Kannada Rajyotsava: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನಿರಾಕರಿಸಿದ ಕಾರವಾರದ ಹೋರಾಟಗಾರ್ತಿ
Nov 01, 2023 06:20 AM IST
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನಿರಾಕರಿಸಿದ ಕಾರವಾರದ ಹೋರಾಟಗಾರ್ತಿ ಯಮುನಾ ಗಾಂವ್ಕರ್
- Karwar News ಕನ್ನಡ ರಾಜ್ಯೋತ್ಸವ( Kannada Rajyotsava) ಪ್ರಶಸ್ತಿ ಪಡೆಯಲು ಅರ್ಹರ ಜತೆಗೆ ಕೆಲವೊಮ್ಮೆ ಲಾಬಿ ಮಾಡುವವರೂ ಇದ್ದಾರೆ. ಆದರೆ ಕಾರವಾರದ ಹೋರಾಟಗಾರ್ತಿ( Karwar Activist) ಯಮುನಾ ಗಾಂವ್ಕರ್ ತಮಗೆ ನೀಡಿರುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನಿರಾಕರಿಸಿ ಇನ್ನೊಬ್ಬ ಅರ್ಹರಿಗೆ ನೀಡಿ ಎಂದು ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ.
ಕಾರವಾರ: ಕರ್ನಾಟಕದ ಎಲ್ಲೆಡೆ ಈಗ ರಾಜ್ಯೋತ್ಸವ ಪ್ರಶಸ್ತಿಗಳ ಸಡಗರ. ರಾಜ್ಯಮಟ್ಟ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಬಹುತೇಕರು ಪ್ರಶಸ್ತಿಯನ್ನು ಖುಷಿಯಿಂದಲೇ ಸ್ವೀಕರಿಸಿದ್ದಾರೆ. ಅಭಿನಂದನೆಗಳ ಮಹಾಪೂರವೇ ಎಲ್ಲೆಡೆ ಕೇಳಿ ಬರುತ್ತಿದೆ.
ಆದರೆ ಇದರ ನಡುವೆಯೇ ಉತ್ತರ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದ್ದ ಹೋರಾಟಗಾರ್ತಿ ಯಮುನಾ ಗಾಂವ್ಕರ್ ಅವರು ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ. ಈ ಕುರಿತು ಜಿಲ್ಲಾಡಳಿತಕ್ಕೆ ಬರೆದಿರುವ ಪತ್ರವನ್ನು ಫೇಸ್ಬುಕ್ನಲ್ಲೂ ಶೇರ್ ಮಾಡಿದ್ದಾರೆ.
ಜಿಲ್ಲಾ ಪ್ರಶಸ್ತಿಗೆ ಆಯ್ಕೆಯಾದ ಕುರಿತು ಉಲ್ಲೇಖ:13.10.2023 ರಂದು ನಡೆದ ಪೂರ್ವ ಭಾವಿ ಸಭೆಯ ನಡಾವಳಿಗಳು ಹಾಗೂ ದಿನಾಂಕ 29.10.2023 ರಂದು ನಡೆದ ಸಭೆ ಯ ನಿರ್ಣಯದಂತೆ ತಾವು ಪತ್ರ ಕಳುಹಿಸಿದ್ದೀರಿ. ನಿನ್ನೆ ಸಂಜೆ ನನಗೆ ತಲುಪಿದೆ.
ಜಿಲ್ಲಾಡಳಿತದ ಪರವಾಗಿ ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿಗೆ, ದುಡಿಯುವ ಜನತೆಯ ಚಳುವಳಿಯಲ್ಲಿ ಇರುವ ನನ್ನ ಹೆಸರನ್ನು ಆಯ್ಕೆ ಮಾಡಿರುವುದಕ್ಕೆ ಆಯ್ಕೆ ಸಮಿತಿಗೆ ಮತ್ತು ಜಿಲ್ಲಾಡಳಿತಕ್ಕೆ ವಂದನೆಗಳು.
ತಮ್ಮ ಪತ್ರ ಬಂದಾಗ ನಾನು ಬೆಂಗಳೂರಿನಲ್ಲಿ ಅಕ್ಷರ ದಾಸೋಹ ಬಿಸಿಅಡುಗೆ ಯವರ ಅನಿರ್ದಿಷ್ಟ ಅವಧಿ ಅಹೋರಾತ್ರಿ ಹೋರಾಟದ ಮೊದಲ ದಿನ ಉದ್ಘಾಟನೆಯಲ್ಲಿ ಜವಾಬ್ದಾರಿ ನಿರ್ವಹಿಸುತ್ತಿದ್ದೆ. ಹಾಗಾಗಿ ಕೂಡಲೇ ನನ್ನ ತೀರ್ಮಾನ ತಿಳಿಸಲಾಗಲಿಲ್ಲ.
ನಾನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ಜಿಲ್ಲಾ ಕಾರ್ಯದರ್ಶಿ ಯಾಗಿ, ಸಿಐಟಿಯು ರಾಜ್ಯ ಕಾರ್ಯದರ್ಶಿ ಯಾಗಿ, ಅಖಿಲ ಭಾರತ ಜನರಲ್ ಕೌನ್ಸಿಲ್ ಸದಸ್ಯೆಯಾಗಿ ಹಾಗೂ ಜಿಲ್ಲೆಯ ಅಂಗನವಾಡಿ, ಅಕ್ಷರದಾಸೋಹ, ಪಂಚಾಯತ್ ಹಾಗೂ ಪೌರ, ಇನ್ನಿತರೇ ಸಂಘಟಿತ ಅಸಂಘಟಿತ ಕಾರ್ಮಿಕರ ಮತ್ತು ರೈತ ಕೂಲಿಕಾರರ, ಆದಿವಾಸಿಗಳ ಸಂಘಟನೆಯಲ್ಲಿ ಕಮ್ಯುನಿಸ್ಟ್ ಮೌಲ್ಯಗಳೊಂದಿಗೆ ಬದ್ಧತೆಯಿಂದ ತೊಡಗಿಸಿಕೊಂಡಿದ್ದೇನೆ. ಅಲ್ಲದೇ ಮಾನ್ಯ ಡಿಸಿಯವರ ಅಧ್ಯಕ್ಷತೆಯ ನಿಯಮ 17ರ ಸಮಿತಿಯಲ್ಲಿ (SCST ಜನರ ಮೇಲಿನ ದೌರ್ಜನ್ಯ ವಿರೋಧಿ ಸಮಿತಿ) ಸದಸ್ಯೆಯಾಗಿದ್ದೇನೆ. ಸರ್ಕಾರದ ಎದುರು ಅನೇಕ ಸಮಸ್ಯೆಗಳ ವಿರುದ್ಧ ಪರಿಹಾರಕ್ಕೆ ಪ್ರತಿನಿತ್ಯ ಹೋರಾಟದ ಮಾರ್ಗದಲ್ಲಿದ್ದೇನೆ. ಹೀಗೆ ಸಂಘಟನಾ ಚೌಕಟ್ಟಿನಲ್ಲಿ ಇರುವುದರಿಂದಲೂ, ವೈಯಕ್ತಿಕ ವಾಗಿಯೂ ಸರ್ಕಾರ ಕೊಡಮಾಡುವ ಈ ಪ್ರಶಸ್ತಿಯನ್ನು ನಾನು ಸ್ವೀಕರಿಸುವುದಿಲ್ಲವೆಂದು ಗೌರವಯುತವಾಗಿ ತಿಳಿಸುತ್ತಿದ್ದೇನೆ.
ಪ್ರಶಸ್ತಿಗಾಗಿ ನಾನು ಎಲ್ಲಿಯೂ ಅರ್ಜಿ ಹಾಕಿಲ್ಲ ಎಂದೂ ಕೂಡ ಸ್ಪಷ್ಟಪಡಿಸುತ್ತಿದ್ದೇನೆ. ಸಮಾಜದಲ್ಲಿ ಇನ್ನಷ್ಟೂ ಉತ್ತಮ ಸಾಧನೆ ಮಾಡಿದ ಇನ್ನೋರ್ವರನ್ನು ಅವರ ಒಪ್ಪಿಗೆಯೊಂದಿಗೆ ಪ್ರಶಸ್ತಿಗೆ ಆಯ್ಕೆ ಮಾಡಿ ನೀಡಬೇಕೆಂದು ತಮ್ಮಲ್ಲಿ ವಿನಂತಿಸುತ್ತಿದ್ದೇನೆ. ದುಡಿಯುವ ಜನತೆಯ ಬೇಡಿಕೆಗಳಿಗೆ ನಡೆಯುವ ಚಳುವಳಿಗೆ ತಮ್ಮೆಲ್ಲರ ಸಹಾಯ ಸಹಕಾರ ಕೋರುತ್ತೇನೆ ಎಂದು ಯಮುನಾ ಗಾಂವ್ಕರ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿರಿ
ವಿಭಾಗ