Avatara Purusha 2 Review: ಹಾಸ್ಯವೂ ಇಲ್ಲ ಹೆದರಿಸುವ ಗುಣವೂ ಕಾಣಲ್ಲ! ಓವರ್ ಆ್ಯಕ್ಟಿಂಗ್ ಅನಿಲನ ಈ ‘ಅವತಾರ ಪುರುಷ’ ಅಷ್ಟಕಷ್ಟೇ
ಅವತಾರ ಪುರುಷ ಎಂಬುದು ಅಪ್ಪಟ ಕಾಲ್ಪನಿಕ ಕಥೆ. ನಿರ್ದೇಶಕರ ಕಲ್ಪನೆಯಲ್ಲಿ ಮೂಡಿಬಂದ ರೂಪಕ. ಲಾಜಿಕ್ ಹುಡುಕುವುದನ್ನು ಬಿಟ್ಟು, ತೆರೆಮೇಲಿನ ಮ್ಯಾಜಿಕ್ ಅಷ್ಟೇ ನೋಡಿ ಸವಿಯಬೇಕು. ಆದರೆ, ಆ ಮ್ಯಾಜಿಕ್ ಅಷ್ಟೊಂದು ಪರಿಣಾಮಕಾರಿಯಾಗಿ ಮೂಡಿ ಬಾರದೇ ಇರುವುದು ಮಾತ್ರ ವಿಪರ್ಯಾಸ.
ಚಿತ್ರ: ಅವತಾರ ಪುರುಷ 2, ನಿರ್ದೇಶನ: ಸಿಂಪಲ್ ಸುನಿ, ನಿರ್ಮಾಣ: ಪುಷ್ಕರ್ ಮಲ್ಲಿಕಾರ್ಜುನಯ್ಯ, ತಾರಾಗಣ: ಶರಣ್, ಆಶಿಕಾ ರಂಗನಾಥ್, ಸಾಯಿಕುಮಾರ್, ಶ್ರೀನಗರ ಕಿಟ್ಟಿ, ಭವ್ಯ, ಸುಧಾರಾಣಿ, ಅಶುತೋಷ್ ರಾಣಾ ಇತರರು, ಸ್ಟಾರ್: 2.5/5
ಟ್ರೆಂಡಿಂಗ್ ಸುದ್ದಿ
Avatara Purusha 2 Review: ಎರಡು ವರ್ಷಗಳ ಹಿಂದಷ್ಟೇ ಬಂದಿದ್ದ ಅವತಾರ ಪುರುಷ ಸಿನಿಮಾ ನೋಡುಗರಿಂದ ಮೆಚ್ಚುಗೆ ಪಡೆದುಕೊಂಡಿತ್ತು. ಸಿಕ್ಕ ಸಿಕ್ಕಲೆಲ್ಲ ಎರಡನೇ ಭಾಗ ಯಾವಾಗ ತೆರೆಗೆ ಎಂದೂ ಸಾಕಷ್ಟು ಮಂದಿ ಸೋಷಿಯಲ್ ಮೀಡಿಯಾದಲ್ಲಿ ಕೇಳುತ್ತಲೇ ಬಂದಿದ್ದರು. ಅದರಂತೆ, ಇದೀಗ ಆ ಕುತೂಹಲ ತಣಿದಿದೆ. ಅಂದರೆ, ಸಿಂಪಲ್ ಸುನಿ ನಿರ್ದೇಶನದ ಅವತಾರ ಪುರುಷ 2 ರಾಜ್ಯಾದ್ಯಂತ ಇಂದು (ಏ. 5) ಬಿಡುಗಡೆ ಆಗಿದೆ. ಶರಣ್ ಮತ್ತು ಆಶಿಕಾ ರಂಗನಾಥ್ ಜೋಡಿಯ ಈ ಸಿನಿಮಾ ಈ ಸಲ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ.
ಮೊದಲ ಭಾಗದಲ್ಲಿ ಸಾಮಾನ್ಯ ವ್ಯಕ್ತಿಯಾಗಿ ಓವರ್ ಆ್ಯಕ್ಟಿಂಗ್ ಅನಿಲ (ಶರಣ್), ಕರ್ಣನಾಗಿ ಜೋಯಿಸರ ಮನೆ ಸೇರಿದ್ದ. ಅದಾದ ಮೇಲೆ ಚಿತ್ರದ ಕ್ಲೈ ಮ್ಯಾಕ್ಸ್ನಲ್ಲಿ ಆತನೂ ಸಹ ಓರ್ವ ಮಂತ್ರವಾದಿ ಎಂಬುದು ತಿಳಿದಿತ್ತು. ತ್ರಿಶಂಕು ಮಣಿಗಾಗಿ ಹಪಹಪಿಸುತ್ತಿರುವ ದಾರಕನಂತೇ ಕರ್ಣನೂ ಅದೇ ಮಣಿಗಾಗಿ ಬಂದಿರುವುದಾಗಿ ಮೊದಲ ಭಾಗದ ಕೊನೆಯಲ್ಲಿಯೇ ತಿಳಿದಿತ್ತು. ಈಗ ಎರಡನೇ ಭಾಗದಲ್ಲಿ ಅದೇ ತ್ರಿಶಂಕು ಮಣಿಯ ಸುತ್ತ ಇಡೀ ಸಿನಿಮಾ ಗಿರಕಿ ಹೊಡೆಯಲಿದೆ. ಮೊದಲ ಭಾಗದಲ್ಲಿ ಏನೇನಾಗಿತ್ತು ಎಂಬ ಕಿರು ಝಲಕ್ ತೋರಿಸಿಯೇ ಮುನ್ನಡೆಯುತ್ತಾರೆ ನಿರ್ದೇಶಕರು.
ತ್ರಿಶಂಕು ಮಣಿಗಾಗಿ ಮುಂದುವರಿದ ಕಾದಾಟ
ಕುಮಾರನ (ಶ್ರೀನಗರ ಕಿಟ್ಟಿ) ಆಗಮನದ ಬಳಿಕ ಕರ್ಣನ ಅಸಲಿ ಮುಖ ಕಳಚಿ ಬೀಳುತ್ತದೆ. ತ್ರಿಶಂಕು ಮಣಿಗಾಗಿ ಕರ್ಣ ಮತ್ತು ಕುಮಾರನ ನಡುವಿನ ಕಾದಾಟವು ಕೊಂಚ ರೋಚಕತೆ ಪಡೆದುಕೊಳ್ಳುತ್ತದೆ. ಕೊನೆಗೆ ಆ ತ್ರಿಶಂಕು ಮಣಿ ಯಾರ ಪಾಲಾಗುತ್ತದೆ? ಅದಕ್ಕಾಗಿ ನಡೆಯುವ ತಂತ್ರ ಪ್ರತಿತಂತ್ರಗಳು ಹೇಗಿರಲಿವೆ ಎಂಬುದೇ ಅವತಾರ ಪುರುಷ 2 ಚಿತ್ರದ ಹೈಲೈಟ್. ವಿಎಫ್ಎಕ್ಸ್ ಮೂಲಕ ನೋಡುಗರನ್ನು ಹಿಡಿದಿಡುವ ತಂತ್ರ ಇಲ್ಲಾಗಿದೆಯಾದರೂ, ಅದು ಎಲ್ಲರಿನ್ನೂ ಆಕರ್ಷಿಸಿಲ್ಲ. ಅದರಲ್ಲೂ ಹಾಸ್ಯಕ್ಕೆ ಹೇಳಿ ಮಾಡಿಸಿದ ಶರಣ್, ಇಲ್ಯಾಕೋ ಕೊಂಚ ಮಂಕಾಗಿದ್ದಾರೆ.
ನಗಿಸುವುದಿಲ್ಲ, ಹೆದರಿಸುವುದಿಲ್ಲ..
ಅವತಾರ ಪುರುಷ ಎಂಬುದು ಅಪ್ಪಟ ಕಾಲ್ಪನಿಕ ಕಥೆ. ನಿರ್ದೇಶಕರ ಕಲ್ಪನೆಯಲ್ಲಿ ಮೂಡಿಬಂದ ರೂಪಕ. ಲಾಜಿಕ್ ಹುಡುಕುವುದನ್ನು ಬಿಟ್ಟು, ತೆರೆಮೇಲಿನ ಮ್ಯಾಜಿಕ್ ಅಷ್ಟೇ ನೋಡಿ ಸವಿಯಬೇಕು. ಆದರೆ, ಆ ಮ್ಯಾಜಿಕ್ ಅಷ್ಟೊಂದು ಪರಿಣಾಮಕಾರಿಯಾಗಿ ಮೂಡಿ ಬಾರದೇ ಇರುವುದು ವಿಪರ್ಯಾಸ. ಶರಣ್ ಅವರ ಕಾಮಿಕ್ ಟೈಮಿಂಗ್ ವರ್ಕೌಟ್ ಆಗಿದೆಯಾದರೂ, ಅದು ಕೆಲವೆಡೆ ಮಾತ್ರ! ಮಂತ್ರವಾದಿಯಾಗಿ ಅವರ ಹೊಸ ಗೆಟಪ್ ಇಷ್ಟವಾಗುತ್ತದೆ. ಚಿತ್ರ ಅಲೌಕಿಕ ಲೋಕದತ್ತ ತೆರೆದುಕೊಳ್ಳುತ್ತಿದ್ದಂತೆ, ಆ ಕಲ್ಪನೆಗೆ ಬೇಕಿರುವ ಕೌತುಕ ಮಾತ್ರ ಎಲ್ಲಿಯೂ ಮೂಡುವುದಿಲ್ಲ. ಭಯ ಹುಟ್ಟಿಸುವ, ಗಾಂಭೀರ್ಯತೆಯ ಕೊರತೆಯೂ ಎದ್ದು ಕಾಣುತ್ತದೆ.
ಕಾಮಿಡಿ ಮಾಯ
ತ್ರಿಶಂಕು ಅಂದರೆ ಭೂಲೋಕವೂ ಅಲ್ಲ ದೈವ ಲೋಕವೂ ಅಲ್ಲ. ಅದರ ನಡುವಿನ ಸ್ಥಿತಿಯೇ ತ್ರಿಶಂಕು. ಈ ಪರಿಕಲ್ಪನೆಗೆ ತಕ್ಕಂತೇ ಸಿನಿಮಾ ಮೂಡಿಬಂದಿದೆ. ಅಂದರೆ, ದೃಶ್ಯಗಳ ಸಡಿಲಿಕೆಯಿಂದ ಸಿನಿಮಾದ ಹಿಡಿತ ತಪ್ಪಿದೆ. ಒಂದು ದೃಶ್ಯದಿಂದ ಮತ್ತೊಂದಕ್ಕೆ ಏಕಾಏಕಿ ಪ್ರವೇಶ, ಪದೇ ಪದೆ ಮರುಕಳಿಸುವ ಫ್ಲಾಷ್ಬ್ಯಾಕ್ಗಳಿಂದ ನೋಡುಗನ ಹರಿವು ತಪ್ಪಿದೆ. ಕೆಲವು ಪಾತ್ರಗಳ ದಿಢೀರ್ ಸಾವು, ಕಣ್ಮರೆಯೂ ಕೊಂಚ ಅಸಹನೀಯ ಎನಿಸುತ್ತದೆ. ಕಾಮಿಡಿ ಸಿನಿಮಾ ಎಂದು ನಂಬಿ ಬಂದವರಿಗೆ ಶರಣ್ ಅವರಿಂದ ನಗು ಉಕ್ಕಿಸುವ ಕೆಲಸವಾಗಿಲ್ಲ. ಸಾಧು ಕೋಕಿಲ ಇದ್ದರೂ, ಹಾಸ್ಯ ಮಾಯವಾಗಿದೆ.
ಯಾರ ಪಾತ್ರ ಹೇಗಿದೆ?
ಹಾರರ್ ಸಿನಿಮಾದಲ್ಲಿ ಇರಬೇಕಾದ ಗುಣಗಳು ಈ ಸಿನಿಮಾದಲ್ಲಿ ಎಲ್ಲಿಯೂ ಕಾಣಿಸುವುದಿಲ್ಲ. ಕಾಮಿಡಿ ಸಿನಿಮಾ ಎಂದುಕೊಂಡರೆ, ನಗು ಉಕ್ಕಿಸುವ ದೃಶ್ಯಗಳ ಕೊರತೆ ಇದೆ. ಹೀಗೆ ಈ ಎರಡು ವಿಚಾರಗಳಲ್ಲಿ ಅವತಾರ ಪುರುಷ ತ್ರಿಶಂಕು ಸ್ಥಿತಿಯಲ್ಲಿದ್ದಾನೆ. ಚಿತ್ರದ ವಿಲನ್ ಆಗಿ ಕಾಣಿಸಿಕೊಂಡ ಶ್ರೀನಗರ ಕಿಟ್ಟಿಯ ಪಾತ್ರವೂ ನಿರಾಸೆಯ ಜತೆಗೆ ಕೊನೆಗೊಳ್ಳುತ್ತದೆ. ಸಾಯಿಕುಮಾರ್, ಶರಣ್ ಕಾಂಬಿನೇಷನ್ ದೃಶ್ಯಗಳು ಚೆನ್ನಾಗಿ ಮೂಡಿಬಂದಿವೆ. ಆಶಿಕಾ ರಂಗನಾಥ್ ಅವರಿಗಿಲ್ಲಿ ಹೆಚ್ಚಿನ ಕೆಲಸವಿಲ್ಲ. ಭವ್ಯ ಮತ್ತು ಸುಧಾರಾಣಿ ಹೀಗೆ ಬಂದು ಹಾಗೆ ಹೋಗುತ್ತಾರೆ.
ತಾಂತ್ರಿಕವಾಗಿ ಸಿನಿಮಾ ಶ್ರೀಮಂತವಾಗಿ ಕಟ್ಟಿಕೊಡುವಲ್ಲಿ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಧಾರಾಳವಾಗಿ ಹಣ ಸುರಿದಿದ್ದಾರೆ. ಹಾಡು, ಸಂಗೀತ, ಕ್ಯಾಮರಾ ಎಲ್ಲವೂ ರಿಚ್ ಆಗಿ ಮೂಡಿಬಂದಿದೆ. ಆದರೆ, ಎಲ್ಲೋ ಒಂದು ಕಡೆ ಏನೋ ಒಂದು ಮಿಸ್ ಆಗ್ತಿದೆ ಅನ್ನೋ ಫೀಲ್ ನೋಡುಗನನ್ನು ಕಾಡುತ್ತದೆ. ಇದೆಲ್ಲದರ ಜತೆಗೆ ಕಥೆ ಮುಗಿದರೂ ಮೂರನೇ ಭಾಗದ ಸುಳಿವೂ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಅಡಗಿಸಿಟ್ಟಿದ್ದಾರೆ ನಿರ್ದೇಶಕರು.