Kadaba Elephant Attack: ಕಡಬದಲ್ಲಿ ಇಬ್ಬರನ್ನು ಬಲಿ ಪಡೆದ ಕಾಡಾನೆ ಸೆರೆ, ಉಳಿದ ಆನೆಗಳನ್ನು ಹಿಡಿಯುವಂತೆ ಜನರ ಮೊರೆ
Feb 24, 2023 10:53 AM IST
Kadaba Elephant Attack: ಕಡಬದಲ್ಲಿ ಇಬ್ಬರನ್ನು ಬಲಿ ಪಡೆದ ಕಾಡಾನೆ ಸೆರೆ, ಉಳಿದ ಆನೆಗಳನ್ನು ಹಿಡಿಯುವಂತೆ ಜನರ ಮೊರೆ
- ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ಯಶಸ್ವಿಯಾಗಿದೆ. ಕಾಡಿನಲ್ಲಿ ಇನ್ನಷ್ಟು ಆನೆಗಳು ಇರುವ ಕುರಿತು ಸ್ಥಳೀಯರು ತಿಳಿಸಿದ್ದಾರೆ. ಅವುಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಇಚಿಲಂಪಾಡಿಯಲ್ಲಿ ಇಬ್ಬರನ್ನು ಬಲಿ ಪಡೆದ ಕಾಡಾನೆಯನ್ನು ನಿನ್ನೆ ಸೆರೆ ಹಿಡಿಯಲಾಗಿದೆ. ನಿನ್ನೆ ಸಂಜೆ ವೇಳೆ ಈ ಕಾರ್ಯಾಚರಣೆ ಯಶಸ್ವಿಯಾಗಿದೆ. ಆದರೆ, ಕಾಡಿನಲ್ಲಿ ಇನ್ನಷ್ಟು ಆನೆಗಳಿದ್ದು, ಅವುಗಳನ್ನು ಹಿಡಿಯುವಂತೆ ಜನರು ಒತ್ತಾಯಿಸಿದ್ದು, ಶುಕ್ರವಾರವೂ ಕಾರ್ಯಾಚರಣೆ ಮುಂದುವರೆಸಿ ಎಂದಿದ್ದಾರೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳು ಮತ್ತು ಸ್ಥಳೀಯರ ನಡುವೆ ವಾಗ್ವಾದ ನಡೆದಿದ್ದು, ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.
"ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ಯಶಸ್ವಿಯಾಗಿದೆ. ಕಾಡಿನಲ್ಲಿ ಇನ್ನಷ್ಟು ಆನೆಗಳು ಇರುವ ಕುರಿತು ಸ್ಥಳೀಯರು ತಿಳಿಸಿದ್ದಾರೆ. ಅವುಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಲಾಗುತ್ತದೆ" ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂಆರ್ ರವಿಕುಮಾರ್ ತಿಳಿಸಿದ್ದಾರೆ.
ಮೂರು ದಿನಗಳ ಕಾರ್ಯಾಚರಣೆಯ ಬಳಿಕ ಮಂಡಕರ ಸಮೀಪ ಮುಜೂರು ರಕ್ಷಿತಾರಣ್ಯದಲ್ಲಿ ಒಂಟಿ ಕಾಡಾನೆ ಸೆರೆ ಸಿಕ್ಕಿದೆ. ಈ ಕಾಡಾನೆಯನ್ನು ಹಗ್ಗದಲ್ಲಿ ಬಂಧಿಸಿ ಲಾರಿಗೆ ತುಂಬುವ ವೇಳೆ ಸ್ಥಳೀಯರು ಮತ್ತು ಅರಣ್ಯ ಅಧಿಕಾರಿಗಳ ನಡುವೆ ವಾಗ್ವಾದ ನಡೆದಿದೆ. ಕೊಂಬಾರು ಭಾಗದಲ್ಲಿ ನಾಲ್ಕು ಕಾಡಾನೆಗಳು ಇರುವ ಕುರಿತು ಸ್ಥಳೀಯರು ತಿಳಿಸಿದ್ದರು. ನಿನ್ನೆ ಬೆಳಗ್ಗಿನಿಂದಲೇ ಕೊಭಾರು ಗ್ರಾಮದ ಮಂಡೆಕರ ಅರಣ್ಯ ಪ್ರದೇಶದಲ್ಲಿ ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು.
ಕೊನೆಗೂ ಒಂಟಿ ಕಾಡಾನೆ ಪತ್ತೆಯಾಗಿದೆ. ಈ ಆನೆಗೆ ಗನ್ ಮೂಲಕ ಅರಿವಳಿಕೆ ನೀಡಲಾಯಿತು. ಸಂಜೆ 4.30 ಗಂಟೆಗೆ ಆನೆಯನ್ನು ಹಿಡಿಯಲಾಯಿತು. ಪ್ರಜ್ಞೆ ತಪ್ಪಿದ ಆನೆಯ ಕಾಲು, ಕುತ್ತಿಗೆಗೆ ಹಗ್ಗ ಕಟ್ಟಲಾಯಿತು. ಪ್ರಜ್ಞೆ ಬಂದ ಬಳಿಕ ಎದ್ದು ನಿಂತ ಆನೆಯನ್ನು ಸಾಕಾನೆಗಳ ನೆರವಿನಿಂದ ಪಳಗಿಸಿ ಲಾರಿಯಲ್ಲಿ ಲೋಡ್ ಮಾಡಲಾಯಿತು. ಸದ್ಯ ಈ ಆನೆಯನ್ನು ರೆಂಜಿಲಾಡಿ ಗ್ರಾಮದ ಪೇರಡ್ಕ ಸಮೀಪದಲ್ಲಿರುವ ಆನೆ ಶಿಬಿರಕ್ಕೆ ತರಲಾಗಿದೆ.
ಹಿಂದಿನ ಎರಡು ದಿನಗಳ ಕಾಲ ಆನೆ ಕಾರ್ಯಾಚರಣೆ ನೋಡಲು ಜನರು ಸಾಕಷ್ಟು ಸಂಖ್ಯೆಯಲ್ಲಿ ಬಂದಿದ್ದರು. ಆದರೆ, ಇದರಿಂದ ಆನೆ ಪತ್ತೆ ಸಾಧ್ಯವಾಗಲಿಲ್ಲ. ನಿನ್ನೆ ಜನರಿಗೆ ನಿರ್ಬಂಧ ಹೇರಲಾಗಿತ್ತು.
ಸೆರೆ ಸಿಕ್ಕ ಆನೆಯನ್ನು ಲಾರಿಗೆ ತುಂಬುವ ವೇಳೆ ಗ್ರಾಮಸ್ಥರು ಮತ್ತು ಅಧಿಕಾರಿಗಳ ನಡುವೆ ವಾಗ್ವಾದ ನಡೆದಿದ್ದು, ಅರಣ್ಯ ಇಲಾಖೆಯ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಘಟನೆ ಸಂಬಂಧ ಕೆಲವರನ್ನು ವಶಕ್ಕೆ ಪಡೆಯಲಾಗಿದೆ.
ಕಾರ್ಯಾಚರಣೆಯನ್ನು ನಿಲ್ಲಿಸಲಾಗಿಲ್ಲ. ಮತ್ತೆ ಮುಂದುವರೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರೂ ಗ್ರಾಮಸ್ಥರು ಸಮಧಾನಗೊಳ್ಳಲಿಲ್ಲ. ಜನರ ಕಲ್ಲು ತೂರಾಟದಿಂದ ಎರಡು ಪೊಲೀಸ್ ಜೀಪುಗಳು, ಅರಣ್ಯ ಇಲಾಖೆಯ ಎರಡು ವಾಹನಗಳಿಗೆ ಹಾನಿಯಾಗಿವೆ. ಈ ಸಮಯದಲ್ಲಿ ಲಾಠಿ ಚಾರ್ಜ್ ಮಾಡಿ ಜನರನ್ನು ಚದುರಿಸಲಾಗಿದೆ.
ಸೋಮವಾರ (ಫೆ.20) ಮುಂಜಾನೆ ಈ ಕಾಡಾನೆ ಇಬ್ಬರನ್ನು ಬಲಿ ಪಡೆದಿತ್ತು. ಮೃತರನ್ನು 21 ವರ್ಷದ ರಂಜಿತಾ ಹಾಗೂ 55 ವರ್ಷ ರಮೇಶ್ ರೈ ಎಂದು ಗುರುತಿಸಲಾಗಿದೆ. ರಂಜಿತಾ ಅವರು ಪೇರಡ್ಕ ಹಾಲು ಸೊಸೈಟಿಯ ಸಿಬ್ಬಂದಿಯಾಗಿದ್ದು, ಅವರು ಬೆಳಿಗ್ಗೆ ಸೊಸೈಟಿಗೆ ಕಾಡು ದಾರಿಯಲ್ಲಿ ಹೋಗುತ್ತಿದ್ದ ವೇಳೆ ನೈಲದಲ್ಲಿ ಆನೆ ದಾಳಿ ನಡೆಸಿತ್ತು. ಆನೆಯನ್ನು ಕಂಡು ರಂಜಿತಾ ಅವರು ಜೋರಾಗಿ ಕೂಗಿಕೊಂಡಿದ್ದಾರೆ. ಅವರನ್ನು ರಕ್ಷಿಸಲು ಮುಂದಾದ ರಮೇಶ್ ಅವರ ಮೇಲೂ ಆನೆ ದಾಳಿ ನಡೆಸಿತ್ತು.
ಆನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ರಮೇಶ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಂಜಿತಾ ಅವರನ್ನು ನೆಲ್ಯಾಡಿ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.