Araga Jnanendra On Kamblihula: ಸತ್ಯಘಟನೆಗೆ ಮನಸೋತ ಸಚಿವ ಆರಗ ಜ್ಞಾನೇಂದ್ರ; ‘ಕಂಬ್ಳಿಹುಳ’ ನೋಡಿ ಹೀಗಂದ್ರು..
Oct 21, 2022 04:41 PM IST
ಸತ್ಯಘಟನೆಗೆ ಮನಸೋತ ಸಚಿವ ಆರಗ ಜ್ಞಾನೇಂದ್ರ; ‘ಕಂಬ್ಳಿಹುಳ’ ನೋಡಿ ಹೀಗಂದ್ರು..
- ಮಲೆನಾಡಿನ ಯುವಕರು ತಾವು ಬೆಳೆದಂತ ಊರು, ಪರಿಸರ, ಬದುಕು ಇವುಗಳ ಆಧಾರ ಮೇಲೆ ಕಥೆ ಕಟ್ಟಿ ಸಿನಿಮಾ ಮಾಡುತ್ತಾರೆ. ನೈಜತೆಯಿಂದ ಕೂಡಿರುವ ‘ಕಂಬ್ಳಿಹುಳ’ ಸಿನಿಮಾ ಟ್ರೇಲರ್ ನೋಡಿದಾಗ ನನಗೂ ಅದೇ ಅನಿಸಿದ್ದು, ಖಂಡಿತಾ ಸಿನಿಮಾ ಯಶಸ್ಸು ಕಾಣಲಿದೆ.
ಸಿನಿಮಾರಂಗ ಬಹಳ ಬೇಗ ಎಲ್ಲರನ್ನು ಆಕರ್ಷಿಸುತ್ತೆ. ಕೆಲವರಿಗೆ ನಟರಾಗುವ ಆಸೆ, ಇನ್ನೂ ಕೆಲವರಿಗೆ ನಿರ್ದೇಶಕರಾಗುವ, ಕಲಾವಿದರಾಗುವ ಆಸೆ. ಒಟ್ಟಿನಲ್ಲಿ ಬಣ್ಣದ ಲೋಕದಲ್ಲಿ ಏನಾದರೂ ಸಾಧಿಸುವ ಕನಸು. ಆ ಕನಸುಗಳುಳ್ಳ ಸಿನಿಮಾ ಪ್ರೀತಿಯುಳ್ಳ ಒಂದಿಷ್ಟು ಸಮಾನ ಮನಸ್ಕರು ಸೇರಿ ಮಾಡಿರುವ ನವಿರಾದ ಪ್ರೇಮಕಥೆಯುಳ್ಳ ಚಿತ್ರ ‘ಕಂಬ್ಳಿಹುಳ’. ಟೈಟಲ್ ಮೂಲಕವೇ ಚಂದನವನ ಹಾಗೂ ಸಿನಿರಸಿಕರ ಮನಸ್ಸಲ್ಲಿ ಒಂದಿಷ್ಟು ಕುತೂಹಲ ಮೂಡಿಸಿದೆ. ಚೆಂದದ ಹಾಡಿನ ಮೂಲಕ ಎಲ್ಲರ ಗಮನ ತನ್ನತ್ತ ಸೆಳೆದ ಚಿತ್ರತಂಡವೀಗ ಟ್ರೇಲರ್ ಬಿಡುಗಡೆ ಮಾಡಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಯುವ ಪ್ರತಿಭೆಗಳಿಗೆ ಬೆನ್ನುತಟ್ಟಿ ಚಿತ್ರದ ಭರವಸೆಯುಳ್ಳ ಟ್ರೇಲರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಕಾರ್ಯಕ್ರಮದಲ್ಲಿ ನಟ ಪ್ರವೀಣ್ ತೇಜ್, ನಿರ್ದೇಶಕ ಸತ್ಯ ಪ್ರಕಾಶ್ ಭಾಗಿಯಾಗಿ ಚಿತ್ರತಂಡಕ್ಕೆ ಪ್ರೋತ್ಸಾಹ ನೀಡಿದ್ರು.
ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಸಿನಿಮಾ ಮಾಯಾ ಜಗತ್ತು ಸಿಹಿ ಕಹಿ ಎಲ್ಲವೂ ಇದರಲ್ಲಿರುತ್ತೆ. ಒಂದು ಹೋರಾಟದ ಮನೋಭಾವ ಇದ್ದಾಗ ಮಾತ್ರ ಸಿನಿಮಾ ಮಾಡಲು ಸಾಧ್ಯ ಈ ಚಿತ್ರದ ನಿರ್ಮಾಪಕರಲ್ಲಿಯೂ ಅಂತಹದ್ದೊಂದು ಹೋರಾಟದ ಮನೋಭಾವ ಇದ್ದಿದ್ದರಿಂದ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಮಲೆನಾಡಿನ ಯುವಕರು ತಾವು ಬೆಳೆದಂತ ಊರು, ಪರಿಸರ, ಬದುಕು ಇವುಗಳ ಆಧಾರ ಮೇಲೆ ಕಥೆ ಕಟ್ಟಿ ಸಿನಿಮಾ ಮಾಡುತ್ತಾರೆ. ನೈಜತೆಯಿಂದ ಕೂಡಿರುವ ‘ಕಂಬ್ಳಿಹುಳ’ ಸಿನಿಮಾ ಟ್ರೇಲರ್ ನೋಡಿದಾಗ ನನಗೂ ಅದೇ ಅನಿಸಿದ್ದು, ಖಂಡಿತಾ ಸಿನಿಮಾ ಯಶಸ್ಸು ಆಗುತ್ತೆಂದು" ಚಿತ್ರತಂಡಕ್ಕೆ ಪ್ರೋತ್ಸಾಹ ನೀಡಿದ್ರು.
ನವನ್ಗಿದು ಚೊಚ್ಚಲ ಸಿನಿಮಾ..
ಕಿರುಚಿತ್ರಗಳನ್ನು ನಿರ್ದೇಶಿಸಿ ಅನುಭವವಿರುವ ನಿರ್ದೇಶಕ ನವನ್ ಶ್ರೀನಿವಾಸ್ ನಿರ್ದೇಶನದ ಮೊದಲ ಸಿನಿಮಾ ಇದು. ಮಲೆನಾಡು ಭಾಗದಲ್ಲಿ ನಡೆಯುವ ಕಥೆ ಚಿತ್ರದಲ್ಲಿದೆ. ಶೃಂಗೇರಿ, ಸಕಲೇಶಪುರ, ತೀರ್ಥಹಳ್ಳಿ, ಸುತ್ತಮುತ್ತ ‘ಕಂಬ್ಳಿಹುಳ’ ಚಿತ್ರೀಕರಣ ನಡೆಸಲಾಗಿದೆ. ಎಮೋಷನಲ್ ಜರ್ನಿ ಸಿನಿಮಾ ಇದಾಗಿದ್ದು ರಂಗಭೂಮಿ ಕಲಾವಿದ ಅಂಜನ್ ನಾಗೇಂದ್ರ ಹಾಗೂ ಅಶ್ವಿತಾ ಆರ್ ಹೆಗ್ಡೆ ಚಿತ್ರದ ನಾಯಕ, ನಾಯಕಿಯಾಗಿ ನಟಿಸಿದ್ದಾರೆ.
ನವೆಂಬರ್ 4ರಂದು ಸಿನಿಮಾ ತೆರೆಗೆ
ಚಿತ್ರದ ನಿರ್ದೇಶಕ ನವನ್ ಶ್ರೀನಿವಾಸ್ ಮಾತನಾಡಿ, "ಇಡೀ ಸಿನಿಮಾ ತಂಡ ಹೊಸಬರಿಂದ ಕೂಡಿದ್ದರಿಂದ 90 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದೇವು. ಇದೀಗ ಅಷ್ಟು ದಿನಗಳ ಶ್ರಮ ನವೆಂಬರ್ 4ರಂದು ತೆರೆ ಮೇಲೆ ಅನಾವರಣಗೊಳ್ಳುತ್ತಿದೆ. ಮಲೆನಾಡು ಭಾಗದಲ್ಲಿ ನಡೆಯುವ ಪ್ರೇಮಕಥೆ ಇದು. ನಾನು ಕೂಡ ಮಲೆನಾಡಿನವನಾದ್ದರಿಂದ ಈಸಿಯಾಗಿ ಹೇಳಬಹುದೆಂದು ಆ ಭಾಗದ ಕಥೆಯನ್ನೇ ಆಯ್ಕೆ ಮಾಡಿಕೊಂಡೆ. ಖಂಡಿತಾ ಸಿನಿಮಾ ಎಲ್ಲರಿಗೂ ಒಳ್ಳೆಯ ಫೀಲ್ ಕೊಡಲಿದೆ" ಎಂದು ತಿಳಿಸಿದರು.
ನಾಯಕ ಅಂಜನ್ ನಾಗೇಂದ್ರ ಮಾತನಾಡಿ "ಕಂಬ್ಳಿಹುಳ ನನಗೆ ಹೊಸ ಜೀವನ ಕೊಟ್ಟಂತ ಸಿನಿಮಾ. ನಿರ್ದೇಶಕರಿಗೆ ನನಗೆ ಯಾವುದಾದರೂ ಪಾತ್ರ ಕೊಡಿ ಮಾಡುತ್ತೇನೆ ಎಂದಿದ್ದೆ ಒಂದಷ್ಟು ದಿನಗಳ ನಂತರ ಈ ಸಿನಿಮಾದಲ್ಲಿ ಹೀರೋ ಪಾತ್ರ ಮಾಡಬೇಕು ಎಂದ್ರು. ನಾನು ರಂಗಭೂಮಿ ಕಲಾವಿದನಾದ್ದರಿಂದ ಸಿನಿಮಾ ನಟನೆಗೆ ಹೊಂದಿಕೊಳ್ಳಲು ಒಂದಿಷ್ಟು ವರ್ಕ್ ಶಾಪ್ ಮಾಡಿ ನಟಿಸಿದ್ದೇನೆ. ಇಲ್ಲಿವರೆಗೆ ನಮ್ಮ ಸಿನಿಮಾಗೆ ಹೇಗೆ ಸಪೋರ್ಟ್ ಮಾಡಿದ್ದೀರಾ ಹಾಗೆಯೇ ಬಿಡುಗಡೆಯಾದ ಮೇಲು ಪ್ರೀತಿ ತೋರಿಸಿ ಪ್ರೋತ್ಸಾಹಿಸಿ" ಎಂದರು.
ಚಿತ್ರದ ನಾಯಕಿ ಅಶ್ವಿತಾ ಆರ್ ಹೆಗ್ಡೆ ಮಾತನಾಡಿ, "ಚಿತ್ರದಲ್ಲಿ ಮಲೆನಾಡಿನಲ್ಲಿ ವಾಸವಾಗಿರುವ ಮಲಯಾಳಿ ಹುಡುಗಿಯ ಪಾತ್ರ ನಿರ್ವಹಿಸುತ್ತಿದ್ದೇನೆ. ಮೂಲತಃ ನಾನು ರಂಗಭೂಮಿ ಕಲಾವಿದೆ. ನಮ್ಮೆಲ್ಲರಿಗೂ ಚಿತ್ರರಂಗ ಹೊಸತು. ಒಂದೊಳ್ಳೆ ಸಿನಿಮಾ ಮಾಡಿದ್ದೇವೆ. ಹೊಸಬರ ಸಿನಿಮಾ ನೋಡಿ ಹಾರೈಸಿ. ಅವಕಾಶ ನೀಡಿದ್ದಕ್ಕಾಗಿ ಚಿತ್ರದ ನಿರ್ದೇಶಕರಿಗೆ ನಾನು ಥ್ಯಾಂಕ್ಸ್ ಹೇಳುತ್ತೇನೆ" ಎಂದು ತಿಳಿಸಿದ್ರು.
ಗ್ರೇ ಸ್ಕ್ವೇರ್ ಸ್ಟುಡಿಯೋಸ್ ಬ್ಯಾನರ್ ನಡಿ ನಿರ್ಮಾಣವಾಗಿರುವ ಈ ಚಿತ್ರ ನೈಜ ಘಟನೆಯಾಧಾರಿತ ಸಿನಿಮಾ. ಚಿತ್ರದಲ್ಲಿ ರೋಹಿತ್ ಕುಮಾರ್, ದೀಪಕ್ ರೈ ಪಣಜೆ, ಸಂಧ್ಯಾ ಅರಕೆರೆ, ಸಂಪತ್ ಶೆಟ್ಟಿ ಸೇರಿದಂತೆ ಹಲವು ಯುವ ಪ್ರತಿಭೆಗಳು ನಟಿಸಿದ್ದಾರೆ. ವಿಜಯ್, ಸವೀನ್, ಪುನೀತ್ ಹಾಗೂ ಗುರು ಚಿತ್ರಕ್ಕೆ ಬಂಡವಾಳ ಹೂಡಿದ್ದು, ಸತೀಶ್ ರಾಜೇಂದ್ರನ್ ಛಾಯಾಗ್ರಹಣ, ಜಿತೇಂದ್ರ ನಾಯಕ ಮತ್ತು ರಾಘವೇಂದ್ರ ಟಿಕೆ ಸಂಕಲನ, ಶಿವ ಪ್ರಸಾದ್ ಸಂಗೀತ ನಿರ್ದೇಶನ ‘ಕಂಬ್ಳಿಹುಳ’ ಚಿತ್ರಕ್ಕಿದೆ. ನವೆಂಬರ್ 4ರಂದು ಸಿನಿಮಾ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.