Chetan Ahimsa: ಸೌಜನ್ಯ ಅತ್ಯಾಚಾರ ಪ್ರಕರಣದಲ್ಲಿ ಧರ್ಮಸ್ಥಳದ ಶಕ್ತಿಗಳು ಮೌನವಾಗಿರುವುದೇಕೆ? ಚೇತನ್ ಅಹಿಂಸಾ ಪ್ರಶ್ನೆ
Aug 02, 2023 04:28 PM IST
ಸೌಜನ್ಯ ಅತ್ಯಾಚಾರ ಪ್ರಕರಣದಲ್ಲಿ ಧರ್ಮಸ್ಥಳದ ಶಕ್ತಿಗಳು ಮೌನವಾಗಿರುವುದೇಕೆ? ಚೇತನ್ ಅಹಿಂಸಾ ಪ್ರಶ್ನೆ
- ಧರ್ಮಸ್ಥಳ ಬಳಿಕ ಉಜಿರೆ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಪ್ರತಿಕ್ರಿಯೆ ನೀಡಿದ್ದಾರೆ. ಧರ್ಮಸ್ಥಳದ ಶಕ್ತಿಗಳು ಮೌನವಾಗಿರುವುದೇಕೆ ಎಂದು ಪ್ರಶ್ನೆ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
Chetan Ahimsa: ಇತ್ತೀಚಿನ ಕೆಲ ದಿನಗಳಿಂದ ದಕ್ಷಿಣ ಕನ್ನಡ ಭಾಗದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ವಿಚಾರ ಎಂದರೆ ಅದು ಸೌಜನ್ಯ ಅತ್ಯಾಚಾರ ಪ್ರಕರಣ. ಕಳೆದ 11 ವರ್ಷಗಳ ಹಿಂದೆ ಧರ್ಮಸ್ಥಳ ಬಳಿಕ ಉಜಿರೆ ಎಸ್ಡಿಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯಾಳನ್ನು ಅತ್ಯಾಚಾರಗೈದು ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಆರೋಪಿ ಸಂತೋಷ್ ರಾವ್ನನ್ನು ದೋಷಮುಕ್ತ ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸುತ್ತಿದ್ದಂತೆ, ಇದೀಗ ಈ ಅತ್ಯಾಚಾರ ಪ್ರಕರಣ ಸುದ್ದಿಯಲ್ಲಿದೆ.
ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೂ ಸೌಜನ್ಯ ಅತ್ಯಾಚಾರ ಪ್ರಕರಣ ಮುನ್ನುಡಿ ಬರೆಯುತ್ತಿದೆ. ಅದ್ಯಾವ ಮಟ್ಟಿಗೆ ಎಂದರೆ, ನ್ಯಾಯ ಸಿಗುವವರೆಗೂ ಧರ್ಮಸ್ಥಳಕ್ಕೆ ತೆರಳುವುದೇ ಬೇಡ ಎಂಬ ಪೋಸ್ಟ್ಗಳು ಹರಿದಾಡುತ್ತಿವೆ. ಈ ನಡುವೆ ಸಿನಿಮಾಕ್ಷೇತ್ರದಿಂದಲೂ ಈ ಪ್ರಕರಣದ ನಡೆಯ ಬಗ್ಗೆ ತೀವ್ರ ಟೀಕೆಗಳು ಕೇಳಿಬರುತ್ತಿವೆ. ಸೌಜನ್ಯಳ ಬೆನ್ನಿಗೆ ನಿಂತಿರುವ ಕೆಲವರು ನ್ಯಾಯಕ್ಕಾಗಿ ಮೊರೆಯಿಡುತ್ತಿದ್ದಾರೆ. ಇದೀಗ ಸಾಮಾಜಿಕ ಹೋರಾಟಗಾರ, ನಟ ಚೇತನ್ ಅಹಿಂಸಾ ಸಹ ಈ ಬಗ್ಗೆ ತಮ್ಮದೊಂದು ಪ್ರಶ್ನೆಯನ್ನು ಎಲ್ಲರ ಮುಂದಿಟ್ಟಿದ್ದಾರೆ.
ಧರ್ಮಸ್ಥಳಕ್ಕೆ ಚೇತನ್ ಅಹಿಂಸಾ ಪ್ರಶ್ನೆ?
ದೇಗುಲ ಪಟ್ಟಣವಾದ ಧರ್ಮಸ್ಥಳದಲ್ಲಿ 17 ವರ್ಷದ ಅಪ್ರಾಪ್ತ ಬಾಲಕಿ ಸೌಜನ್ಯಳ ಮೇಲೆ ಅತ್ಯಾಚಾರ ಮತ್ತು ಕೊಲೆಯಾಗಿ 11 ವರ್ಷಗಳೇ ಕಳೆದರೂ, ಇನ್ನೂ ಕೂಡ ನ್ಯಾಯ ಸಿಕ್ಕಿಲ್ಲ. ಪೊಲೀಸರು, ವೈದ್ಯರು, ವ್ಯವಸ್ಥೆಯ ತನಿಖೆಯಲ್ಲಿನ ವೈಫಲ್ಯಗಳನ್ನು ಕುಟುಂಬ ಮತ್ತು ಕಾರ್ಯಕರ್ತರು ಬಹಿರಂಗಪಡಿಸಿದ್ದಾರೆ. ಧರ್ಮಸ್ಥಳದ ಶಕ್ತಿಗಳು ಮೌನವಾಗಿರುವುದೇಕೆ? ಅವರು ಅಪರಾಧದಲ್ಲಿ ತಮ್ಮದೆ ಆದ ಪಾಲ್ಗೊಳ್ಳುವಿಕೆಯನ್ನು ಮರೆಮಾಡುತ್ತಿದ್ದಾರಾ? ಮರೆಮಾಡುತ್ತಾರೆಯೇ? ಎಂದು ಚೇತನ್ ಪ್ರಶ್ನೆ ಮಾಡಿದ್ದಾರೆ.
ದುನಿಯಾ ವಿಜಯ್ ಪೋಸ್ಟ್
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ಸಿಗುವವರೆಗೂ ಇನ್ನೆಂದೂ ಧರ್ಮಸ್ಥಳಕ್ಕೆ ತೆರಳುವುದಿಲ್ಲ ಎಂದಿದ್ದಾರೆ ನಟ ದುನಿಯಾ ವಿಜಯ್. “ಪ್ರತಿ ವರ್ಷ ಧರ್ಮಸ್ಥಳದ ದರ್ಶನ ಪಡೆಯುವುದು ವಾಡಿಕೆಯಾಗಿತ್ತು, ಆದರೆ ಸೌಜನ್ಯಳ ಪ್ರಕರಣದ ಇಂದಿನ ಬೆಳವಣಿಗೆ ನೋಡಿ, ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತಿದೆ. ಸತ್ಯ ಎಂಬುದು ಸೂರ್ಯನ ಬೆಳಕಿದ್ದಂತೆ. ಯಾವುದನ್ನೂ ಹೆಚ್ಚು ಸಮಯ ಮರೆಮಾಚಲಾಗದು” ಎಂದು ಬರೆದುಕೊಂಡಿದ್ದರು.
ಮನರಂಜನೆ ಕುರಿತ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ