ಕನ್ನಡ ಸುದ್ದಿ  /  ಕರ್ನಾಟಕ  /  ಗೋವಾದಲ್ಲಿ ಪತ್ತೆಯಾಗಿದ್ದ ಕನ್ನಡ ಶಾಸನದ ಅಧ್ಯಯನ, ತಳಾರ ನೇವಯ್ಯನ ಮಗನ ಶೌರ್ಯ ಸಾಹಸ ವೀರಮರಣದ ಕಥೆಯಿದು

ಗೋವಾದಲ್ಲಿ ಪತ್ತೆಯಾಗಿದ್ದ ಕನ್ನಡ ಶಾಸನದ ಅಧ್ಯಯನ, ತಳಾರ ನೇವಯ್ಯನ ಮಗನ ಶೌರ್ಯ ಸಾಹಸ ವೀರಮರಣದ ಕಥೆಯಿದು

ಗೋವಾದ ಕಾಕೋಡದಲ್ಲಿರುವ ಮಹಾದೇವ ದೇವಾಲಯದ ಆವರಣದಲ್ಲಿ ಕೆಲವು ದಿನಗಳ ಹಿಂದೆ ಪತ್ತೆಯಾಗಿದ್ದ ದ್ವಿಭಾಷಾ ಶಾಸನವನ್ನು ಉಡುಪಿಯ ಸಂಶೋಧಕರಾದ ಪ್ರೊ.ಟಿ.ಮುರುಗೇಶಿ ಅಧ್ಯಯನ ನಡೆಸಿದ್ದಾರೆ. ಳಾರ ನೇವಯ್ಯ ಎಂಬುವನು ತನ್ನ ಮಗ ಗುಂಡಯ್ಯನ ಶೌರ್ಯ ಸಾಹಸವನ್ನು ದುಃಖದಿಂದ ಕೊಂಡಾಡುತ್ತಾ ಸ್ಥಾಪಿಸಿದ್ದ ಶಾಸನ ಇದಾಗಿದೆ ಎಂದು ಅವರು ಹೇಳಿದ್ದಾರೆ.

ಗೋವಾದಲ್ಲಿ ಪತ್ತೆಯಾಗಿದ್ದ ಕನ್ನಡ ಶಾಸನದ ಅಧ್ಯಯನ
ಗೋವಾದಲ್ಲಿ ಪತ್ತೆಯಾಗಿದ್ದ ಕನ್ನಡ ಶಾಸನದ ಅಧ್ಯಯನ

ಉಡುಪಿ: ಗೋವಾದ ಕಾಕೋಡದಲ್ಲಿರುವ ಮಹಾದೇವ ದೇವಾಲಯದ ಆವರಣದಲ್ಲಿ ಕಂಡುಬಂದ ಒಂದು ಪ್ರಾಚೀನ ಅಪ್ರಕಟಿತ ಕನ್ನಡ ಶಾಸನವನ್ನು ಗೋವಾದ ಪರಿಸರ ಆಂದೋಲನದ ಹೋರಾಟಗಾರ ಡಾ.ರಾಜೇಂದ್ರ ಕೇರ್ಕರ್ ಗಮನಕ್ಕೆ ತಂದಿದ್ದು, ಇದೊಂದು ಅಪರೂಪದ ಶಾಸನವಾಗಿದ್ದು, ಸಂಶೋಧನೆ ಬಹಳಷ್ಟು ಸಹಕಾರಿಯಾಗಿದೆ ಎಂದು ಸಂಶೋಧಕ ಪ್ರೊ.ಟಿ.ಮುರುಗೇಶಿ. ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮಗನ ಶೌರ್ಯ ಕೊಂಡಾಡಿದ ತಂದೆ

ಇದು ಆಯತಾಕಾರದ ಶಿಲೆಯ ಮೇಲೆ ಕನ್ನಡ ಭಾಷೆ ಮತ್ತು ಲಿಪಿ ಹಾಗೂ ಸಂಸ್ಕೃತ ಭಾಷೆ ಮತ್ತು ನಾಗರಿ ಲಿಪಿಯಲ್ಲಿ ಬರೆಯಲಾದ ದ್ವಿಭಾಷಾ ಶಾಸನವಾಗಿದೆ. ಶಾಸನ ಸ್ವಸ್ತಿಶ್ರೀ ಎಂಬ ಮಂಗಲವಾಚಕ ಪದದೊಂದಿಗೆ ಆರಂಭವಾಗಿದೆ. ಗೋವಾದಲ್ಲಿನ ಒಂದು ಮಂಡಲದ ಆಳ್ವಿಕೆಯನ್ನು ನಡೆಸುತ್ತಿದ್ದ, ತಳಾರ ನೇವಯ್ಯ ಎಂಬುವನು ತನ್ನ ಮಗ ಗುಂಡಯ್ಯನ ಶೌರ್ಯ ಸಾಹಸವನ್ನು ದುಃಖದಿಂದ ಕೊಂಡಾಡುತ್ತಾ, ತನ್ನ ಆಸೆಯನ್ನು ಈಡೇರಿಸುವ ಪ್ರತಿಜ್ಙೆ ಮಾಡಿ, ಬಂದರು ನಗರ ಗೋಪುರವನ್ನು (ಈಗಿನ ಗೋವಾ) ವಶಪಡಿಸಿಕೊಂಡು, ತನ್ನ ತಂದೆಯ ಆಸೆಯನ್ನು ಈಡೇರಿಸಿ ವೀರಮರಣವನ್ನು ಹೊಂದಿದ. ಮೃತ ಗುಂಡಯ್ಯನ ವೀರಸ್ಮಾರಕವಾಗಿ ನೇವಯ್ಯನು ಈ ವೀರಶಾಸನವನ್ನು ಕಾಕೋಡದ ಮಹಾದೇವಾಲಯದ ಆವರಣದಲ್ಲಿ ನಿಲ್ಲಿಸಿದ ಸಂಗತಿಯನ್ನು ಶಾಸನದಲ್ಲಿ ದಾಖಲಿಸಲಾಗಿದೆ ಎಂದು ಪ್ರೊ. ಮುರುಗೇಶಿ ತಿಳಿಸಿದ್ದಾರೆ.

ಶಾಸನದ ಮಹತ್ವ

ಶಾಸನದ ಪಠ್ಯ
ಶಾಸನದ ಪಠ್ಯ

ಶಾಸನವನ್ನು 10 ನೇ ಶತಮಾನದ ಲಿಪಿಯಲ್ಲಿ ಬರೆಯಲಾಗಿದೆ. ಶಾಸನದಲ್ಲಿ ಯಾವುದೇ ರಾಜಮನೆತನ ಹಾಗೂ ಕಾಲದ ಉಲ್ಲೇಖ ಕಂಡುಬರುವುದಿಲ್ಲ. ಕರ್ನಾಟಕದ ಕದಂಬರು, ಕಲ್ಯಾಣ ಚಾಲುಕ್ಯ ಚಕ್ರವರ್ತಿ ಎರಡನೇ ತೈಲಪನಿಗೆ ರಾಷ್ಟ್ರಕೂಟರನ್ನು ಪದಚ್ಯುತಗೊಳಿಸುವಲ್ಲಿ ನೆರವಾಗಿದ್ದರು. ಆದ್ದರಿಂದ ಕಲ್ಯಾಣ ಚಾಲುಕ್ಯ ಚಕ್ರವರ್ತಿ ಎರಡನೇ ತೈಲಪನು ಕದಂಬ ರಾಜಮನೆತನದ ಶಾಸ್ತದೇವನನ್ನು ಗೋವಾದ ಮಹಾಮಂಡಲೇಶ್ವರನೆಂದು ನೇಮಿಸಿದನು. ಗೋವಾದ ಶಿಲಾಹಾರರಿಂದ ಚಂದಾವರವನ್ನು ವಶಪಡಿಸಿಕೊಂಡ ಕದಂಬ ಶಾಸ್ತದೇವನು ಕ್ರಿ.ಶ. 960 ರಲ್ಲಿ ಗೋವಾದ ಚಂದಾವರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು, ಗೋವಾದಲ್ಲಿ ಸ್ವತಂತ್ರ ಕದಂಬ ರಾಜಮನೆತನದ ಆಳ್ವಿಕೆಯನ್ನು ಆರಂಭಿಸಿದನು. ನಂತರ ಬಂದರು ನಗರ ಗೋಪುರಪಟ್ಟಣವನ್ನು ವಶಪಡಿಸಿಕೊಂಡು ಸಂಪೂರ್ಣ ದಕ್ಷಿಣ ಗೋವಾದ ಮೇಲೆ ತನ್ನ ಅಧಿಪತ್ಯವನ್ನು ಸ್ಥಾಪಿಸಿದನು.

ಶಾಸನದಲ್ಲಿ ಗೋಪುರಪಟ್ಟಣವನ್ನು ಗೆದ್ದ ಗುಂಡಯ್ಯನ ಸಾಹಸವನ್ನು ನೆನೆಯಲಾಗಿದೆ. ಮೃತ ಗುಂಡಯ್ಯನ ತಂದೆಯನ್ನು ತಳಾರ ನೇವಯ್ಯನೆಂದು ವರ್ಣಿಸಲಾಗಿದೆ. ತಳಾರ ಎಂದರೆ ಸೇವಕ ಎಂಬ ಅರ್ಥವಿದೆ. ಆದ್ದರಿಂದ ಶಾಸನೋಕ್ತ ತಳಾರ ನೇವಯ್ಯನು ಗೋವಾ ಕದಂಬರ ಸಾಮಂತನಾಗಿ ಒಂದು ಮಂಡಲದ ಅಧಿಪತಿಯಾಗಿ ಆಳ್ವಕೆ ನಡೆಸುತ್ತಿದ್ದ ಎಂದೂ, ಕದಂಬ ಶಾಸ್ತದೇವನ ಗೋಪುರಪಟ್ಟಣದ ಮೇಲಿನ ದಾಳಿಯಲ್ಲಿ ನೇವಯ್ಯನ ಆಸೆಯಂತೆ ಆತನ ಮಗ ಗುಂಡಯ್ಯ ಭಾಗವಹಿಸಿ ಗೋಪುರಪಟ್ಟಣವನ್ನು ಗೆದ್ದು ವೀರಮರಣ ಹೊಂದಿದ ಎಂದು ಭಾವಿಸಬಹುದಾಗಿದೆ. ಗೋವಾ ಕದಂಬರ ಆಳ್ವಕೆಯ ಆರಂಭಿಕ ಕಾಲದ ಲಿಪಿಲಕ್ಷಣವನ್ನು ಶಾಸನದ ಲಿಪಿಗಳು ಸಂಪೂರ್ಣವಾಗಿ ಹೋಲುವುದರಿಂದ ಶಾಸನದ ಕಾಲವನ್ನು ಕ್ರಿ.ಶ. ೧೦ ನೇ ಶತಮಾನದ ಶಾಸನವೆಂದು ನಿರ್ಧರಿಸಲಾಗಿದೆ.

ಶಾಸನದ ಪಠ್ಯ

ಈ ಶಾಸನದ ಪಠ್ಯವನ್ನು ಸಿದ್ಧಪಡಿಸುವಲ್ಲಿ, ಸಂಶೋಧಿಸುವಲ್ಲಿ ಹಾಗೂ ಅರ್ಥೈಸುವಲ್ಲಿ ಮೈಸೂರಿನ ಭಾರತೀಯ ಪುರಾತತ್ವ್ವ ಸರ್ವೇಕ್ಷಣಾ ಇಲಾಖೆಯ ಶಾಸನಶಾಸ್ತ್ರ ವಿಭಾಗದ ನಿರ್ದೇಕರಾದ ಡಾ. ಮುನಿರತ್ನ ರೆಡ್ಡಿ, ಡಾ. ನಾಗರಾಜಪ್ಪ ಮತ್ತು ಆರ್‍ಕೆ ಮಣಿಪಾಲ್ ಇವರ ಸಹಕಾರವನ್ನು ಪಡೆಯಲಾಗಿದೆ ಎಂದು ಪ್ರೊ.ಮುರುಗೇಶಿ ತಿಳಿಸಿದ್ದಾರೆ.

ವರದಿ: ಹರೀಶ್‌ ಮಾಂಬಾಡಿ

IPL_Entry_Point

ವಿಭಾಗ