KL Rahul: ಭಾರತ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಗೆಲ್ಲಬೇಕೆಂದರೆ ಶುಭ್ಮನ್ ಗಿಲ್ ಬದಲಿಗೆ ಕೆಎಲ್ ರಾಹುಲ್ರನ್ನು ಆಡಿಸಿ: ಮೈಕಲ್ ವಾನ್
Apr 29, 2023 08:46 PM IST
ಕೆಎಲ್ ರಾಹುಲ್ ಬೆಂಬಲಕ್ಕೆ ನಿಂತ ಮೈಕಲ್ ವಾನ್
- ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ (WTC Final) ಪಂದ್ಯದಲ್ಲಿ ಗೆಲ್ಲಬೇಕೆಂದರೆ ಆರಂಭಿಕರಾಗಿ ಕೆಎಲ್ ರಾಹುಲ್ ಅವರನ್ನು ಆಡಿಸಬೇಕು ಎಂದು ಇಂಗ್ಲೆಂಡ್ ತಂಡದ ಮೈಕಲ್ ವಾನ್ (Michael Vaughan), ಭಾರತ ತಂಡದ ಮ್ಯಾನೇಜ್ಮೆಂಟ್ಗೆ ಸೂಚಿಸಿದ್ದಾರೆ.
ಜೂನ್ 7ರಿಂದ ಲಂಡನ್ನ ಓವಲ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆರಂಭವಾಗುವ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ (ICC World Test Championship Final) ಪಂದ್ಯಕ್ಕೆ 15 ಸದಸ್ಯರ ಭಾರತ ತಂಡ (Team India) ಪ್ರಕಟಗೊಂಡಿದೆ. ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ಅಜಿಂಕ್ಯ ರಹಾನೆ (Ajinkya Rahane) ಮತ್ತೆ ಕಂಬ್ಯಾಕ್ ಮಾಡಿದ್ದಾರೆ. ಜೊತೆಗೆ ವಿಕೆಟ್ ಕೀಪರ್ ರಿಷಭ್ ಪಂತ್ (Rishabh Pant) ಸ್ಥಾನದಲ್ಲಿ ಶ್ರೀಕರ್ ಭರತ್ (KS Bharat) ಅವಕಾಶ ಪಡೆದಿದ್ದಾರೆ.
ಆದರೆ ಫೈನಲ್ ಪಂದ್ಯಕ್ಕೆ ಆಡುವ 11ರ ಬಳಗದಲ್ಲಿ ಯಾರಿಗೆಲ್ಲಾ ಅವಕಾಶ ನೀಡಬೇಕು ಎಂಬುದು ಗೊಂದಲ ಉಂಟಾಗಿದೆ. ಮುಖ್ಯವಾಗಿ ನಾಯಕ ರೋಹಿತ್ ಶರ್ಮಾ (Rohit Sharma) ಜೊತೆಗೆ ಇನ್ನಿಂಗ್ಸ್ ಯಾರು ಆರಂಭಿಸಲಿದ್ದಾರೆ ಎಂಬ ಗೊಂದಲ ಹೆಚ್ಚಾಗಿದೆ. ಈ ಸ್ಥಾನಕ್ಕಾಗಿ ಕೆಎಲ್ ರಾಹುಲ್ (KL Rahul) ಮತ್ತು ಶುಭ್ಮನ್ ಗಿಲ್ (Shubman Gill) ನಡುವ ಪೈಪೋಟಿ ಏರ್ಪಟ್ಟಿದೆ. ಫೈನಲ್ ಹಣಾಹಣಿಯಲ್ಲಿ ರಾಹುಲ್ ಬದಲಿಗೆ ಶುಭ್ಮನ್ಗೆ ಅವಕಾಶ ನೀಡಬೇಕು ಎಂದು ಮಾಜಿ ಕ್ರಿಕೆಟರ್ಸ್, ಕ್ರಿಕೆಟ್ ತಜ್ಞರು ಟೀಮ್ ಮ್ಯಾನೇಜ್ಮೆಂಟ್ಗೆ ಸಲಹೆ ನೀಡುತ್ತಿದ್ದಾರೆ.
ಆದರೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಮೈಕಲ್ ವಾನ್ (Michael Vaughan), ಗಿಲ್ಗೆ ಬೇಡ ರಾಹುಲ್ಗೆ ಅವಕಾಶ ನೀಡಿ ಎಂದು ಸೂಚಿಸಿದ್ದಾರೆ. ರಾಹುಲ್ಗೆ ಬೆಂಬಲ ಸೂಚಿಸಿರುವ ವಾನ್, ಈ ಬಗ್ಗೆ ಕ್ರಿಕ್ಬಜ್ ಜೊತೆ ಮಾತನಾಡಿದ್ದಾರೆ. ಇಂಗ್ಲಿಷ್ ಕಂಡೀಷನ್ಗಳಲ್ಲಿ ಭಾರತ ತಂಡದಲ್ಲಿ ಏಕೈಕ ಬದಲಾವಣೆ ಮಾಡಬೇಕಿದೆ. ಗಿಲ್ ಬದಲಿಗೆ ರಾಹುಲ್ರನ್ನು ಕರೆ ತರಬೇಕು. ಇಂಗ್ಲೆಂಡ್ ಪಿಚ್ಗಳಲ್ಲಿ ಗಿಲ್ಗಿಂತ ಉತ್ತಮವಾಗಿ ಆಡುತ್ತಾರೆ ಎಂದು ಹೇಳಿದ್ದಾರೆ.
ಶುಭ್ಮನ್ ಗಿಲ್ ಬೊಂಬಾಟ್ ಆಟದೊಂದಿಗೆ 2023ರ ವರ್ಷವನ್ನು ಆರಂಭಿಸಿದ್ದಾರೆ. ಟೆಸ್ಟ್ನಲ್ಲಿ ತಮ್ಮ ಸ್ಥಾನವನ್ನೂ ಭದ್ರಪಡಿಸಿಕೊಂಡಿದ್ದಾರೆ. ಶತಕಗಳ ಮೇಲೆ ಶತಕ ಚಚ್ಚಿದ್ದಾರೆ. ಗಿಲ್ರ ಇದೇ ಫಾರ್ಮ್ ಶ್ರೀಮಂತ ಲೀಗ್ ಮುಂದುವರೆದಿದೆ. ಆದರೆ, ರಾಹುಲ್ ಅವರ ಕಳಪೆ ಫಾರ್ಮ್ ಐಪಿಎಲ್ನಲ್ಲೂ ಮುಂದುವರೆಸಿದ್ದಾರೆ. ಏಳು ಪಂದ್ಯಗಳಲ್ಲಿ 113.91 ಸ್ಟ್ರೈಕ್ರೇಟ್ನಲ್ಲಿ 262 ರನ್ ಗಳಿಸಿದ್ದಾರೆ. ಗಿಲ್ 333 ರನ್ ಗಳಿಸಿದ್ದಾರೆ.
ಶುಭ್ಮನ್ ಒಬ್ಬ ಅಪಾಯಕಾರಿ ಆಟಗಾರ. ಆದರೆ ನಾನು ಕೆಲವು ಸಣ್ಣ ತಾಂತ್ರಿಕ ನ್ಯೂನತೆಗಳನ್ನು ನೋಡಿದ್ದೇನೆ. ಆದರೆ ನೀವು ಐತಿಹಾಸಿಕ ಫೈನಲ್ ಪಂದ್ಯವನ್ನು ಗೆಲ್ಲಬೇಕೆಂದರೆ ರಾಹುಲ್ರನ್ನೇ ಆಡಿಬೇಕು. ಇತಿಹಾಸವನ್ನು ಮರೆತುಬಿಡಿ. ಇದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಗೆಲ್ಲಲು ಅತ್ಯುತ್ತಮ ಆಡುವ 11 ಬಳಗ ಆಯ್ಕೆ ಮಾಡುವ ವಿಚಾರ. ಈ ಬಗ್ಗೆ ಯೋಚಿಸುವುದು ಉತ್ತಮ ಎಂದು ಸೂಚಿಸಿದ್ದಾರೆ ವಾನ್.
ಶುಭ್ಮನ್ ಅಥವಾ ರಾಹುಲ್ ಆಯ್ಕೆ ಕುರಿತು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದರ ಬಗ್ಗೆ ನನಗೆ ಖಚಿತವಿಲ್ಲ. ಭವಿಷ್ಯದ ಸರಣಿಗಳಿಗೆ ಯೋಜನೆ ರೂಪಿಸದೆ, ಐಸಿಸಿ ಟ್ರೋಫಿ ಗೆಲ್ಲುವ ರೀತಿ ಯೋಚಿಸಿ. ಮುಂದೇನು ಅಥವಾ ವೆಸ್ಟ್ ಇಂಡೀಸ್ ಸರಣಿಗೆ ಈಗಲೇ ಯೋಚಿಸಿ, ಆರಂಭಿಕರನ್ನು ಗುರುತಿಸಬೇಡಿ. ವಿಶ್ವದ ಅತ್ಯುತ್ತಮ ತಂಡವನ್ನು ಆಯ್ಕೆ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಫೆಬ್ರುವರಿ ಮತ್ತು ಮಾರ್ಚ್ನಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ತೀವ್ರ ವೈಫಲ್ಯ ಅನುಭವಿಸಿದ ಕಾರಣ, ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳ ನಂತರ ಕೈಬಿಡಲಾಯಿತು. ಉಳಿದ ಎರಡು ಪಂದ್ಯಗಳಿಗೆ ಅವಕಾಶ ಪಡೆದ ಶುಭ್ಮನ್ ಶತಕ ಸಿಡಿಸಿ ಮಿಂಚಿದ್ದರು.