ಗಜಪಡೆಯ ಕೀಳು ಮಟ್ಟದ ಪೋಸ್ಟ್ ವಿಚಾರಕ್ಕೆ ನಗುಮೊಗದಲ್ಲೇ ಪ್ರತಿಕ್ರಿಯಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
ಅಶ್ವಿನಿ ಪುನೀತ್ ರಾಜ್ಕುಮಾರ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕೀಳು ಮಟ್ಟದ ಪೋಸ್ಟ್ ದೊಡ್ಡ ಮಟ್ಟದ ಸದ್ದು ಮಾಡಿತ್ತು. ಇದು ಸ್ವತಃ ದರ್ಶನ್ ಅವರಿಗೂ ಬೇಸರ ತರಿಸಿತ್ತು. ಈಗ ಅಶ್ವಿನಿ ಪುನೀತ್ ಈ ಬಗ್ಗೆ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
Ashwini Puneeth Rajkumar: ಕಳೆದ ಎರಡು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್ ಮತ್ತು ದರ್ಶನ್ ಅಭಿಮಾನಿಗಳದ್ದೇ ಸುದ್ದಿ. ಈ ಸಲದ ಐಪಿಎಲ್ನಲ್ಲಿ ಆರ್ಸಿಬಿ ಸೋಲಲು ಅಶ್ವಿನಿ ಪುನೀತ್ ಅವರೇ ಕಾರಣ, ಆರ್ಸಿಬಿ ಅನ್ಬಾಕ್ಸ್ ಇವೆಂಟ್ಗೆ ಅವರನ್ನು ಕರೆಸಿದ್ದಕ್ಕೇ ತಂಡ ಸೋಲಿನ ಸುಳಿಗೆ ಸಿಲುಕಿದೆ ಎಂದು ಗಜಪಡೆ ಹೆಸರಿನ ಟ್ವಿಟರ್ ಖಾತೆಯಿಂದ ಕೀಳು ಮಟ್ಟದ ಪೋಸ್ಟ್ ಹೊರಬಿದ್ದಿತ್ತು. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ದರ್ಶನ್ ಅಭಿಮಾನಿಯ ಬಗ್ಗೆ ವ್ಯಾಪಕ ಟೀಕೆಗಳೂ ಕೇಳಿಬಂದಿದ್ದವು.
ಈ ನಡುವೆ ಅಪ್ಪು ಅಭಿಮಾನಿವಲಯದಲ್ಲೂ ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಜತೆಗೆ ದರ್ಶನ್ ಫ್ಯಾನ್ ಮಾಡಿದ ಈ ಕೆಲಸವನ್ನು ಸುದೀಪ್ ಅಭಿಮಾನಿ ಮಾಡಿದ್ದು ಎಂದೂ ಹಣೆಪಟ್ಟಿ ಕಟ್ಟಲಾಗಿತ್ತು. ಕೊನೆಗೆ ಇದು ದರ್ಶನ್ ಅವರ ಅಭಿಮಾನಿಯೇ ಮಾಡಿದ್ದು ಎಂಬ ವಿಚಾರ ಬಯಲಾಗಿತ್ತು. ಇದರ ರೂಪಾರಿ ಯಾರು? ಈ ಗಜಪಡೆ ಖಾತೆಯನ್ನು ಬಳಸುತ್ತಿದ್ದ ವ್ಯಕ್ತಿಯ ವಿರುದ್ಧ ರೊಚ್ಚಿಗೆದ್ದ ಪುನೀತ್ ರಾಜ್ಕುಮಾರ್ ಅಭಿಮಾನಿಗಳು, ಶುಕ್ರವಾರವೇ ದೂರು ನೀಡಿದ್ದಾರೆ. ಕೂಡಲೇ ಆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಿ ಎಂದಿದ್ದಾರೆ.
ಹೀಗಿರುವಾಗ ಇದೇ ವಿಚಾರದ ಬಗ್ಗೆ ಪಿಆರ್ಕೆ ಬ್ಯಾನರ್ನ ಅಶ್ವಿನಿ ಪುನೀತ್ ರಾಜ್ಕುಮಾರ್ ಸಹ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲಿಯೂ ಸಹ ನೇರವಾಗಿ ನಡೆದ ವಿಚಾರವನ್ನು ಪ್ರಸ್ತಾಪಿಸದೇ, ಪರೋಕ್ಷವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಅದಕ್ಕೆ ವೇದಿಕೆ ಕಲ್ಪಿಸಿದ್ದ O2 ಸಿನಿಮಾದ ಸುದ್ದಿಗೋಷ್ಠಿ. ಆಶಿಕಾ ರಂಗನಾಥ್ ಮತ್ತು ಪ್ರವೀಣ ತೇಜ ಮುಖ್ಯಭೂಮಿಕೆಯಲ್ಲಿರುವ ಸಿನಿಮಾ O2. ಪುನೀತ್ ರಾಜ್ಕುಮಾರ್ ಕಥೆ ಕೇಳಿ, ಚಿತ್ರ ನಿರ್ಮಿಸಲು ಒಪ್ಪಿದ ಕೊನೇ ಸಿನಿಮಾ ಕೂಡ ಇದಾಗಿದೆ. ಈಗ ಇದೇ ಚಿತ್ರ ಬಿಡುಗಡೆಯ ಸನಿಹದಲ್ಲಿದೆ. ಈ ಬಗ್ಗೆ ಅಶ್ವಿನಿ ಪುನೀತ್ ಸೇರಿ ಚಿತ್ರತಂಡ ಆಗಮಿಸಿತ್ತು.
ಎರಡನ್ನೂ ಸಮಾನವಾಗಿಯೇ ನೋಡಬೇಕು
ಪಾಸಿಟಿವ್ ಮತ್ತು ನೆಗೆಟಿವ್ ವಿಚಾರಗಳನ್ನು ನೀವು ಹೇಗೆ ನೋಡ್ತಿರಿ ಎಂದು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ಪ್ರಶ್ನೆ ಎದುರಾಗಿದೆ. ಅದಕ್ಕೆ ಉತ್ತರಿಸಿದ ಅವರು, "ಬೇರೆ ಆಪ್ಷನ್ನೇ ಇಲ್ಲ. ಜೀವನ ಸಾಗಲೇಬೇಕು. ಹಾಗಾಗಿ ಪಾಸಿಟಿವ್ ಮತ್ತು ನೆಗೆಟಿವ್ ಎರಡನ್ನೂ ಸಮಾನವಾಗಿಯೇ ಸ್ವೀಕರಿಸಿದ್ದೇನೆ. ಮುಂದೆಯೂ ಹಾಗೇ ಇರಲಿದೆ" ಎಂದಿದ್ದಾರೆ. ಈ ಮೂಲಕ ಕಳೆದ ಎರಡು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಗುಲ್ಲೆಬ್ಬಿಸಿದ್ದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಅಪ್ಪು ಕನಸು ಮುಂದುವರಿಸಿದ ಅಶ್ವಿನಿ
ಪಿಆರ್ಕೆ ಪ್ರೊಡಕ್ಷನ್ಸ್ನ ಉದ್ದೇಶ ಮೆಚ್ಚುವಂಥದ್ದು. ಚಿತ್ರರಂಗಕ್ಕೆ ಹೊಸಬರು ಬರಬೇಕು, ಹೊಸ ಹೊಸ ಕಥೆಗಳ ಜತೆಗೆ ಹೊಸ ಪ್ರಯೋಗಗಳೂ ಕನ್ನಡದಲ್ಲಾಗಬೇಕೆಂದು ಪಿಆಆರ್ಕೆ ಪ್ರೊಡಕ್ಷನ್ಸ್ ಶುರುಮಾಡಿದ್ದರು ಪುನೀತ್ ರಾಜ್ಕುಮಾರ್. ಅದೇ ರೀತಿ ಒಂದಷ್ಟು ಬಗೆಬಗೆ ಸಿನಿಮಾಗಳನ್ನು ಕನ್ನಡಕ್ಕೆ ನೀಡಿದ್ದಾವರು. ಈಗ ಅವರಿಲ್ಲದ ಮೇಲೆ ಆ ಜವಾಬ್ದಾರಿ ಅಶ್ವಿನಿ ಪುನೀತ್ ಅವರ ಹೆಗಲೇರಿದೆ. ಈ ಮೊದಲು ಅಪ್ಪುಅವರೇ ಕಥೆ ಕೇಳಿ ಫೈನಲ್ ಮಾಡುತ್ತಿದ್ದರು. ಈಗ ಅಶ್ವಿನಿ ಪುನೀತ್ ರಾಜ್ಕುಮಾರ್ ಅದನ್ನು ಮುಂದುವರಿಸಲಿದ್ದಾರಂತೆ.
ರಿಲೀಸ್ ಹಂತಕ್ಕೆ O2
ಅಂದಹಾಗೆ O2 ಸಿನಿಮಾವನ್ನು ಪ್ರಶಾಂತ್ ರಾಜ್ ಮತ್ತು ರಾಘವ್ ನಾಯಕ್ ನಿರ್ದೇಶನ ಮಾಡಿದ್ದಾರೆ. ಪ್ರವೀಣ್ ತೇಜ ನಾಯಕನಾಗಿ ನಟಿಸಿದರೆ, ಆಶಿಕಾ ರಂಗನಾಥ್ ನಾಯಕಿಯಾಗಿದ್ದಾರೆ. ಇನ್ನುಳಿದಂತೆ ಆರ್ಜೆ ಸಿರಿ, ರಂಗಭೂಮಿ ಕಲಾವಿದ ಮೋಹನ್ ಸೇರಿ ಹಲವರು ನಟಿಸಿದ್ದಾರೆ. ಮೆಡಿಕಲ್ ಥ್ರಿಲ್ಲರ್ ಶೈಲಿಯ ಈ ಚಿತ್ರಕ್ಕೆ ನವೀನ್ ಛಾಯಾಗ್ರಹಣ ಮಾಡಿದ್ದಾರೆ. ಈಗಾಗಲೇ ಕಳೆದ ವರ್ಷವೇ ಶೂಟಿಂಗ್ ಮುಗಿಸಿಕೊಂಡಿರುವ ಈ ಸಿನಿಮಾ, ರಿಲೀಸ್ ಹಂತಕ್ಕೆ ಬಂದಿದೆ.