ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Numerology: ಸಮಾಜದ ತಪ್ಪನ್ನು ತಿದ್ದುವರು, ಬೋಧನಾಕೇಂದ್ರ ಆರಂಭಿಸಿ ಯಶಸ್ಸು ಗಳಿಸುವರು; 19ನೇ ತಾರೀಖಿನಂದು ಹುಟ್ಟಿದವರ ಗುಣ ಲಕ್ಷಣ

Numerology: ಸಮಾಜದ ತಪ್ಪನ್ನು ತಿದ್ದುವರು, ಬೋಧನಾಕೇಂದ್ರ ಆರಂಭಿಸಿ ಯಶಸ್ಸು ಗಳಿಸುವರು; 19ನೇ ತಾರೀಖಿನಂದು ಹುಟ್ಟಿದವರ ಗುಣ ಲಕ್ಷಣ

Numerology: ಸಂಖ್ಯಾಶಾಸ್ತ್ರದಲ್ಲಿ ಜನ್ಮ ದಿನಾಂಕದ ಆಧಾರದ ಮೇಲೆ ಭವಿಷ್ಯ ಹೇಳಲಾಗುತ್ತದೆ. ಒಂದೊಂದು ದಿನಾಂಕದಲ್ಲಿ ಹುಟ್ಟಿರುವವರು ಒಂದೊಂದು ರೀತಿಯ ಗುಣಗಳನ್ನು ಹೊಂದಿರುತ್ತಾರೆ. 18ನೇ ದಿನಾಂಕದಂದು ಜನಿಸಿದ ಜನರ ಗುಣ ಲಕ್ಷಣಗಳು ಹೇಗಿರುತ್ತವೆ ನೋಡೋಣ.

ಸಂಖ್ಯಾಶಾಸ್ತ್ರ
ಸಂಖ್ಯಾಶಾಸ್ತ್ರ (PC: Canva)

Numerology: ಈ ದಿನಾಂಕದಂದು ಜನಿಸಿದ ಜನಗಳ ರೀತಿ, ನೀತಿ ಮತ್ತು ಹಾವ ಭಾವಗಳು ಬಹಳ ವಿಶೇಷವಾಗಿರುತ್ತದೆ. ಸಾಮಾನ್ಯವಾಗಿ ಇವರು ವಯಸ್ಸಿನ ತಾರತಮ್ಯವಿಲ್ಲದೆ ಎಲ್ಲರನ್ನೂ ಸಮಾನ ಗೌರವದಿಂದ ಕಾಣುತ್ತಾರೆ. ಇವರ ಮನಸ್ಸನ್ನು ಸುಲಭವಾಗಿ ಆರಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಇವರು ಒಮ್ಮೆ ತೆಗೆದುಕೊಂಡ ನಿರ್ಣಯವನ್ನು ಎಂದಿಗೂ ಬದಲಾಯಿಸುವುದಿಲ್ಲ. ವಯಸ್ಸು ಕಳೆಯುತ್ತಾ ಇವರಲ್ಲಿರುವ ಕೋಪ ತಾಪಗಳು ಕಡಿಮೆಯಾಗುತ್ತವೆ.

ಈ ಜನರು ತಮ್ಮೆಲ್ಲಾ ಕೆಲಸ ಕಾಯದ ನಡುವೆಯೂ ಕುಟುಂಬದವರ ಬಗ್ಗೆ ಹೆಚ್ಚಿನ ಗಮನ ನೀಡುತ್ತಾರೆ. ತಂದೆಯ ಮೇಲೆ ವಿಶೇಷ ಗೌರವ ಪ್ರೀತಿ ಇರುತ್ತದೆ. ಆದರೆ ಇವರ ಮೇಲೆ ಇವರ ತಂದೆಯವರಿಗೆ ಒಳ್ಳೆಯ ಭಾವನೆ ಇರುವುದಿಲ್ಲ. ಆದರೆ ಎಲ್ಲಾ ರೀತಿಯ ತ್ಯಾಗದಿಂದ ಇವರ ಜೀವನವನ್ನು ರೂಪಿಸುವಲ್ಲಿ ಪ್ರಯತ್ನಿಸುತ್ತಾರೆ. ತಾಯಿ ಎಂದರೆ ಇವರಿಗೆ ಅಸಾಧಾರಣ ಪ್ರೀತಿ. ವಿಶೇಷವೆಂದರೆ ತಾಯಿ ಮತ್ತು ಮಗನ ನಡುವೆ ಉತ್ತಮ ಬಾಂಧವ್ಯ ಪ್ರೀತಿ-ವಿಶ್ವಾಸ ಸದಾ ಇರುತ್ತದೆ.

ಸಮಾಜದಲ್ಲಿ ವಿಶೇಷ ಸ್ಥಾನಮಾನ

ಕುಟುಂಬದಲ್ಲಿ ಮಾತ್ರವಲ್ಲದೆ ಸಮಾಜದಲ್ಲೂ ಇವರಿಗೆ ವಿಶೇಷ ಸ್ಥಾನಮಾನ ದೊರೆಯುತ್ತವೆ. ತಮ್ಮ ಗೌರವಕ್ಕೆ ಕುಂದು ಬರುವ ಯಾವುದೇ ಕೆಲಸವನ್ನು ಮಾಡುವುದಿಲ್ಲ. ಜೀವನದ ಆರಂಭದಲ್ಲಿ ಸಾಮಾನ್ಯರಾಗಿದ್ದರೂ ಕ್ರಮೇಣವಾಗಿ ಉನ್ನತ ಮಟ್ಟವನ್ನು ತಲುಪುತ್ತಾರೆ. ಇವರಿಗೆ ಅನೇಕ ರೀತಿಯ ವಿದ್ಯೆಯು ಲಭಿಸುತ್ತದೆ. ಪುರಾತನ ಶೈಲಿಯ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಅತಿ ಚಿಕ್ಕ ವಯಸ್ಸಿನಲ್ಲಿ ಸಂಪಾದನೆ ಆರಂಭಿಸುತ್ತಾರೆ.

ಆರಂಭದಲ್ಲಿ ಇವರಿಗೆ ದೇವರಲ್ಲಿ ನಂಬಿಕೆ ಇರುವುದಿಲ್ಲ ಆದರೆ ದೇವರನ್ನು ನಂಬಲೇ ಬೇಕಾದ ಘಟನೆ ಒಂದು ಜೀವನದಲ್ಲಿ ನಡೆಯುತ್ತದೆ. ಅಂದಿನಿಂದ ಪರಿಶುದ್ಧವಾದ ಜೀವನ ನಡೆಸುವರು. ಸಮಾಜದಲ್ಲಿನ ಲೋಪ ದೋಷವನ್ನು ತಿದ್ದುಪಲ್ಲಿ ಯಶಸ್ವಿಯಾಗುತ್ತಾರೆ. ತಮಗೆ ಅರಿವಿಲ್ಲದಂತೆ ಉತ್ತಮ ಜನಪ್ರಿಯತೆ ಗಳಿಸುತ್ತಾರೆ. ಹಣ ಸಂಪಾದನೆಗೆ ದಾರಿ ದೊರೆಯುತ್ತದೆ. ತಮ್ಮಲ್ಲಿರುವ ಜ್ಞಾನವನ್ನು ಉತ್ತಮಪಡಿಸಿಕೊಳ್ಳುತ್ತಾರೆ. ಇವರಿಗೆ ಬೇಗ ವಿವಾಹ ಆಗುತ್ತದೆ. ಇಲ್ಲವೇ ವಯಸ್ಸು ಮೀರಿದ ನಂತರ ಆಗುತ್ತದೆ. ಇವರು ಎಲ್ಲರ ಮನಸ್ಸನ್ನು ಅರಿತು ನಡೆಯುವ ಕಾರಣ ಜೀವನದಲ್ಲಿ ಶಾಂತಿ ನೆಮ್ಮದಿ ಸದಾ ನೆಲೆಸಿರುತ್ತದೆ.

ಮಕ್ಕಳ ವಿಚಾರದಲ್ಲಿ ಅದೃಷ್ಟವಂತರು

ಮಕ್ಕಳ ವಿಚಾರದಲ್ಲಿಯೂ ಇವರು ಅದೃಷ್ಟವಂತರು. ಆದರೆ ಇವರ ಮಕ್ಕಳಿಗೆ ಸೋಮಾರಿತನವಿರುತ್ತದೆ. ಅತಿ ಸರಳವಾದ ಕೆಲಸವನ್ನು ಮಾಡಬೇಕೆಂದರೂ ಕೆಲಸವನ್ನು ಪದೇ ಪದೇ ಎಚ್ಚರಿಸಬೇಕಾಗುತ್ತದೆ. ತಾಂತ್ರಿಕವಾಗಿ ಉನ್ನತ ಜ್ಞಾನ ಇವರ ವಂಶದ ಎಲ್ಲರಿಗೂ ಇರುತ್ತದೆ. ಸಂಪ್ರದಾಯದ ಬಗ್ಗೆ ವಿಶೇಷ ಆಸಕ್ತಿ ಉಂಟಾಗುತ್ತದೆ. ಮಾತ್ರವಲ್ಲದೆ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ. ಆರೋಗ್ಯದ ವಿಚಾರದಲ್ಲಿ ಯಾವುದೇ ತೊಂದರೆ ಕಂಡುಬರುವುದಿಲ್ಲ. ದೈಹಿಕ ವ್ಯಾಯಾಮ ಮತ್ತು ಆಹಾರದ ನೀತಿ ನಿಯಮದಿಂದಲೇ ಉತ್ತಮ ಆರೋಗ್ಯವನ್ನು ಪಡೆಯುತ್ತಾರೆ.

ಇವರು ಒಂದೇ ರೀತಿಯ ಕೆಲಸವನ್ನು ಮಾಡಲು ಇಷ್ಟಪಡುವುದಿಲ್ಲ. ಎರಡು ಅಥವಾ ಹೆಚ್ಚಿನ ರೀತಿಯ ಆದಾಯವು ಇವರಿಗಿರುತ್ತದೆ. ಇವರಲ್ಲಿ ಇರುವ ವಿದ್ಯೆಯನ್ನು ಬೇರೆಯವರಿಗೆ ಧಾರೆ ಎರೆಯುತ್ತಾರೆ. ಇವರಿಗೆ ಒಳ್ಳೆಯ ಶಿಷ್ಯರು ಸಿಗುವುದು ಅಪರೂಪ. ಸಂಗೀತ ನಾಟ್ಯದಲ್ಲಿ ವಿಶೇಷ ಆಸಕ್ತಿ ಇರುತ್ತದೆ. ಇವರಿಗೆ ವಿದೇಶಿ ಭಾಷೆಯೊಂದು ಕರಗತವಾಗುತ್ತದೆ. ಕೈ ತುಂಬಾ ಹಣವಿದ್ದರೂ ಕೊಂಚವೂ ಉಳಿಸುವುದಿಲ್ಲ. ಸಮಾಧಾನಕರ ವಿಚಾರವೆಂದರೆ ಸಾಲ ಮಾಡುವ ಪ್ರಸಂಗ ಒದಗಿ ಬರುವುದಿಲ್ಲ.

ಇವರಿಗೆ ಸಂಪೂರ್ಣವಾಗಿ ತಿಳಿದಿರುವ ವಿಚಾರದಲ್ಲಿ ಮಾತ್ರ ವಾದ ಮಾಡುತ್ತಾರೆ. ವಿಚಾರಗಳನ್ನು ಬೇರೆಯವರಿಂದ ತಿಳಿದು ಕಲಿಯುತ್ತಾರೆ. ಅಧಿಕಾರದ ವಿಚಾರದಲ್ಲಿ ಇವರನ್ನು ಮೀರಿಸಲು ಸಾಧ್ಯವಾಗುವುದಿಲ್ಲ. ಶಾಲಾ ಕಾಲೇಜುಗಳು ಅಥವಾ ಬೋಧನಾ ಕೇಂದ್ರಗಳನ್ನುಆರಂಭಿಸಿ ಯಶಸ್ಸು ಗಳಿಸುತ್ತಾರೆ. ವಯಸ್ಸು ಮೀರಿದರೂ ಓದುವ ಹಂಬಲ ಕಡಿಮೆಯಾಗುವುದಿಲ್ಲ. ಹೊಸ ರೀತಿಯ ವಿದ್ಯೆಯನ್ನು ಸುಲಭವಾಗಿ ಕಲಿಯುತ್ತಾರೆ. ಶ್ರೀ ದುರ್ಗೆಯಲ್ಲಿ ಹೆಚ್ಚಿನ ನಂಬಿಕೆ ಇರುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).