Kantara Celebrity Review: ‘ಕಾಂತಾರ’ ಮುಗೀತಿದ್ದಂತೆ, ಪ್ರೇಕ್ಷಕರ ಗ್ಯಾಲರಿಯಿಂದ ಓಡಿ ಬಂದ ರಕ್ಷಿತ್; ಬಿಗಿದಪ್ಪಿ ಭಾವುಕರಾದ ಶೆಟ್ರು
Sep 30, 2022 10:51 AM IST
‘ಕಾಂತಾರ’ ಮುಗೀತಿದ್ದಂತೆ, ಪ್ರೇಕ್ಷಕರ ಗ್ಯಾಲರಿಯಿಂದ ಓಡಿ ಬಂದ ರಕ್ಷಿತ್; ಬಿಗಿದಪ್ಪಿ ಭಾವುಕರಾದ ಶೆಟ್ರು
- ರಿಷಬ್ ಶೆಟ್ಟಿಯ ಕುಚಿಕು ರಕ್ಷಿತ್ ಶೆಟ್ಟಿ, ಸಿನಿಮಾ ಮುಗಿಯುತ್ತಿದ್ದಂತೆ ಪ್ರೇಕ್ಷಕರ ಗ್ಯಾಲರಿಯಿಂದ ಓಡಿ ಬಂದು ರಿಷಬ್ ಅವರನ್ನು ಬಿಗಿದಪ್ಪಿ, ಕೆಲ ಕ್ಷಣ ಭಾವುಕರಾದರು.
ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಾಯಕನಾಗಿ ನಟಿಸಿದ 'ಕಾಂತಾರ' ಸಿನಿಮಾ ಇಂದು (ಸೆ. 30) ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಹೊಂಬಾಳೆ ಫಿಲಂಸ್ ನಿರ್ಮಾಣದ ಈ ಸಿನಿಮಾ ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರವನ್ನೇ ಪಡೆದುಕೊಂಡಿದೆ.
ಸಿನಿಮಾ ಬಿಡುಗಡೆಗೂ ಮುನ್ನ ಅಂದರೆ 29ರಂದು ಪ್ರಿಮೀಯರ್ ಶೋ ಆಯೋಜಿಸಲಾಗಿತ್ತು. ಈ ಶೋಗೆ ಸಿನಿಮಾ ಸೆಲೆಬ್ರಿಟಿಗಳೂ ಸೇರಿ ತಂಡದ ಆಪ್ತರೆಲ್ಲರೂ ಆಗಮಿಸಿದ್ದರು. ಸಿನಿಮಾ ನೋಡಿದ ಎಲ್ಲರೂ ಅಚ್ಚರಿಯ ರೀತಿಯಲ್ಲಿಯೇ ಕಂಮೆಂಟ್ ನೀಡಿದ್ದಾರೆ.
ಅದರಲ್ಲೂ ರಿಷಬ್ ಶೆಟ್ಟಿಯ ಕುಚಿಕು ರಕ್ಷಿತ್ ಶೆಟ್ಟಿ, ಸಿನಿಮಾ ಮುಗಿಯುತ್ತಿದ್ದಂತೆ ಪ್ರೇಕ್ಷಕರ ಗ್ಯಾಲರಿಯಿಂದ ಓಡಿ ಬಂದು ರಿಷಬ್ ಅವರನ್ನು ಬಿಗಿದಪ್ಪಿ, ಕೆಲ ಕ್ಷಣ ಭಾವುಕರಾದರು. ನಟಿ ರಮ್ಯಾ, ವಿನಯ್ ರಾಜ್ಕುಮಾರ್, ನಿರೂಪಕಿ ಅನುಶ್ರೀ ಎಲ್ಲರೂ ಅವರವರ ಅನಿಸಿಕೆ ಅಭಿಪ್ರಾಯ ಹಂಚಿಕೊಂಡ್ರು.
ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಕಥೆ
‘ಕಾಂತಾರ’, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಕಥೆ ಎನ್ನುವ ರಿಷಬ್, ‘ನಾನು ಊರಿನಲ್ಲಿ ಇದ್ದಾಗ ಕೆಲವು ಘಟನೆಗಳನ್ನು ನೋಡಿದ್ದೆ. ಅರಣ್ಯ ಇಲಾಖೆ, ಭೂಮಿ ಒತ್ತುವರಿ ... ಹೀಗೆ ಹಲವು ವಿಷಯಗಳ ಸುತ್ತ ಈ ಚಿತ್ರ ಸುತ್ತುತ್ತದೆ. ದಕ್ಷಿಣ ಕನ್ನಡದಲ್ಲಿ ಭೂಮಿ ಎಂದರೆ ಅದು ಬರೀ ಭೂಮಿಯಲ್ಲ, ಅದೊಂದು ಸಂಸ್ಕೃತಿ. ಅಲ್ಲಿನ ದೈವ, ಕಂಬಳ, ಭೂತಕೋಲ ಎಲ್ಲವೂ ಬಹಳ ಮುಖ್ಯವಾಗುತ್ತದೆ. ಈ ಎಲ್ಲದರ ಕುರಿತು ಚಿತ್ರದಲ್ಲಿ ಹೇಳುವುದಕ್ಕೆ ಹೊರಟಿದ್ದೇವೆ' ಎಂದು ರಿಷಬ್ ಹೇಳಿದ್ದರು.
ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರ ದಂಡಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ. ಚಿತ್ರವನ್ನು ರಾಜ್ಯದಲ್ಲಿ ಕೆಆರ್ಜಿ ಸ್ಟುಡಿಯೋಸ್ ಸಂಸ್ಥೆ ವಿತರಿಸುತ್ತಿದೆ.