Kannada News  /  Karnataka  /  Karnataka Elections 2023 Here Are The Key Leaders Of Karnataka Elections 2023
ಕರ್ನಾಟಕ ವಿಧಾನಸಭಾ ಚುನಾವಣೆ ಮೇ 10 ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.
ಕರ್ನಾಟಕ ವಿಧಾನಸಭಾ ಚುನಾವಣೆ ಮೇ 10 ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. (Live Mint)

Karnataka Elections 2023: ರಾಜ್ಯದ ಮತದಾರರ ಮೇಲೆ ಪ್ರಭಾವ ಬೀರಬಲ್ಲರೇ ಇವರು…!

29 March 2023, 14:42 ISTHT Kannada Desk
29 March 2023, 14:42 IST

Karnataka Elections 2023: ಕರ್ನಾಟಕ ವಿಧಾನಸಭಾ ಚುನಾವಣೆ 2023ರ ದಿನಾಂಕ ಘೋಷಣೆ ಆಗಿದ್ದು, ಮೇ 10 ಚುನಾವಣೆ ನಡೆಯಲಿದೆ. ಮತ ಎಣಿಕೆ ಮೇ 13 ರಂದು ನಡೆಯಲಿದೆ. ಈ ಹಂತದಲ್ಲಿ ಕರ್ನಾಟಕ ವಿಧಾನ ಸಭಾ ಚುನಾವಣೆಯ ಮೇಲೆ ಪ್ರಭಾವ ಬೀರಬಲ್ಲ ನಾಯಕರು ಯಾರೆಲ್ಲ- ಒಂದು ಕಿರುನೋಟ.

ಕರ್ನಾಟಕ ವಿಧಾನಸಭಾ ಚುನಾವಣೆ 2023ರ ದಿನಾಂಕ ಘೋಷಣೆ ಆಗಿದ್ದು, ಮೇ 10 ಚುನಾವಣೆ ನಡೆಯಲಿದೆ. ಮತ ಎಣಿಕೆ ಮೇ 13 ರಂದು ನಡೆಯಲಿದೆ. ಭಾರತದ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಅವರು ಚುನಾವಣಾ ದಿನಾಂಕವನ್ನು ಇಂದು ಘೋಷಿಸಿದ್ದು, ಮಾದರಿ ನೀತಿ ಸಂಹಿತೆ ಇಂದಿನಿಂದಲೇ ಜಾರಿಗೆ ಬಂದಿದೆ ಎಂದು ಹೇಳಿದರು. ಈ ಹಂತದಲ್ಲಿ ಕರ್ನಾಟಕ ವಿಧಾನ ಸಭಾ ಚುನಾವಣೆಯ ಮೇಲೆ ಪ್ರಭಾವ ಬೀರಬಲ್ಲ ನಾಯಕರು ಯಾರೆಲ್ಲ ಎಂಬ ವಿಚಾರದೆಡೆಗೆ ಒಂದು ಕಿರುನೋಟ ಬೀರೋಣ.

ಎಚ್‌.ಡಿ.ಕುಮಾರಸ್ವಾಮಿ

ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಪುತ್ರ ಕುಮಾರಸ್ವಾಮಿ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಜನತಾ ದಳ (ಜಾತ್ಯತೀತ) ಪಕ್ಷದ ನಾಯಕ. 2018 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ, ಜೆಡಿಎಸ್‌, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಜತೆಗೆ ಮೈತ್ರಿ ಮಾಡಿಕೊಂಡಿತು. ಆಗ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಆದಾಗ್ಯೂ, ತಮ್ಮದೇ ಪಕ್ಷದ ಶಾಸಕರ ಬಂಡಾಯದ ನಂತರ ಅವರು 14 ತಿಂಗಳ ನಂತರ ರಾಜೀನಾಮೆ ನೀಡಿದರು. ಅತಂತ್ರ ಫಲಿತಾಂಶ ಬಂದಾಗೆಲ್ಲ ಅದರ ಲಾಭ ಆಗಿದ್ದು, ಜೆಡಿಎಸ್‌ಗೆ ವಿಶೇಷವಾಗಿ ಕುಮಾರಸ್ವಾಮಿಗೆ.

ಬಿಎಸ್‌ ಯಡಿಯೂರಪ್ಪ

ಬಿಎಸ್‌ ಯಡಿಯೂರಪ್ಪ ಅವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ಹಿರಿಯ ನಾಯಕರು. ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರ ಪತನವಾದ ನಂತರ 2019 ರಿಂದ 2021ರ ಜುಲೈನಲ್ಲಿ ರಾಜೀನಾಮೆ ನೀಡುವವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಕರ್ನಾಟಕದಲ್ಲಿ 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲುವಿನತ್ತ ಮುನ್ನಡೆಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಪಕ್ಷವು 28 ಲೋಕಸಭಾ ಸ್ಥಾನಗಳ ಪೈಕಿ 25 ಸ್ಥಾನಗಳನ್ನು ಗೆದ್ದಿದೆ.

ಬಿವೈ ವಿಜಯೇಂದ್ರ

ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಕೆಲವು ತಿಂಗಳ ಬಳಿಕ ಪಕ್ಷದೊಳಗೆ ಮೂಲೆಗುಂಪಾಗುತ್ತಿರುವ ಭಾವನೆ ಬಿ.ಎಸ್‌.ಯಡಿಯೂರಪ್ಪ ಅವರನ್ನು ಕಾಡಿದಾಗ ರಾಜಕೀಯ ನಿವೃತ್ತಿ ಘೋಷಿಸಿದರಲ್ಲದೆ, ಬಿವೈ ವಿಜಯೇಂದ್ರ ಉತ್ತರಾಧಿಕಾರಿ ಎಂದು ಹೇಳಿದ್ದರು. ವಿಜಯೇಂದ್ರ ಅವರಿಗೆ ಉಪಚುನಾವಣೆಗಳಲ್ಲಿ ಪಕ್ಷವನ್ನು ಗೆಲ್ಲಿಸುವ ಹೆಚ್ಚಿನ ಹೊಣೆಗಾರಿಕೆಯೂ ಈ ನಡುವೆ ಸಿಕ್ಕಿತ್ತು. ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕಣಕ್ಕಿಳಿಯುವರೆಂಬ ವದಂತಿಯೂ ಹರಡಿದೆ.

ಬಸವರಾಜ ಬೊಮ್ಮಾಯಿ

ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಯಡಿಯೂರಪ್ಪ ರಾಜೀನಾಮೆ ನೀಡಿದ ನಂತರ ಸಿಎಂ ಆಗಿ ಅಧಿಕಾರ ವಹಿಸಿಕೊಂಡರು. ಬಿಜೆಪಿಗೆ ಹೊರಗಿನಿಂದ ಬಂದವರೆಂಬ ಐಡೆಂಟಿಟಿ ಇದ್ದರೂ, ಯಡಿಯೂರಪ್ಪ ನಿಷ್ಠರಾಗಿದ್ದ ಕಾರಣ ಸಿಎಂ ಹುದ್ದೆ ಒಲಿಯಿತೆಂಬ ಮಾತಿದೆ. ಬಸವರಾಜ ಬೊಮ್ಮಾಯಿ ಅವರ ಮೇಲೆ ಪಕ್ಷದ ವರಿಷ್ಠರು ಹೆಚ್ಚಿನ ನಂಬಿಕೆ ಇರಿಸಿಕೊಂಡಿದ್ದು, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಹೊಣೆಗಾರಿಕೆಯನ್ನು ಕೊಟ್ಟಿದ್ದಾರೆ.

ಸಿದ್ದರಾಮಯ್ಯ

ಸಿದ್ದರಾಮಯ್ಯ ಕಾಂಗ್ರೆಸ್‌ನ ಹಿರಿಯ ನಾಯಕರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ. ಅವರು 2013 ರಿಂದ 2018 ರವರೆಗೆ ಸಿಎಂ ಆಗಿದ್ದರು, ಆದರೆ, ಅವರ ಪಕ್ಷವು 2018 ರ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಜನಾದೇಶ ಬಂದ ಕಾರಣ ಜೆಡಿಎಸ್‌ ಜತೆ ಮೈತ್ರಿ ಮಾಡಬೇಕಾಯಿತು. ಬಳಿಕ ಬಿಜೆಪಿ ಕಾರ್ಯತಂತ್ರದ ಕಾರಣ ಅಧಿಕಾರವನ್ನು ಕಳೆದುಕೊಂಡಿತು. ಅನ್ನಭಾಗ್ಯ, ಕ್ಷೀರ ಭಾಗ್ಯ, ಇಂದಿರಾ ಕ್ಯಾಂಟೀನ್‌ನಂತಹ ಸಮಾಜ ಕಲ್ಯಾಣ ಯೋಜನೆಗಳಿಗೆ ಸಿದ್ದರಾಮಯ್ಯ ಹೆಸರುವಾಸಿಯಾದವರು.

ಡಿಕೆ ಶಿವಕುಮಾರ್‌

ಶಿವಕುಮಾರ್ ಕಾಂಗ್ರೆಸ್ ಪಕ್ಷದ ಮತ್ತೋರ್ವ ಹಿರಿಯ ನಾಯಕರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಾಲಿ ಅಧ್ಯಕ್ಷರು. ಅವರು ಪ್ರಬಲ ಸಂಘಟಕ ಎಂದು ಹೆಸರುವಾಸಿಯಾಗಿದ್ದಾರೆ. ಈ ಹಿಂದೆ ಪಕ್ಷದ ಚುನಾವಣಾ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದವರು.

ಪ್ರಜ್ವಲ್‌ ರೇವಣ್ಣ

ರೇವಣ್ಣ ಜೆಡಿಎಸ್‌ನ ಯುವ ನಾಯಕ ಮತ್ತು ಎಚ್‌ಡಿ ದೇವೇಗೌಡರ ಮೊಮ್ಮಗ. ಅವರು 2019 ರ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಗೆದ್ದರು ಮತ್ತು ಜೆಡಿಎಸ್‌ನಲ್ಲಿ ಉದಯೋನ್ಮುಖ ತಾರೆಯಾಗಿ ಕಂಡುಬಂದಿದ್ದಾರೆ.

ಸಿಟಿ ರವಿ

ರವಿ ಬಿಜೆಪಿಯ ಹಿರಿಯ ನಾಯಕ ಮತ್ತು ಕರ್ನಾಟಕ ಸರ್ಕಾರದ ಮಾಜಿ ಸಚಿವ. ಅವರು ತಮ್ಮ ಆಕ್ರಮಣಕಾರಿ ಶೈಲಿಯ ರಾಜಕೀಯಕ್ಕೆ ಹೆಸರುವಾಸಿ. ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚಿನ ಬೆಂಬಲ ಹೊಂದಿದ್ದಾರೆ.