ಕನ್ನಡ ಸುದ್ದಿ  /  Karnataka  /  Bommai, Bsy Tour From Today Bommai, Bsy Karnataka Tour To Strengthen The Organization Begins Today First Convention At Raichur

Bommai, BSY tour from today: ಬೊಮ್ಮಾಯಿ, ಬಿಎಸ್‌ವೈ ಜನಸಂಕಲ್ಪ ಯಾತ್ರೆ ಇಂದು ಶುರು; ಏಳು ಬೃಹತ್‌ ಸಮಾವೇಶ ಎಲ್ಲಿ ಏನು? ವಿವರ ಇಲ್ಲಿದೆ

Bommai, BSY tour from today: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಮಧ್ಯ ಕರ್ನಾಟಕ ಪ್ರದೇಶದಲ್ಲಿ ಸಂಚರಿಸುತ್ತಿದೆ. ರಾಜ್ಯದಲ್ಲಿ 2023 ರ ವಿಧಾನಸಭಾ ಚುನಾವಣೆಗೆ ಮತದಾರರನ್ನು ಸೆಳೆಯಲು ಬಿಜೆಪಿ ಕೂಡ ಸಜ್ಜಾಗಿದೆ. ಬಿಜೆಪಿ ನಾಯಕರು ಇಂದು ಕಲ್ಯಾಣ-ಕರ್ನಾಟಕದಿಂದ ಸಂಘಟನಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಪ್ರವಾಸದ ಹಿನ್ನೆಲೆ ವಿವರ ಇಲ್ಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿಯ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್.‌ಯಡಿಯೂರಪ್ಪ, ಮಾಜಿ ಸಿಎಂ ಸದಾನಂದ ಗೌಡ (PTI Photo/Shailendra Bhojak)
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿಯ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್.‌ಯಡಿಯೂರಪ್ಪ, ಮಾಜಿ ಸಿಎಂ ಸದಾನಂದ ಗೌಡ (PTI Photo/Shailendra Bhojak) (PTI)

ರಾಜ್ಯಕ್ಕೆ ಇದು ಚುನಾವಣಾ ವರ್ಷ. ರಾಜ್ಯದಲ್ಲಿ 2023ರ ಚುನಾವಣೆಯಲ್ಲಿ ಗೆದ್ದು ಆಡಳಿತ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್‌ ಈಗಾಗಲೇ ಪ್ರಯತ್ನ ಶುರುಮಾಡಿದೆ. ಹಲವು ಪ್ರಮುಖ ಸಮಾವೇಶ, ಪಾದಯಾತ್ರೆಗಳ ಬಳಿಕ, ಈಗ ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೋ ಯಾತ್ರೆ ಮೂಲಕ ಜನಮನ ಗೆಲ್ಲಲ್ಲು ಮುಂದಾಗಿದೆ. ಈ ನಡುವೆ, ಬಿಜೆಪಿ ಕೂಡ ಆಡಳಿತ ಚುಕ್ಕಾಣಿಯನ್ನು ತನ್ನ ಬಳಿಯೇ ಉಳಿಸಿಕೊಳ್ಳಲು ತೀವ್ರ ಪ್ರಯತ್ನ ಶುರುಮಾಡಿದೆ.

ರಾಜ್ಯದಲ್ಲಿ ಮತ್ತೆ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲು ಬಿಜೆಪಿ ಚಿಂತನೆ ನಡೆಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ರಾಜ್ಯದಲ್ಲಿ ಇಂದಿನಿಂದ ಸಂಘಟನಾ ಪ್ರವಾಸ ಶುರುಮಾಡುತ್ತಿದ್ದಾರೆ. ಇದರೊಂದಿಗೆ ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿದಂತೆ ಆಗಲಿದೆ.

ಮಿಷನ್‌ 150 - ನಮ್ಮ ನಡೆ ವಿಜಯದ ಕಡೆಗೆ

ವಿಪಕ್ಷ ಕಾಂಗ್ರೆಸ್‌ನ ಕಾಂಗ್ರೆಸ್ ತಂತ್ರಕ್ಕೆ ಆಡಳಿತಾರೂಢ ಬಿಜೆಪಿ ಪ್ರತಿತಂತ್ರ ರೂಪಿಸುತ್ತಿದೆ. ಬಿಜೆಪಿ ಸಂಘಟನೆ ಬಲ ಪಡಿಸಿಕೊಂಡು ಚುನಾವಣೆ ಎದುರಿಸಲು ಸಜ್ಜಾಗಿದೆ. ಇದರಂತೆ, 165 ಕ್ಷೇತ್ರಗಳಲ್ಲಿ ರಾಜ್ಯ ನಾಯಕರ ಪ್ರವಾಸ, ಏಳು ಬೃಹತ್‌ ಸಮಾವೇಶ ನಡೆಸಲು ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೂರು ಹಂತ 26 ದಿನದಲ್ಲಿ 51 ಕ್ಷೇತ್ರ ಪ್ರವಾಸ

ಚುನಾವಣಾ ದೃಷ್ಟಿಯಿಂದ ಬಿಜೆಪಿ ಎರಡು ತಂಡಗಳಲ್ಲಿ ಪ್ರವಾಸ ಹಮ್ಮಿಕೊಂಡಿದೆ. ಒಂದು ತಂಡದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಇರಲಿದ್ದಾರೆ. ಸಂಘಟನಾ ಪ್ರವಾಸ ಮತ್ತು ಜನಸಂಕಲ್ಪ ಸಮಾವೇಶಗಳನ್ನು ಕೂಡ ಇದೇ ವೇಳೆ ಪಕ್ಷ ಆಯೋಜಿಸಲಿದೆ. ಈ ತಂಡ 26 ದಿನಗಳಲ್ಲಿ ಅಂದರೆ ಈ ತಿಂಗಳು ಆರು ದಿನ, ನವೆಂಬರ್‌ನಲ್ಲಿ 11 ದಿನ, ಡಿಸೆಂಬರ್‌ನಲ್ಲಿ 9 ದಿನಗಳಲ್ಲಿ ಒಟ್ಟು 51 ಕ್ಷೇತ್ರ ಪ್ರವಾಸ ಮಾಡಲಿದೆ. ಇಂದು ರಾಯಚೂರಿನಿಂದ ಪ್ರವಾಸ ಶುರುವಾಗಲಿದ್ದು, ಡಿ.25ರಂದು ರಾಮನಗರ ಜಿಲ್ಲೆ ಮಾಗಡಿಯಲ್ಲಿ ಈ ತಂಡದ ಪ್ರವಾಸ ಸಂಪನ್ನಗೊಳ್ಳಲಿದೆ.

ಸಿಎಂ ಬೊಮ್ಮಾಯಿ ಕ್ಷೇತ್ರದಿಂದ ರಾಜ್ಯಾಧ್ಯಕ್ಷರ ತಂಡದ ಪ್ರವಾಸ

ಬಿಜೆಪಿ ರಾಜ್ಯ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ನೇತೃತ್ವದ ತಂಡ ಕೂಡ ಪ್ರವಾಸ ನಡೆಸಲಿದೆ. ಈ ತಂಡ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕ್ಷೇತ್ರ ಹಾವೇರಿಯಿಂದಲೇ ಪ್ರವಾಸ ಶುರುಮಾಡಲಿದೆ. ಈ ತಂಡದ ಮೊದಲ ಹಂತದ ಪ್ರವಾಸ ಹುಬ್ಬಳ್ಳಿ ಧಾರವಾಡದಲ್ಲಿ ಅ.13ರಂದು ಮುಕ್ತಾಯವಾಗಲಿದೆ.

ಸಂಘಟನಾ ಪ್ರವಾಸದಲ್ಲಿ ಏನೇನು ಕಾರ್ಯಕ್ರಮ

ಬಿಜೆಪಿ ನಾಯಕರ ಸಂಘಟನಾ ಪ್ರವಾಸದ ಸಂದರ್ಭದಲ್ಲಿ, ಬೊಮ್ಮಾಯಿ ಮತ್ತು ಯಡಿಯೂರಪ್ಪ ಅವರು ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಬೂತ್ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆ, ಪಕ್ಷದ ಪದಾಧಿಕಾರಿಗಳ ಸಭೆ ನಡೆಸಲಿದ್ದಾರೆ.

ಬೃಹತ್‌ ಸಮಾವೇಶಗಳಿಗೆ ಸಿದ್ಧತೆ

ವಿಧಾನಸಭಾ ಚುನಾವಣಾ ದೃಷ್ಟಿಯಿಂದ ರಾಜ್ಯದ ಏಳು ಕಡೆ ಬೃಹತ್ ಸಮಾವೇಶಗಳನ್ನು ಹಮ್ಮಿಕೊಳ್ಳಲು ಬಿಜೆಪಿ ನಿರ್ಧರಿಸಿದೆ. ಕಲಬುರಗಿಯಲ್ಲಿ ಒಬಿಸಿ, ಹುಬ್ಬಳ್ಳಿಯಲ್ಲಿ ರೈತ ಸಮಾವೇಶ, ಬಳ್ಳಾರಿಯಲ್ಲಿ ಎಸ್‍ಟಿ ಸಮಾವೇಶ, ಮೈಸೂರಿನಲ್ಲಿ ಎಸ್‍ಸಿ ಸಮಾವೇಶ, ಮಂಗಳೂರಿನಲ್ಲಿ ಯುವ ಸಮಾವೇಶ ಹಾಗೂ ಬೆಂಗಳೂರಿನಲ್ಲಿ ಮಹಿಳಾ ಸಮಾವೇಶಕ್ಕೆ ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ.

IPL_Entry_Point