ಅಶಿಸ್ತಿನ ನಡುವೆಯೂ ಸಿಕ್ಕಿತ್ತು ಸುವರ್ಣಾವಕಾಶ; ಆದರೂ ಬಿಸಿಸಿಐ ಆಫರ್ ರಿಜೆಕ್ಟ್ ಮಾಡಿದ್ದ ಇಶಾನ್ ಕಿಶನ್
Mar 02, 2024 07:00 AM IST
ಬಿಸಿಸಿಐ ಆಫರ್ ರಿಜೆಕ್ಟ್ ಮಾಡಿದ್ದ ಇಶಾನ್ ಕಿಶನ್
- Ishan Kishan : ಅಶಿಸ್ತಿನ ನಡುವೆಯೂ ಇಂಗ್ಲೆಂಡ್ ಸರಣಿಯಲ್ಲಿ ಆಯ್ಕೆಗೆ ಬಿಸಿಸಿಐ ನೀಡಿದ್ದ ಬಂಪರ್ ಆಫರ್ ಅನ್ನು ಇಶಾನ್ ಕಿಶನ್ ರಿಜೆಕ್ಟ್ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.
ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿಯಿಂದ ಕೈಬಿಟ್ಟ ನಂತರ ಭಾರತ ತಂಡದ ವಿಕೆಟ್ ಕೀಪರ್ ಇಶಾನ್ ಕಿಶನ್ (Ishan Kishan) ಅವರ ಕ್ರಿಕೆಟ್ ಭವಿಷ್ಯವು ಅಪಾಯದಲ್ಲಿದೆ. ಮಾನಸಿಕ ಆಯಾಸಕ್ಕೆ ವಿಶ್ರಾಂತಿ ಪಡೆಯಲು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹಿಂದೆ ಸರಿದಿದ್ದ ಕಿಶನ್, ಆ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಆಯ್ಕೆ ಆಗಲಿಲ್ಲ. ರಣಜಿ ಟ್ರೋಫಿ ಆಡುವಂತೆ ಬಿಸಿಸಿಐ, ಸೆಲೆಕ್ಟರ್ಸ್ ಮತ್ತು ಹೆಡ್ಕೋಚ್ ರಾಹುಲ್ ದ್ರಾವಿಡ್ ಸೂಚಿಸಿದರೂ ಯುವ ಆಟಗಾರ ನಿರ್ಲಕ್ಷಿಸಿದ್ದರು. ಇದರ ನಡುವೆಯೂ ಇಂಗ್ಲೆಂಡ್ ಸರಣಿಗೆ ಆಯ್ಕೆಗೆ ಬಿಸಿಸಿಐ ನೀಡಿದ್ದ ಬಂಪರ್ ಆಫರ್ ಅನ್ನೂ ಇಶಾನ್ ಕಿಶನ್ ರಿಜೆಕ್ಟ್ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.
ರಾಷ್ಟ್ರೀಯ ಸರಣಿಗಳು ಇಲ್ಲದಿದ್ದರೆ ಅಥವಾ ಆಡದಿದ್ದರೆ ಅಂತಹ ಆಟಗಾರರು ದೇಶೀಯ ಕ್ರಿಕೆಟ್ನಲ್ಲಿ ತಮ್ಮ ರಾಜ್ಯ ತಂಡಗಳನ್ನು ಪ್ರತಿನಿಧಿಸಲು ಬಿಸಿಸಿಐ ಆದೇಶ ಹೊರಡಿಸಿತ್ತು. ಆದಾಗ್ಯೂ, ಇಶಾನ್ ಇದಕ್ಕೆ ಯಾವುದೇ ಗಮನ ಕೊಡದೆ, ಪಾಂಡ್ಯ ಸಹೋದರರೊಂದಿಗೆ ಐಪಿಎಲ್ 2024 ಗಾಗಿ ತಯಾರಿ ನಡೆಸಲು ಬರೋಡಾಕ್ಕೆ ತೆರಳಿದ್ದರು. ಇದು ಬಿಸಿಸಿಐ ಮತ್ತು ಸೆಲೆಕ್ಟರ್ಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಈಗಲೂ ಸಹ ಅವರೊಂದಿಗೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ.
ವಾರ್ಷಿಕ ಒಪ್ಪಂದದಿಂದ ಅಯ್ಯರ್-ಇಶಾನ್ಗೆ ಗೇಟ್ಪಾಸ್
ಹಿರಿಯರ ಸಲಹೆಗಳನ್ನೂ ಧಿಕ್ಕರಿಸಿ ದುಡ್ಡಿಗಾಗಿ ಐಪಿಎಲ್ಗಾಗಿ ಭರ್ಜರಿ ತಯಾರಿ ನಡೆಸುತ್ತಿರುವ ಇಶಾನ್, ಮಾನಸಿಕ ಆಯಾಸವೆಂದು ವಿಶ್ರಾಂತಿ ಪಡೆದು ಕೌನ್ ಬನೇಗಾ ಕರೋಡ್ಪತಿ ಶೋ, ದುಬೈನಲ್ಲಿ ನಡೆದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ರಣಜಿ ಆಡುವಂತೆ ಸಾಕಷ್ಟು ಬಾರಿ ಎಚ್ಚರಿಸಿದರೂ ತಲೆಕೆಡಿಸಿಕೊಳ್ಳದ ಕಿಶನ್ ಅಶಿಸ್ತು ಬಿಸಿಸಿಐ ಕೆರಳುವಂತೆ ಮಾಡಿತು. ಈ ಕಾರಣ ವಾರ್ಷಿಕ ಒಪ್ಪಂದದಿಂದ ಕೈ ಬಿಡಲಾಯಿತು.
ಮತ್ತೊಂದೆಡೆ ಶ್ರೇಯಸ್ ಅಯ್ಯರ್ ಸಹ ಇದೇ ಶಿಕ್ಷೆ ಎದುರಿಸಿದ್ದಾರೆ. ಮುಂಬೈ ಆಟಗಾರನಿಗೂ ರಣಜಿ ಆಡುವಂತೆ ಸೂಚಿಸಲಾಯಿತು. ಆದರೆ ಸುಳ್ಳು ಹೇಳಿ ಹಿಂದೆ ಸರಿದರು. ಬೆನ್ನು ನೋವು ಎಂದು ಹೇಳಿದ್ದ ಅಯ್ಯರ್ರನ್ನೂ ಗುತ್ತಿಗೆ ಪಟ್ಟಿಯಿಂದ ಹೊರಗೆ ಇಡಲಾಯಿತು. ಅವರು ಫಿಟ್ ಆಗಿದ್ದಾರೆ, ಆಯ್ಕೆಗೆ ಲಭ್ಯರು ಎಂದು ಬಿಸಿಸಿಐಗೆ ಎನ್ಸಿಎ ಕಳುಹಿಸಿದ್ದ ಇ-ಮೇಲ್ ಮಾಡಿತ್ತು. ಆಗ ಅಯ್ಯರ್ ಸುಳ್ಳಿನ ಬಣ್ಣ ಬಯಲಾಗಿತ್ತು.
ಬಿಸಿಸಿಐ ಆಫರ್ ತಿರಸ್ಕರಿಸಿದ ಇಶಾನ್
ಸ್ಟಾರ್ ಆಟಗಾರರನ್ನು ಕೈಬಿಡಲು ಬಿಸಿಸಿಐ ಸ್ಪಷ್ಟ ಕಾರಣ ನೀಡಿಲ್ಲ. ಆದರೆ, ಆಟಗಾರರನ್ನು ಒಪ್ಪಂದಕ್ಕೆ ಪರಿಗಣಿಸಲಾಗಿಲ್ಲ ಎಂದು ಖಚಿತಪಡಿಸಿದೆ. ಇದೀಗ ಇಎಸ್ಪಿಎನ್ ಕ್ರಿಕ್ಇನ್ಫೋ ವರದಿ ಪ್ರಕಾರ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಸಮಯದಲ್ಲಿ ಬಿಸಿಸಿಐ, ಇಶಾನ್ ಕಿಶನ್ ಅವರನ್ನು ಸಂಪರ್ಕಿಸಿದೆ ಎಂದು ತಿಳಿದುಬಂದಿದೆ. ಆದರೆ ವಿಕೆಟ್ ಕೀಪರ್-ಬ್ಯಾಟರ್ ಇನ್ನೂ ಟೆಸ್ಟ್ ಕ್ರಿಕೆಟ್ ಆಡಲು ಸಿದ್ಧವಾಗಿಲ್ಲ ಎಂದು ಹೇಳಿದ್ದರಂತೆ. ಇದು ಸಹ ಬಿಸಿಸಿಐ ಕೋಪಕ್ಕೆ ಕಾರಣವಾಗಿತ್ತು. ಒಂದು ಈ ಅವಕಾಶವನ್ನು ಬಳಸಿಕೊಂಡಿದ್ದರೆ ವಾರ್ಷಿಕ ಒಪ್ಪಂದದಲ್ಲಿ ತನ್ನ ಹೆಸರು ಹಾಗೆಯೇ ಇರುತ್ತಿತ್ತು.
ಸಿಕ್ಕ ಅವಕಾಶ ಕೈಚೆಲ್ಲಿದ ಇಶಾನ್ ಕಿಶನ್, ಬಂಪರ್ ಆಫರ್ ಮಿಸ್ ಮಾಡಿಕೊಂಡರು. ಮತ್ತೆ ತಂಡದಲ್ಲಿ ಅವಕಾಶ ಸಿಗಲ್ಲ ಎನ್ನುವ ಸಮಯದಲ್ಲಿ ಬಂಗಾರದಂತಹ ಅವಕಾಶ ಕೈಚೆಲ್ಲಿದರು. ಕಿಶನ್ ನಿರಾಕರಿಸಿದ ನಂತರ, ಮಂಡಳಿಯು ಧ್ರುವ್ ಜುರೆಲ್ ಅವರನ್ನು ಕೆಎಸ್ ಭರತ್ಗೆ ಬ್ಯಾಕ್ಅಪ್ ವಿಕೆಟ್ಕೀಪರ್ ಆಗಿ ಆಯ್ಕೆ ಮಾಡಿತು. ಧ್ರುವ್ ಜುರೆಲ್ 2 ಟೆಸ್ಟ್ಗಳಲ್ಲಿ ಬೊಂಬಾಟ್ ಪ್ರದರ್ಶನ ನೀಡಿದ್ದು, ಸ್ಥಾನ ಖಚಿತಪಡಿಸಿಕೊಂಡಿದ್ದಾರೆ. ಇನ್ಮುಂದೆ ಇಶಾನ್ ಕಿಶನ್ ತಂಡಕ್ಕೆ ಆಯ್ಕೆ ಆಗುವುದು ಕಷ್ಟವಾಗಲಿದೆ.
ಏತನ್ಮಧ್ಯೆ, ಐದನೇ ಟೆಸ್ಟ್ನಲ್ಲಿಯೂ ಕೆಎಲ್ ರಾಹುಲ್ ಇಲ್ಲದೆ ಭಾರತ ಕಣಕ್ಕಿಳಿಯಲಿದೆ. ರಾಹುಲ್ ಇನ್ನೂ ಗರಿಷ್ಠ ಫಿಟ್ನೆಸ್ ಮರಳಿ ಪಡೆಯದ ಕಾರಣ ಆಟದಿಂದ ಹೊರಗುಳಿದಿದ್ದಾರೆ. ಕ್ವಾಡ್ರೈಸ್ಪ್ ಸ್ನಾಯುರಜ್ಜು ಗಾಯದ ಬಗ್ಗೆ ತಜ್ಞರ ಅಭಿಪ್ರಾಯವನ್ನು ಪಡೆಯಲು ಬ್ಯಾಟರ್ ಲಂಡನ್ಗೆ ಹೋಗಿದ್ದಾರೆ. ಆದಾಗ್ಯೂ, ನಾಲ್ಕನೇ ಟೆಸ್ಟ್ನಿಂದ ವಿಶ್ರಾಂತಿ ಪಡೆದಿರುವ ವೇಗಿ ಮತ್ತು ಉಪನಾಯಕ ಜಸ್ಪ್ರೀತ್ ಬುಮ್ರಾ ಅವರು ಆಡುವ 11 ಬಳಗಕ್ಕೆ ಮರಳಲಿದ್ದಾರೆ.
IPL, 2024
RCB
218/5
20.0 Overs
CSK
119/5
(13.4)
VIEW FULL SCORECARD