ಕನ್ನಡ ಸುದ್ದಿ  /  ಕರ್ನಾಟಕ  /  Breaking News: ಬಿಸಿಲ ಗಾಳಿಗೆ ರಾಯಚೂರಿನಲ್ಲಿ ವೃದ್ದ ಬಲಿ, ವಾರದೊಳಗೆ ಎರಡನೇ ಘಟನೆ

Breaking News: ಬಿಸಿಲ ಗಾಳಿಗೆ ರಾಯಚೂರಿನಲ್ಲಿ ವೃದ್ದ ಬಲಿ, ವಾರದೊಳಗೆ ಎರಡನೇ ಘಟನೆ

ತೀವ್ರ ಬಿಸಿಲ ಝಳ ಹಾಗೂ ಗಾಳಿಯಿಂದ ರಾಯಚೂರು ಜಿಲ್ಲೆಯಲ್ಲಿ ವಾರದೊಳಗೆ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿವೆ.

ಉತ್ತರ ಕರ್ನಾಟಕದಲ್ಲಿ ಈಗ ಬಿಸಿಲಿನ ಪರಿತಾಪ
ಉತ್ತರ ಕರ್ನಾಟಕದಲ್ಲಿ ಈಗ ಬಿಸಿಲಿನ ಪರಿತಾಪ

ರಾಯಚೂರು: ಇಡೀ ಕರ್ನಾಟಕದಲ್ಲಿ ಬಿಸಿಲಿನ ವಾತಾವರಣವಿದ್ದರೂ ಉತ್ತರ ಕರ್ನಾಟಕವಂತೂ ಕಾದ ಕಾವಲಿಯಂತಾಗಿದೆ. ಬಿಸಿಲ ಝಳಕ್ಕೆ ತಾಳಲಾರದೇ ವೃದ್ದರೊಬ್ಬರು ಭಾನುವಾರ ಜೀವ ಬಿಟ್ಟಿದ್ದಾರೆ. ವಾರ ಹಿಂದೆಯಷ್ಟೇ ರಾಯಚೂರು ಜಿಲ್ಲೆಯಲ್ಲಿಯೇ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ತಿಂಗಳ ಅಂತರದೊಳಗೆ ರಾಯಚೂರು ಜಿಲ್ಲೆಯಲ್ಲಿ ಬಿಸಿಲಿನಿಂದ ಇಬ್ಬರು ಜೀವ ಕಳೆದುಕೊಂಡಂತಾಗಿದೆ. ರಾಯಚೂರು ನಗರದ ನಿವಾಸಿ ರಾಮಣ್ಣ ಕಬ್ಬೇರ್‌ ಎಂಬುವವರು ಭಾನುವಾರ ಬಿಸಿಲಿನಿಂದ ಬಳಲಿ ಮೃತಪಟ್ಟಿದ್ಧಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು ಎಂದು ಕುಟುಂಬದವರು ತಿಳಿಸಿದ್ಧಾರೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಟ್ರೆಂಡಿಂಗ್​ ಸುದ್ದಿ

ರಾಯಚೂರಿನ ಗೋಶಾಲಾ ರಸ್ತೆಯಲ್ಲಿರುವ ಯಕ್ಲಾಸಪುರ ಬಡಾವಣೆ ನಿವಾಸಿಯಾದ ರಾಮಣ್ಣ ಅವರು ಭಾನುವಾರ ಬೆಳಿಗ್ಗೆ ಬಿಸಿಲಿನಲ್ಲಿ ನಡೆದು ಹೊರಟಿದ್ದರು. ನಿಶ್ಯಕ್ತಿಗೆ ಒಳಗಾಗಿ ತಲೆ ಸುತ್ತಿನಿಂದ ಏಕಾಏಕಿ ರಸ್ತೆ ಬದಿಯಲ್ಲಿ ಮಲಗಿದ್ದರು. ಕುಸಿದು ಬಿದ್ದವರು ಅಲ್ಲಿಯೇ ಮೃತಪಟ್ಟಿದ್ದಾರೆ. ಕೂಡಲೇ ಕುಟುಂಬದವರು ಆಗಮಿಸಿದರೂ ರಾಮಣ್ಣ ಜೀವ ಹೋಗಿತ್ತು. ರಾಯಚೂರು ನಗರ ಪೊಲೀಸರು ಮಹಜರು ಕಾರ್ಯ ನಡೆಸಿದ್ದರು. ನಂತರ ಕುಟುಂಬದವರಿಗೆ ರಾಮಣ್ಣನ ದೇಹವನ್ನು ಹಸ್ತಾಂತರಿಸಲಾಯಿತು.

ರಾಯಚೂರು ನಗರದಲ್ಲಿ ಒಂದೂವರೆ ತಿಂಗಳಿನಿಂದ ಬಿಸಿಲ ಪ್ರಮಾಣ 40 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲೇ ಇದೆ. ಮೂರ್ನಾಲ್ಕು ದಿನದಿಂದ ಇದು ಇನ್ನೂ ಹೆಚ್ಚಿದ್ದು ಬಿಸಿಲ ಗಾಳಿಯೂ ಬೀಸುತ್ತಿದೆ. ಇದರಿಂದ ಜನ ಬಿಸಿಲಿಗೆ ತತ್ತರಿಸಿ ಹೋಗಿದ್ದಾರೆ. ಬೆಳಿಗ್ಗೆ 11ರ ನಂತರ ಹೊರಗೆ ಬರಬೇಡಿ ಎಂದು ಜನರಿಗೆ ತಿಳುವಳಿಕೆ ನೀಡಲಾಗುತ್ತಿದೆ. ಆದರೂ ಸಣ್ಣಪುಟ್ಟ ಕೆಲಸದ ಕಾರಣಕ್ಕೆ ಹೊರಗೆ ಬರುವವರ ಸಂಖ್ಯೆ ಹೆಚ್ಚಿದೆ. ವಯಸ್ಸಾದವರು ಹೊರ ಬಂದು ಸಂಕಷ್ಟಕ್ಕೆ ಸಿಲುಕುವುದು ಹೆಚ್ಚಿದೆ.

ಕಳೆದ ವಾರ ಲಿಂಗಸುಗೂರಿನ ಬಸ್‌ ನಿಲ್ದಾಣದ ಆವರಣದಲ್ಲಿ ವ್ಯಕ್ತಿಯೊಬ್ಬ ಬಿಸಿಲಿನಿಂದ ಮೃತಪಟ್ಟ ಘಟನೆ ನಡೆದಿತ್ತು. ಮಸ್ಕಿ ತಾಲ್ಲೂಕಿನ ಆನಂದಗಲ್ಲ ಗ್ರಾಮದ ಕೃಷ್ಣಪ್ಪ ಬಳ್ಳಾರೆಪ್ಪ ಎಂಬಾತ ಬಿಸಿಲಿನಿಂದ ಬಳಲಿ ನಿಲ್ದಾಣದಲ್ಲಿ ಕುಳಿತಲ್ಲೇ ಮೃತಪಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕಲಬುರಗಿ, ರಾಯಚೂರು, ಬಾಗಲಕೋಟೆ, ಬೀದರ್‌, ವಿಜಯಪುರ, ಬಳ್ಳಾರಿ, ಗದಗ, ಕೊಪ್ಪಳ ಸಹಿತ ಹಲವು ಜಿಲ್ಲೆಗಳಲ್ಲಿ ಬಿಸಿಲಿನಿಂದ ಬಳಲಿ ನಿರ್ಜಲೀಕರಣಕ್ಕೆ ಅಸ್ವಸ್ಥರಾಗುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇನ್ನೂ ಮೂರ್ನಾಲ್ಕು ದಿನ ಬಿಸಿಲ ಗಾಳಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಲಿದೆ ಎನ್ನುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕೇಂದ್ರ ಈಗಾಗಲೇ ಮುನ್ಸೂಚನೆ ನೀಡಿದೆ.

IPL_Entry_Point