Chetan Ahimsa: ಇದೆಲ್ಲ ನೋಡಿದ್ರೆ ರಜನಿಕಾಂತ್ ಸಂಘಿ ಅನ್ಸಲ್ವಾ? ಸೂಪರ್ಸ್ಟಾರ್ಗೂ ಟಕ್ಕರ್ ಕೊಟ್ಟ ಚೇತನ್ ಅಹಿಂಸಾ
Jan 30, 2024 03:02 PM IST
ಇದೆಲ್ಲ ನೋಡಿದ್ರೆ ರಜಿನಿಕಾಂತ್ ಸಂಘಿ ಅನ್ಸಲ್ವಾ? ಸೂಪರ್ಸ್ಟಾರ್ಗೂ ಟಕ್ಕರ್ ಕೊಟ್ಟ ಚೇತನ್ ಅಹಿಂಸಾ; ಲಾಲ್ ಸಲಾಮ್ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಹೊತ್ತಿದ ಸಂಘಿ ವಿವಾದ,
- ಐಶ್ವರ್ಯಾ ರಜನಿಕಾಂತ್ ನಿರ್ದೇಶನದ ಲಾಲ್ ಸಲಾಮ್ ಚಿತ್ರವೀಗ ಸಂಘಿ ವಿಚಾರವಾಗಿ ಸದ್ದು ಮಾಡುತ್ತಿದೆ. ರಜನಿ ಓರ್ವ ಸಂಘಿ ಎನ್ನುತ್ತಿರುವವರ ಬಗ್ಗೆ ಐಶ್ವರ್ಯಾ ಮೊನ್ನೆಯಷ್ಟೇ ಉತ್ತರ ನೀಡಿದ್ದರು. ಈಗ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಸಹ ರಜನಿಕಾಂತ್ ಓರ್ವ ಸಂಘಿ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ. ಲಾಲ್ ಸಲಾಮ್ ಚಿತ್ರ ಫೆಬ್ರವರಿ 9ಕ್ಕೆ ಬಿಡುಗಡೆ ಆಗಲಿದೆ.
Chetan Ahimsa: ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧಗಳಿಗೆ ಆಗಾಗ ತಮ್ಮ ಕಾಮೆಂಟ್ ಅನ್ನೋ ಬಾಣ ಪ್ರಯೋಗಿಸುವ ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಇದೀಗ ‘ಸಂಘಿ’ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಇದೇ ‘ಸಂಘಿ’ ಹೇಳಿಕೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಆ ಹೇಳಿಕೆಯನ್ನೇ ಗಮನದಲ್ಲಿರಿಸಿಕೊಂಡು, ಸೂಪರ್ ಸ್ಟಾರ್ ರಜನಿಕಾಂತ್ಗೆ ಟಕ್ಕರ್ ಕೊಟ್ಟಿದ್ದಾರೆ ಚೇತನ್ ಅಹಿಂಸಾ.
ಎರಡು ದಿನಗಳ ಹಿಂದಷ್ಟೇ ರಜಿನಿ ಪುತ್ರಿ ಐಶ್ವರ್ಯಾ ರಜನಿಕಾಂತ್ ನಿರ್ದೇಶನದ ಲಾಲ್ ಸಲಾಮ್ ಸಿನಿಮಾದ ಆಡಿಯೋ ಬಿಡುಗಡೆ ಆಗಿತ್ತು. ಆ ಆಡಿಯೋ ಬಿಡುಗಡೆಯಲ್ಲಿ ರಜನಿಕಾಂತ್ ಓರ್ವ ಸಂಘಿ ಎಂಬ ವಿಚಾರವೂ ಮುನ್ನೆಲೆಗೆ ಬಂದಿತ್ತು. ಅದಕ್ಕೆ ವೇದಿಕೆ ಮೇಲೆಯೇ ಉತ್ತರ ನೀಡಿದ್ದ ಐಶ್ವರ್ಯಾ, ನನ್ನಪ್ಪ ಸಂಘಿ ಅಲ್ಲ. ಅವರ ಸರ್ವಧರ್ಮವನ್ನು ಸಮನಾಗಿಯೇ ನೋಡುವ ವ್ಯಕ್ತಿ ಎಂದಿದ್ದರು. ಅವರ ಹೇಳಿಕೆಯ ಪೂರ್ತಿ ಇಲ್ಲಿದೆ.
ಐಶ್ವರ್ಯಾ ರಜನಿಕಾಂತ್ ಹೇಳಿದ್ದೇನು?
"ನಾನು ಸಾಮಾನ್ಯವಾಗಿ ಸೋಷಿಯಲ್ ಮೀಡಿಯಾದಿಂದ ದೂರವಿರುತ್ತೇನೆ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಏನೆಲ್ಲ ಚರ್ಚೆ ಆಗುತ್ತಿದೆ ಎಂಬ ಬಗ್ಗೆ ನನಗೆ ನನ್ನ ತಂಡ ತಿಳಿಸುತ್ತಲೇ ಇರುತ್ತದೆ. ನಾವೂ ಮನುಷ್ಯರೇ, ಅದರಲ್ಲೂ ಸಂಘಿ ಎಂಬ ವಿಚಾರವೂ ನನ್ನ ಗಮನಕ್ಕೆ ಬಂದಿತ್ತು. ಅಂಥವರನ್ನು ಕಂಡರೆ ನನಗೆ ಕೋಪ ಬರುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಅನೇಕರು ನನ್ನ ತಂದೆಯನ್ನು ಸಂಘಿ ಎಂದು ಕರೆಯುತ್ತಿದ್ದಾರೆ. ಅದರ ಅರ್ಥವೇನೆಂದು ನನಗೆ ತಿಳಿದಿರಲಿಲ್ಲ.
ಸಂಘಿ ಎಂದರೆ ಏನು ಎಂದು ನಾನು ಕೆಲವರನ್ನು ಕೇಳಿದೆ. ಆಗ ಅವರು ಒಂದು ನಿರ್ದಿಷ್ಟ ರಾಜಕೀಯ ಪಕ್ಷವನ್ನು ಬೆಂಬಲಿಸುವವರನ್ನು ಸಂಘಿ ಎಂದು ಕರೆಯುತ್ತಾರೆ ಎಂದರು. ಈ ಮೂಲಕ ನಾನು ಇನ್ನೊಂದು ವಿಚಾರ ಹೇಳುವುದೇನೆಂದರೆ, ರಜಿನಿಕಾಂತ್ ಸಂಘಿ ಅಲ್ಲ. ಒಂದು ವೇಳೆ ಅವರು ಸಂಘಿ ಆಗಿದ್ದರೆ, ಲಾಲ್ ಸಲಾಮ್ ಸಿನಿಮಾ ಮಾಡುತ್ತಿರಲಿಲ್ಲ" ಎಂದಿದ್ದಾರೆ ಐಶ್ವರ್ಯಾ.
ಚೇತನ್ ಅಹಿಂಸಾ ಹೇಳುವುದೇನು?
ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಪ್ರತಿಕ್ರಿಯೆ ನೀಡಿದ್ದಾರೆ. "ನಟ ರಜನಿಕಾಂತ್ ಅವರ ಮಗಳು ತನ್ನ ತಂದೆ 'ಸಂಘಿ ಅಲ್ಲ' ಎಂದು ಹೇಳಿದ್ದಾರೆ; ಅಲ್ಲದೆ, ಆಕೆಯ 'ಲಾಲ್ ಸಲಾಮ್' ಚಿತ್ರದಲ್ಲಿ ರಜನಿಕಾಂತ್ ನಟನೆ ಮಾಡುತ್ತಿರುವುದು ಅವರು ಸಂಘಿ ಅಲ್ಲ ಅನ್ನೋದನ್ನ ಸಾಬೀತುಪಡಿಸುತ್ತದೆ ಎಂದು ಹೇಳಿದ್ದಾರೆ.
ಮನವರಿಕೆಯಾಗುವುದಿಲ್ಲ. ರಜನಿಕಾಂತ್ ಅವರು 2014, 2017, 2019, 2021ರಲ್ಲಿ ಹೀಗೆ ಹಲವು ಬಾರಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ವೈಭವೀಕರಿಸಿದ್ದರು. ಅವರು 2023 ಮತ್ತು 2024 ರಲ್ಲಿ ರಾಮ ಮಂದಿರಕ್ಕೆ (ಅಯೋಧ್ಯೆ) ಹಾಜರಾಗಿದ್ದರು. ಇದು ಸಂಘಿಯಂತೆ ಕಾಣುತ್ತದೆ.
ಅಲ್ಲದೇ, ನಟರು ಹಣಕ್ಕಾಗಿ ಮತ್ತು ಕೆಲಸಕ್ಕಾಗಿ ಚಲನಚಿತ್ರಗಳನ್ನು ಮಾಡುತ್ತಾರೆ. ರಜನಿಕಾಂತ್ಗೆ ತೆರೆಯ ಮೇಲಿನ ಸಿದ್ಧಾಂತವು ಎಂದಾದರೂ ಮುಖ್ಯವಾಗಿದೆಯೇ?" ಎಂದು ಪ್ರಶ್ನಿಸಿದ್ದಾರೆ.
ಫೆಬ್ರವರಿಯಲ್ಲಿ ಲಾಲ್ ಸಲಾಮ್
ಐಶ್ವರ್ಯಾ ರಜನಿಕಾಂತ್ ನಿರ್ದೇಶನದಲ್ಲಿ ಮೂಡಿಬಂದಿರುವ ಲಾಲ್ ಸಲಾಮ್ ಸಿನಿಮಾ ಫೆಬ್ರವರಿ 9ರಂದು ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ಮೊಯ್ದೀನ್ ಭಾಯ್ ಪಾತ್ರದಲ್ಲಿ ರಜನಿಕಾಂತ್ ನಟಿಸಿದ್ದಾರೆ. ಇನ್ನುಳಿದಂತೆ ವಿಕ್ರಾಂತ್ ಮತ್ತು ವಿಷ್ಣು ವಿಶಾಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸುಭಾಸ್ಕರನ್ ಅಲಿರಾಜಾ ಈ ಸಿನಿಮಾ ನಿರ್ಮಾಣ ಮಾಡಿದ್ದು, ಎ.ಆರ್. ರೆಹಮಾನ್ ಸಂಗೀತ ನೀಡಿದ್ದಾರೆ. ವಿಷ್ಣು ರಂಗಸ್ವಾಮಿ ಈ ಚಿತ್ರಕ್ಕೆ ಕಥೆ ಬರೆದಿದ್ದು, ಸಂಭಾಷಣೆಯಲ್ಲೂ ಐಶ್ವರ್ಯಾ ರಜನಿಕಾಂತ್ ಸಾಥ್ ನೀಡಿದ್ದಾರೆ.