Chetan Ahimsa: ಸಸ್ಯಾಹಾರ ಮಾಂಸಾಹಾರದ ಬಗ್ಗೆ ಮಾತನಾಡಿದ್ದ ಸುಧಾ ಮೂರ್ತಿಗೆ ತಿವಿದ ಚೇತನ್ ಅಹಿಂಸಾ; ಅತಿಯಾದ ಬಿಲ್ಡಪ್ ಎಂದು ಲೇವಡಿ
ಸೋಷಿಯಲ್ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರುವ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಇದೀಗ ಸುಧಾ ಮೂರ್ತಿ ಅವರ ಬಗ್ಗೆ ಟೀಕೆ ಮಾಡಿದ್ದಾರೆ. ಅವರ ಆಸ್ತಿ ಜಗದಗಲ, ತಿಳುವಳಿಕೆ ಚಮಚದಗಲ ಎಂದು ಲೇವಡಿ ಮಾಡಿದ್ದಾರೆ.
Chetan Ahimsa: ಸ್ಯಾಂಡಲ್ವುಡ್ ನಟ ಮತ್ತು ಸಾಮಾಜಿಕ ಹೋರಾಟಗಾರರಾಗಿ ಗುರುತಿಸಿಕೊಂಡಿರುವ ನಟ ಚೇತನ್ ಅಹಿಂಸಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಪ್ರಸ್ತುತ ಘಟಿಸುವ ಬೆಳವಣಿಗೆಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಬರಹದ ರೂಪದಲ್ಲಿ ಪ್ರಕಟಿಸುತ್ತಿರುತ್ತಾರೆ. ಇದೀಗ ಇನ್ಫೋಸಿಸ್ನ ಸುಧಾ ಮೂರ್ತಿ ವಿರುದ್ಧವೂ ಮಾತನಾಡಿದ್ದಾರೆ.
ಟ್ರೆಂಡಿಂಗ್ ಸುದ್ದಿ
ಸಿನಿಮಾಗಳಿಂದ ದೂರವೇ ಉಳಿದಿರುವ ಚೇತನ್ ಸದ್ಯ ಪೂರ್ಣ ಪ್ರಮಾಣದಲ್ಲಿ ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಾಮಾಜಿಕ ಕಳಕಳಿಯ ಕೆಲಸಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಇದೀಗ ಇನ್ಫೋಸಿಸ್ನ ಸುಧಾ ಮೂರ್ತಿ ಅವರದ್ದು ಬರೀ ಬಿಲ್ಡಪ್ಗಳೇ ಜಾಸ್ತಿ ಎಂದು ಲೇವಡಿ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಹೇಳಿಕೆ ಸದ್ಯ ಚರ್ಚಿತ ವಿಷಯವಾಗಿ ಪರ ವಿರೋಧಕ್ಕೂ ಎಡೆ ಮಾಡಿಕೊಟ್ಟಿದೆ. ಹಾಗಾದರೆ, ಚೇತನ್ ಅಹಿಂಸಾ ಹೀಗೆ ನೇರವಾಗಿ ಟೀಕೆ ಮಾಡಲು ಕಾರಣ ಏನಿರಬಹುದು? ಆ ಪ್ರಶ್ನೆಗೆ ಉತ್ತರವನ್ನೂ ನೀಡಿದ್ದಾರೆ ಚೇತನ್.
ಇತ್ತೀಚೆಗಷ್ಟೇ ಸಸ್ಯಾಹಾರ ಮತ್ತು ಮಾಂಸಾಹಾರಕ್ಕೆ ಕುರಿತಾಗಿ ಸುಧಾ ಮೂರ್ತಿ ಅವರು ತಮ್ಮ ಹೇಳಿಕೆ ನೀಡಿದ್ದರು. ಅವರ ಆ ವಿಚಾರ ಕೆಲವರನ್ನು ತೀವ್ರ ಕೆರಳಿಸುವಂತೆ ಮಾಡಿತ್ತು. ಇತ್ತೀಚೆಗೆ ಯೂಟ್ಯೂಬ್ಗೆ ನೀಡಿದ ಸಂದರ್ಶನಲ್ಲಿ ಮಾತನಾಡಿದ್ದ ಸುಧಾ ಮೂರ್ತಿ, "ನಾನು ಶುದ್ಧ ಸಸ್ಯಾಹಾರಿ. ಅದ್ಯಾವ ಮಟ್ಟಿಗೆ ಎಂದರೆ, ನಾನು ಮೊಟ್ಟೆ ಮತ್ತು ಬೆಳ್ಳುಳ್ಳಿಯನ್ನೂ ತಿನ್ನುವುದಿಲ್ಲ ಎಂದಿದ್ದರು.
"ನಾನು ವಿದೇಶಕ್ಕೆ ಹೋಗುವಾಗ ನನಗೇನು ಬೇಕೆಂದು ಮನೆಯಲ್ಲಿಯೇ ಮಾಡಿಕೊಂಡು ಹೋಗುತ್ತೇನೆ. ಸಸ್ಯಾಹಾರ ಮತ್ತು ಮಾಂಸಾಹಾರಕ್ಕೆ ಒಂದೇ ಚಮಚ ಬಳಸುತ್ತಾರೆ ಎಂಭ ಭಯ. ನನ್ನ ಚಮಚವನ್ನು ನಾನೇ ತೆಗೆದುಕೊಂಡು ಹೋಗುತ್ತೇನೆ. ವಿದೇಶಿ ಪ್ರವಾಸಗಳಲ್ಲಿ ಸಸ್ಯಾಹಾರಿ ಹೊಟೇಲ್ಗಳನ್ನೇ ಹುಡುಕುತ್ತೇನೆ" ಎಂದು ಸುಧಾ ಮೂರ್ತಿ ಹೇಳಿಕೊಂಡಿದ್ದರು.
ಸುಧಾ ಮೂರ್ತಿ ಹೇಳಿಕೆಗೆ ಚೇತನ್ ಟೀಕೆ
ಹೀಗೆ ಸುಧಾ ಮೂರ್ತಿ ಅವರ ಹೇಳಿಕೆಗೆ ಚೇತನ್ ಅಹಿಂಸಾ ಟೀಕೆ ಮಾಡಿದ್ದಾರೆ. ಅತಿಯಾದ ಬಿಲ್ಡಪ್ನಿಂದ ಗುರುತಿಸಲ್ಪಡುವ ವ್ಯಕ್ತಿಯಿಂದ ಈ ರೀತಿಯ ಮಾತನ್ನು ನಿರೀಕ್ಷಿಸಿರಲಿಲ್ಲ ಎಂಬರ್ಥದಲ್ಲಿ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ ಚೇತನ್.
"ಸುಧಾ ಮೂರ್ತಿಯವರು ನಮ್ಮ ಬ್ರಾಹ್ಮಣ್ಯ- ಬಂಡವಾಳಶಾಹಿ ಸಮಾಜದಿಂದ ಅತಿಯಾದ ಬಿಲ್ಡಪ್ನಿಂದ ಗುರುತಿಸಲ್ಪಟ್ಟ ಮತ್ತು ಅನರ್ಹವಾಗಿ ಗೌರವಿಸಲ್ಪಟ್ಟ ಸಾರ್ವಜನಿಕ ವ್ಯಕ್ತಿ. ಅವರು ತನ್ನ ಸೀಮಿತ, ಮಡಿವಂತಿಕೆಯ ಚಿಂತನೆಯನ್ನು ಬಹಿರಂಗಪಡಿಸುವ ಹೇಳಿಕೆಗಳನ್ನು ನಿರಂತರವಾಗಿ ಮಾಡುತ್ತಾರೆ. ಸುಧಾ ಮೂರ್ತಿಯವರು ಹೆಚ್ಚು ಮಾತನಾಡಬೇಕು. ಅವರ ಆಸ್ತಿ ಜಗದಗಲ, ತಿಳುವಳಿಕೆ ಚಮಚದಗಲ' ಎಂದು ಲೇವಡಿ ಮಾಡಿದ್ದಾರೆ.
ಮತ್ತಷ್ಟು ಮನರಂಜನೆ ಕುರಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ