ಕನ್ನಡ ಸುದ್ದಿ  /  Nation And-world  /  Tripura Assembly Elections Bjp Retains Tripura Wins 32 Seats Tipra Motha Shines

Tripura election result: ತ್ರಿಪುರಾ ಉಳಿಸಿಕೊಂಡ ಬಿಜೆಪಿ; 32 ಸ್ಥಾನಗಳ ಸ್ಪಷ್ಟ ಬಹುಮತದ ಗೆಲುವು; ಥ್ಯಾಂಕ್ಸ್ ಎಂದ ನಮೋ

ತ್ರಿಪುರಾದಲ್ಲಿ ಮತ್ತೊಮ್ಮೆ ಕೇಸರಿ ಪಕ್ಷ ಶೈನ್ ಆಗಿದ್ದು, 31 ಸ್ಥಾನ ಗೆಲ್ಲುವ ಮೂಲಕ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಿದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಮತದಾರರಿಗೆ ಪ್ರಧಾನಿ ಮೋದಿ ಧನ್ಯವಾದ ಹೇಳಿದ್ದಾರೆ.

ತ್ರಿಪುರಾದಲ್ಲಿ ಬಿಜೆಪಿ ಗೆಲ್ಲುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಸಂಭ್ರಮಿಸಿದ್ದು ಹೀಗೆ (ಫೋಟೋ-PTI)
ತ್ರಿಪುರಾದಲ್ಲಿ ಬಿಜೆಪಿ ಗೆಲ್ಲುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಸಂಭ್ರಮಿಸಿದ್ದು ಹೀಗೆ (ಫೋಟೋ-PTI)

ಅಗರ್ತಲ(ತ್ರಿಪುರಾ): ಭಾರಿ ಕುತೂಹಲ ಮೂಡಿಸಿದ್ದ ಈಶಾನ್ಯದ ಮೂರು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು, ತ್ರಿಪುರಾ ಮತ್ತು ನಾಗಾಲ್ಯಾಂಡ್ ನಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ.

60 ಸದಸ್ಯ ಬಲದ ತ್ರಿಪುರಾ ವಿಧಾನಸಭೆಯಲ್ಲಿ 32 ಸ್ಥಾನಗಳನ್ನು ಗೆಲ್ಲುವ ಮೂಲಕ ಕೇಸರಿ ಪಕ್ಷ ಇಲ್ಲಿ ಸ್ಪಷ್ಟ ಬಹುಮತದೊಂದಿಗೆ ಎರಡನೇ ಬಾರಿಗೆ ಜಯದ ನಗೆ ಬೀರಿದೆ.

2018 ರಲ್ಲಿ ಎಡರಂಗದ ಕೋಟೆಯನ್ನು ಕಿತ್ತುಕೊಂಡಿದ್ದ ಬಿಜೆಪಿ-ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ ಮೈತ್ರಿಯೊಂದಿಗೆ ಈಶಾನ್ಯ ರಾಜ್ಯದಲ್ಲಿ ತನ್ನ ಗೆಲುವಿನ ಓಟವನ್ನು ಮುಂದುವರೆಸಿದೆ. ಜೊತೆಗೆ ಹೊಸದಾಗಿ ಎಂಟ್ರಿ ಕೊಟ್ಟಿರುವ ಟಿಪ್ರ ಮೋಥಾ ಮತ್ತು ಆಕ್ರಮಣಕಾರಿ ತೃಣಮೂಲ ಕಾಂಗ್ರೆಸ್‌ ಒಡ್ಡಿದ ಸವಾಲನ್ನು ಮೆಟ್ಟಿ ನಿಂತಿದೆ.

ಕೇಂದ್ರ ಚುನಾವಣಾ ಆಯೋಗದ (ಇಸಿಐ) ವೆಬ್‌ಸೈಟ್ ಪ್ರಕಾರ, ಎಡರಂಗ-ಕಾಂಗ್ರೆಸ್ ಮೈತ್ರಿಕೂಟ ಇಲ್ಲಿ 14 ಸ್ಥಾನಗಳನ್ನು ಗೆದ್ದರೆ, ತಿಪ್ರಾ ಮೋಥಾ ತನ್ನ ಚುನಾವಣಾ ಚೊಚ್ಚಲ ಪರೀಕ್ಷೆಯಲ್ಲೇ 13 ಸ್ಥಾನಗಳನ್ನು ಗೆಲ್ಲುವ ಮೂಲಕ ಗಮನ ಸೆಳೆದಿದೆ.

ಮತ್ತೊಮ್ಮೆ ತ್ರಿಪುರಾದಲ್ಲಿ ಕಮಲ ಅರಳಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ತ್ರಿಪುರಾ ಜನತೆಗೆ ಧನ್ಯವಾದ ಸಲ್ಲಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಅವರು, ಧನ್ಯವಾದ ತ್ರಿಪುರಾ! ಇದು ಪ್ರಗತಿ ಮತ್ತು ಸ್ಥಿರತೆಗೆ ಸಿಕ್ಕ ಮತ. ಬಿಜೆಪಿ ತ್ರಿಪುರಾ ರಾಜ್ಯದ ಬೆಳವಣಿಗೆಯ ಪಥವನ್ನು ಹೆಚ್ಚಿಸಲು ಮುಂದುವರಿಯುತ್ತದೆ. ತಳಮಟ್ಟದಲ್ಲಿ ಅದ್ಭುತ ಪ್ರಯತ್ನಗಳಿಗಾಗಿ ನಾನು ಎಲ್ಲಾ ತ್ರಿಪುರಾ ಬಿಜೆಪಿ ಕಾರ್ಯಕರ್ತರ ಬಗ್ಗೆ ಹೆಮ್ಮೆಪಡುತ್ತೇನೆ ಎಂದಿದ್ದಾರೆ.

ಬಿಪ್ಲಬ್ ದೇಬ್ ಅವರ ರಾಜೀನಾಮೆಯ ನಂತರ ರಾಜ್ಯವನ್ನು ಮುನ್ನಡೆಸಲು 2022 ರಲ್ಲಿ ತರಲಾದ ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸಹಾ ಅವರು ತಮ್ಮ ಟೌನ್ ಬರ್ಡೋವಾಲಿ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದಾರೆ. ಈ ವಿಧಾನಸಭೆ ಕ್ಷೇತ್ರದಲ್ಲಿ ಚಲಾವಣೆಯಾದ ಮತಗಳಲ್ಲಿ ಶೇ.50 ರಷ್ಟು ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ.

ತಮ್ಮ ಗೆಲುವಿನ ಬಳಿಕ ಟ್ವೀಟ್ ಮಾಡಿರುವ ಸಿಎಂ ಮಾಣಿಕ್ ಸಹಾ, ತ್ರಿಪುರಾ ಬಿಜೆಪಿ ಕಾರ್ಯಕರ್ತರ ಪರವಾಗಿ, ನಮ್ಮ ಡೈನಾಮಿಕ್ ಪ್ರಧಾನಿ ನರೇಂದ್ರ ಮೋದಿ ಜಿ, ಗೌರವಾನ್ವಿತ ಗೃಹ ಸಚಿವ ಅಮಿತ್ ಶಾ ಮತ್ತು ನಮ್ಮ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜಿ ಅವರಿಗೆ ಈ ಅದ್ಭುತ ವಿಜಯದ ಹಿಂದೆ ನಿರಂತರ ಕೊಡುಗೆಗಾಗಿ ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಮತ್ತು ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ಎಂದು ಹೇಳಿದ್ದಾರೆ.

ಕಳೆದ ಆರು ವರ್ಷಗಳ ಹಿಂದೆ ಕೇಸರಿ ಪಕ್ಷ ಸೇರಿದ ಕಾಂಗ್ರೆಸ್ ನಾಯಕ ಸಹಾ, ಪ್ರತಿಷ್ಠಿತ ಕ್ಷೇತ್ರದಲ್ಲಿ ಅವರಿಗೆ ಕಠಿಣ ಸಮಯ ಎಂದು ವಿರೋಧ ಪಕ್ಷದಲವರು ಭವಿಷ್ಯ ನುಡಿದಿದ್ದರೂ ಸಹ, ಕಾಂಗ್ರೆಸ್ ನ ಹಿರಿಯ ನಾಯಕ ಆಶಿಶ್ ಕುಮಾರ್ ಸಹಾ ಅವರನ್ನು 1,257 ಮತಗಳ ಅಂತರದಿಂದ ಸೋಲಿಸಿದ್ದಾರೆ.

ತ್ರಿಪುರಾದಲ್ಲಿ ಗೆಲ್ಲುವುದರ ಜೊತೆಗೆ, ಕೇಸರಿ ಪಕ್ಷವು ತನ್ನ ಮಿತ್ರಪಕ್ಷವಾದ ಎನ್‌ಡಿಪಿಪಿಯೊಂದಿಗೆ ನಾಗಾಲ್ಯಾಂಡ್‌ನಲ್ಲಿ ಸರ್ಕಾರ ರಚಿಸಲು ಸಿದ್ಧವಾಗಿದೆ. ಮೇಘಾಲಯ ಚುನಾವಣೆಯ ಫಲಿತಾಂಶವು ಅತಂತ್ರವಾಗಿದ್ದು, ಕಾನ್ರಾಡ್ ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ ಏಕೈಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ.

ಈ ಚುನಾವಣಾ ಯಶಸ್ಸು ಭಾರತೀಯ ಜನತಾ ಪಾರ್ಟಿಗೆ ಹೊಸ ಉತ್ತೇಜನವನ್ನು ನೀಡಲಿದ್ದು, ಇದು ಮುಂದೆ ವಿಧಾನಸಭೆ ಚುನಾವಣೆ ನಡೆಯಲಿರುವ ಕರ್ನಾಟಕ ಆ ನಂತರ ಹಿಂದಿ ಹೃದಯಭೂಮಿಯ ಮೂರು ರಾಜ್ಯಗಳಲ್ಲಿ ಚುನಾವಣೆಗಳನ್ನು ಎದುರಿಸಲು ಶಕ್ತಿ ತುಂಬಿದಂತಾಗಿದೆ. ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

IPL_Entry_Point