‘ಚಿತ್ರರಂಗದಲ್ಲಿ ಛಾಪು ಮೂಡಿಸಲು ಸಲಕರಣೆ ಸಿಗದ ಅಲೆಮಾರಿ ನಾಯಿ ನರಿಗಳು ಬೊಗಳಿದರೆ ಇತಿಹಾಸ ಬದಲಾಗುತ್ತ?’ ಜಗ್ಗೇಶ್
ಕೆಂಪೇಗೌಡರ ಕುರಿತು ಚೇತನ್ ಆಡಿದ ಮಾತಿನ ಬಗ್ಗೆ ನಟ ನವರಸ ನಾಯಕ ಜಗ್ಗೇಶ್ ಕಿಡಿ ಕಾರಿದ್ದಾರೆ. ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು, ಪರೋಕ್ಷವಾಗಿ ಚೇತನ್ ಅಹಿಂಸಾ ಅವರನ್ನು ನಾಯಿ ನರಿಗೆ ಹೋಲಿಕೆ ಮಾಡಿದ್ದಾರೆ.
Jaggesh on Chetan Ahimsa: ಕಳೆದ ಕೆಲ ದಿನಗಳಿಂದ ಮೈಸೂರು ವಿಮಾನ ನಿಲ್ದಾಣದ ನಾಮಕರಣ ವಿಚಾರ ಸದ್ದು ಗದ್ದಲಕ್ಕೆ ಕಾರಣವಾಗಿದೆ. ಕೆಂಪೇಗೌಡ ಅವರ ಹೆಸರಿಡಬೇಕೆಂದು ಕೆಲವರು, ಟಿಪ್ಪು ಸುಲ್ತಾನ ಹೆಸರಿಡುವುದರಲ್ಲಿಯೂ ತಪ್ಪೇನಿಲ್ಲ ಎಂದು ಇನ್ನು ಕೆಲವರು ಸಂಘರ್ಷದ ಬೀಜ ಬಿತ್ತುತ್ತಿದ್ದಾರೆ. ಈ ನಡುವೆ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಸಹ ಧ್ವನಿಗೂಡಿಸಿ, ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವುದರಲ್ಲಿ ತಪ್ಪೇನಿಲ್ಲ ಎಂದಿದ್ದರು. ಆ ಅಭಿಪ್ರಾಯ ಇದೀಗ ಪರ ವಿರೋಧಕ್ಕೂ ಎಡೆಮಾಡಿಕೊಟ್ಟಿದೆ.
ಟ್ರೆಂಡಿಂಗ್ ಸುದ್ದಿ
ಚೇತನ್ ಆಡಿದ ಮಾತಿನ ಬಗ್ಗೆ ನಟ ನವರಸ ನಾಯಕ ಜಗ್ಗೇಶ್ ಕಿಡಿ ಕಾರಿದ್ದಾರೆ. ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು, ಚೇತನ್ ಅಹಿಂಸಾ ಅವರನ್ನು ನಾಯಿ ನರಿಗೆ ಹೋಲಿಕೆ ಮಾಡಿ ಚುಚ್ಚಿದ್ದಾರೆ. ಚಿತ್ರರಂಗದಲ್ಲಿ ನೆಲೆಕಾಣದೆ ಚಾಪುಮೂಡಿಸಲು ಸಲಕರಣೆ ಸಿಗದ ಅಲೆಮಾರಿಗಳು ಬೊಗಳಿದರೆ ಇತಿಹಾಸ ಬದಲಾಗುತ್ತ ಎಂದು ಎಲ್ಲಿಯೂ ನೇರವಾಗಿ ಚೇತನ್ ಅವರ ಹೆಸರನ್ನು ಬಳಸದೇ, ಪರೋಕ್ಷವಾಗಿಯೇ ಟಾಂಗ್ ಕೊಟ್ಟಿದ್ದಾರೆ ಜಗ್ಗೇಶ್.
ನಟ ಜಗ್ಗೇಶ್ ಮಾಡಿದ ಟ್ವಿಟ್ ಹೀಗಿದೆ. "ಕೆಂಪೇಗೌಡ ವಿಜಯನಗರ ಸಾಮ್ರಾಜ್ಯದ ಒಡೆಯನ ತೊಡೆಯ ಮೇಲೆ ಕೂತು ಬೆಳೆದ ಮಗು.. ಮುಂದೆ ಸಾಮಾಜಿಕ ನ್ಯಾಯ ಎತ್ತಿ ಹಿಡಿದು ಬೆಂದಕಾಳೂರು ಬೆಳಗಿಸಿದ ಸಾರ್ವಭೌಮ.. ಇಂದಿನ ನಾಯಿ ನರಿ ಬೊಗಳಿದರೆ ಅವರ ಇತಿಹಾಸ ಬದಲಾಗುವುದೆ! ಚಿತ್ರರಂಗದಲ್ಲಿ ನೆಲೆಕಾಣದೆ ಚಾಪುಮೂಡಿಸಲು ಸಲಕರಣೆ ಸಿಗದ ಅಲೆಮಾರಿಗಳು ಬೊಗಳಿದರೆ ಇತಿಹಾಸ ಬದಲಾಗುತ್ತ ಕಾನೂನಿನಿದೆ ಎಚ್ಚರ..!!" ಎಂದಿದ್ದಾರೆ.
ಚೇತನ್ ಅಹಿಂಸಾ ಮಾತು ಹೀಗಿತ್ತು..
"ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಬೇಕಾ? ಸರ್ಕಾರಿ ಕಟ್ಟಡಗಳಿಗೆ ಯೋಧರಿಗಿಂತ ಹೆಚ್ಚಾಗಿ ಅಹಿಂಸೆಯ ಐಕಾನ್ಗಳ ಹೆಸರನ್ನು ಇಡಬೇಕೆಂದು ನಾನು ಭಾವಿಸುತ್ತೇನೆ. ಆದಾಗ್ಯೂ, ಟಿಪ್ಪುವಿನ ಜನ್ಮಸ್ಥಳವಾದ ದೇವನಹಳ್ಳಿಯಲ್ಲಿರುವ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯೋಧ ಕೆಂಪೇಗೌಡರ ಹೆಸರನ್ನು ಇಡಲಾಗಿದೆ. ಆ ನಿದರ್ಶನದ ಪ್ರಕಾರ ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವುದರಲ್ಲಿ ತಪ್ಪೇನಿಲ್ಲ" ಎಂದು ಈ ಹಿಂದೆ ಟ್ವಿಟ್ ಮಾಡಿದ್ದರು.
ಕೆಂಪೇಗೌಡ ಊಳಿಗಮಾನ್ಯ ಜಾತಿ ಲಾಬಿಗಳ ಪ್ರಭಾವದಿಂದಾಗಿ ಈಗ ಪ್ರಮುಖ ಕರ್ನಾಟಕದ ಐಕಾನ್ ಆಗಿರುವ ಅತ್ಯಲ್ಪ ಐತಿಹಾಸಿಕ ವ್ಯಕ್ತಿ. ಟಿಪ್ಪು ಸುಲ್ತಾನ್ ಒಬ್ಬ ಐತಿಹಾಸಿಕವಾಗಿ ಬಹಳ ಮಹತ್ವದ ವ್ಯಕ್ತಿ, ಅವರ ಜನ್ಮವು ಮುಸ್ಲಿಮರಾಗಿ ಅವರ ಇಂದಿನ ಮಾನ್ಯತೆಗೆ ಅಡ್ಡಿಯಾಗಿದೆ. ದುರದೃಷ್ಟವಶಾತ್, ಒಬ್ಬ ವ್ಯಕ್ತಿಯು ಹುಟ್ಟಿದ ಸಮುದಾಯಕ್ಕೆ ಅವನ/ಅವಳ ಸಾಮಾಜಿಕ ಕೊಡುಗೆಗಳಿಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ" ಎಂದಿದ್ದರು.
ಶೇಷಾದ್ರಿಪುರಂ ಠಾಣೆಯಲ್ಲಿ ದೂರು
ಕೆಂಪೇಗೌಡ ಕುರಿತ ನಟನ ಹೇಳಿಕೆಗೆ ಖಂಡನೆ ವ್ಯಕ್ತವಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಬರಹಕ್ಕೆ ವಿರೋಧಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ವಕೀಲ ಆರ್.ಎಲ್.ಎನ್ ಮೂರ್ತಿ, ಶೇಷಾದ್ರಿ ಪುರಂ ಪೊಲೀಸ್ ಠಾಣೆಯಲ್ಲಿ ಚೇತನ್ ವಿರುದ್ಧ ದೂರು ಸಹ ನೀಡಿದ್ದರು. ಇದೇ ಚೇತನ್ ಹೇಳಿಕೆಗೆ ಮಾಜಿ ಸಚಿವ ಅಶ್ವತ್ಥನಾರಾಯಣ್ ಸಹ ವಿರೋಧ ವ್ಯಕ್ತಪಡಿಸಿದ್ದರು.