ಕನ್ನಡ ಸುದ್ದಿ  /  Entertainment  /  Actor Yatiraj Created A New Record In The Kannada Film Industry With Bombe Heluthaite

Bombe Helutaite Movie: ‘ಬೊಂಬೆ ಹೇಳುತೈತೆ’ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಿದ ನಟ ಯತಿರಾಜ್

ನಟ ಯತಿರಾಜ್‌ ಇದೀಗ ಬೊಂಬೆ ಹೇಳುತೈತೆ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸಿದ್ದಾರೆ. ಅದಕ್ಕೂ ಮುನ್ನ ಈ ಚಿತ್ರದ ವಿಶೇಷತೆಯೊಂದನ್ನು ಹೇಳಿಕೊಂಡಿದ್ದಾರೆ.

‘ಬೊಂಬೆ ಹೇಳುತೈತೆ’ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಿದ ನಟ ಯತಿರಾಜ್
‘ಬೊಂಬೆ ಹೇಳುತೈತೆ’ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಿದ ನಟ ಯತಿರಾಜ್

Bombe Helutaite Movie: ಸಿನಿಮಾ ಪತ್ರಕರ್ತನಾಗಿ ಪರಿಚಿತರಾಗಿದ್ದ ಯತಿರಾಜ್ ನಂತರ ಕಲಾವಿದನಾಗಿ ಚಿರಪರಿಚಿತರಾದರು. ಈಗ ಯತಿರಾಜ್ ನಿರ್ದೇಶಕನಾಗೂ ಪ್ರಸಿದ್ದರಾಗುತ್ತಿದ್ದಾರೆ. ಪ್ರಸ್ತುತ ಅವರು ನಿರ್ದೇಶಿಸಿ, ಏಕಪಾತ್ರದಲ್ಲಿ ನಟಿಸಿರುವ ‘ಬೊಂಬೆ ಹೇಳುತೈತೆ’ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಈ ಚಿತ್ರದ ಮೂಲಕ ಯತಿರಾಜ್ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಈ ಬಗ್ಗೆ ಮಾಹಿತಿ ನೀಡುವ ಯತಿರಾಜ್‌, "ನಾನು ಇಪ್ಪತ್ತೈದು ವರ್ಷಗಳ ಹಿಂದೆ ಸಿನಿಮಾದ ಒಂದು ಸನ್ನಿವೇಶದಲ್ಲಿ ಕಂಡರೆ ಸಾಕು ಎಂದುಕೊಂಡಿದ್ದವನು. ಆನಂತರ ಅನೇಕ ಚಿತ್ರಗಳಲ್ಲಿ ಅಭಿನಯಿಸಿದೆ. ನಂತರ ನಿರ್ದೇಶಕನಾಗುವ ಕನಸು ಈಡೇರಿತು. ಈ ತನಕ ಆರು ಚಿತ್ರಗಳನ್ನು ನಿರ್ದೇಶಿಸಿದ್ಧೇನೆ. ಇಡೀ ಚಿತ್ರ ಪೂರ್ತಿ ಒಂದೇ ಪಾತ್ರವಿರಬೇಕು. ಅದರಲ್ಲಿ ನಟಿಸಬೇಕು ಎಂಬ ಆಸೆಯಿತ್ತು. ಇದಕ್ಕೆ ಸ್ಪೂರ್ತಿ ಹಿಂದಿಯಲ್ಲಿ ಸುನಿಲ್ ದತ್ ಹಾಗೂ ತಮಿಳಿನಲ್ಲಿ ಪಾರ್ಥಿಬನ್ ಅವರು ಎಂದರೆ ತಪ್ಪಾಗಲಾರದು" ಎಂದರು.

ಮುಂದುವರಿದು ಮಾತನಾಡಿದ ಅವರು, "ಈ ವಿಷಯವನ್ನು ನನ್ನ ಮಗ ಪೃಥ್ವಿರಾಜ್‌ ಮುಂದೆ ಹೇಳಿದಾಗ, ಅವನು ‘ಬೊಂಬೆ ಹೇಳುತೈತೆ’ ಚಿತ್ರದ ಕಥೆ ಹೇಳಿದ್ದ. ಪರಿಕಲ್ಪನೆ ಅವನದೆ. ಕಥೆ ಕೇಳಿ ಮೆಚ್ಚಿದ ಮಾರುತಿ ಪ್ರಸಾದ್ ನಿರ್ಮಾಣಕ್ಕೆ ಮುಂದಾದರು. ಚನ್ನಪಟ್ಟಣದ ಒಂದು ಬೊಂಬೆ ಅಂಗಡಿಯಲ್ಲೇ ಹೆಚ್ಚಿನ ಚಿತ್ರೀಕರಣವಾಗಿದೆ. ಚಿತ್ರ ಸೆನ್ಸಾರ್ ಮುಗಿಸಿಕೊಂಡು ಬಿಡುಗಡೆಗೆ ಸಿದ್ದವಾಗಿದೆ. ಚಿತ್ರ ಮುಗಿದ ಮೇಲೆ ನನಗೊಂದು ವಿಷಯ ತಿಳಿಯಿತು. ಈವರೆಗೂ ಕನ್ನಡದಲ್ಲಿ ಒಬ್ಬ ವ್ಯಕ್ತಿ ತಾನೇ ನಿರ್ದೇಶಿಸಿ, ಏಕಪಾತ್ರದಲ್ಲಿ ನಟಿಸಿರುವ ಯಾವ ಚಿತ್ರಗಳು ಬಂದಿಲ್ಲ ಎಂದು.

ಏಕ ಪಾತ್ರ, ದ್ವಿಪಾತ್ರ ಚಿತ್ರಗಳು ಬಂದಿದೆಯಾದರೂ, ನಿರ್ದೇಶಕರು ಬೇರೆಯವರಾಗಿರುತ್ತಾರೆ. ಅವರೆ ನಿರ್ದೇಶಿಸಿ ಜೊತೆಗೆ ಏಕಪಾತ್ರದಲ್ಲಿ ನಟಿಸಿರುವ ಕನ್ನಡದ ಮೊದಲ ಚಿತ್ರ ಇದೇ ಎನ್ನಬಹುದು. ಹಾಗಂತ ನಾನು ಯಾವ ದಾಖಲೆಗೂ ಇದನ್ನು ಕಳುಹಿಸಿಲ್ಲ. ಇದೇ ಮಾರ್ಚ್ 23ರ ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗಲಿದೆ. ಅದರಲ್ಲಿ ನಮ್ಮ‌ ಚಿತ್ರ ಪ್ರದರ್ಶನವಾಗಬೇಕೆಂಬ ಆಸೆ. ಆ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದೇನೆ. ಸಕಾಲ ನೋಡಿಕೊಂಡು ಮುಂದಿನ ದಿನಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತೇನೆ ಎಂದ ನಿರ್ದೇಶಕ ಹಾಗೂ ನಟ ಯತಿರಾಜ್ ಹೇಳಿಕೊಂಡರು.

ಕಥೆ ಬರೆದಿರುವ ಪೃಥ್ವಿರಾಜ್, ಛಾಯಾಗ್ರಾಹಕ ವಿದ್ಯಾ ನಾಗೇಶ್ ಹಾಗೂ ಸಹ ನಿರ್ದೇಶಕ ಅರುಣ್ ಚಿತ್ರದ ಕುರಿತು ಮಾತನಾಡಿದರು. ರಾಘವೇಂದ್ರ ಚಿತ್ರವಾಣಿಯ ಪಿಆರ್‌ಒ ಸುಧೀಂದ್ರ ವೆಂಕಟೇಶ್, ಸಿರಿ ಮ್ಯೂಸಿಕ್‌ನ ಚಿಕ್ಕಣ್ಣ ಮತ್ತು ಮುಖ್ಯ ಅತಿಥಿಗಳಾಗಿ ಬಿಬಿಎಂಪಿ ಸಂಪರ್ಕಾಧಿಕಾರಿ ಶಂಕರ್ ಚಿತ್ರಕ್ಕೆ ಶುಭ ಕೋರಿದರು. ಪತ್ರಿಕಾಗೋಷ್ಠಿಗೂ ಮುನ್ನ ಯತಿರಾಜ್ ಅವರೆ ಬರೆದಿರುವ, ರಾಜ್ ಭಾಸ್ಕರ್ ಸಂಗೀತ ನೀಡಿರುವ ಹಾಡನ್ನು ಹಾಗೂ ಚಿತ್ರದ ಟ್ರೇಲರ್ ಪ್ರದರ್ಶಿಸಲಾಯಿತು.

IPL_Entry_Point