Sapthami Gowda: ಕರುನಾಡಲ್ಲಿ ಚಿತ್ರನಿರ್ಮಾಣ ಸಂಸ್ಥೆ ತೆರೆದ ಮಲಯಾಳಿ ನಿರ್ಮಾಪಕ; ಸಪ್ತಮಿ ಗೌಡ, ಶರಣ್ ಅವರಿಂದ ಉದ್ಘಾಟನೆ
Mar 11, 2023 01:36 PM IST
ಕರುನಾಡಲ್ಲಿ ಚಿತ್ರನಿರ್ಮಾಣ ಸಂಸ್ಥೆ ತೆರೆದ ಮಲಯಾಳಿ ನಿರ್ಮಾಪಕ; ಸಪ್ತಮಿ ಗೌಡ, ಶರಣ್ ಅವರಿಂದ ಉದ್ಘಾಟನೆ
- ನೂತನ ಚಿತ್ರ ನಿರ್ಮಾಣ ಸಂಸ್ಥೆಯ ಉದ್ಘಾಟನೆ ನೆರವೇರಸಿದ ನಟ ಶರಣ್ ಮತ್ತು ನಟಿ ಸಪ್ತಮಿ ಗೌಡ
Sapthami Gowda: ಕನ್ನಡ ಸಿನಿಮಾಗಳೀಗ ಕೇವಲ ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲಿಯೇ ಸದ್ದು ಮಾಡುತ್ತಿವೆ. ವಿದೇಶಗಳಲ್ಲಿಯೂ ಹವಾ ಕ್ರಿಯೇಟ್ ಮಾಡಿವೆ. ಗಳಿಕೆ ವಿಚಾರದಲ್ಲಿ ಸಾವಿರ ಕೋಟಿ ಕಲೆಕ್ಷನ್ ಮಾಡಿದ ಕೆಜಿಎಫ್ ಒಂದೆಡೆಯಾದರೆ, ಇನ್ನೇನು ಬಿಡುಗಡೆಗೆ ಸಿದ್ಧವಾಗಿರುವ ಕಬ್ಜ ಸಹ ಅದೇ ಮಟ್ಟದ ಕ್ರೇಜ್ ಪಡೆದುಕೊಂಡಿದೆ. ಹೀಗಿರುವಾಗ ಪರಭಾಷೆಯ ನಿರ್ಮಾಪಕರೂ ಕನ್ನಡದತ್ತ ವಾಲುತ್ತಿದ್ದಾರೆ. ಕನ್ನಡದ ಸ್ಟಾರ್ ನಟರಿಗೂ ಬಂಡವಾಳ ಹೂಡುತ್ತಿದ್ದಾರೆ. ಅದೇ ರೀತಿ ಇದೀಗ ಮಲಯಾಳಿ ನಿರ್ಮಾಪಕರೊಬ್ಬರು ಬೆಂಗಳೂರಿನಲ್ಲಿ ಚಿತ್ರ ನಿರ್ಮಾಣ ಸಂಸ್ಥೆಯನ್ನೇ ತೆರೆದಿದ್ದಾರೆ.
ಹೌದು, ಬೆಂಗಳೂರಿನ ಜಿಗಣಿ- ಆನೇಕಲ್ ರಸ್ತೆಯಲ್ಲಿ ಎಂ.ಜೆ ಅವ್ಯಾನಾ ಎಂಬ ರೆಸಾರ್ಟ್ ಇದೆ. ಈ ರೆಸಾರ್ಟ್ನಲ್ಲಿ ಅನಿಲ್ ಕುಮಾರ್ ಅವರ ಸಾರಥ್ಯದ ಎಂ ಜೆ ಪ್ರೊಡಕ್ಷನ್ ಎಂಬ ನಿರ್ಮಾಣ ಸಂಸ್ಥೆ ಆರಂಭವಾಯಿತು. ಖ್ಯಾತ ನಟ ಶರಣ್, ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ ನೂತನ ಚಿತ್ರನಿರ್ಮಾಣ ಸಂಸ್ಥೆಯನ್ನು ಉದ್ಘಾಟಿಸಿದರು.
ಕನ್ನಡ ಸಿನಿಮಾ ನಿರ್ಮಿಸುವೆ...
ಈ ವೇಳೆ ಮಾತನಾಡಿದ ಅನಿಲ್ಕುಮಾರ್, "ನಾನು ಮೂಲತಃ ಕೇರಳದವನು. ಮಲಯಾಳಂನಲ್ಲಿ ಕೆಲವು ಚಿತ್ರಗಳನ್ನು ನಿರ್ಮಿಸಿದ್ದೇನೆ. ಈಗ ಎಂ.ಜೆ. ಪ್ರೊಡಕ್ಷನ್ ಎಂಬ ನಿರ್ಮಾಣ ಸಂಸ್ಥೆ ಆರಂಭಿಸಿದ್ದೇನೆ. ಇದರ ಮೂಲಕ ಕನ್ನಡದಲ್ಲೂ ಸದಭಿರುಚಿಯ ಚಿತ್ರಗಳನ್ನು ಸದ್ಯದಲ್ಲೇ ನಿರ್ಮಾಣ ಮಾಡುತ್ತೇನೆ ಎಂಬುದು ಎಂ.ಜೆ .ಪ್ರೊಡಕ್ಷನ್ನ ಅನಿಲ್ ಕುಮಾರ್ ಅವರ ಮಾತು.
"ನನ್ನನ್ನು ಆಹ್ವಾನಿಸಲು ಎರಡು ಗಂಟೆ ಪ್ರಯಾಣ ಮಾಡಿಕೊಂಡು ಬರುವುದು ಬೇಡ ಎಂದೆ. ಆದರೂ ಅನಿಲ್ ಕುಮಾರ್ ಅವರು ಖುದ್ದಾಗಿ ಬಂದು ಸಮಾರಂಭಕ್ಕೆ ಆಹ್ವಾನಿಸಿದರು. ತುಂಬಾ ಕಷ್ಟಪಟ್ಟು ಈ ಹಂತಕ್ಕೆ ಬಂದಿದ್ದಾರೆ ಎಂದು ತಿಳಿದು ಸಂತೋಷವಾಯಿತು. ಅವ್ಯಾನಾ ರೆಸಾರ್ಟ್ ತುಂಬಾ ಚೆನ್ನಾಗಿದೆ. ಎಂ.ಜೆ ಪ್ರೊಡಕ್ಷನ್ ಮೂಲಕ ಕನ್ನಡ ಚಿತ್ರ ನಿರ್ಮಾಣಕ್ಕೆ ಕೂಡ ಮುಂದಾಗಿದ್ದಾರೆ. ಒಳ್ಳೆಯದಾಗಲಿ" ಎಂದು ನಟ ಶರಣ್ ಹಾರೈಸಿದರು.
ಸಪ್ತಮಿ ಗೌಡ ಮಾತನಾಡಿ, ಅನಿಲ್ ಕುಮಾರ್ ಅವರು ಚಿತ್ರ ನಿರ್ಮಾಣ ಸಂಸ್ಥೆ ತೆರೆದಿದ್ದಾರೆ. ಅದರಲ್ಲೂ ಇವರ ರೆಸಾರ್ಟ್ ನೋಡಿ ಖುಷಿಯಾಯಿತು. ಅದರಲ್ಲೂ ನಾನು ಈಜುಗಾರ್ತಿ ಆಗಿರುವುದರಿಂದ, ಇಲ್ಲಿ ನಿರ್ಮಾಣವಾಗಿರುವ ಅತೀ ಉದ್ದದ ವಾಟರ್ ಫಾಲ್ಸ್ ಬಹಳ ಹಿಡಿಸಿತು. ಚಿತ್ರೀಕರಣಕ್ಕೆ ಇದೊಂದು ಸೂಕ್ತ ಜಾಗವಾಗಿದೆ. ಈ ಸಂಸ್ಥೆಯಿಂದ ಒಳ್ಳೊಳ್ಳೆಯ ಸಿನಿಮಾಗಳು ಬರಲಿ ಎಂದರು ಕಾಂತಾರ ಖ್ಯಾತಿಯ ಸಪ್ತಮಿ ಗೌಡ.
ಅನಿಲ್ ಕುಮಾರ್ ಅವರ ಎಲ್ಲಾ ಉತ್ತಮ ಕೆಲಸಗಳಿಗೂ ನಮ್ಮ ಬೆಂಬಲವಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ತಿಳಿಸಿದರು. ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎನ್. ಸುಬ್ರಹ್ಮಣ್ಯ, ನಿರ್ದೇಶಕ ಹರಿ ಸಂತು, ಮುಖೇಶ್ ಕುಮಾರ್, ಸತೀಶ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಸಂಸ್ಥೆಯ ಉದ್ಘಾಟನೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.