Hamsalekha: ‘ಯಶ್ ಗಡ್ಡ ಮತ್ತು ಸ್ಯಾಂಡಲ್ವುಡ್ಗೆ ಕವಿದ ಕತ್ತಲು’ ನಾದಬ್ರಹ್ಮ ಹಂಸಲೇಖ ವಿವರಣೆ ಹೀಗಿದೆ
ನಾದಬ್ರಹ್ಮ ಹಂಸಲೇಖ ಕನ್ನಡ ಸಿನಿಮಾರಂಗದಲ್ಲಿನ ಇತ್ತೀಚಿನ ಕೆಲ ಬೆಳವಣಿಗೆ ಮತ್ತು ಬದಲಾವಣೆಗಳ ಬಗ್ಗೆ ಮಾತನಾಡಿದ್ದಾರೆ. ನಮ್ಮ ಕಾಲದಲ್ಲಿ ಹೀಗಿರಲಿಲ್ಲ ಎನ್ನುತ್ತ, ಈಗಿನ ದಾಡಿ ಬಿಡುವ ಸಂಪ್ರದಾಯದ ಬಗ್ಗೆಯೂ ಮಾತನಾಡಿ, ಸಿನಿಮಾಗಳಲ್ಲಿ ಕಲರ್ ಬ್ಲೆಂಡ್ ವಿಚಾರವನ್ನೂ ಹೇಳಿಕೊಂಡಿದ್ದಾರೆ.
Hamsalekha on Yash: ಸ್ಯಾಂಡಲ್ವುಡ್ನ ನಾದಬ್ರಹ್ಮ ಹಂಸಲೇಖ ರಿಯಾಲಿಟಿ ಶೋ ಬಿಟ್ಟರೆ, ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ತುಂಬ ಅಪರೂಪ. ಈ ನಡುವೆ ಸಿನಿಮಾವೊಂದರ ಸುದ್ಧಿಗೋಷ್ಠಿಗೆ ಆಗಮಿಸಿದ್ದ ಹಂಸಲೇಖ, ಇತ್ತೀಚಿನ ಚಿತ್ರರಂಗದಲ್ಲಿನ ಬದಲಾವಣೆಗಳ ಬಗ್ಗೆ ಮಾರ್ಮಿಕವಾಗಿ ಮಾತನಾಡಿದರು. ಸಿನಿಮಾಗಳಲ್ಲಿ ಹೆಚ್ಚಾಗುತ್ತಿರುವ ಕತ್ತಲು ಪ್ರಯೋಗ, ಗನ್ಗಳ ಬಳಕೆ ಮತ್ತು ದಾಡಿಯ ಬಗ್ಗೆಯೂ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹೇಳಿಕೊಂಡಿದ್ದಾರೆ.
ಟ್ರೆಂಡಿಂಗ್ ಸುದ್ದಿ
ಈ ಬಗ್ಗೆ ಮಾತನಾಡಿರುವ ಅವರು, "ಇಂಡಿಯಾದಲ್ಲಿ ದೊಡ್ಡ ದೊಡ್ಡ ಸಿನಿಮಾಗಳು, ದೊಡ್ಡ ದೊಡ್ಡ ಸ್ಟಾರ್ಗಳು, ದೊಡ್ಡ ಸಿನಿಮಾಗಳು ಕೈಯಲ್ಲಿ ಮಚ್ಚುಗಳನ್ನು ಬಿಟ್ಟಿಲ್ಲ. ದೊಡ್ಡ ದೊಡ್ಡ ರಿವಾಲ್ವರ್ಗಳು, ಎಕೆ 47 ಗಳನ್ನು ಬಿಟ್ಟಿಲ್ಲ. ಹಿಂಸೆಗೆ ಏನೇನೋ ಬೇಕೋ ಎಲ್ಲವನ್ನೂ ಮಾಡುತ್ತಿದ್ದಾರೆ. ವಿಚಿತ್ರವಾದ ಆಯುಧಗಳನ್ನು ತರುತ್ತಿದ್ದಾರೆ. ಎಲ್ಲರೂ ಮಚ್ಚುಗಳು, ಗನ್ನುಗಳಲ್ಲೇ ಹೊಡೆಯುತ್ತಿದ್ದಾರೆ. ಅಮರಶಿಲ್ಪಿ ಜಕಣಾಚಾರಿ ಚಿತ್ರ ಬರೋವರೆಗೂ ಇಡೀ ಕನ್ನಡ ನಾಡು ಈ ರೀತಿಯ ಬ್ಲ್ಯಾಕ್ & ವೈಟ್ ಸಿನಿಮಾಗಳನ್ನೇ ನೋಡುತ್ತಿತ್ತು. ಜೀವನದಲ್ಲಿ ಎಲ್ಲಿ ನೋಡಿದರೆ ಬಣ್ಣಗಳನ್ನು ನೋಡುತ್ತಿದ್ದ ಕಾಲದಲ್ಲಿ ಸಿನಿಮಾ ಥಿಯೇಟರ್ಗೆ ಹೋದ್ರೆ ಬರೀ ಕಪ್ಪು-ಬಿಳುಪು ಇದ್ದಿದ್ದು. ಯಾವ ಕಾಯಿಲೆ ಅದು.. ಕಲರ್ ಬ್ಲೆಂಡ್ ಅಂತೆ. ಚಿತ್ರಗಳನ್ನ ನಾವು ಕಲರ್ ಬ್ಲೆಂಡ್ನಲ್ಲೇ ನೋಡ್ತಿದ್ದೆವು. ಸುಮಾರು 40-45 ವರ್ಷಗಳ ಕಾಲ ಸಿನಿಮಾಗಳನ್ನು ಹಾಗೇ ನೋಡಿದ್ದೆವು. ಆಮೇಲೆ ಬಣ್ಣಗಳು ಬಂದಿದ್ದವು.
ಕಲಾರಂಗ ಕತ್ತಲಲ್ಲಿ..
ಮೊದಲ ಬಾರಿಗೆ ಬಣ್ಣದ ಸಿನಿಮಾಗಳು ಬಂದಾಗ ನಮಗೆ ಅವುಗಳು ಡಿಸ್ಟರ್ಬ್ ಮಾಡುತ್ತಿದ್ದವು. ಬ್ಲ್ಯಾಕ್ ಆಂಡ್ ವೈಟ್ ಸಿನಿಮಾಗಳೇ ಚೆನ್ನಾಗಿತ್ತು ಅನಿಸುತ್ತಿತ್ತು. ಬ್ಲ್ಯಾಕ್ ಆಂಡ್ ವೈಟ್ ಅನ್ನೋದು ಸತ್ಯ ಮತ್ತು ಸುಳ್ಳುಗಳನ್ನು ಪ್ರತಿಬಿಂಬಿಸುತ್ತಿತ್ತು. ನಮಗೆ ನಾಟಕ ಕೂಡ ಅದನ್ನೇ ಹೇಳುತ್ತಿತ್ತು. ಸಿನಿಮಾ ಕೂಡ ಅದನ್ನೇ ಹೇಳ್ತಿತ್ತು. ಅದಕ್ಕೆ ಅಭ್ಯಾಸವಾಗಿದ್ದೇವು. ಕಲರ್ ಬಂದ ಮೇಲೆ ಸ್ವಲ್ಪ ಬದಲಾಗಿತ್ತು. ಹೊರಗಡೆ ಬದುಕು ಕೂಡ ಹಾಗೆ ಇರ್ತಿತ್ತು. ಸಿನಿಮಾ ಕೂಡ ಹಂಗೇ ಇರ್ತಿತ್ತು. ಯಾವ ವ್ಯತ್ಯಾಸಗಳೂ ಇರ್ತಿರಲಿಲ್ಲ. ಆಮೇಲೆ ಟೆಕ್ನಾಲಜಿ ಬೆಳೆದು ಏನೋನೋ ಆದವು. ಈಗ ಯಾವ ಸಿನಿಮಾಗಳನ್ನೂ ಕೂಡ ಹೆಚ್ಚು ಬೆಳಕು ಇರೋದು ನೋಡಿದ್ದೀರಾ? ಬರೀ ಕತ್ತಲು. ಕಣ್ಣು, ದಾಡಿ, ಮೂಗು, ಕಿವಿ, ಕೈ, ರಕ್ತ.. ಇದು ಮಾತ್ರ ಕಾಣುತ್ತೆ. ಯಾರಿಗೂ ಬಣ್ಣಗಳೇ ಇಷ್ಟವಿಲ್ಲ. ಎಲ್ಲಾ ಕತ್ತಲಲ್ಲೇ ಮುಳುಗಿ ಹೋಗಿದ್ದೇವೆ. ಯಾವ ಸಿನಿಮಾ ಬೇಕಾದ್ರೂ ನೋಡಿ. ಮನುಷ್ಯ ಗೊತ್ತಿಲ್ಲದ ಹಾಗೆ ಕತ್ತಲ ಕಡೆ ಹೋಗ್ತಾ ಇದ್ದಾನೆ. ಕಲಾರಂಗಕ್ಕೆ ಕತ್ತಲು ಕವಿಯುತ್ತಿದೆ ಎನ್ನುವ ಅರ್ಥ ಇದು.
ಯಶ್ ದಾಡಿ ಬಗ್ಗೆ ಹಂಸಲೇಖ
ದಾಡಿ ಯಾಕೆ ಬಿಟ್ಟಿದ್ದೀಯಾ? ಕೆಜಿಎಫ್ ಎಫೆಕ್ಟ್. ಕನ್ನಡ ಸಿನಿಮಾದಲ್ಲಿ ಎಲ್ಲ ಕಡೆ ನೋಡಿ ಕ್ಯಾಮರಾಮೆನ್ ಕೂಡ ದಾಡಿ ಬಿಟ್ಟಿರ್ತಾನೆ. ಕೋರಿಯೋಗ್ರಾಫರ್, ಡೈರೆಕ್ಟರ್ ಕೊನೆಗೆ ಪ್ರೊಡ್ಯೂಸರ್ ಮೊದಲೇ ಗೊತ್ತಾಗಿ ಅವನು ಮೊದಲೇ ದಾಡಿ ಬಿಟ್ಟಿರ್ತಾನೆ. ಎಡಿಟರ್ ಕೂಡ ತಾನೇನು ಕಮ್ಮಿ ಅಂತಾ ಅವನೂ ದಾಡಿ ಬಿಟ್ಟಿರ್ತಾನೆ. ಮೊದಲೆಲ್ಲಾ ನಮ್ಮ ಮನೆಯಲ್ಲಿ ಬೈಯೋರು. ಏನಾದ್ರೂ ತಪ್ಪು ಮಾಡಿದ್ರೆ, 'ಏನಾಗಿದ್ಯೋ ನಿಂಗೆ ದಾಡಿ' ಅಂತಾ ಬೈಯ್ತಾ ಇದ್ರು. ಆದರೆ, ಈಗ ಇಡೀ ಇಂಡಸ್ಟ್ರಿಯೇ ದಾಡಿಯೇ ಬಿಡುತ್ತಿದೆ. ನನಗೆ ಈ ಸಿನಿಮಾದ ಹೀರೋ ಹೆಸರು ಅಜಿತ್ ಅಂತಾ ಗೊತ್ತಿತ್ತು. ಯಾವಾಗ ಯಶ್ಜೀತ್ ಆಯ್ತು ಅಂತಾ ಗೊತ್ತಿಲ್ಲ. ಯಶ್ ಸ್ಟಾರ್ ಆದ ಮೇಲೆ ಹೆಸರು ಬದಲಿಸಿಕೊಂಡಿರ್ಬೇಕು ಅಂತಾ ಹಂಸಲೇಖ ಹೇಳಿದ್ದಾರೆ.
ಕಥೆ ಮೇಲೆ ನಂಬಿಕೆ ಇರಲಿ, ಸ್ಟಾರ್ಗಳ ಮೇಲಲ್ಲ..
ಡೈರೆಕ್ಟರ್ಗೆ ಕಮಾಂಡ್ ಇರಬೇಕೆಂದರೆ, ಆತನ ಸಿನಿಮಾದ ಕಥೆ ಗಟ್ಟಿಯಾಗಿರಬೇಕು. ಗಟ್ಟಿಯಾದ ಕಥೆಗಳನ್ನ ಯಾವ ನಿರ್ದೇಶಕ ಇಟ್ಟುಕೊಂಡಿರ್ತಾನೋ, ಅವನಿಗೆ ತನ್ನ ಕೆಲಸದ ಮೇಲೆ ಕಮಾಂಡ್ ಇರುತ್ತೆ. ಯಾವ ಸೂಪರ್ ಸ್ಟಾರ್ನ ಆತನ ಸಿನಿಮಾಕ್ಕೆ ಹಾಕಿಕೊಂಡ್ರೂ ಆ ಕಥೆಯೇ ಅವನನ್ನು ನಿರ್ದೇಶಿಸುತ್ತೆ. ಗೌರವ ಬರುತ್ತೆ. ಅದೇ ಕಾರಣಕ್ಕಾಗಿ ಹಾಲಿವುಡ್ನಲ್ಲಿ ಒಂದು ದೊಡ್ಡ ಬೋರ್ಡ್ ಹಾಕಿದ್ದಾರೆ. ಡೋಂಟ್ ಟ್ರಸ್ಟ್ ದ ಸ್ಟಾರ್ಸ್, ಟ್ರಸ್ಟ್ ದ ಟೇಲ್ ಅಂತಾ ದೊಡ್ಡ ಬೋರ್ಡ್ ಹಾಕಿದ್ದಾರೆ. ಅಂದರೆ, ಕಥೆಯನ್ನು ನಂಬಿ, ಸೂಪರ್ ಸ್ಟಾರ್ಗಳನ್ನು ನಂಬಬೇಡಿ" ಎಂದು ಮಾತು ಮುಗಿಸಿದ್ದಾರೆ ಹಂಸಲೇಖ.