Ramya-Dhananjay Latest news: 'ಉತ್ತರಕಾಂಡ' ನಂತರ ಬಯೋಪಿಕ್ ಚಿತ್ರದಲ್ಲಿ ಮತ್ತೆ ಜೊತೆಯಾಗಿ ನಟಿಸುತ್ತಿರುವ ರಮ್ಯಾ-ಡಾಲಿ!
ಈ ಸಿನಿಮಾ ಕನ್ನಡ, ತೆಲುಗು, ಮಲಯಾಳಂ, ಹಿಂದಿ, ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ತೆರೆಗೆ ತರುವ ಸಾಧ್ಯತೆ ಇದೆಯಂತೆ. ಹರಿವು, ನಾತಿಚರಾಮಿ, ಆಕ್ಟ್ 1978 ಸಿನಿಮಾಗಳು ನಿರ್ದೇಶಕ ಮಂಸೋರೆ, ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಕನ್ನಡದಲ್ಲಿ ಗಣ್ಯರ ಜೀವನಚರಿತ್ರೆ ಆಧರಿಸಿದ ಅನೇಕ ಸಿನಿಮಾಗಳು ತಯಾರಾಗಿವೆ. ಈಗ ಮತ್ತೊಬ್ಬರು ಖ್ಯಾತ ನಾಮರ ಬಯೋಪಿಕ್ ತಯಾರಾಗುತ್ತಿದ್ದು ಈ ಚಿತ್ರಕ್ಕಾಗಿ ಮತ್ತೆ ಡಾಲಿ ಧನಂಜಯ್ ಹಾಗೂ ರಮ್ಯಾ ಜೊತೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಈ ಜೋಡಿ 'ಉತ್ತರಕಾಂಡ' ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಟ್ರೆಂಡಿಂಗ್ ಸುದ್ದಿ
ಕೆಲವು ದಿನಗಳ ಹಿಂದೆ ನಟ ಧನಂಜಯ್ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ರೈತ ಹೋರಾಟಗಾರ, ಪ್ರೊಫೆಸರ್ ಎಂ.ಡಿ. ನಂಜುಂಡಸ್ವಾಮಿ ಅವರ ಬಯೋಪಿಕ್ನಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ್ದರು. ಇದೀಗ ಅವರ ಜೀವನ ಚರಿತ್ರೆ ಸಿನಿಮಾ ತೆರೆಗೆ ಬರುತ್ತಿದೆ ಎನ್ನಲಾಗಿದೆ. ಎಂ.ಡಿ. ನಂಜುಂಡಸ್ವಾಮಿ ಅವರ ಪುತ್ರ ಪಚ್ಚೆ ನಂಜುಂಡಸ್ವಾಮಿ ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಯೋಪಿಕ್ ಬಗ್ಗೆ ಮಾಹಿತಿ ನೀಡಿದ್ದು, ನಟ ಧನಂಜಯ್ ಈ ವಿಚಾರವಾಗಿ ತಮ್ಮೊಂದಿಗೆ ಮಾತನಾಡಿದ್ದಾರೆ ಎಂದಿದ್ದಾರೆ. ಪ್ರೊ ಎಂ.ಡಿ. ನಂಜುಂಡಸ್ವಾಮಿ ಅವರ ಕುರಿತಾದ ಸಿನಿಮಾ ಮಾಡುವ ಸುದ್ದಿ ಬಹಳ ದಿನಗಳ ಹಿಂದೆಯೇ ಕೇಳಿಬಂದಿತ್ತು. ಈ ಪಾತ್ರಕ್ಕಾಗಿ ಸ್ಯಾಂಡಲ್ವುಡ್ನಲ್ಲಿ ವಿವಿಧ ನಟರ ಹೆಸರು ಕೂಡಾ ಕೇಳಿಬಂದಿತ್ತು. ಆದರೆ ಇದೀಗ ಧನಂಜಯ್ ಹೆಸರು ಫೈನಲ್ ಆಗಿದೆ.
ಚಿತ್ರದಲ್ಲಿ ಧನಂಜಯ್, ಪ್ರೊಫೆಸರ್ ಎಂ.ಡಿ. ನಂಜುಂಡಸ್ವಾಮಿ ಅವರ ಪಾತ್ರದಲ್ಲಿ ನಟಿಸುತ್ತಿದ್ದರೆ, ರಮ್ಯಾ, ಅವರ ಪತ್ನಿ ಪ್ರತಿಮಾ ನಂಜುಂಡಸ್ವಾಮಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಈ ಸಿನಿಮಾ ಕನ್ನಡ, ತೆಲುಗು, ಮಲಯಾಳಂ, ಹಿಂದಿ, ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ತೆರೆಗೆ ತರುವ ಸಾಧ್ಯತೆ ಇದೆಯಂತೆ. ಹರಿವು, ನಾತಿಚರಾಮಿ, ಆಕ್ಟ್ 1978 ಸಿನಿಮಾಗಳು ನಿರ್ದೇಶಕ ಮಂಸೋರೆ, ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರೊಫೆಸರ್ ಎಂ.ಡಿ. ನಂಜುಂಡಸ್ವಾಮಿ ಬಯೋಪಿಕ್ ವಿಚಾರವಾಗಿ ಧನಂಜಯ್, ರಮ್ಯಾ ಅಥವಾ ಮಂಸೋರೆ ಆಗಲೀ ಇದುವರೆಗೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ.
ಪ್ರೊ ಎಂ.ಡಿ. ನಂಜುಂಡಸ್ವಾಮಿ, ಹಸಿರು ಶಾಲಿನ ಹರಿಕಾರ ಎಂದೇ ಫೇಮಸ್. ಸದಾ ರೈತರ ಪರ ನಿಲ್ಲುತ್ತಿದ್ದ ಅವರು ರಾಜ್ಯದ ರೈತರ ಹೋರಾಟಕ್ಕೆ ಹೊಸ ಮುನ್ನುಡಿ ಬರೆದವರು. ಜೀವನದುದ್ದಕ್ಕೂ ರಾಜ್ಯದ ಎಲ್ಲಾ ಕ್ಷೇತ್ರಗಳ ಅಂಕು ಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡಿದರು. ಸ್ವದೇಶಿ ವಸ್ತುಗಳ ಪ್ರಚಾರ ಮಾಡುತ್ತಿದ್ದ ಅವರು, ಕ್ಯಾನ್ಸರ್ನಿಂದ ಬಳಲುತ್ತಿದ್ದರೂ ಅಲೋಪತಿ ಚಿಕಿತ್ಸೆಯನ್ನು ನಿರಾಕರಿಸಿ ಆಯುರ್ವೇದ, ಹೋಮಿಯೋಪತಿ ಚಿಕಿತ್ಸೆಯ ಮೊರೆ ಹೋದರು. ತಮ್ಮ ಅಸಾಧಾರಣ ಜ್ಞಾನದ ಮೂಲಕ ಕೂಡಾ ಅವರು ಎಲ್ಲರನ್ನೂ ಬೆರಗುಗೊಳಿಸಿದ್ದರು. 2004ರಲ್ಲಿ ಪ್ರೊ ಎಂ.ಡಿ. ನಂಜುಂಡಸ್ವಾಮಿ ಕ್ಯಾನ್ಸರ್ಗೆ ಬಲಿಯಾದರು. ಇಂತಹ ಅದ್ಭುತ ವ್ಯಕ್ತಿಯ ಬಯೋಪಿಕ್ ಕನ್ನಡದಲ್ಲಿ ತಯಾರಾಗುತ್ತಿರುವುದು ಸಂತೋಷದ ವಿಚಾರ. ತೆರೆ ಮೇಲೆ ಇವರ ಜೀವನಚರಿತ್ರೆ ಹೇಗೆ ಮೂಡಿ ಬರಲಿದೆ ಎಂಬುದನ್ನು ಕಾದು ನೋಡಬೇಕು.
ಇನ್ನು ಧನಂಜಯ್ ಹಾಗೂ ರಮ್ಯಾ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಡಾಲಿ, ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ, 25ನೇ ಸಿನಿಮಾ 'ಹೊಯ್ಸಳ' ಮಾರ್ಚ್ನಲ್ಲಿ ತೆರೆ ಕಾಣುತ್ತಿದೆ. ಇದು ಕ್ರೈಂ ಥ್ರಿಲ್ಲರ್ ಸಿನಿಮಾ ಆಗಿದ್ದು ಈ ಚಿತ್ರದಲ್ಲಿ ಧನಂಜಯ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಳೆದ ವರ್ಷ ಆಗಸ್ಟ್ 23 ರಂದು ಧನಂಜಯ್ 'ಉತ್ತರಕಾಂಡ' ಎಂಬ ಹೊಸ ಸಿನಿಮಾ ಪೋಸ್ಟರ್ ರಿಲೀಸ್ ಆಗಿತ್ತು. ಈ ಚಿತ್ರವನ್ನು ಕೆ.ಆರ್.ಜಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿದ್ದು ರೋಹಿತ್ ಪದಕಿ ನಿರ್ದೇಶಿಸುತ್ತಿದ್ದಾರೆ. ಇದರೊಂದಿಗೆ ಪುಷ್ಪ-2 ಹಾಗೂ ಪಾಯುಮ್ ಒಲಿ ನೀ ಎನಕ್ಕೂ ತಮಿಳು ಚಿತ್ರದಲ್ಲಿ ಡಾಲಿ ನಟಿಸುತ್ತಿದ್ದಾರೆ.
ಮತ್ತೊಂದೆಡೆ ರಮ್ಯಾ, ಧನಂಜಯ್ ಜೊತೆ 'ಉತ್ತರಕಾಂಡ' ಸಿನಿಮಾದಲ್ಲಿ ನಟಿಸುವುದರ ಜೊತೆಗೆ ತಮ್ಮದೇ ಆಪಲ್ ಬಾಕ್ಸ್ ಸ್ಟುಡಿಯೋಸ್ ಬ್ಯಾನರ್ ಅಡಿ 'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸದ್ಯಕ್ಕೆ ಚಿತ್ರೀಕರಣ ಬಹುತೇಕ ಮುಗಿದಿದೆ. ಆದರೆ ಚಿತ್ರದ ಟೈಟಲ್ ವಿಚಾರವಾಗಿ ರಮ್ಯಾ ಹಾಗೂ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನಡುವೆ ಘರ್ಷಣೆ ನಡೆಯುತ್ತಿದೆ.