Yuva Movie: ಯುವ ರಾಜ್ಕುಮಾರ್ ನಟನೆಯ ಯುವ ಸಿನಿಮಾ ಏಕೆ ನೋಡಬೇಕು? ಇಲ್ಲಿದೆ 5 ಪವರ್ಫುಲ್ ಕಾರಣಗಳು
Yuva Kannada Movie: ಈ ವಾರ ಭಾರತದಲ್ಲಿ 27 ಸಿನಿಮಾಗಳು ರಿಲೀಸ್ ಆಗಿವೆ. ಕನ್ನಡದಲ್ಲಿ ಯುವ ರಾಜ್ಕುಮಾರ್ ನಟನೆಯ ಯುವ ಸಿನಿಮಾ ರಿಲೀಸ್ ಆಗಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಸಿನಿಮಾ ಏಕೆ ನೋಡಬೇಕು? ಈ ಸಿನಿಮಾದಲ್ಲಿ ಅಂತಹ ಮಹತ್ವವಾದ ಅಂಶಗಳೇನುಂಟು. ಇತ್ಯಾದಿ ವಿವರ ಪಡೆಯೋಣ ಬನ್ನಿ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ, ಸಂತೋಷ್ ಆನಂದ್ರಾವ್ ನಿರ್ದೇಶನದ, ಡಾ. ರಾಜ್ಕುಮಾರ್ ಕುಟುಂಬದ ಮೂರನೇ ತಲೆಮಾರಿನ ಯುವ ರಾಜ್ಕುಮಾರ್ ಅಭಿನಯದ ಯುವ ಸಿನಿಮಾ ಇಂದು ಬಿಡುಗಡೆಯಾಗಿದೆ. ಈ ಸಿನಿಮಾವನ್ನು ನೋಡಿರುವ ಹಿಂದೂಸ್ತಾನ್ ಟೈಮ್ಸ್ ಕನ್ನಡ ವಿಮರ್ಶಕರು " ಮೊದಲ ಸಿನಿಮಾದಲ್ಲೇ ಭರವಸೆ ಡೆಲಿವರಿ ಮಾಡಿದ ಯುವ" ಎಂದು ವಿಮರ್ಶೆ ಬರೆದಿದ್ದಾರೆ. ಕೆಲವೊಂದು ಮೈನಸ್ ಪಾಯಿಂಟ್ಗಳಿದ್ದರೂ ಸಿನಿಮಾ ಮುಗಿದು ಹೊರಬಂದಾಗ "ಸಿನಿಮಾ ಚೆನ್ನಾಗಿದೆ, ನೋಡಬಹುದು" ಎಂಬ ಅಭಿಪ್ರಾಯ ಮೂಡಿಸುವಲ್ಲಿ ಯುವ ಯಶಸ್ವಿಯಾಗಿದೆ. ಯುವ ಸಿನಿಮಾ ಏಕೆ ನೋಡಬೇಕು? ಎಂಬ ಪ್ರಶ್ನೆಗಳಿದ್ದರೆ ಈ ಮುಂದಿನ ಐದು ಕಾರಣಗಳನ್ನು ಅವಲೋಕಿಸಬಹುದು.
ಟ್ರೆಂಡಿಂಗ್ ಸುದ್ದಿ
ಕಾರಣ 1: ಡೆಲಿವರಿ ಬಾಯ್ಸ್ ಕಥೆ
ಈ ಸಿನಿಮಾದಲ್ಲಿ ಯುವ ಡೆಲಿವರಿ ಬಾಯ್ಸ್ ಆಗಿ ಕಾಣಿಸಿಕೊಂಡಿದ್ದಾನೆ. ಡೆಲಿವರಿ ಬಾಯ್ಗಳ ಹಲವು ಕಷ್ಟಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಯಾರೋ ಒಬ್ಬರು ಮಾಡಿದ ತಪ್ಪಿನಿಂದ ಡೆಲಿವರಿ ಬಾಯ್ಗಳ ಕುರಿತು ತಪ್ಪಾಗಿ ತಿಳಿದುಕೊಳ್ಳುವುದು, ಡೆಲಿವರಿ ಬಾಯ್ಗಳಿಗೆ ಡೆಲಿವರಿ ಆರ್ಡರ್ ನೀಡಿರುವವರಿಂದ ಆಗುವ ತೊಂದರೆಗಳು, ಅವರ ಬದುಕಿನ ಕಷ್ಟ, ಜಂಜಾಟಕ್ಕೆ ಕನ್ನಡಿ ಹಿಡಿಯುವ ಕೆಲಸವನ್ನು ಈ ಸಿನಿಮಾ ಮಾಡಿದೆ.
ಕಾರಣ 2: ಸಂತೋಷ್ ಆನಂದ್ ರಾಮ್ ಸಿನಿಮಾ
ಸ್ಯಾಂಡಲ್ವುಡ್ನ ಪ್ರತಿಭಾನ್ವಿತ ನಿರ್ದೇಶಕ ಸಂತೋಷ್ ಆನಂದ್ರಾಮ್ ಈಗಾಗಲೇ ಹಲವು ಸಿನಿಮಾಗಳಲ್ಲಿ ತನ್ನ ಪ್ರತಿಭೆ ತೋರಿಸಿದ್ದಾರೆ. ಪುನೀತ್ ರಾಜ್ಕುಮಾರ್ ನಟನೆಯ ಬ್ಲಾಕ್ಬಸ್ಟರ್ ಸಿನಿಮಾ ರಾಜಕುಮಾರ್ ನಿರ್ದೇಶನ ಮಾಡಿದ್ದು ಇವರೇ. ಇದೇ ಮೊದಲ ಬಾರಿಗೆ ಯುವ ರಾಜ್ಕುಮಾರ್ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಬಂದ ವಿಮರ್ಶೆಗಳು ಯುವ ಸಿನಿಮಾದ ಕುರಿತು ಪಾಸಿಟೀವ್ ರಿವ್ಯೂ ನೀಡಿವೆ.
ಕಾರಣ 3: ಹೊಂಬಾಳೆ ಫಿಲ್ಮ್ಸ್ ನಿರ್ಮಾಣ
ಯುವ ಸಿನಿಮಾ ನೋಡಲು ಇದು ಇನ್ನೊಂದು ಕಾರಣ. ಹೊಂಬಾಳೆ ಫಿಲ್ಮ್ಸ್ನ ವಿಜಯ್ ಕಿರಗಂದೂರ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಕೆಜಿಎಫ್, ಕಾಂತಾರ, ರಾಜಕುಮಾರ, ಮಾಸ್ಟರ್ಪೀಸ್, ಸಲಾರ್ನಂತಹ ಹಲವು ಸಿನಿಮಾಗಳನ್ನು ಹೊಂಬಾಳೆ ಫಿಲ್ಮ್ಸ್ ನೀಡಿದೆ. ಹೊಂಬಾಳೆ ಫಿಲ್ಮ್ಸ್ ಇದ್ದರೆ ಬಜೆಟ್ ಭಯ ಬೇಡ, ತಾಂತ್ರಿಕವಾಗಿಯೂ ಉತ್ತಮವಾಗಿರುತ್ತದೆ ಎನ್ನುವುದು ಈಗಾಗಲೇ ಸಾಬೀತಾಗಿದೆ. ಯುವ ಸಿನಿಮಾವೂ ತಾಂತ್ರಿಕವಾಗಿ, ಬಜೆಟ್ ದೃಷ್ಟಿಯಿಂದ ಉತ್ತಮವಾಗಿರಲು ಹೊಂಬಾಳೆ ಫಿಲ್ಮ್ಸ್ ಕಾರಣವಾಗಿದೆ.
ಕಾರಣ 4: ಪುನೀತ್ ರಾಜ್ಕುಮಾರ್ ಘಮ
ಈ ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ಘಮವಿದೆ. ಅಪ್ಪು ಅಭಿಮಾನಿಗಳು ಯುವನಲ್ಲಿ ಪುನೀತ್ ರಾಜ್ಕುಮಾರ್ರನ್ನು ನೋಡುತ್ತಿದ್ದಾರೆ. ಸಿನಿಮಾದಲ್ಲೂ ಅಲ್ಲಲ್ಲಿ ಅಪ್ಪುವಿನ ನೆನಪಾಗುವ ಸಂಗತಿಗಳು ಇವೆ. ಯುವ ಕೂಡ ರಾಜಕುಮಾರದಂತೆ ಫೀಲ್ ಗುಡ್ ಸಿನಿಮಾವಾಗಿದೆ.
ಕಾರಣ 5: ಮೂರನೇ ತಲೆಮಾರಿನ ಯಶಸ್ಸು
ಈಗಾಗಲೇ ರಾಜ್ಕುಮಾರ್ ಕುಟುಂಬದ ಎರಡು ತಲೆಮಾರು ಯಶಸ್ಸು ಪಡೆದಿವೆ. ಮೂರನೇ ತಲೆಮಾರಿಗೆ ಅಂದುಕೊಂಡಷ್ಟು ಯಶಸ್ಸು ದೊರಕಿಲ್ಲ. ಯುವ ರಾಜ್ಕುಮಾರ್ ಸಹೋದರ ವಿನಯ್ ರಾಜ್ಕುಮಾರ್ ಅವರು ಒಳ್ಳೊಳ್ಳೆಯ ಕಥೆಯ ಸಿನಿಮಾ ಆಯ್ಕೆ ಮಾಡಿಕೊಂಡರೂ ಯಶಸ್ಸು ದೊರಕಿಲ್ಲ. ಹೀಗಾಗಿ, ಸ್ಯಾಂಡಲ್ವುಡ್ ಈಗ ಯುವ ರಾಜ್ಕುಮಾರ್ ಮೇಲೆ ಭರವಸೆ ಇಟ್ಟಿದೆ.
ಇವಿಷ್ಟು ಅಲ್ಲದೆ ಈಗ ಕನ್ನಡ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ನೋಡುವವರು ಕಡಿಮೆಯಾಗಿದ್ದಾರೆ. ಇದರಿಂದ ಕನ್ನಡ ಚಿತ್ರರಂಗವೂ ಕಷ್ಟದಲ್ಲಿದೆ. ಒಳ್ಳೊಳ್ಳೆಯ ಸಿನಿಮಾಗಳು ಬಂದಾಗ ಪ್ರೇಕ್ಷಕರು ಚಿತ್ರಮಂದಿರಕ್ಕೆ ಹೋಗಿ ಚಿತ್ರಗಳನ್ನು ನೋಡಿ ಪ್ರೋತ್ಸಾಹಿಸಬೇಕಿದೆ.