Sreeleela: ನಿರಾಶೆ ತಂದ ಸಿನಿ ಪ್ರಯಾಣ, ಎಂಬಿಬಿಎಸ್ ಓದಿನತ್ತ ಶ್ರೀಲೀಲಾ ಗಮನ
ತೆಲುಗು ಗುಂಟೂರು ಸಿನಿಮಾದಲ್ಲಿ ನಟಿಸಿದ್ದ ಶ್ರೀಲೀಲಾ ಅವರು ಸದ್ಯ ಬೇರಾವ ಸಿನಿಮಾ ಒಪ್ಪಿಕೊಳ್ಳದೆ ಎಂಬಿಬಿಎಸ್ ಪರೀಕ್ಷೆ ಕುರಿತು ಗಮನ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಶ್ರೀಲೀಲಾ ಅಭಿನಯದ ಸ್ಕಂದ, ಆದಿಕೇಶವ ಮತ್ತು ಎಕ್ಸ್ಟ್ರಾರ್ಡಿನರಿ ಮ್ಯಾನ್ ಚಿತ್ರಗಳು ಭಾರಿ ನಿರಾಸೆ ಮೂಡಿಸಿದ್ದವು.

ಕರ್ನಾಟಕ ಮೂಲದ ಟಾಲಿವುಡ್ ನಟಿ ಶ್ರೀಲೀಲಾ ಅವರಿಗೆ ಸಿನಿಮಾ ಕ್ಷೇತ್ರದಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಆದರೆ, ಅವರು ನಟಿಸಿರುವ ಚಿತ್ರಗಳು ಸೂಪರ್ಹಿಟ್ ಆಗದೆ ನಿರಾಶೆ ತಂದಿರುವುದಂತೂ ನಿಜ. ಇತ್ತೀಚಿಗೆ ಬಿಡುಗಡೆಯಾದ ಗುಂಟೂರು ಖಾರಂ ಸಿನಿಮಾದಲ್ಲಿ ಶ್ರೀಲೀಲಾ ಡ್ಯಾನ್ಸ್ಗೆ ಎಲ್ಲರೂ ಶಹಬ್ಬಾಸ್ ಹೇಳಿದ್ರೂ ಆ ಚಿತ್ರ ಬ್ಲಾಕ್ಬಸ್ಟರ್ ಆಗಲಿಲ್ಲ. ಟಾಲಿವುಡ್ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ ಶ್ರೀಲೀಲಾ ತೆಲುಗಿನಲ್ಲಿ ಕಳೆದ ಎರಡು ವರ್ಷಗಳಿಂದ ಸತತವಾಗಿ ಸಿನಿಮಾ ಮಾಡುತ್ತಿದ್ದಾರೆ.
ಅದ್ಭುತ ಸೌಂದರ್ಯ ಹೊಂದಿರುವ ಕರುನಾಡ ನಟಿ ಶ್ರೀಲೀಲಾ ಅವರಿಗೆ ತೆಲುಗಿನಲ್ಲಿ ಸಿನಿಮಾ ಆಫರ್ಗಳು ಸಾಕಷ್ಟು ಬಂದಿವೆ. ಕೆಲವು ತಿಂಗಳು ದಿನಕ್ಕೆ ಮೂರು ಪಾಳಿಯಲ್ಲಿ ಶೂಟಿಂಗ್ನಲ್ಲಿ ಭಾಗವಹಿಸಿದ ದಿನಗಳೂ ಇದ್ದವು. , ಕಳೆದ ವರ್ಷ ಶ್ರೀಲೀಲಾ ಅಭಿನಯದ ಸ್ಕಂದ, ಆದಿಕೇಶವ ಮತ್ತು ಎಕ್ಸ್ಟ್ರಾರ್ಡಿನರಿ ಮ್ಯಾನ್ ಚಿತ್ರಗಳು ಭಾರಿ ನಿರಾಸೆ ಮೂಡಿಸಿದ್ದವು. ಇತ್ತೀಚೆಗಷ್ಟೇ ತೆರೆಕಂಡ ಗುಂಟೂರು ಖಾರಂ ಸಿನಿಮಾ ಕೂಡ ನಿರೀಕ್ಷಿತ ಯಶಸ್ಸು ಗಳಿಸುವಲ್ಲಿ ವಿಫಲವಾಗಿದೆ. ಆದರೆ, ಈ ಕ್ಷಣದಲ್ಲಿ ಶ್ರೀಲೀಲಾ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಎಂಬಿಬಿಎಸ್ ಮಾಡ್ತಿನಿ, ಡಾಕ್ಟರ್ ಶ್ರೀಲೀಲಾ ಆಗ್ತಿನಿ!
ಶ್ರೀಲೀಲಾ ಸಿನಿಮಾದಿಂದ ಸ್ವಲ್ಪ ವಿರಾಮ ತೆಗೆದುಕೊಂಡು ವಿದ್ಯಾಭ್ಯಾಸದತ್ತ ಗಮನ ಹರಿಸಲು ನಿರ್ಧರಿಸಿದ್ದಾರೆ. ಶ್ರೀಲೀಲಾ ಎಂಬಿಬಿಎಸ್ ಓದುತ್ತಿರುವ ಸಂಗತಿ ಎಲ್ಲರಿಗೂ ಗೊತ್ತಿರಬಹುದು. ಅಂತಿಮ ವರ್ಷದ ಪರೀಕ್ಷೆಗೆ ತಯಾರಿ ನಡೆಸಲು ಸಿನಿಮಾದಿಂದ ತುಸು ಬ್ರೇಕ್ ತೆಗೆದುಕೊಳ್ಳಲು ಅವರು ನಿರ್ಧರಿಸಿದ್ದಾರಂತೆ. ಗುಂಟೂರು ಖಾರಂ ಚಿತ್ರೀಕರಣಕ್ಕಾಗಿ ಕೆಲವು ಪರೀಕ್ಷೆಗಳನ್ನು ತಪ್ಪಿಸಿಕೊಂಡಿದ್ದಾರೆ ಎಂದು ಒಟಿಟಿ ಪ್ಲೇ ವರದಿ ಮಾಡಿದೆ.
ವಿಜಯ್ ದೇವರಕೊಂಡ ಜೊತೆ ಸಿನಿಮಾ ಮಾಡಲು ಶ್ರೀಲೀಲಾ ಒಪ್ಪಿಕೊಂಡಿದ್ದಾರೆ. ಆದರೆ, ಇನ್ನೂ ಯೋಜನೆ ಆರಂಭವಾಗಿಲ್ಲ. ಶ್ರೀಲೀಲಾ ಬದಲು ವಿಜಯ್ ದೇವರಕೊಂಡ ಚಿತ್ರದಲ್ಲಿ ರಶ್ಮಿಆ ಮಂದಣ್ಣ ನಟಿಸಲಿದ್ದಾರೆ ಎನ್ನುವ ಸುದ್ದಿಯೂ ಇದೆ. ಅಲ್ಲದೆ, ಪವನ್ ಕಲ್ಯಾಣ್ ಅಭಿನಯದ ಉಸ್ತಾದ್ ಭಗತ್ ಸಿಂಗ್ ಚಿತ್ರದಲ್ಲಿ ಶ್ರೀಲೀಲಾ ನಟಿಸಲಿದ್ದಾರೆ. ಆದರೆ ಸದ್ಯ ಪವನ್ ರಾಜಕೀಯದಲ್ಲಿ ಬ್ಯುಸಿ ಆಗಿರುವುದರಿಂದ ಈ ಸಿನಿಮಾದ ಶೂಟಿಂಗ್ ಕೂಡ ನಿಂತು ಹೋಗಿದೆ. ಅಲ್ಲದೇ ಕಳೆದೊಂದು ತಿಂಗಳಿಂದ ಶ್ರೀಲೀಲಾ ಬೇರೆ ಯಾವುದೇ ಚಿತ್ರಗಳಿಗೆ ಓಕೆ ಹೇಳಿಲ್ಲ.
ಇದರೊಂದಿಗೆ ಶ್ರೀಲೀಲಾ ಸಿನಿಮಾದಿಂದ ಸ್ವಲ್ಪ ಗ್ಯಾಪ್ ತೆಗೆದುಕೊಂಡು ಎಂಬಿಬಿಎಸ್ ಪರೀಕ್ಷೆಗೆ ತಯಾರಿ ನಡೆಸಲು ನಿರ್ಧರಿಸಿದ್ದಾರೆ. ಆ ನಂತರ ಸ್ವಲ್ಪ ರೆಸ್ಟ್ ತೆಗೆದುಕೊಂಡು ಮತ್ತೆ ಸಿನಿಮಾಗಳಲ್ಲಿ ನಟಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.
2023ರಲ್ಲಿ ಶ್ರೀಲೀಲಾ ಅಭಿನಯದ ನಾಲ್ಕು ಚಿತ್ರಗಳು ತೆರೆಕಂಡಿದ್ದವು. ಇದರಲ್ಲಿ ಸ್ಕಂದ, ಆದಿಕೇಶವ, ಎಕ್ಸ್ಟ್ರಾರ್ಡಿನರಿ ಮ್ಯಾನ್ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಹೀನಾಯ ಸೋಲು ಕಂಡವು. ಭಗವಂತ ಕೇಸರಿ ಹಿಟ್ ಆಗಿದ್ದರೂ ಆ ಕೀರ್ತಿ ನಾಯಕ ನಟನಿಗೆ ಹೋಗಿತ್ತು. ಶ್ರೀಲೀಲಾ ಅವರ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ಭಗವಂತ ಕೇಸರಿ ಚಿತ್ರದಲ್ಲಿ ವಿಭಿನ್ನ ಪಾತ್ರವನ್ನು ನಿರ್ವಹಿಸಿದ್ದಾರೆ. ಶ್ರೀಲೀಲಾ ಅವರು ಒಂದೇ ವರ್ಷದಲ್ಲಿ ಮೂರು ಫ್ಲಾಪ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಉತ್ತಮ ಪಾತ್ರಗಳ ಆಯ್ಕೆ ಮಾಡುವಲ್ಲಿ ಎಡುವುತ್ತಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಎಂಬಿಬಿಎಸ್ ಓದಿನೊಂದಿಗೆ ಮುಂದಿನ ಸ್ಕ್ರಿಪ್ಟ್ ಅನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಲು ಯೋಚಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇಮೇಲ್: ht.kannada@htdigital.in