SVYM Scholarship: ಗ್ರಾಮೀಣ ಸಮುದಾಯಗಳಿಗೆ ಸಮಾನ ಶಿಕ್ಷಣ; ಶ್ಲಾಘನೀಯ ಕಾರ್ಯ ಎಂದ ಧಾರವಾಡ ಜಿಪಂ ಸಿಇಒ
Sep 20, 2022 06:47 PM IST
ಎಸ್ವಿವೈಎಂ ಸಂಸ್ಥೆ ಬೆಣಚಿಯಲ್ಲಿ ಹಮ್ಮಿಕೊಂಡ ಗ್ರಾಮೀಣ ಸಮುದಾಯಗಳಿಗೆ ಸಮಾನ ಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿದ ಧಾರವಾಡ ಜಿಲ್ಲಾ ಪಂಚಾಯ್ತಿ ಸಿಇಓ ಡಾ. ಸುರೇಶ ಇಟ್ನಾಳ್ ವಿದ್ಯಾರ್ಥಿ ವೇತನ ವಿತರಿಸಿದರು.
- SVYM Program: ಎಸ್ವಿವೈಎಂ ಸಂಸ್ಥೆ ಹಮ್ಮಿಕೊಂಡ ಗ್ರಾಮೀಣ ಸಮುದಾಯಗಳಿಗೆ ಸಮಾನ ಶಿಕ್ಷಣ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವೇತನ ವಿತರಣೆ, ಉನ್ನತ ಶಿಕ್ಷಣಕ್ಕಾಗಿ ಪಾಲಕರ ಉಳಿತಾಯ ಯೋಜನೆ ಹಾಗೂ ಕಚೇರಿ ಉದ್ಘಾಟನೆ ಕಾರ್ಯಕ್ರಮವನ್ನು ಧಾರವಾಡ ಜಿಲ್ಲಾ ಪಂಚಾಯ್ತಿ ಸಿಇಓ ಡಾ. ಸುರೇಶ ಇಟ್ನಾಳ್ ಉದ್ಘಾಟಿಸಿದರು.
ಅಳ್ನಾವರ: ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಗತಿಸಿದರೂ ಸಂಪೂರ್ಣ ಸಾಕ್ಷರತೆ ಸಾಧಿಸುವುದು ಸಾಧ್ಯವಾಗುತ್ತಿಲ್ಲ. ವಿಶೇಷವಾಗಿ ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ಹೆಚ್ಚು ಅನಕ್ಷರಾಗಿದ್ದಾರೆ. ಇಂತಹ ಸವಾಲುಗಳನ್ನು ಮೆಟ್ಟಿ ನಿಂತು ಗ್ರಾಮೀಣ ಸಮುದಾಯಗಳಿಗೆ ಸಮಾನ ಶಿಕ್ಷಣ ಪರಿಕಲ್ಪನೆ ಅಡಿ ಶೈಕ್ಷಣಿಕ ಕ್ರಾಂತಿ ಮಾಡಲು ದಿಟ್ಟ ಹೆಜ್ಜೆ ಇಟ್ಟ ಸ್ವಾಮಿ ವಿವೇಕಾನಂದ ಯೂತ್ ಮೊವ್ಮೆಂಟ್ (SVYM) ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಪಂಚಾಯಿತಿ ಸಿಇಓ ಡಾ. ಸುರೇಶ ಇಟ್ನಾಳ ಹೇಳಿದರು.
ಅಳ್ನಾವರ ಸಮೀಪದ ಬೆಣಚಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಂಗಳವಾರ ಎಸ್ವಿವೈಎಂ ಸಂಸ್ಥೆ ಹಮ್ಮಿಕೊಂಡ ಗ್ರಾಮೀಣ ಸಮುದಾಯಗಳಿಗೆ ಸಮಾನ ಶಿಕ್ಷಣ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವೇತನ ವಿತರಣೆ, ಉನ್ನತ ಶಿಕ್ಷಣಕ್ಕಾಗಿ ಪಾಲಕರ ಉಳಿತಾಯ ಯೋಜನೆ ಹಾಗೂ ಕಚೇರಿ ಉದ್ಘಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿಕ್ಷಣ ನೀಡುವದರ ಜತೆಗೆ ಪಾಲಕರಲ್ಲಿ ಉಳಿತಾಯ ಮನೋಭಾವನೆ ಬೆಳೆಸುತ್ತಿರುವ ಕಾರ್ಯ ಇತರರಿಗೆ ಮಾದರಿಯಾಗಿದೆ. ಸಾಕ್ಷರತಾ ಅಂದೋಲನ, ಸಮಗ್ರ ಶಿಕ್ಷಣ ನೀತಿ, ರಾಷ್ಟ್ರೀಯ ಶಿಕ್ಷಣ ನೀತಿ ಹೀಗೆ ಸಮಯಕ್ಕೆ ತಕ್ಕಂತೆ ಸಾಕಷ್ಟು ಬದಲಾವಣೆ ತಂದರೂ ಶೈಕ್ಷಣಿಕ ಹಿನ್ನಡೆ ನಿಬಾಯಿಸಲು ಸಾಧ್ಯವಾಗಿಲ್ಲ.
ಸಂಪೂರ್ಣ ಸಾಕ್ಷರತೆ ಬದಲಾವಣೆಯ ಪರ್ವ ಆರಂಭಿಸಲು ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಜತೆಗೆ ಸ್ವಯಂ ಸೇವಾ ಸಂಸ್ಥೆಗಳು ಕೈಜೊಡಿಸುವುದು ಅವಶ್ಯವಿದೆ. ಸಮತೋಲನ ಕಲಿಕಾ ಪದ್ದತಿ, ಅಧುನಿಕ ಪ್ರಪಂಚಕ್ಕೆ ಹೊಂದುವ ಶಿಕ್ಷಣ, ಕೌಶಲಾಭಿವೃದ್ಧಿ ರೂಢಿಸಿಕೊಂಡು ಶಿಕ್ಷಣ ಗುಣ ಮಟ್ಟ ಹೆಚ್ಚಿಸಿದಲ್ಲಿ ಸಾಕ್ಷರ, ಸುಂದರ ನಾಡು ಕಟ್ಟಲು ಸಾಧ್ಯ ಎಂದರು.
ಎಸ್ವಿವೈಎಂ ಸಂಸ್ಥೆಯ ಶಿಕ್ಷಣ ವಿಭಾಗದ ಮುಖ್ಯಸ್ಥ ಎಸ್. ಪ್ರವೀಣಕುಮಾರ ಮಾತನಾಡಿ, ಗ್ರಾಮೀಣ ಪ್ರದೇಶ ಶೈಕ್ಷಣಿಕವಾಗಿ ಸುಧಾರಣೆ ಕಾಣಲಿ ಎಂಬ ದೂರದೃಷ್ಟಿ ಉದ್ದೇಶ ಹೊತ್ತು ಕೊಟಾಕ್ ಮಹೇಂದ್ರ ಲಿಮಿಟೆಡ್ ಕಂಪನಿಯ ಸಹಭಾಗಿತ್ವದಲ್ಲಿ ಐದು ವರ್ಷದ ವಿಶೇಷ ಯೋಜನೆ ರೂಪಿಸಲಾಗಿದೆ. ಹಳ್ಳಿಗಳಲ್ಲಿ ಕಲಿತವರು ಇಲ್ಲಿಯೇ ಸೇವೆ ನೀಡಲು ಮುಂದಾಗಬೇಕು. ಉದ್ಯೋಗ ಆರಿಸಿಕೊಂಡು ಶಹರ ಸೇರಬಾರದು ಎಂಬ ಧ್ಯೇಯ ಇದರಲ್ಲಿ ಅಡಗಿದೆ. ಯೋಜನೆಯ ಯಶಸ್ವಿಗೆ ಸಮುದಾಯದ ಸಹಬಾಗಿತ್ವ ಮುಖ್ಯವಾಗಿದೆ.
ತೀವ್ರ ಸವಾಲುಗಳನ್ನು ಹೊಂದಿರುವ ತಾಲ್ಲೂಕಗಳನ್ನು ಗಮನದಲ್ಲಿ ಇಟ್ಟುಕೊಂಡು ಅಳ್ನಾವರ ತಾಲ್ಲೂಕಿನ ಬೆಣಚಿ ಹಾಗೂ ಕಡಬಗಟ್ಟಿ ಎರಡು ಗ್ರಾ.ಪಂ. ಆಯ್ಕೆ ಮಾಡಿಕೊಳ್ಳಲಾಗಿದೆ. ಶಾಲಾ ಸಂಕೀರ್ಣದ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಶಾಲಾ ಪ್ರವೇಶ , ಹಾಜರಾತಿ, ಭಾಗವಹಿಸುವಿಕೆ ಮತ್ತು ಕಲಿಕೆಯ ಪರಿಣಾಮಕಾರಿ ಫಲಿತಾಂಶ ತರುವ ಯೋಜನೆ ಇದಾಗಿದೆ. ಅಂಗನವಾಡಿ ಮಟ್ಟದಿಂದ ಉನ್ನತ ಶಿಕ್ಷಣವರೆಗೆ ಮಕ್ಕಳಿಗೆ ಶಿಕ್ಷಣ ದೊರೆಯಬೇಕು ಹಾಗೂ ಸರ್ಕಾರಕ್ಕೆ ಇದೊಂದು ಮಾದರಿ ಯೋಜನೆ ರೂಪದಲ್ಲಿ ದೊರೆಯಬೇಕು ಎಂಬ ಅಭಿಲಾಷೆ ಇದೆ ಎಂದರು.
ಎಸ್ವಿವೈಎಂ ಸಂಸ್ಥೆಯ ಪ್ರಾದೇಶಿಕ ಮುಖ್ಯಸ್ಥ ಕೆ.ಎಸ್. ಜಯಂತ ಮಾತನಾಡಿ, ನಮ್ಮ ಸಂಸ್ಥೆ ಕಳೆದ ಹಲವು ವರ್ಷಗಳಿಂದ ಸಮುದಾಯ ಅಭಿವೃದ್ಧಿ , ಆರೋಗ್ಯ, ಶಿಕ್ಷಣ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ತರಬೇತಿ ಹಾಗೂ ಸಂಶೋಧನೆ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಾ ನವ ಭಾರತ ನಿರ್ಮಾಣದೆಡೆ ಸಾಗುತ್ತಿದೆ ಎಂದರು.
ಬೆಣಚಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಮೇಶ ಕದಂ. ಕಡಬಗಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಸೂಲಸಾಬ ಡೆಂಕೆವಾಲೆ, ಕಾರ್ಯಕ್ರಮಾಧಿಕಾರಿ ಎನ್. ಯೋಗಿತಾ, ರಾಜು ಬಡಿಗೇರ, ಮಹಾಂತೇಶ ಬಾಳಿ, ಪರಶುರಾಮ ರೇಡೇಕರ, ಪ್ರಿಯಾಂಕ ಹಂಚಿಮನಿ, ಎನ್.ಕೆ. ಸಾಹುಕಾರ, ಕೆ.ಎಂ. ಶೇಖ, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಭೂಮಕ್ಕನವರ, ಲೋಕೆಶಪ್ಪ, ರವಿ ಪಟ್ಟಣ, ಪ್ರತಿಭಾ, ಸಂತೋಷ ಕಂಬಾರ, ಬಿಷ್ಟಪ್ಪ ಕಾತಕರ ಇದ್ದರು.