ಕನ್ನಡ ಸುದ್ದಿ  /  ಕ್ರೀಡೆ  /  Ipl 2023: ಧೋನಿ ಕಾಲು ಮುಟ್ಟಿ ನಮಸ್ಕರಿಸಿದ ಗಾಯಕ​; ಇದು ಮಾಹಿ ಸಂಪಾದಿಸಿದ ಗೌರವ ಎಂದ ಫ್ಯಾನ್ಸ್​​

IPL 2023: ಧೋನಿ ಕಾಲು ಮುಟ್ಟಿ ನಮಸ್ಕರಿಸಿದ ಗಾಯಕ​; ಇದು ಮಾಹಿ ಸಂಪಾದಿಸಿದ ಗೌರವ ಎಂದ ಫ್ಯಾನ್ಸ್​​

ಉದ್ಘಾಟನಾ ಪಂದ್ಯಕ್ಕೂ ಮುನ್ನ ವೇದಿಕೆಗೆ ಬಂದ ಸಿಎಸ್​ಕೆ ನಾಯಕ ಎಂಎಸ್ ಧೋನಿ ಅವರ ಕಾಲು ಮುಟ್ಟಿ ಬಾಲಿವುಡ್ ಗಾಯಕ ಅರಿಜಿತ್ ಸಿಂಗ್ ನಮಸ್ಕರಿಸಿದರು. ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಧೋನಿಗೆ ನಮಸ್ಕರಿಸಿದ ಅರಿಜಿತ್​ಸಿಂಗ್​​
ಧೋನಿಗೆ ನಮಸ್ಕರಿಸಿದ ಅರಿಜಿತ್​ಸಿಂಗ್​​

ರಂಗುರಂಗಿನ 16ನೇ ಆವೃತ್ತಿಯ ಐಪಿಎಲ್ (IPL)​​​ ಮೊದಲ ಕದನಕ್ಕೂ ಮುನ್ನ ನಡೆದ ಉದ್ಘಾಟನಾ ಸಮಾರಂಭ ಅದ್ಧೂರಿಯಾಗಿ (IPL 2023 Opening Ceremony) ನೆರವೇರಿತು. ವೈಭವದ ಕಾರ್ಯಕ್ರಮ ಮುಗಿದ ನಂತರ ವೇದಿಕೆಗೆ ಬಂದ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ನಾಯಕ ಮಹೇಂದ್ರ ಸಿಂಗ್​​ ಧೋನಿ ಅವರ ಪಾದವನ್ನು ಸ್ಪರ್ಶಿಸಿ ಬಾಲಿವುಡ್​​​​ ಗಾಯಕ ಅರಿಜಿತ್​ ಸಿಂಗ್​​​​ ನಮಸ್ಕರಿಸಿದರು. ಸದ್ಯ ಈ ಫೋಟೋ ಎಲ್ಲೆಡೆ ವೈರಲ್​ ಆಗುತ್ತಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವೈಭವದ ಉದ್ಘಾಟನಾ ಸಮಾರಂಭ 3 ವರ್ಷಗಳ ಬಳಿಕ ನಡೆಯಿತು. ಮೈದಾನದಲ್ಲಿ ಭಾಗಿಯಾಗಿದ್ದ 1 ಲಕ್ಷಕ್ಕೂ ಅಧಿಕ ಪ್ರೇಕ್ಷಕರನ್ನು ಬಾಲಿವುಡ್‌ ಗಾಯಕ ಅರಿಜಿತ್​ ಸಿಂಗ್‌, ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮತ್ತು ನ್ಯಾಷನಲ್​ ಕ್ರಷ್​​​​ ರಶ್ಮಿಕಾ ಮಂದಣ್ಣ ಅವರು ಸೊಂಟ ಬಳುಕಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಈ ಅದ್ಧೂರಿ ಕಾರ್ಯಕ್ರಮ ಚೆನ್ನೈ ಸೂಪರ್‌ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ನಡುವಿನ ಉದ್ಘಾಟನಾ ಪಂದ್ಯಕ್ಕೂ ಮುನ್ನ ನೆರವೇರಿತು.

ಅದರಲ್ಲೂ ಗಾಯಕ ಅರಿಜಿತ್​ ಸಿಂಗ್​ (Arijit Singh) ತಮ್ಮ ಸಂಗೀತದ ಮಾಂತ್ರಿಕತೆಯಿಂದ ಪ್ರೇಕ್ಷಕರನ್ನು ಮನ ಸೆಳೆದರು. ’ವಂದೇ ಮಾತರಂ’ ಹಾಡು, ಬ್ರಹ್ಮಾಸ್ತ್ರ ಚಿತ್ರದ ’ಕೇಸರಿಯಾ‘, ‘ದೇವಾ’, 'ಜಬ್ ಹ್ಯಾರಿ ಮೆಟ್ ಸೇಜಲ್', ’ಜೀತೆಗಾ ಇಂಡಿಯಾ ಜೀತೆಗಾ’ ಸೇರಿ ಪ್ರಮುಖ ಹಿಂದಿ ಚಿತ್ರಗಳ ಹಾಡುಗಳನ್ನು ಹಾಡುವ ಮೂಲಕ ಅರಿಜಿತ್​ ಸಿಂಗ್ ತಂಡ ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ಪ್ರೇಕ್ಷರನ್ನ ರಂಜಿಸಿದರು. ಗಾಯಕರ ಜೊತೆಗೆಯೇ ನೆರೆದಿದ್ದ ಪ್ರೇಕ್ಷಕರು ಹಾಡುಗಳಿಗೆ ಗುನುಗಿದ್ದು ವಿಶೇಷವಾಗಿತ್ತು.

ಬಳಿಕ ಪ್ಯಾನ್ ಇಂಡಿಯಾ ನಟಿಯರಾದ ತಮನ್ನಾ ಭಾಟಿಯಾ (Tamannaah Bhatia) ಮತ್ತು​ ರಶ್ಮಿಕಾ ಮಂದಣ್ಣ (Rashmika Mandanna) ತಮ್ಮ ಅದ್ಭುತ ನೃತ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ತಮನ್ನಾ ಪುಷ್ಪಾ ಚಿತ್ರದ ’ಊ ಅಂಟಾವಾ, ಊಹು ಅಂಟಾವ’ ಹಾಡಿಗೆ ಹೆಜ್ಜೆ ಹಾಕಿದ್ದು, ಪ್ರೇಕ್ಷಕರನ್ನೂ ಹುಚ್ಚೆದ್ದು ಕುಣಿಯುವಂತೆ ಮಾಡಿತು. ಬಳಿಕ ವೇದಿಕೆಯಲ್ಲಿ ಹೆಜ್ಜೆ ಹಾಕಿದ ರಶ್ಮಿಕಾ ತೆಲುಗಿನ ಹಾಡುಗಳಿಗೆ ಭರ್ಜರಿ ಸ್ಟೆಪ್ಸ್​ ಹಾಕಿದರು. ಪುಷ್ಪಾ ಚಿತ್ರದ ಶ್ರೀವಲ್ಲಿ, ಸಾಮಿ, ಬಳಿಕ ಆಸ್ಕರ್​ ಪ್ರಶಸ್ತಿ ಗೆದ್ದ RRR ಚಿತ್ರದ ನಾಟು ನಾಟು ಹಾಡಿ ಹೆಜ್ಜೆ ಹಾಕಿದರು.

ಸಮಾರಂಭ ಮುಗಿದ ಬಳಿಕ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ (Roger Binny), ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ (Jay Shah), ಐಪಿಎಲ್​ ಅಧ್ಯಕ್ಷ ಅರುಣ್​ ಸಿಂಗ್​ ಧುಮಾಕ್​ (Arun Singh Dhumal) ವೇದಿಕೆ ಬಂದರು. ರಥದ ಮೂಲಕ ವೇದಿಕೆ ಬಂದ ಧೋನಿ ಅವರ ಪಾದವನ್ನು ಸ್ಪರ್ಶಿಸಿ ನಮಸ್ಕರಿಸಿದರು. ಈ ಫೋಟೋ ಈಗ ಎಲ್ಲೆಲ್ಲೂ ವೈರಲ್​ ಆಗುತ್ತಿದೆ.

ಚೆನ್ನೈಗೆ ಸೋಲು

ಈ ಪಂದ್ಯದಲ್ಲಿ ಟಾಸ್​​​ ಸೋತು ಬ್ಯಾಟಿಂಗ್​ ನಡಸಿದ ಚೆನ್ನೈ ಸೂಪರ್ ಕಿಂಗ್ಸ್​​​ ತಂಡವು, ಋತುರಾಜ್​ ಗಾಯಕ್ವಾಡ್​ ಅವರ ಭರ್ಜರಿ ಅರ್ಧಶತಕದ (92 ರನ್​​​) ನೆರವಿನಿಂದ 178 ರನ್​ಗಳ ಸವಾಲಿನ ಮೊತ್ತ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಗುಜರಾತ್​​ಗೆ 19.2 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ ಗೆಲುವಿನ ದಡ ಸೇರಿತು. ಶುಭ್ಮನ್ ಗಿಲ್​ ಅರ್ಧಶತಕ ಸಿಡಿಸಿ ಗೆಲುವಿನ ರೂವಾರಿ ಎನಿಸಿದರು. 5 ವಿಕೆಟ್​ ಗೆಲುವು ದಾಖಲಿಸಿದ ಹಾರ್ದಿಕ್​ ಪಡೆ, ಗುರು ಧೋನಿ ತಂಡಕ್ಕೆ ಸೋಲಿನ ರುಚಿ ತೋರಿಸಿದರು.