ಕನ್ನಡ ಸುದ್ದಿ  /  Nation And-world  /  Heart Attack While Giving Discourse, Professor Ranjay Singh Dies On Stage

Heart attack death: ಪ್ರವಚನ ನೀಡುವಾಗ ಹೃದಯಾಘಾತ: ವೇದಿಕೆಯಲ್ಲೇ ಕುಸಿದು ಬಿದ್ದು ಪ್ರೊಫೆಸರ್ ಸಾವು.. ವಿಡಿಯೋ ನೋಡಿ

ಬಿಹಾರದ ಛಾಪ್ರಾದಲ್ಲಿರುವ ಮಾರುತಿ ಮಾನಸ ಮಂದಿರದ ಪ್ರಧಾನ ಕಾರ್ಯದರ್ಶಿ, ಪ್ರಸಿದ್ಧ ಶಿಕ್ಷಣತಜ್ಞ ಪ್ರೊಫೆಸರ್ ರಂಜಯ್ ಸಿಂಗ್ ಅವರು ಪ್ರವಚನ ನೀಡುವ ವೇಳೆ ವೇದಿಕೆ ಮೇಲೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ವೇದಿಕೆಯಲ್ಲೇ ಕುಸಿದು ಬಿದ್ದು ಪ್ರೊಫೆಸರ್ ಸಾವು
ವೇದಿಕೆಯಲ್ಲೇ ಕುಸಿದು ಬಿದ್ದು ಪ್ರೊಫೆಸರ್ ಸಾವು

ಬಿಹಾರ: ಬಿಹಾರದ ಛಾಪ್ರಾದಲ್ಲಿರುವ ಮಾರುತಿ ಮಾನಸ ಮಂದಿರದ ಪ್ರಧಾನ ಕಾರ್ಯದರ್ಶಿ, ಪ್ರಸಿದ್ಧ ಶಿಕ್ಷಣತಜ್ಞ ಪ್ರೊಫೆಸರ್ ರಂಜಯ್ ಸಿಂಗ್ ಅವರು ಪ್ರವಚನ ನೀಡುವ ವೇಳೆ ವೇದಿಕೆ ಮೇಲೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ದೇವಸ್ಥಾನದಲ್ಲಿ ಪ್ರವಚನ ಸಭೆ ನಡೆಸುತ್ತಿದ್ದರು. ಮೈಕ್​​ನಲ್ಲಿ ಮಾತನಾಡುತ್ತಿದ್ದ ಅವರು ಇದ್ದಕ್ಕಿದ್ದಂತೆಯೇ ಕಣ್ಣು ಮೇಲೆ ಮಾಡಿಕೊಂಡು ಕುಸಿದು ಬಿದ್ದಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವರದಿಗಳ ಪ್ರಕಾರ ಈ ಘಟನೆ ಶನಿವಾರ ಸಂಜೆ ನಡೆದಿದೆ. ಪ್ರೊಫೆಸರ್ ರಂಜಯ್ ಸಿಂಗ್ ನಗರದ ಪ್ರಸಿದ್ಧ ವ್ಯಕ್ತಿಯಾಗಿದ್ದರು. ಹನುಮ ಜಯಂತಿ ಆಚರಣೆಯ ಕಾರ್ಯದರ್ಶಿಯಾಗಿದ್ದರು. ಇದಲ್ಲದೇ ಮಾರುತಿ ಮಾನಸ ದೇವಸ್ಥಾನದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಸಂಜೆ ದೇವಸ್ಥಾನದ ಆವರಣದಲ್ಲಿಯೇ ಪ್ರವಚನ ನೀಡುತ್ತಿದ್ದರು. ವೇದಿಕೆಯಿಂದ ಸಭಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಹಠಾತ್ ಹೃದಯಾಘಾತಕ್ಕೆ ಒಳಗಾದರು. ಕೈಯಲ್ಲಿ ಮೈಕ್ ಹಿಡಿದುಕೊಂಡಿದ್ದ ರಂಜಯ್ ಸಿಂಗ್ ಏಕಾಏಕಿ ವೇದಿಕೆ ಮೇಲೆ ಕುಸಿದು ಬಿದ್ದಿದ್ದಾರೆ.

ಅಲ್ಲಿದ್ದವರಿಗೆ ಒಮ್ಮೆಲೇ ಏನೂ ಅರ್ಥವಾಗಲಿಲ್ಲ. ಪ್ರೊಫೆಸರ್ ರಂಜಯ್ ಸಿಂಗ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಶೀಘ್ರದಲ್ಲೇ ಅವರ ಸಾವಿನ ಸುದ್ದಿ ಹರಡಿತು. ಉಪದೇಶ ಮಾಡುವಾಗ ಹಠಾತ್ ಸಾವಿನಿಂದ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ. ಪ್ರೊಫೆಸರ್ ರಂಜಯ್ ಸಿಂಗ್ ಪ್ರಸಿದ್ಧ ಶಿಕ್ಷಣತಜ್ಞರೂ ಆಗಿದ್ದು, ಅವರಿಗೆ ಸುಮಾರು 80 ವರ್ಷ ವಯಸ್ಸಾಗಿತ್ತು.

ಹಾಡುತ್ತಲೇ ಗಾಯಕ ಸಾವು

ಕೆಲ ದಿನಗಳ ಹಿಂದಷ್ಟೇ ವೇದಿಕೆ ಮೇಲೆ ಹಾಡುವಾಗಲೇ ಗಾಯಕರೊಬ್ಬರು ಹೃದಯಾಘಾತದಿಂದ ಕುಸಿದುಬಿದ್ದು ನಿಧನರಾಗಿರುವ ಘಟನೆ ಒಡಿಶಾದಲ್ಲಿ ನಡೆದಿತ್ತು. ಒಡಿಶಾದ ಖ್ಯಾತ ಗಾಯಕ ಮುರಳಿ ಮೊಹಪಾತ್ರ ಇತ್ತೀಚೆಗೆ ನವರಾತ್ರಿ ಅಂಗವಾಗಿ ಏರ್ಪಡಿಸಿದ್ದ ದುರ್ಗಾ ಪೂಜೆಯ ಕಾರ್ಯಕ್ರಮವೊಂದರಲ್ಲಿ ಹಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿತ್ತು.

ಒಡಿಶಾದ ಕೋರತ್‌ಪುರ್‌ ಜಿಲ್ಲೆಯ ಜೇಯ್‌ಪುರ್‌ ಎಂಬಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಕೆಲ ಹೊತ್ತು ಮುರಳಿ ಮೊಹಪಾತ್ರ ಚೇರ್‌ ಮೇಲೆ ಕುಳಿತು ಹಾಡುತ್ತಿದ್ದರು. ಅದರೆ ಸ್ವಲ್ಪ ಸಮಯದ ಬಳಿಕ ಅವರು ಕುಸಿದುಬಿದ್ದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದವರು ಮುರಳಿ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಅಷ್ಟರಲ್ಲಿ ಅವರು ನಿಧನರಾಗಿದ್ದರು. ಮುರಳಿ ಅವರಿಗೆ 59 ವರ್ಷ ವಯಸ್ಸಾಗಿತ್ತು. ಮುರಳಿ ಮೊಹಪಾತ್ರ, ಒಡಿಶಾದಲ್ಲಿ ಕೋಕಾ ಭಾಯ್‌ ಎಂದೇ ಹೆಸರಾಗಿದ್ದರು.

ವೇದಿಕೆ ಮೇಲೆಯೇ ರಾವಣ ಪಾತ್ರಧಾರಿ ಸಾವು

ಇನ್ನು ನವರಾತ್ರಿಯ ಸಂದರ್ಭ ರಾಮಲೀಲಾ ಕಾರ್ಯಕ್ರಮದ ವೇಳೆ ರಾವಣನ ಪಾತ್ರ ಮಾಡುತ್ತಿದ್ದ ವ್ಯಕ್ತಿ ಹೃದಯಾಘಾತಕ್ಕೆ ಒಳಗಾಗಿ ವೇದಿಕೆ ಮೇಲೆ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆದಿತ್ತು.

‘ಸೀತಾಹರಣ’ ಸಂಚಿಕೆಯಲ್ಲಿ ‘ರಾವಣ’ ಪಾತ್ರದಲ್ಲಿ ನಟಿಸುತ್ತಿದ್ದ ಮೃತ ವ್ಯಕ್ತಿಯನ್ನು ಪತಿರಾಮ್ (60) ಎಂದು ಗುರುತಿಸಲಾಗಿದೆ. ಪಾತ್ರ ಮಾಡುತ್ತಿದ್ದ ವೇಳೆ ನೋವಿನಿಂದ ಎದೆಯನ್ನು ಹಿಡಿದುಕೊಂಡು ಕುಸಿದು ಬಿದ್ದಿದ್ದಾರೆ. ಕಾರ್ಯಕ್ರಮವನ್ನು ನಿಲ್ಲಿಸಿ ರಾಮಲೀಲಾ ಸಮಿತಿಯ ಸದಸ್ಯರು ಪತಿರಾಮ್ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದರು. ಆದರೆ ಅಷ್ಟರಲ್ಲಾಗಲೇ ಪತಿರಾಮ್​ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ನಂತರ ಅವರ ಸಾವಿಗೆ ಹೃದಯ ಸ್ತಂಭನವೇ ಕಾರಣ ಎಂದು ವೈದ್ಯರು ದೃಢಪಡಿಸಿದ್ದರು.

ಇದಕ್ಕೂ ಮುನ್ನ ಫತೇಪುರ್ ಜಿಲ್ಲೆಯ ರಾಮಲೀಲಾ ಕಾರ್ಯಕ್ರಮದ 'ಲಂಕಾ ದಹನ್' ಸಂಚಿಕೆಯಲ್ಲಿ ಹನುಮಾನ್ ಪಾತ್ರವನ್ನು ನಿರ್ವಹಿಸುತ್ತಿದ್ದ 50 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಮೃತ ವ್ಯಕ್ತಿಯನ್ನು ರಾಮ್ ಸ್ವರೂಪ್ ಎಂದು ಗುರುತಿಸಲಾಗಿದೆ. ಫತೇಪುರ್ ಜಿಲ್ಲೆಯ ಸೇಲಂಪುರ್ ಗ್ರಾಮದಲ್ಲಿ ಹನುಮಾನ್ ಪಾತ್ರ ಮಾಡುತ್ತಿದ್ದ ವೇಳೆ ಅವರಿಗೆ ಹೃದಯಾಘಾತವಾಗಿದೆ. ವೇದಿಕೆ ಮೇಲಿಂದ ಕೆಳಗೆ ಕುಸಿದು ಬಿದ್ದು ಮೃತಪಟ್ಟಿದ್ದರು.

IPL_Entry_Point

ವಿಭಾಗ