗುತ್ತಿಲ್ಲ ಎಂದು ನಿರ್ದೇಶಕರು ಹೇಳಿಕೊಳ್ಳುತ್ತಿದ್ದಾರೆ. ಆಸ್ಕರ್ ಅಲ್ಲ ಇವರಿಗೆ ಭಾಸ್ಕರ್ ಕೂಡ ಸಿಗುವುದಿಲ್ಲ. ಈ ಥರದ ಸಿನಿಮಾ ಮಾಡುವ ಸಲುವಾಗಿಯೇ ಅವರು 2000 ಕೋಟಿ ಹಣವನ್ನು ತೆಗೆದಿಟ್ಟಿದ್ದಾರೆ. ಆದರೆ, ಎಲ್ಲ ಸಮಯದಲ್ಲೂ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ." ಎಂದು ಪ್ರಕಾಶ್ ರಾಜ್ ಹೇಳಿದ್ದರು.
ಪ್ರಕಾಶ್ ರಾಜ್ ಹೇಳಿಕೆಗೆ ಖೇರ್ ಟಾಂಗ್..
ಹಿಂದಿ ವೆಬ್ಸೈಟ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅನುಪಮ್ ಖೇರ್, "ಕೆಲವು ಜನ ತಮ್ಮ ಸ್ಟೇಟಸ್ ನೋಡಿ ಮಾತನಾಡುತ್ತಾರೆ. ಇನ್ನು ಕೆಲವರು ಜೀವನದುದ್ದಕ್ಕೂ ಸುಳ್ಳುಗಳನ್ನು ಹೇಳುತ್ತಲೇ ಜೀವನ ಸಾಗಿಸುತ್ತಾರೆ. ಇದೆಲ್ಲದರ ನಡುವೆ ಕೆಲವರು ಸತ್ಯವನ್ನೇ ಹೇಳುತ್ತಾರೆ. ಅದಕ್ಕಾಗಿಯೇ ಬದುಕುತ್ತಿರುತ್ತಾರೆ. ಆ ಸಾಲಿನಲ್ಲಿ ನಾನೂ ಸಹ ಸತ್ಯವನ್ನೇ ಹೇಳುವಾತ. ಕೆಲವರು ಸುಳ್ಳು ಹೇಳುವ ಮೂಲಕ ಬದುಕಲು ಬಯಸಿದರೆ, ಅದು ಅವರ ಆಯ್ಕೆಯ" ಎಂದು ಎಲ್ಲಿಯೂ ಪ್ರಕಾಶ್ ರಾಜ್ ಹೆಸರನ್ನು ಹೇಳದೇ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಪ್ರಕಾಶ್ ರಾಜ್ ಅವರ ನಾನ್ಸೆನ್ಸ್ ಸಿನಿಮಾ ಎಂಬ ಮಾತಿಗೆ ಪ್ರತಿಕ್ರಿಯಿಸಿದ್ದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ಪ್ರಕಾಶ್ ರಾಜ್ ಒಬ್ಬ ಅರ್ಬನ್ ನಕ್ಸಲ್ ಎಂದು ಟೀಕಿಸಿದ್ದರು. ‘ನಮ್ಮ ಕಾಶ್ಮೀರ್ ಫೈಲ್ಸ್ ಸಿನಿಮಾ ಅರ್ಬನ್ ನಕ್ಸಲ್ಗಳ ನಿದ್ದೆ ಕೆಡಿಸಿದೆ. ಚಿತ್ರವು ಬಿಡುಗಡೆಯಾಗಿ ಒಂದು ವರ್ಷ ಕಳೆದರೂ, ಓರ್ವ ವ್ಯಕ್ತಿಯ ನಿದ್ದೆ ಕೆಡಿಸಿದೆ ಆ ಸಿನಿಮಾ. ಭಾಸ್ಕರ್ ಪ್ರಶಸ್ತಿಯು ನಿಮ್ಮ ಬಳಿಯೇ ಇರುವಾಗ ಅದನ್ನು ನಾನು ಪಡೆಯಲು ಸಾಧ್ಯವಿಲ್ಲʼ ಎಂದು ವಿವೇಕ್ ಮರು ಉತ್ತರ ನೀಡಿದ್ದರು.