logo
ಕನ್ನಡ ಸುದ್ದಿ  /  Karnataka  /  Cm Basavaraj Bommai Will Be Inaugurate 108 Namma Clinics Today Says Minister Dr K Sudhakar

Namma Clinics: ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂದು 108 ನಮ್ಮ ಕ್ಲಿನಿಕ್ ಗಳಿಗೆ ಸಿಎಂ ಚಾಲನೆ; ಯಾವೆಲ್ಲಾ ಸೇವೆಗಳು ಇರಲಿವೆ?

HT Kannada Desk HT Kannada

Feb 07, 2023 09:00 AM IST

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಡಾ ಕೆ ಸುಧಾಕರ್ (ಫೋಟೋ-ಫೈಲ್)

    • ಬಿಬಿಎಂಪಿ ವ್ಯಾಪ್ತಿಯಲ್ಲಿ 108 ನಮ್ಮ ಕ್ಲಿನಿಕ್ ಗಳಿಗೆ ಸಿಎಂ ಬೊಮ್ಮಾಯಿ ಇಂದು ಚಾಲನೆ ನೀಡಲಿದ್ದಾರೆ. ಈ ಯೋಜನೆಯಿಂದ ಸಮಗ್ರ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಸಚಿವ ಸುಧಾಕರ್ ಹೇಳಿದ್ದಾರೆ. 
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಡಾ ಕೆ ಸುಧಾಕರ್ (ಫೋಟೋ-ಫೈಲ್)
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಡಾ ಕೆ ಸುಧಾಕರ್ (ಫೋಟೋ-ಫೈಲ್)

ಬೆಂಗಳೂರು: ಆರೋಗ್ಯ ವಲಯದ ಮೂಲಸೌಕರ್ಯ ವೃದ್ಧಿಗೆ ರಾಜ್ಯ ಸರ್ಕಾರ ಆದ್ಯತೆ ನೀಡಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಏಕಕಾಲಕ್ಕೆ 108 'ನಮ್ಮ ಕ್ಲಿನಿಕ್' ಗಳಿಗೆ ಸಿಎಂ ಬೊಮ್ಮಾಯಿ ಅವರು ಇಂದು (ಮಂಗಳವಾರ, ಫೆ.7) ಚಾಲನೆ ನೀಡಲಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Sankey Tank Lake: ಮಳೆ ಕೊರತೆ, ತಾಪಮಾನ ಹೆಚ್ಚಳ; ಬತ್ತುವ ಹಂತಕ್ಕೆ ಬಂದಿದೆಯಾ ಬೆಂಗಳೂರಿನ ಸ್ಯಾಂಕಿ ಟ್ಯಾಂಕ್ ಕೆರೆ

Uttara Kannada News: ಪ್ರವಾಸೋದ್ಯಮಕ್ಕೆ ರಣ ಬಿಸಿಲಿನ ಹೊಡೆತ; ಉತ್ತರ ಕನ್ನಡ ಬೀಚ್‌ಗಳಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖ

ಬೆಂಗಳೂರು ನೀರಿನ ಸಮಸ್ಯೆಗೆ ಝೆರೋದಾ ಸಂಸ್ಥಾಪಕ ನಿತಿನ್ ಕಾಮತ್ ಸಲಹೆ ಎಫೆಕ್ಟ್; ಒಂದೇ ದಿನ ಬಂತು 300 ಫೋನ್ ಕಾಲ್ಸ್

ಬಿಸಿಗೆ ತತ್ತರಿಸಿದ ಬೆಂಗಳೂರು ಜನರಿಗೆ ಸಿಹಿ ಸುದ್ದಿ; ಮೇ ತಿಂಗಳಲ್ಲಿ ನಗರಕ್ಕೆ ಮಳೆ ಬರುವ ಸಾಧ್ಯತೆ ಎಂದ ಹವಾಮಾನ ಇಲಾಖೆ

ಮಹಾಲಕ್ಷ್ಮಿ ಬಡಾವಣೆಯ ಮಹಾಲಕ್ಷ್ಮಿಪುರ ವಾರ್ಡ್ ನಲ್ಲಿ ಆರಂಭಿಸಿರುವ ನಮ್ಮ ಕ್ಲಿನಿಕ್ ಅನ್ನು ಉದ್ಘಾಟಿಸಲಾಗುತ್ತಿದೆ. ಇದೇ ವೇಳೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಆರಂಭವಾಗಿರುವ ಉಳಿದ 107 ಕ್ಲಿನಿಕ್ ಗಳಿಗೂ ಚಾಲನೆ ನೀಡಲಾಗುತ್ತದೆ. ಈ ದಿನದಿಂದ ಆರೋಗ್ಯ ಕೇಂದ್ರಗಳು ಜನಸೇವೆಗೆ ಮುಕ್ತವಾಗಲಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

2022ರ ಡಿಸೆಂಬರ್ 14 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಧಾರವಾಡದ ಬೈರದೇವರಕೊಪ್ಪದಲ್ಲಿ ನಮ್ಮ ಕ್ಲಿನಿಕ್ ಅನ್ನು ಉದ್ಘಾಟಿಸುವ ಮೂಲಕ ರಾಜ್ಯದಲ್ಲಿ ಏಕಕಾಲಕ್ಕೆ 100‌ ನಮ್ಮ ಕ್ಲಿನಿಕ್ ಗಳಿಗೆ ವರ್ಚುವಲ್ ಮೂಲಕ ಚಾಲನೆ ನೀಡಿದ್ದರು. ಸಾರ್ವಜನಿಕರಿಗೆ ನಮ್ಮ ಕ್ಲಿನಿಕ್ ಗಳಲ್ಲಿ ದೊರೆಯುವ ಸೇವೆಗಳು ಮತ್ತು ಉಪಯೋಗಗಳ ಕುರಿತು ಮುಖ್ಯಮಂತ್ರಿಯವರು ಇದೇ ಸಂದರ್ಭದಲ್ಲಿ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದಾಗ, ಜನರು ಸಂತೋಷ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದ್ದರು. ನಗರ ಆರೋಗ್ಯ ಮತ್ತು ಕ್ಷೇಮ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಕ್ಲಿನಿಕ್ ಗಳು ಆರೋಗ್ಯ ಆರೈಕೆಯಲ್ಲಿ ಹೊಸ ಆಯಾಮ ಸೃಷ್ಟಿಸುತ್ತಿವೆ ಎಂದು ಹೇಳಿದ್ದರು.

ನಮ್ಮ ಕ್ಲಿನಿಕ್ ಗಳು ನಗರ ಪ್ರದೇಶದ ಬಡ, ದುರ್ಬಲ ವರ್ಗದ ಜನರಿಗೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುತ್ತಿವೆ. ನಗರ ಪ್ರದೇಶ ವ್ಯಾಪ್ತಿಯಲ್ಲಿ 438 “ನಮ್ಮ ಕ್ಲಿನಿಕ್” ಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ನಗರ ಪ್ರದೇಶದ ಬಡವರು, ಕೂಲಿ ಕಾರ್ಮಿಕರಿಗೆ, ದಿನಗೂಲಿ ನೌಕರರಿಗೆ ಇದು ಸಂಜೀವಿನಿಯಾಗಲಿದೆ ಎಂದು ಸಚಿವ ಸುಧಾಕರ್ ಹೇಳಿದರು.

15-20 ಸಾವಿರ ಜನಸಂಖ್ಯೆಗೆ ಒಂದು ಕ್ಲಿನಿಕ್

ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿ, ಪ್ರತಿ 50,000 ಜನಸಂಖ್ಯೆಗೆ ಒಂದರಂತೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚುವರಿಯಾಗಿ 15 ನೇ ಹಣಕಾಸು ಆಯೋಗದ ಅನುದಾನದಡಿ ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿ 15 ರಿಂದ 20 ಸಾವಿರ ಜನಸಂಖ್ಯೆಗೆ ಒಂದರಂತೆ ನಮ್ಮ ಕ್ಲಿನಿಕ್ ಗಳನ್ನು ತೆರೆಯಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 243 ಮತ್ತು ಉಳಿದ ಜಿಲ್ಲೆಗಳಲ್ಲಿ 195 ನಮ್ಮ ಕ್ಲಿನಿಕ್ ಗಳನ್ನು ಆರಂಭಿಸಲಾಗುತ್ತಿದೆ.

ರೆಫರಲ್ ಸೇವೆಯೂ ಇದೆ

'ನಮ್ಮ ಕ್ಲಿನಿಕ್' ಗಳಲ್ಲಿ ಗುಣಮಟ್ಟದ ಮತ್ತು ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸಲಾಗುತ್ತಿದೆ. ರೆಫರಲ್ ಸೇವೆಗಳನ್ನು ಒದಗಿಸುವ ಮುಖಾಂತರ ದ್ವಿತೀಯ ಮತ್ತು ತೃತೀಯ ಹಂತದ ಆಸ್ಪತ್ರೆಗಳಿಗೂ ಇವು ಸಂಪರ್ಕ ಕಲ್ಪಿಸುತ್ತಿವೆ. ಆರೋಗ್ಯ ಸೇವೆಗಳನ್ನು ಪಡೆಯಲು ತಗುಲುವ ವೆಚ್ಚ ಕಡಿಮೆ ಮಾಡಲು ಸಹಕಾರಿಯಾಗಲಿದೆ. ನಗರ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ವಿಕೇಂದ್ರೀಕರಿಸಲಾಗುತ್ತಿದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಯಾವೆಲ್ಲಾ ಸೇವೆಗಳು ಇರಲಿವೆ?

ನಮ್ಮ ಕ್ಲಿನಿಕ್ ಗಳಲ್ಲಿ ತಲಾ ಒಬ್ಬರು ವ್ಯೆದ್ಯಾಧಿಕಾರಿ, ಶುಶ್ರೂಷಕರು, ಪ್ರಯೋಗಶಾಲಾ ತಂತ್ರಜ್ಞರು, ಡಿ-ದರ್ಜೆ ನೌಕರರು ಇರಲಿದ್ದಾರೆ. ಒಟ್ಟು 12 ಆರೋಗ್ಯ ಸೇವೆಗಳ ಪ್ಯಾಕೇಜ್ ಇಲ್ಲಿ ಲಭ್ಯವಿದ್ದು, ಗರ್ಭಿಣಿ ಮತ್ತು ಜನನ ಸಮಯದ ಆರೈಕೆ, ನವಜಾತ ಮತ್ತು ಶಿಶುವಿನ ಸಮಗ್ರ ಆರೋಗ್ಯ ರಕ್ಷಣೆ, ಬಾಲ್ಯ ಮತ್ತು ಹದಿಹರೆಯದವರ ಸಮಗ್ರ ಆರೋಗ್ಯ ಸೇವೆಗಳು, ಸಾರ್ವತ್ರಿಕ ಲಸಿಕಾಕರಣ ಸೇವೆಗಳು, ಕುಟುಂಬ ಕಲ್ಯಾಣ, ಗರ್ಭನಿರೋಧಕ ಸೇವೆಗಳು ಮತ್ತು ಇತರ ಸಂತಾನೋತ್ಪತ್ತಿ ಆರೋಗ್ಯ ಸೇವೆಗಳು, ಸಾಂಕ್ರಾಮಿಕ ರೋಗಗಳ ನಿರ್ವಹಣೆ, ಸಾಮಾನ್ಯ ಮತ್ತು ಸಣ್ಣ ಪ್ರಮಾಣದ ಖಾಯಿಲೆಗಳಿಗೆ ಹೊರ ರೋಗಿ ಸೇವೆ ಸಿಗಲಿದೆ.

ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ತಪಾಸಣೆ, ಬಾಯಿ ಆರೋಗ್ಯ ಸೇವೆಗಳು, ನೇತ್ರ, ಕಿವಿ, ಮೂಗು , ಗಂಟಲು ಆರೋಗ್ಯ ಆರೈಕೆ ಸೇವೆಗಳ ಜೊತೆಗೆ ಮಾನಸಿಕ ಆರೋಗ್ಯ, ವೃದ್ಧಾಪ್ಯ ಆರೈಕೆ, ಉಪಶಮನಕಾರಿ ಆರೈಕೆ ಸೇವೆ, ಸುಟ್ಟ ಗಾಯಗಳು, ಅಪಘಾತ, ಮತ್ತಿತರ ಗಾಯಗಳು ಸೇರಿದಂತೆ ತುರ್ತು ವ್ಯೆದ್ಯಕೀಯ ಸೇವೆಗಳು, ಉಚಿತ ಆರೋಗ್ಯ ತಪಾಸಣೆ , ಪ್ರಯೋಗ ಶಾಲಾ ಸೇವೆಗಳು ಮತ್ತು ಚಿಕಿತ್ಸೆ ದೊರೆಯಲಿದೆ. ಟೆಲಿ ಕನ್ಸಲ್ಟೇಷನ್ ಸೇವೆಗಳು, ಕ್ಷೇಮ ಚಟುವಟಿಕೆ, ಉಚಿತ ರೆಫರಲ್ ಸೇವೆಗಳು ಸಹ ದೊರೆಯಲಿವೆ ಎಂದರು.

ಸಮರ್ಪಕ ವ್ಯವಸ್ಥೆ

ನಮ್ಮ ಕ್ಲಿನಿಕ್ ಗಳು ಬೆಳಗ್ಗೆ 9 ರಿಂದ ಸಂಜೆ 4.30 ರವರೆಗೆ ಸೋಮವಾರದಿಂದ ಶನಿವಾರದವರೆಗೆ ಕಾರ್ಯನಿರ್ವಹಿಸಲಿವೆ. 1,000 ಚದರ ಅಡಿ ವಿಸ್ತೀರ್ಣದಲ್ಲಿ ನಿರೀಕ್ಷಣಾ ಸ್ಥಳ, ಹೊರ ರೋಗಿಗಳ ತಪಾಸಣೆ ಕೊಠಡಿ, ಚುಚ್ಚು ಮದ್ದು ನೀಡುವ ಕೊಠಡಿ, ಪ್ರಯೋಗ ಶಾಲೆ, ಯೋಗ, ಔಷಧಿ ದಾಸ್ತಾನು ಮತ್ತು ವಿತರಣಾ ಕೊಠಡಿ, ಆಡಳಿತ ಕಚೇರಿ, ಹೀಗೆ ಪ್ರತ್ಯೇಕ ಕೊಠಡಿಗಳಿವೆ. ಆಸ್ಪತ್ರೆ ಸಿಬ್ಬಂದಿ, ಮಹಿಳೆ ಮತ್ತು ಪುರುಷ ರೋಗಿಗಳಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ವಿವರಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು