ಇದು ನಾಚಿಕೆಗೇಡು, ಅಸಹ್ಯ ಮತ್ತು ಅನೈತಿಕ; ಸುಧಾ ಮೂರ್ತಿ ಬಗ್ಗೆ ಚೇತನ್ ಅಹಿಂಸಾ ಕಾಮೆಂಟ್
Aug 29, 2023 11:37 AM IST
Chetan Ahimsa: ಇದು ನಾಚಿಕೆಗೇಡು, ಅಸಹ್ಯ ಮತ್ತು ಅನೈತಿಕ; ಸುಧಾ ಮೂರ್ತಿ ಬಗ್ಗೆ ಚೇತನ್ ಅಹಿಂಸಾ ಕಾಮೆಂಟ್
- ಸುಧಾಮೂರ್ತಿ ಮತ್ತವರ ಅಳಿಯ ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಬಗ್ಗೆ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಮಾತನಾಡಿದ್ದಾರೆ. ಎರಡೂ ದೇಶಗಳ ನಡುವಿನ ವ್ಯವಹಾರ ಎಂಥದ್ದು ಎಂಬುದನ್ನು ತಮ್ಮದೇ ರೀತಿಯಲ್ಲಿ ಹೇಳಿಕೊಂಡಿದ್ದಾರೆ.
Chetan Ahimsa: ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಸೋಷಿಯಲ್ ಮೀಡಿಯಾದಲ್ಲಿ ಸದಾ ಒಂದಿಲ್ಲೊಂದು ಪೋಸ್ಟ್ಗಳ ಮೂಲಕವೇ ಸದ್ದು ಮಾಡುತ್ತಿರುತ್ತಾರೆ. ಪರ ವಿರೋಏಧ ಚರ್ಚೆಗೂ ಮುನ್ನುಡಿ ಬರೆಯುತ್ತಿರುತ್ತಾರೆ. ಅನಿಸಿದ್ದನ್ನು ನೇರವಾಗಿ ಹೇಳಿಕೊಳ್ಳುವ ಮೂಲಕ ಜಾಲತಾಣದಲ್ಲಿ ಕಿಚ್ಚು ಹಚ್ಚುತ್ತಿರುತ್ತಾರೆ. ಇದೀಗ ಮತ್ತೊಮ್ಮೆ ಸುಧಾಮೂರ್ತಿ ಅವರ ಬಗ್ಗೆ ಮಾತನಾಡಿದ್ದಾರೆ ಚೇತನ್.
ಸಿನಿಮಾಗಳಿಂದ ದೂರವೇ ಉಳಿದಿರುವ ಚೇತನ್ ಸದ್ಯ ಪೂರ್ಣ ಪ್ರಮಾಣದಲ್ಲಿ ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಾಮಾಜಿಕ ಕಳಕಳಿಯ ಕೆಲಸಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಈ ನಡುವೆ ಇನ್ಫೋಸಿಸ್ನ ಸುಧಾಮೂರ್ತಿ ಮತ್ತವರ ಕುಟುಂಬದ ಬಗ್ಗೆ ಮತ್ತೆ ಮಾತನಾಡಿದ್ದಾರೆ. ಈ ಹಿಂದೆ ಸಸ್ಯಾಹಾರ, ಮಾಂಸಾಹಾರದ ಬಗ್ಗೆ ತಮ್ಮ ಅನಿಸಿಕೆ ಹೇಳಿದ್ದ ಸುಧಾಮೂರ್ತಿ ಅವರಿಗೆ ಪರೋಕ್ಷವಾಗಿ ತಿವಿದಿದ್ದ ಚೇತನ್, ಈ ಸಲ ಈ ಕುಟುಂಬದ ಬಗ್ಗೆ ಮಾತನಾಡಿದ್ದಾರೆ.
ಇದು ನಾಚಿಕೆಗೇಡಿನ ಕೆಲಸ ಎಂದ ಚೇತನ್
ಇಂಗ್ಲೆಂಡ್ನ ಪ್ರಧಾನಿ ರಿಷಿ ಸುನಕ್, ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿಯವರ ಅಳಿಯ. ಅಂದರೆ ಅಕ್ಷತಾ ಅವರ ಪತಿ. ಇದೀಗ ಭಾರತ ಮತ್ತು ಇಂಗ್ಲೆಂಡ್ ನಡುವಣ ಏರ್ಪಡುತ್ತಿರುವ ವ್ಯಾವಹಾರಿಕ ಸಂಬಂಧದ ಬಗ್ಗೆ ಚೇತನ್ ಮಾತನಾಡಿದ್ದಾರೆ. ಅವರ ಸೋಷಿಯಲ್ ಮೀಡಿಯಾ ಹೇಳಿಕೆ ಈ ರೀತಿ ಇದೆ.
"ಭಾರತ ಮತ್ತು ಯುಕೆ ಪ್ರಸ್ತುತ ಅಂತರರಾಷ್ಟ್ರೀಯ ವ್ಯಾಪಾರ ಒಪ್ಪಂದದ ಮಾತುಕತೆ ನಡೆಸುತ್ತಿವೆ. ಯುಕೆ ಪ್ರಧಾನಿಯವರ ಪತ್ನಿ ಅಕ್ಷತಾ ಅವರು (ನಾರಾಯಣ ಮತ್ತು ಸುಧಾ ಮೂರ್ತಿಯವರ ಪುತ್ರಿ) ಇನ್ಫೋಸಿಸ್ನಲ್ಲಿ 5,000 ಕೋಟಿ ರೂಪಾಯಿ ಷೇರುಗಳನ್ನು ಹೊಂದಿರುವುದರಿಂದ ಯುಕೆ ಪ್ರಧಾನಿ ರಿಷಿ ಸುನಕ್ ಅವರ ಕುಟುಂಬವು ಈ ವ್ಯಾಪಾರ ಒಪ್ಪಂದದಿಂದ ಶೀಘ್ರವಾಗಿ ಪ್ರಯೋಜನ ಪಡೆಯಲಿದೆ. ಇಂತಹ ನಾಚಿಕೆಗೇಡಿನ ಕ್ರೋನಿ ಕ್ಯಾಪಿಟಲಿಸಂ ಸ್ವೀಕಾರಾರ್ಹವಲ್ಲ, ಇದು ಅನೈತಿಕ ಮತ್ತು ಅಸಹ್ಯಕರವಾಗಿದೆ" ಎಂದು ಹೇಳಿಕೊಂಡಿದ್ದಾರೆ.
ಸಸ್ಯಾಹಾರ ಬಗ್ಗೆಯೂ ಚೇತನ್ ಕಾಮೆಂಟ್..
ಇತ್ತೀಚೆಗಷ್ಟೇ ಸಸ್ಯಾಹಾರ ಮತ್ತು ಮಾಂಸಾಹಾರಕ್ಕೆ ಕುರಿತಾಗಿ ಸುಧಾ ಮೂರ್ತಿ ಅವರು ತಮ್ಮ ಹೇಳಿಕೆ ನೀಡಿದ್ದರು. ಅವರ ಆ ವಿಚಾರ ಕೆಲವರನ್ನು ತೀವ್ರ ಕೆರಳಿಸುವಂತೆ ಮಾಡಿತ್ತು. ಇತ್ತೀಚೆಗೆ ಯೂಟ್ಯೂಬ್ಗೆ ನೀಡಿದ ಸಂದರ್ಶನಲ್ಲಿ ಮಾತನಾಡಿದ್ದ ಸುಧಾ ಮೂರ್ತಿ, "ನಾನು ಶುದ್ಧ ಸಸ್ಯಾಹಾರಿ. ಅದ್ಯಾವ ಮಟ್ಟಿಗೆ ಎಂದರೆ, ನಾನು ಮೊಟ್ಟೆ ಮತ್ತು ಬೆಳ್ಳುಳ್ಳಿಯನ್ನೂ ತಿನ್ನುವುದಿಲ್ಲ ಎಂದಿದ್ದರು.
ಇವರ ಈ ಮಾತಿಗೆ ಪ್ರತಿಕ್ರಿಯಿಸಿದ್ದ ಚೇತನ್, "ಸುಧಾ ಮೂರ್ತಿಯವರು ನಮ್ಮ ಬ್ರಾಹ್ಮಣ್ಯ- ಬಂಡವಾಳಶಾಹಿ ಸಮಾಜದಿಂದ ಅತಿಯಾದ ಬಿಲ್ಡಪ್ನಿಂದ ಗುರುತಿಸಲ್ಪಟ್ಟ ಮತ್ತು ಅನರ್ಹವಾಗಿ ಗೌರವಿಸಲ್ಪಟ್ಟ ಸಾರ್ವಜನಿಕ ವ್ಯಕ್ತಿ. ಅವರು ತನ್ನ ಸೀಮಿತ, ಮಡಿವಂತಿಕೆಯ ಚಿಂತನೆಯನ್ನು ಬಹಿರಂಗಪಡಿಸುವ ಹೇಳಿಕೆಗಳನ್ನು ನಿರಂತರವಾಗಿ ಮಾಡುತ್ತಾರೆ. ಸುಧಾ ಮೂರ್ತಿಯವರು ಹೆಚ್ಚು ಮಾತನಾಡಬೇಕು. ಅವರ ಆಸ್ತಿ ಜಗದಗಲ, ತಿಳುವಳಿಕೆ ಚಮಚದಗಲ' ಎಂದು ಲೇವಡಿ ಮಾಡಿದ್ದರು.