Senior Actor Umesh: ನಟ ಉಮೇಶ್ ಸಿನಿ ಪಯಣಕ್ಕೆ 62ನೇ ಸಂಭ್ರಮ; ಹಿರಿಯರನ್ನು ಗೌರವಿಸಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ
Aug 14, 2022 07:18 AM IST
ಹಿರಿಯ ನಟ ಉಮೇಶ್ ಸಿನಿ ಪಯಣಕ್ಕೆ 62ನೇ ಸಂಭ್ರಮ; ಹಿರಿ ನಟರ ಗೌರವಿಸಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ
- ಉಮೇಶ್ ಅವರು ಚಿತ್ರರಂಗದಲ್ಲಿ ಐವತ್ತು ವರ್ಷ ಪೂರೈಸಿರುವ ಹಿನ್ನೆಲೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಭಿನಂದನೆ ಸಲ್ಲಿಸಿದೆ. ವಾಣಿಜ್ಯ ಮಂಡಳಿಯ ಅಧ್ಯಕ್ಷ ಬಾ.ಮಾ. ಹರೀಶ್ ನೇತೃತ್ವದಲ್ಲಿ ಉಮೇಶ್ ಮತ್ತು ಬೆಂಗಳೂರು ನಾಗೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬೆಂಗಳೂರು: ಕನ್ನಡ ರಂಗಭೂಮಿ ಹಾಗೂ ಚಲನಚಿತ್ರರಂಗದ ಹಿರಿಯ ಹಾಸ್ಯ ಕಲಾವಿದರಾದ ಎಂ.ಎಸ್. ಉಮೇಶ್ ಕಿರುತೆರೆಯಲ್ಲೂ ಜನಪ್ರಿಯರು. ನಾಟಕಗಳಲ್ಲಿ ಬಾಲ ಕಲಾವಿದರಾಗಿ ಅಭಿನಯಿಸುತ್ತಿದ್ದ ಉಮೇಶ್ ಚಲನಚಿತ್ರ ರಂಗಕ್ಕೆ 'ಮಕ್ಕಳ ರಾಜ್ಯ' ಚಿತ್ರದ ಮೂಲಕ ಅಡಿಯಿಟ್ಟರು. ಕನ್ನಡದ ಸುಮಾರು 250ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ವಿವಿಧ ಬಗೆಯ ಪಾತ್ರಗಳನ್ನು ಪೋಷಿಸಿರುವ ಉಮೇಶ್ ಹಾಸ್ಯ ನಟರಾಗಿ ಹೆಸರುವಾಸಿ.
ಕಥಾಸಂಗಮದ 'ಮುನಿತಾಯಿ'ಯಲ್ಲಿ ತಿಮ್ಮರಾಯಿ ಪಾತ್ರ ಉಮೇಶ್ ಅವರ ಕಲಾ ಪ್ರೌಢಿಮೆಯನ್ನು ಬೆಳಕಿಗೆ ತಂದಿತ್ತು. ಈ ಪಾತ್ರಕ್ಕೆ ರಾಜ್ಯ ಸರ್ಕಾರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ಮುತ್ತಿಟ್ಟಿರುವ ಉಮೇಶ್ ಕಲಾ ಪಯಣಕ್ಕೆ 62ರ ಸಂಭ್ರಮ.
ಉಮೇಶ್ ಚಿತ್ರರಂಗದಲ್ಲಿ ಐವತ್ತು ವರ್ಷ ಪೂರೈಸಿರುವ ಹಿನ್ನೆಲೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಭಿನಂದನೆ ಸಲ್ಲಿಸಿದೆ. ವಾಣಿಜ್ಯ ಮಂಡಳಿಯ ಅಧ್ಯಕ್ಷ ಬಾ.ಮಾ. ಹರೀಶ್ ನೇತೃತ್ವದಲ್ಲಿ ಉಮೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇದೇ ವೇಳೆ ಚಿತ್ರರಂಗದ ಮತ್ತೊಬ್ಬ ಹಿರಿಯ ಕಲಾವಿದರಾದ ಬೆಂಗಳೂರು ನಾಗೇಶ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 60 ವರ್ಷ ಪೂರೈಸಿದ ಹಿನ್ನೆಲೆ ಅವರನ್ನು ಕೂಡ ಸನ್ಮಾನಿಸಲಾಯಿತು.
ಉಮೇಶ್ ಮಾತನಾಡಿ, "ಇದು ನನ್ನು ಸುದಿನ ಅಂತ ಭಾವಿಸ್ತೀನಿ. ಚಿತ್ರರಂಗ ನನ್ನನ್ನ ಮನೆ ಮಗನಂತೆ ನೋಡಿದೆ. ಅಭಿಮಾನಿ ಅನ್ನದಾತರಿಂದ ಇಲ್ಲಿದ್ದೇನೆ. ಕಲಾಸೇವೆ ಮಾಡೋ ಅವಕಾಶ ಸಿಕ್ಕಿದ್ದು ಪುಣ್ಯ. ಕನ್ನಡ ಚಿತ್ರರಂಗದ ನಿರ್ಮಾಪಕರು, ನಿರ್ದೇಶಕರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ಭಾ.ಮಾ.ಹರೀಶ್ ಮಾತನಾಡಿ, "ಹಿರಿಯ ಕಲಾವಿದ ಉಮೇಶ್ ಅವರು ಸನ್ಮಾನ ಸ್ವೀಕರಿಸಿರುವುದು ಖುಷಿ ಕೊಟ್ಟಿದೆ. ನಿಮ್ಮ ಆಶೀರ್ವಾದ ಕನ್ನಡ ಇಂಡಸ್ಟ್ರೀ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೇಲೆ ಇರಲಿ. ಹೊಸ ನಿರ್ದೇಶಕರು, ನಿರ್ಮಾಪಕರನ್ನು ಕರೆಸಿ ಪೋಷಕ ಕಲಾವಿದರ ಸಂಘದ ಮೂಲಕ ನೆನೆಪಿಸಿಕೊಳ್ಳುವ ಕೆಲಸ ಮಾಡುತ್ತೇವೆ" ಎಂದರು.
ನೂರಾರು ಸಿನಿಮಾಗಳಲ್ಲಿ ನಟನೆ..
ಐದು ದಶಕಗಳಿಗೂ ಹೆಚ್ಚು ಕಾಲದಿಂದ ಕಲಾವಿದರಾಗಿ ಸಕ್ರಿಯರಾಗಿರುವ ಉಮೇಶ್, 'ಗೋಲ್ ಮಾಲ್ ರಾಧಾಕೃಷ್ಣ' ಸಿನಿಮಾದಲ್ಲಿ ಅವರ ಡೈಲಾಗ್ ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. "ಅಯ್ಯೋ ತಪ್ಪಾಯ್ತು.." ಎಂಬ ಡೈಲಾಗ್ ಉಮೇಶ್ ಅವರನ್ನು ನೋಡಿದರೆ ನೆನಪಾಗುತ್ತದೆ. ವರನಟ ಡಾ.ರಾಜ್ ಕುಮಾರ್ ಜೊತೆ 'ಶ್ರುತಿ ಸೇರಿದಾಗ' ಚಿತ್ರದಲ್ಲಿನ "ಇದು ಬೊಂಬೆಯಾಟವಯ್ಯಾ" ಹಾಡಿನಲ್ಲಿ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. "ಹಾಲು ಜೇನು", "ಶ್ರಾವಣ ಬಂತು", "ಗುರುಶಿಷ್ಯರು", "ಮಲಯಮಾರುತ", "ನೀನು ನಕ್ಕರೆ ಹಾಲು ಸಕ್ಕರೆ", "ಚೈತ್ರದ ಪ್ರೇಮಾಂಜಲಿ" ಚಿತ್ರಗಳು ಸೇರಿದಂತೆ ನೂರಾರು ಚಿತ್ರಗಳಲ್ಲಿ ಉಮೇಶ್ ಅಮೋಘವಾಗಿ ನಟಿಸಿದ್ದಾರೆ. ನಟನೆ ಮಾತ್ರವಲ್ಲ "ಎಲ್ಲರಂತಲ್ಲ ನನ್ನ ಗಂಡ", "ಜೇನುಗೂಡು", "ಚನ್ನ" ಸಿನಿಮಾ ಚಿತ್ರಗಳನ್ನು ಉಮೇಶ್ ನಿರ್ದೇಶನ ಮಾಡಿದ್ದಾರೆ.