Vande Bharat Express: ಕಲಬುರಗಿ-ಬೆಂಗಳೂರು ನಡುವೆ ವಂದೇ ಭಾರತ್ ರೈಲು ಪ್ರಾರಂಭಿಸಲು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭರವಸೆ
Kalaburagi-Bengaluru: ಕಲಬುರಗಿ ಸಂಸದ ಡಾ.ಉಮೇಶ ಜಾಧವ್ ಅವರ ಕೋರಿಕೆಯ ಮೇರೆಗೆ ಕಲಬುರಗಿ - ಬೆಂಗಳೂರು ನಡುವೆ ವಂದೇ ಭಾರತ್ ರೈಲು ಶೀಘ್ರ ಪ್ರಾರಂಭಿಸಲು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭರವಸೆ ನೀಡಿದ್ದಾರೆ
ಕಲಬುರಗಿ: ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರವಾಗಿರುವ ಕಲಬುರಗಿ ಮಾರ್ಗವಾಗಿ ವಂದೇ ಭಾರತ್ ಎಕ್ಸಪ್ರೆಸ್ ರೈಲು ಪ್ರಾರಂಭಿಸಬೇಕೆಂಬ ಬೇಡಿಕೆಯಿದೆ. ಕಲಬುರಗಿ ಸಂಸದ ಡಾ.ಉಮೇಶ ಜಾಧವ್ ಅವರ ಕೋರಿಕೆಯ ಮೇರೆಗೆ ಕಲಬುರಗಿ - ಬೆಂಗಳೂರು ನಡುವೆ ವಂದೇ ಭಾರತ್ ರೈಲು ಶೀಘ್ರ ಪ್ರಾರಂಭಿಸಲು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭರವಸೆ ನೀಡಿದ್ದಾರೆ.
ಟ್ರೆಂಡಿಂಗ್ ಸುದ್ದಿ
ಶುಕ್ರವಾರ (ಜುಲೈ 14) ದೆಹಲಿಯಲ್ಲಿ ಕಲಬುರಗಿ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಬೇಡಿಕೆಯೊಂದಿಗೆ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ಕಲಬುರಗಿ ಸಂಸದ ಡಾ. ಉಮೇಶ್ ಜಾಧವ ಭೇಟಿ ಮಾಡಿದರು.
ಕಲಬುರಗಿ ಮತ್ತು ಬೆಂಗಳೂರು ಮಧ್ಯೆ ಹೊಸ ರೈಲು ನಡೆಸುವುದು, ಮುಂಬೈ-ಸೋಲಾಪುರ್ ವಂದೇ ಭಾರತ್ ಎಕ್ಸಪ್ರೆಸ್ ಅನ್ನು ಕಲಬುರಗಿವರೆಗೆ ವಿಸ್ತರಿಸುವುದು, ಇಲ್ಲವಾದರೆ ಬೆಂಗಳೂರು-ಕಲಬುರಗಿ ಮಧ್ಯೆ ವಂದೇ ಭಾರತ್ ರೈಲನ್ನು ಪ್ರಾರಂಭಗೊಳಿಸುವುದರ ಬಗ್ಗೆ ಚರ್ಚಿಸಿದರು.
ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ವಿವಿಧ ರೈಲ್ವೆ ಸಂಬಂಧಿತ ಪ್ರತಿಭಟನೆಗಳನ್ನು ಉಲ್ಲೇಖಿಸಿದರು ಮತ್ತು ಕಲಬುರಗಿ-ಬೆಂಗಳೂರು ಹೋಗುವ ರೈಲಿನ ಬೋಗಿಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿರುವ ಕುರಿತು ದಿನಪತ್ರಿಕೆಗಳಲ್ಲಿ ಬಂದಿರುವ ಸುದ್ದಿಗಳ ಬಗ್ಗೆ ಪ್ರಸ್ತಾಪಿಸಿದರು. ಇತ್ತೀಚಿನ ತಿಂಗಳಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ಕಲಬುರಗಿ-ಬೆಂಗಳೂರು ಮಧ್ಯೆ ಪ್ರಯಾಣುಸುತ್ತಿರುವ ಮಾಹಿತಿಯನ್ನು ಸಚಿವರ ಗಮನಕ್ಕೆ ತಂದರು.
ಹಾಗೆಯೆ ಜಿಲ್ಲೆಯ ಶಹಾಬಾದ್ ಸ್ಟೇಷನ್ನಲ್ಲಿ ಈ ಕೆಳಕಂಡ ಐದು ರೈಲುಗಳ ನಿಲ್ಲಿಸುವುದರ ಬಗ್ಗೆ ಚರ್ಚಿಸಿದರು. ಚೆನ್ನೈ-ಎಗ್ಮೋರ್ ಎಕ್ಸ್ಪ್ರೆಸ್, ಮುಂಬೈ-ನಾಗರ್ಕೋಯಿಲ್ ಎಕ್ಸ್ಪ್ರೆಸ್, ಕೊನಾರ್ಕ್ ಎಕ್ಸ್ಪ್ರೆಸ್, ಮುಂಬೈ -ಹೈದರಾಬಾದ್ ಎಕ್ಸ್ಪ್ರೆಸ್, ಹೈದರಾಬಾದ್-ವಿಜಯಪುರ ಎಕ್ಸ್ಪ್ರೆಸ್, ಜಾಲನಾ ತಿರುಪತಿ ಸ್ಪೆಷಲ್ ಎಕ್ಸ್ಪ್ರೆಸ್, ಸೋಲಾಪುರ್- ಮುಂಬೈ ಎಕ್ಸ್ಪ್ರೆಸ್, ಸೋಲಾಪುರ್- ತಿರುಪತಿ ಸ್ಪೆಷಲ್ ಎಕ್ಸ್ಪ್ರೆಸ್ ರೈಲುಗಳನ್ನು ಕಡ್ಡಾಯವಾಗಿ ಕಮಲಾಪುರ್ ರೈಲ್ವೆ ಸ್ಟೇಷನ್ನಲ್ಲಿ ನಿಲ್ಲಿಸಲು ಮನವಿ ಮಾಡಿದರು.
ಅದೇ ರೀತಿ ಚಿತ್ತಾಪುರ ರೈಲ್ವೆ ಸ್ಟೇಷನ್ನಲ್ಲಿ ಗಾಡಿ ಸಂಖ್ಯೆ 07003/04 ನ್ನು ನಿಲ್ಲಿಸಲು ಕೋರಿದರು. ಕೋವಿಡ್ ಮುಂಚೆ ನಡೆಯುವ ಎಲ್ಲಾ ರೈಲುಗಳನ್ನು ಪುನಃ ಸ್ಥಾಪನೆಗೊಳಿಸಲು ಮನವಿ ಮಾಡಿದರು. ಅದರಲ್ಲಿ ವಿಶೇಷವಾಗಿ ಸೋಲಾಪುರ್ -ಕಲಬುರಗಿ ಗುಂತಕಲ್ ಡೆಮೋ (DEMU), ಸಿಕಂದರಾಬಾದ್ -ಚಿತ್ತಾಪುರ ಮೇಮು (MEMU) ಮತ್ತು ಫಲಕನುಮಾವಾಡಿ -ಕಾಚಿಗುಡ ಎಕ್ಸ್ಪ್ರೆಸ್ನ್ನು ಕಲಬುರಗಿ ವರೆಗೆ ವಿಸ್ತರಿಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಕೇಂದ್ರ ರೈಲ್ವೆ ಸಚಿವರು ಶೀಘ್ರವೇ ಕಲಬುರಗಿ-ಬೆಂಗಳೂರು ಮಧ್ಯೆ ರೈಲು ಶುರು ಮಾಡುವ ಬಗ್ಗೆ ಭರವಸೆ ನೀಡಿದರು. ಹಾಗೆಯೇ ಸಂಸದರು ಕೋರಿದ ವಿವಿಧ ಬೇಡಿಕೆಗಳಿಗೆ ಶೀಘ್ರವೇ ಅನುಷ್ಠಾನಕ್ಕೆ ತರಲು ಅಧಿಕಾರಿಗಳಿಗೆ ಸೂಚಿಸಿದರು.
ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ