ಚಂದ್ರಯಾನದ ಬಗ್ಗೆ ಪ್ರಕಾಶ್ ರಾಜ್ ಕಿಂಡಲ್; ಸ್ವಲ್ಪ ಬಿಡಿಸಿ ಹೇಳ್ತಿರಾ ಎಂದ ಚೇತನ್ ಅಹಿಂಸಾ
Aug 27, 2023 03:05 PM IST
ಚಂದ್ರಯಾನದ ಬಗ್ಗೆ ಪ್ರಕಾಶ್ ರಾಜ್ ಕಿಂಡಲ್; ಸ್ವಲ್ಪ ಬಿಡಿಸಿ ಹೇಳ್ತಿರಾ ಎಂದ ಚೇತನ್ ಅಹಿಂಸಾ
- ಚಂದ್ರಯಾನದ ಬಗ್ಗೆ ನಟ ಪ್ರಕಾಶ್ ರಾಜ್ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇವರ ಹೇಳಿಕೆಗಳಿಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಆ ಬೆನ್ನಲ್ಲೇ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಇವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
Chetan Ahimsa: ಭಾರತ ಚಂದ್ರನಲ್ಲಿ ತನ್ನ ರೋವರ್ ಇಳಿಸಿದೆ. ಈ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ. ಇಡೀ ದೇಶ ಈ ಗಳಿಗೆಯನ್ನು ಸಂಭ್ರಮಿಸುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಇಸ್ರೋ ವಿಜ್ಞಾನಿಗಳ ಈ ಸಾಧನೆಗೆ ಮೆಚ್ಚುಗೆಯ ಮಹಾಪೂರವೇ ಹರಿದಬಂದಿದೆ. ಶುಭಾಶಯಗಳ ಸುರಿಮಳೆಯನ್ನೇ ಸುರಿಸಿದ್ದಾರೆ ನೆಟ್ಟಿಗರು. ಇದೆಲ್ಲದರ ನಡುವೆ ಇದೇ ಚಂದ್ರಯಾನ 3ರ ಬಗ್ಗೆ ಟೀಕೆ ಮಾಡಿಯೂ ಟ್ರೋಲ್ ಆದವರಿದ್ದಾರೆ. ಆ ಪೈಕಿ ಬಹುಭಾಷಾ ನಟ ಪ್ರಕಾಶ್ ರಾಜ್ ಹೆಚ್ಚು ಚರ್ಚೆಯಲ್ಲಿದ್ದರು.
ಚಂದ್ರಯಾನದ ಬಗ್ಗೆ ಮೇಲಿಂದ ಮೇಲೆ ಟ್ವೀಟ್ ಮಾಡುತ್ತಲೇ ಪ್ರಧಾನಿ ಮೋದಿಯ ಕಾಲೆಳೆದಿದ್ದರು ಪ್ರಕಾಶ್ ರಾಜ್. ಮಲಿಯಾಳಿ ಚಾಯ್ ವಾಲಾನ ಫೋಟೋ ಶೇರ್ ಮಾಡಿ ಕಿಂಡಲ್ ಮಾಡಿದ್ದರು. ಪ್ರಕಾಶ್ ರಾಜ್ ಅವರ ಸಾಲು ಸಾಲು ಟ್ವಿಟ್ಗಳಿಗೆ ಸೋಷಿಯಲ್ ಮೀಡಿಯಾದಲ್ಲಿಯೂ ಬಿಸಿ ಬಿಸಿ ಪರ ವಿರೋಧ ಚರ್ಚೆಗಳು ನಡೆದಿದ್ದವೂ.
ಪ್ರಕಾಶ್ ರಾಜ್ ಟ್ವಿಟ್..
"ಮಲಯಾಳಿ ಚಾಯ್ವಾಲಾ ಎಲ್ಲಿ ಎಂದು ಇನ್ನೂ ಬಡಬಡಿಸುತ್ತಿರುವ .. ಹಾಸ್ಯ ಅರ್ಥವಾಗದ ಹಾಸ್ಯಾಸ್ಪದರೆ.. ಅವನು ಬುದ್ದಿವಂತ … ಆತನೀಗ ಮಂಗಳ .. ಶುಕ್ರ ಗ್ರಹಗಳಲ್ಲಿ ಅಂಗಡಿಯಿಟ್ಟಿದ್ದಾನೆ .. ಸಾಧ್ಯವಾದರೆ ಹೋಗಿ" ಎಂದು ಇತ್ತೀಚೆಗಷ್ಟೇ ಮತ್ತೊಂದು ಟ್ವೀಟ್ ಮೂಲಕ ಪ್ರಕಾಶ್ ರಾಜ್ ಟ್ರೋಲ್ಗೆ ಒಗ್ಗರಣೆ ಹಾಕಿದ್ದರು. ಇದೀಗ ಪ್ರಕಾಶ್ ರಾಜ್ ಅವರ ಟ್ವಿಟ್ ಮತ್ತವರ ಮಾತಿಗೆ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಪ್ರತಿಕ್ರಿಯೆ ನೀಡಿದ್ದಾರೆ.
ಬಾಗಲಕೋಟೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೇತನ್ ಅಹಿಂಸಾ, ಚಂದ್ರಯಾನದ ವಿಚಾರವಾಗಿ ನಟ ಪ್ರಕಾಶ್ ರಾಜ್ ಅವರು ಹೇಳಿಕೆ ನೀಡಿದ್ದಾರೆ. ಯಾವ ಅರ್ಥದಲ್ಲಿ ಅವರು ಹೇಳಿಕೆ ನೀಡಿದ್ದಾರೆ ಎಂಬುದನ್ನು ಅವರೇ ಬಿಡಿಸಿ ಹೇಳಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ವಾಕ್ ಸ್ವಾತಂತ್ರ್ಯವಿದೆ. ಅನಿಸಿಕೆ ಅಭಿಪ್ರಾಯ ಹೇಳಿಕೊಳ್ಳುವ ಹಕ್ಕಿದೆ. ಅದನ್ನು ಮಾಡಿದ್ದಾರೆ. ಅದರಲ್ಲಿ ತಪ್ಪಿಲ್ಲ. ಆದರೆ, ಅವರ ಟ್ವಿಟ್ ವಿಚಾರದಲ್ಲಿ ಅದನ್ನು ಅವರೇ ಬಿಡಿಸಿ ಹೇಳಬೇಕು"
ಮುಂದುವರಿದು ಮಾತನಾಡಿ, "ಈ ಹಿಂದೆ ಒಂದು ಜೋಕ್ ಇತ್ತು. ಚಂದ್ರನ ಅಂಗಳಕ್ಕೆ ಯಾರೇ ಹೋದರೂ, ಅಲ್ಲಿ ಮಲಯಾಳಿಗರೇ ಇರುತ್ತಾರೆ. ಆ ಜೋಕ್ ಅನ್ನೇ ಇನ್ನೊಂದು ರೀತಿಯಲ್ಲಿ ಪ್ರಕಾಶ್ ರಾಜ್ ಹೇಳಿರಬಹುದು. ಒಟ್ಟಾರೆ ಇದೆಲ್ಲವನ್ನೂ ಅವರೇ ಹೇಳಬೇಕು ಎಂದಿದ್ದಾರೆ ಚೇತನ್.
ತಿರುಪತಿಗೆ ಹೋಗಲೇಬೇಕಿತ್ತಾ?
ಇನ್ನು ಚಂದ್ರಯಾನ 3 ಯಶಸ್ವಿಯಾದ ಬಳಿಕ ಒಂದಷ್ಟು ವಿಜ್ಞಾನಿಗಳು, ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಬಂದಿದ್ದರು. ಈ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಚೇತನ್, "ಚಂದ್ರನ ಅಂಗಳದಲ್ಲಿ ಭಾರತ ಹೊಸ ಇತಿಹಾಸವನ್ನೇನೋ ಸೃಷ್ಟಿಸಿದೆ. ಆದರೆ, ಇಸ್ರೋ ವಿಜ್ಞಾನಿಗಳು ತಿರುಪತಿ ತಿಮ್ಮಪ್ಪನಲ್ಲಿ ಪೂಜೆ ಸಲ್ಲಿಸಿದರು. ವಿಜ್ಞಾನಿಗಳಿಗೆ ಈ ಮಟ್ಟದ ಅವೈಜ್ಞಾನಿಕತೆ ಇರಬಾರದು. ಅವರಿಗೆ ತಾವು ಮಾಡುವ ಕೆಲಸ ಮೇಲೆ ನಂಬಿಕೆ ಇರಬೇಕೇ ಹೊರತು, ದೇವರ ಮೇಲಲ್ಲ" ಎಂದಿದ್ದಾರೆ ಚೇತನ್.