logo
ಕನ್ನಡ ಸುದ್ದಿ  /  ಜೀವನಶೈಲಿ  /  ಯಾವ ದೇಶಕ್ಕೆ ಹೋದರೂ ಕರ್ಮ ತಪ್ಪಿದ್ದಲ್ಲ, ಯಾಕಂದ್ರೆ ಹಣೆಬರಹ ಅನ್ನೋದು ವಿಶ್ವವ್ಯಾಪಿ; ಐರೋಪ್ಯ ದೇಶಗಳ ನಂಬಿಕೆಗಳಿವು -ರಂಗ ನೋಟ

ಯಾವ ದೇಶಕ್ಕೆ ಹೋದರೂ ಕರ್ಮ ತಪ್ಪಿದ್ದಲ್ಲ, ಯಾಕಂದ್ರೆ ಹಣೆಬರಹ ಅನ್ನೋದು ವಿಶ್ವವ್ಯಾಪಿ; ಐರೋಪ್ಯ ದೇಶಗಳ ನಂಬಿಕೆಗಳಿವು -ರಂಗ ನೋಟ

D M Ghanashyam HT Kannada

May 10, 2024 07:00 AM IST

ಯಾವ ದೇಶಕ್ಕೆ ಹೋದರೂ ಕರ್ಮ ತಪ್ಪಿದ್ದಲ್ಲ, ಯಾಕಂದ್ರೆ ಹಣೆಬರಹ ಅನ್ನೋದು ವಿಶ್ವವ್ಯಾಪಿ

    • ರಂಗಸ್ವಾಮಿ ಮೂಕನಹಳ್ಳಿ: ಕರ್ಮ ಸಿದ್ಧಾಂತ, ಅದೃಷ್ಟ, ಹಣೆಬರಹದಂಥ ಪರಿಕಲ್ಪನೆಗಳು ಭಾರತದಲ್ಲಿ ಮಾತ್ರವೇ ಇಲ್ಲ. ಇಂಗ್ಲೆಂಡ್, ಸ್ಪೇನ್, ಇಟಲಿಯಂಥ ಹಲವು ಐರೋಪ್ಯ ದೇಶಗಳಲ್ಲಿಯೂ ಇವೆ. ಆಂಬುಲೆನ್ಸ್ ಎದುರಾದರೆ ಅಪಶಕುನ ಎನ್ನುವ ನಂಬಿಕೆ ಒಂದು ದೇಶದಲ್ಲಿ ಇಂದಿಗೂ ಅಸ್ತಿತ್ವದಲ್ಲಿದೆ. ಅಪರೂಪದ ನಂಬಿಕೆಗಳ ಮಾಹಿತಿ ಈ ಲೇಖನದಲ್ಲಿದೆ.
ಯಾವ ದೇಶಕ್ಕೆ ಹೋದರೂ ಕರ್ಮ ತಪ್ಪಿದ್ದಲ್ಲ, ಯಾಕಂದ್ರೆ ಹಣೆಬರಹ ಅನ್ನೋದು ವಿಶ್ವವ್ಯಾಪಿ
ಯಾವ ದೇಶಕ್ಕೆ ಹೋದರೂ ಕರ್ಮ ತಪ್ಪಿದ್ದಲ್ಲ, ಯಾಕಂದ್ರೆ ಹಣೆಬರಹ ಅನ್ನೋದು ವಿಶ್ವವ್ಯಾಪಿ (Rangaswamy Mookanahalli)

ಜಗತ್ತಿನಲ್ಲಿ ಇಷ್ಟೊಂದು ಜನರಿದ್ದೇವೆ ಒಬ್ಬೊಬ್ಬರ ಬದುಕು ಒಂದೊಂದು ತರಹವಿದೆ. ಒಂದೇ ತಾಯಿಯ ಹೊಟ್ಟೆಯಲ್ಲಿ ಜನಿಸಿದ ಮಕ್ಕಳಲ್ಲಿ, ಅವರ ಬದುಕಲ್ಲಿ ಬಹಳಷ್ಟು ಅಂತರವಿರುತ್ತದೆ. ಹೀಗೇಕೆ? ಅವರು ಬೆಳೆದ ವಾತಾವರಣ, ನೀಡಿದ ಶಿಕ್ಷಣ, ಪ್ರೀತಿ, ಸುರಕ್ಷತಾ ಭಾವ ಎಲ್ಲವೂ ಒಂದೇ ಇದ್ದೂ ಬೆಳೆಯುತ್ತಾ ಅವರ ಜೀವನದಲ್ಲಿ ಬಹಳಷ್ಟು ಅಂತರ ಸೃಷ್ಟಿಯಾಗುತ್ತದೆ. ಹೀಗೇಕೆ? ಇಲ್ಲಿ ಏಕೆ ಎನ್ನವುದಕ್ಕೆ ಉತ್ತರವನ್ನು ನಿಖರವಾಗಿ ನೀಡಲು ಸಾಧ್ಯವಿಲ್ಲದ ಸಮಯದಲ್ಲಿ ಹಣೆಬರಹ, ಪೂರ್ವ ಜನ್ಮದ ಕರ್ಮ ಅಥವಾ ವಿಧಿ (ಡೆಸ್ಟಿನಿ) ಎನ್ನುವ ಪದಗಳು ಸೃಷ್ಟಿಯಾಗಿರಬಹುದು. ಅಲ್ಲದೆ ಕೆಲವೊಮ್ಮೆ ಎಷ್ಟೇ ಕಷ್ಟಪಟ್ಟರೂ ಕೆಲವೊಂದು ವಿಷಯಗಳಿಗೆ ನಿಖರ ಉತ್ತರ ಹುಡುಕುವುದು ಅಥವಾ ಕಾರಣ ಕೊಡುವುದು ಕಷ್ಟ. ನಾವು ನಂಬಲಿ ಅಥವಾ ಬಿಡಲಿ ಕೆಲ ವಿಷಯವನ್ನು ಇದ್ದ ಹಾಗೆ ಒಪ್ಪಿಕೊಳ್ಳುವುದು ಬಿಟ್ಟು ಹೆಚ್ಚಿನದೇನೂ ನಾವು ಮಾಡಲು ಸಾಧ್ಯವಿಲ್ಲ.

ಟ್ರೆಂಡಿಂಗ್​ ಸುದ್ದಿ

Mango Pakoda: ಮಾವಿನಕಾಯಿಯಿಂದ ತಯಾರಿಸಬಹುದು ಡಿಫ್ರೆಂಟ್‌ ರುಚಿಯ ಬಿಸಿ ಬಿಸಿ ಪಕೋಡಾ; ಸೀಸನ್‌ ಮುಗಿಯವ ಮೊದಲು ಮಾಡಿ ತಿನ್ನಿ

Chia Seeds: ತೂಕ ಇಳಿಕೆ ಮಾತ್ರವಲ್ಲ, ತ್ವಚೆಯ ಅಂದ ಹೆಚ್ಚುವುದರಿಂದ ಹೃದಯದ ಆರೋಗ್ಯದವರೆಗೆ ಚಿಯಾ ಬೀಜ ಸೇವನೆಯ ಪ್ರಯೋಜನಗಳಿವು

Mango Recipe: ಬಾಯಲ್ಲಿ ನೀರೂರಿಸುತ್ತೆ ಮಾವಿನಹಣ್ಣಿನ ರಸಗುಲ್ಲ; ಈ ಮ್ಯಾಂಗೋ ಸೀಸನ್‌ನಲ್ಲಿ ತಪ್ಪದೇ ಮಾಡಿ ತಿನ್ನಿ, ರೆಸಿಪಿ ಇಲ್ಲಿದೆ

Brain Teaser: ವೃತ್ತದಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು? ಗಣಿತ ಪ್ರಿಯರು ಥಟ್ಟಂತ ಉತ್ತರ ಹೇಳಿ ನೋಡೋಣ

ಜೀವನದಲ್ಲಿ ಎಲ್ಲಾ ಥರದ ಸೋಲು, ನೋವು ತಿಂದ ವ್ಯಕ್ತಿಯೊಬ್ಬ ಇನ್ನು ಈ ಜೀವನ ನನಗೆ ಸಾಕು ಎಂದು ತನ್ನ ಜೀವನ ಕೊನೆಗೊಳಿಸಲು ಪ್ರಯತ್ನಿಸುತ್ತಾನೆ. ಅಲ್ಲಿಯೂ ಹಲವು ವೈಫಲ್ಯ ಕಂಡು ಕೊನೆಗೆ ಸಮುದ್ರದಲ್ಲಿ ಮುಳುಗಿ ಸಾಯುವ ನಿಶ್ಚಯಕ್ಕೆ ಬರುತ್ತಾನೆ. ಹೀಗೆ ಸಮುದ್ರ ಹೊಕ್ಕಾಗ ಅಲ್ಲಿನ ನೀರು ಕೂಡ ಹಿಂಗಿ ಹೋಗಿ ಕೇವಲ ಮೊಳಕಾಲವರೆಗೆ ಮಾತ್ರ ನೀರು ಇರುತ್ತದೆ. ಕೊನೆಗೆ ಅವನ ಸಾಯುವ ಪ್ರಯತ್ನಕ್ಕೆ ಸಮುದ್ರ ಹೊಕ್ಕರು ಜಯ ಸಿಗುವುದಿಲ್ಲ. ಇಲ್ಲಿ ಋಣಾತ್ಮಕ ಉದಾಹರಣೆ ಕೊಡಲಾಗಿದೆ. ಆದರೆ ಇದನ್ನು ಬದುಕಿನ ಎಲ್ಲಾ ಮಜಲುಗಳಿಗೂ ಅನ್ವಯಿಸಬಹದು. ಅರ್ಥ ಬಹಳ ಸರಳ. ಕೆಲವೊಮ್ಮೆ ಮನುಷ್ಯ ಎಷ್ಟೇ ಪ್ರಯತ್ನಪಟ್ಟರೂ ಅವರಿಗೆ ಅದರಲ್ಲಿ ಜಯ ಸಿಗದೇ ಹೋಗಬಹುದು. ಏಕೆಂದರೆ ಅವರ ಹಣೆಬರಹದಲ್ಲಿ ಅದು ಇರುವುದಿಲ್ಲ. ಅಥವಾ ಆ ವಸ್ತು ಅಥವಾ ವಿಷಯದ ಪ್ರಾಪ್ತಿ ಅಥವಾ ಲಬ್ಧತೆ ಇರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಮಗಿಂತ ಹೆಚ್ಚಿನ ಬಲವುಳ್ಳ ಕಣ್ಣಿಗೆ ಕಾಣದ ಶಕ್ತಿಯ ಬಗ್ಗೆ ಜೊತೆಗೆ ನಮ್ಮ 'ಡೆಸ್ಟಿನಿ' ಬಗ್ಗೆ ನಂಬಿಕೆ ಹೆಚ್ಚಿಸುವ ಮಾತು ಶುರುವಾಗುತ್ತದೆ. ನಾವೆಲ್ಲಾ ನಮ್ಮ ಹಣೆಬರಹವನ್ನು ಹೊತ್ತು ಬಂದಿರುತ್ತೇವೆ ಎನ್ನುವುದು ಸಾಮಾನ್ಯ ಅರ್ಥ.

ಇದೆಲ್ಲ ಭಾರತೀಯರ ಕಥೆಯಾಯ್ತು, ಯೂರೋಪಿಯನ್ನರು ಇಂತಹ ವಿಷಯಗಳನ್ನು ನಂಬುತ್ತಾರೆಯೇ ಎನ್ನುವ ಪ್ರಶ್ನೆ ನಿಮ್ಮಲ್ಲಿ ಈಗಾಗಲೇ ಮೂಡಿರುತ್ತದೆ. ಇದಕ್ಕೆ ಉತ್ತರ; ಖಂಡಿತ ನಂಬುತ್ತಾರೆ. ಯೂರೋಪು ತನ್ನತನವನ್ನು ಉಳಿಸಿಕೊಂಡು ಹೊಸತನ್ನು ಕೂಡ ಅಪ್ಪಿಕೊಂಡಿರುವ ಭೂಭಾಗ.

ಕೆಲವರು ತಮಾಲ್ ಮಾಡಲೆಂದೇ ಹುಟ್ಟಿರುತ್ತಾರೆ

ಒಂದು ಉದಾಹರಣೆ ನಿಮ್ಮ ಸಂದೇಹವನ್ನು ನಿವಾರಿಸಬಲ್ಲದು. ಹೀಗಾಗಿ ನೇರವಾಗಿ ವಿಷಯಕ್ಕೆ ಬಂದು ಬಿಡುತ್ತೇನೆ. ತಮಾಲ್ ಎನ್ನುವುದು ಲಾಟಿನ್ ಭಾಷಿಕರು ಮಾಡುವ ಒಂದು ಖಾದ್ಯ. ಜೋಳ ಮತ್ತು ಮಾಂಸವನ್ನು ಸೇರಿಸಿ ಬೇಯಿಸಿ ಮಾಡುವ ಒಂದು ಆಹಾರ ಪದಾರ್ಥ. ಸ್ಪಾನಿಷರಲ್ಲಿ ಈ ತಮಾಲ್ ಕುರಿತು ಒಂದು ಆಡು ಮಾತಿದೆ 'ಎಲ್ ಕೆ ನಾಸೆ ಪರ ತಮಾಲ್ , ದೆಲ್ ಸಿಯಲೋ ಕಾಯೆನ್ ಲಾಸ್ ಹೋಹಾಸ್' ಅಂದರೆ ಕೆಲವರು ತಮಾಲ್ ಖಾದ್ಯವನ್ನು ಮಾಡಲೆಂದೇ ಹುಟ್ಟಿರುತ್ತಾರೆ. ಅಂಥವರಿಗೆ ಎಲೆಯಲ್ಲಿ ಕಟ್ಟಿದ ಮಾಂಸ ಮತ್ತು ಜೋಳ ಆಕಾಶದಿಂದ ಬೀಳುತ್ತದೆ ಎಂದರ್ಥ.

ಯಾರಿಗೆ ಯೋಗವಿರುತ್ತದೆಯೋ, ಹಣಬರಹವಿರುತ್ತದೆಯೋ ಅಂತಹವರಿಗೆ ಹೇಗೋ ಕೊನೆಗೆ ಆಕಾಶದಿಂದ ಯಾರೋ ಎಲೆಯಲ್ಲಿ ಕಟ್ಟಿ ಎಸೆದದ್ದು ಸಿಗುತ್ತದೆ. ಅವರು ಖಾದ್ಯ ತಯಾರಿಸುತ್ತಾರೆ. ಇನ್ನು ಕೆಲವರು ಎಷ್ಟೇ ಕಷ್ಟಪಟ್ಟರೂ, ಮಾಂಸವನ್ನು ತಂದಿಟ್ಟುಕೊಂಡಿದ್ದರೂ ಕೊನೆ ಗಳಿಗೆಯಲ್ಲಿ ಅದನ್ನು ಬೇರೆ ಯಾರೋ ಲಪಟಾಯಿಸಿಬಿಡುತ್ತಾರೆ. ಇವೆಲ್ಲ ಕೇಳಲು ಕಥೆಯಂತೆ ಕಾಣಬಹುದು. ಆದರೆ ಮನುಷ್ಯನ ಉನ್ನತಿ ಮತ್ತು ಅವನತಿಗೆ ಕೇವಲ ಮತ್ತು ಕೇವಲ ಪ್ರಯತ್ನ, ಪರಿಶ್ರಮ ಮಾತ್ರವಿದ್ದರೆ ಸಾಲದು. ಜೊತೆಗೆ ಹಣೆಬರಹ ಕೂಡ ಮುಖ್ಯ ಎನ್ನುವುದು ಮನುಷ್ಯನಿರುವ ಸಕಲ ಭೂಭಾಗಗಳಲ್ಲಿಯೂ ನಂಬುವ ಮಾತು.

ಬ್ರಿಟಿಷರು ಹಣೆಬರಹ ನಂಬಿದ್ದರು

ಬ್ರಿಟಿಷರು ಕೂಡ ಈ ಡೆಸ್ಟಿನಿ, ಹಣೆಬರಹ, ಅದೃಷ್ಟವನ್ನು ಬಹಳವಾಗಿ ನಂಬುತ್ತಾರೆ. ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ, ಬ್ಲಾಕ್ ಮ್ಯಾಜಿಕ್ ಅಂದರೆ ಮಾಟಮಂತ್ರದಲ್ಲಿ ಕೂಡ ವಿಶ್ವಾಸ ಇಟ್ಟಿದ್ದಾರೆ. ನಮ್ಮಲ್ಲಿ ಕೆಲವರು ಹಣೆಬರಹ ಎಲ್ಲಾ ಏನಿಲ್ಲ, ನಮ್ಮ ಪರಿಶ್ರಮ ಬಹಳ ಮುಖ್ಯ ಎನ್ನುವ ಮಾತು ಆಡುತ್ತಾರೆ. ಆದರೆ ಅವರ ಕಣ್ಣೆದುರೇ ಎಲ್ಲಾ ಕೋನದಲ್ಲೂ ಕಡಿಮೆ ಎನಿಸಿಕೊಂಡ ವ್ಯಕ್ತಿ ಅವರ ಮುಂದೆಯೇ ಅವರನ್ನೇ ಮೀರಿ ಬೆಳೆದಾಗ ಅದೃಷ್ಟ, ಹಣೆಬರಹ ಮತ್ತೆ ಮುಂಚೂಣಿಗೆ ಬರುತ್ತವೆ.

ಹೀಗೆ ಒಮ್ಮೆ ನಾವಂದುಕೊಂಡಿದ್ದು ಆಗಲಿಲ್ಲ ಎಂದ ಮಾತ್ರಕ್ಕೆ ನಿರಾಶರಾಗಬೇಕಿಲ್ಲ. ಕತ್ತಲ ನಂತರ ಬೆಳಕಾಗಲೇಬೇಕಲ್ಲವೇ ? ಹಾಗೆಯೇ ಬದುಕಿನಲ್ಲಿ ಏರಿಳಿತಗಳು ಕೂಡ! ಇಂದಿನ ದಿನದ ಸ್ಥಿತಿ ಸದಾ ಇರುವುದಿಲ್ಲ. ಬದುಕಿನಲ್ಲಿ ಬದಲಾವಣೆಯೊಂದೇ ನಿರಂತರ. ಬದುಕಿನ ಹಾದಿಯಲ್ಲಿ ನಮಗೆ ತೀರಾ ಬೇಕಾದವರನ್ನು ಕಳೆದುಕೊಳ್ಳುತ್ತೇವೆ. ಅಂದಿನ ದಿನದ ದುಃಖ ಸದಾ ಇದ್ದಿದ್ದರೆ? ನಾವು ಜೀವನದಲ್ಲಿ ಹೆಚ್ಚಿನದನ್ನು ಸಾಧಿಸಲಾಗದೆ ಅದೇ ದುಃಖದಲ್ಲಿ ನಮ್ಮ ಜೀವನ ಪಯಣವನ್ನೂ ಮುಗಿಸಬೇಕಿತ್ತು ಅಲ್ಲವೇ? ಆದರೆ ಬದುಕು ಸದಾ ಜೀವನ್ಮುಖಿ, ನಿರಾಶೆ ಆವರಿಸಲು ಬಿಡುವುದಿಲ್ಲ. ಬದುಕಿಗೆ ನೋವಿನ ನಂತರ ಏನಾದರೊಂದು ಆಶಾಭಾವನೆ ನೀಡುತ್ತದೆ. ನಾವು ಬದುಕಲೇಬೇಕು ಎನ್ನುವುದಕ್ಕೊಂದು ಕಾರಣವನ್ನೂ ಕೊಡುತ್ತದೆ. ಸುಖವೇ ಇರಲಿ, ದುಃಖವೇ ಇರಲಿ, ಯಾವುದೂ ಈ ಬದುಕಿನಲ್ಲಿ ಶಾಶ್ವತವಲ್ಲ.

ಇಟಲಿಯನ್ನರಿಗೆ ಆಂಬುಲೆನ್ಸ್ ಎದುರಾದರೆ ಅಪಶಕುನ

ಇಟಲಿಯಲ್ಲಿ ಒಂದು ನಂಬಿಕೆಯಿದೆ. ನೀವು ಎಲ್ಲಿಗಾದರೂ ಹೊರಟಾಗ ಯೋಗಿಣಿಯರು (ನನ್) ಮತ್ತು ಆಂಬುಲೆನ್ಸ್ ಎದುರಾದರೆ ಅದನ್ನು ಅಪಶಕುನ ಎಂದು ಭಾವಿಸಲಾಗುತ್ತದೆ. ಒಂದಿಷ್ಟು ಹೊತ್ತು ನಿಂತು ನಂತರ ಉಪಕ್ರಮಿಸುವುದು ಇಲ್ಲಿನ ಪದ್ಧತಿ. ನಮ್ಮಲ್ಲಿ ಬೆಕ್ಕು ರಸ್ತೆಯಲ್ಲಿ ಬಂದರೆ ನಾವು ಇದನ್ನೇ ತಾನೇ ಮಾಡುವುದು. ಬೆಂಕಿಯ ಕೆಂಡದ ಮೇಲೆ ನಡೆಯುವುದು, ಓಡುವುದು, ಮಕ್ಕಳನ್ನು ಅಂದರೆ ವರ್ಷದ ಕೆಳಗಿನ ಮಗುವನ್ನು ಮೂರ್ನಾಲ್ಕು ಎತ್ತರದ ಮಹಡಿಯಿಂದ ನೆಲಕ್ಕೆ ಎಸೆಯುವುದು ಹೀಗೆ ಇಲ್ಲಿಯೂ ಅನೇಕ ನಂಬಿಕೆಗಳಿವೆ. ಮಹಡಿಯಿಂದ ಮಗುವನ್ನು ಕೆಳಕ್ಕೆ ಎಸೆದಾಗ ಕೆಳಗೆ ದೊಡ್ಡ ಬಟ್ಟೆಯನ್ನ ಹಿಡಿದ ಜನ ಮಗುವನ್ನು ಸುರಕ್ಷಿತವಾಗಿ ಕಾಪಾಡುತ್ತಾರೆ. ಹೀಗೆ ಮಗುವನ್ನ ಎಸೆಯುವ ಉದ್ದೇಶ ಮಗು ತನ್ನ ಮುಂದಿನ ದಿನಗಳಲ್ಲಿ ಭಯವಿಲ್ಲದ ಜೀವನವನ್ನ ನಡೆಸುತ್ತದೆ ಎನ್ನುವ ನಂಬಿಕೆ. ಹೀಗೆ ಇಂತಹ ವಿಷಯಗಳ ಒಂದು ದೊಡ್ಡ ಪಟ್ಟಿಯನ್ನು ತಯಾರಿಸಬಹುದು.

ಅವರವರ ನಂಬಿಕೆ ಅವರಿಗೆ ದೊಡ್ಡದು. ನಮ್ಮಲ್ಲಿ ಯಾವುದೋ ಒಂದು ನಂಬಿಕೆ ಅಷ್ಟೊಂದು ಪ್ರಬಲವಾಗಿ ನೂರಾರು ವರ್ಷ ಬೆಳೆದುಕೊಂಡು ಬಂದಿದೆ ಎಂದರೆ ಅದರಲ್ಲಿ ಏನೋ ಶಕ್ತಿ ಇದ್ದೆ ಇರುತ್ತದೆ. ಇದೆಲ್ಲ ಏನೇ ಇರಲಿ , ಇವುಗಳ ವಿಷಯದಲ್ಲಿ ಮೇಲರಿಮೆ, ಕೀಳರಿಮೆ ಎರಡೂ ಬೇಡ.

---

ರಂಗಸ್ವಾಮಿ ಮೂಕನಹಳ್ಳಿ ಪರಿಚಯ

ಆಪ್ತರ ವಲಯದಲ್ಲಿ, ವಿದ್ಯಾರ್ಥಿಗಳಲ್ಲಿ 'ರಂಗಣ್ಣ' ಎಂದೇ ಖ್ಯಾತರಾದವರು ಹಣಕಾಸು ಸಮಾಲೋಚಕ ಮತ್ತು ಆರ್ಥಿಕ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿ ವಿಶ್ಲೇಷಿಸುವ ಬರಹಗಾರ ಶ್ರೀಯುತ ರಂಗಸ್ವಾಮಿ ಮೂಕನಹಳ್ಳಿ. ಬೆಂಗಳೂರಿನ ಪೀಣ್ಯದಲ್ಲಿ ಬಾಲ್ಯ ಕಳೆದವರು ರಂಗಸ್ವಾಮಿ. ತುಮಕೂರು ಜಿಲ್ಲೆ, ಶಿರಾ ತಾಲ್ಲೂಕು ಮೂಕನಹಳ್ಳಿ ಇವರ ಮೂಲ ಗ್ರಾಮ. ಹೀಗಾಗಿ ತಮ್ಮ ಹೆಸರಿನೊಂದಿಗೆ ಮೂಕನಹಳ್ಳಿ ಹೆಸರನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಶ್ರೀಮಂತಿಕೆ ಅಥವಾ ಪ್ರಭಾವದ ಯಾವುದೇ ಹಿನ್ನೆಲೆ ಇಲ್ಲದೆ ಬಹುಕಷ್ಟದಿಂದ ಜೀವನದಲ್ಲಿ ಮೇಲೆ ಬಂದವರು ರಂಗಸ್ವಾಮಿ ಮೂಕನಹಳ್ಳಿ. ಬ್ರಿಟನ್‌ನಲ್ಲಿ 'ಪ್ರಮಾಣೀಕೃತ ಆಂತರಿಕ ಲೆಕ್ಕಪರಿಶೋಧಕ' (Certified Internal Auditor) ಪ್ರಮಾಣಪತ್ರ ಪಡೆದಿದ್ದಾರೆ. ಕನ್ನಡದೊಂದಿಗೆ ಸ್ಪೇನಿಶ್, ಇಂಗ್ಲಿಷ್, ಹಿಂದಿ, ಪೂರ್ಚುಗೀಸ್ ಮತ್ತು ಇಟ್ಯಾಲಿಯನ್ ಭಾಷೆಗಳಲ್ಲಿ ಸಂವಹನ ನಡೆಸಬಲ್ಲರು. ಪ್ರಸ್ತುತ ಮೈಸೂರಿನಲ್ಲಿ ವಾಸವಿದ್ದಾರೆ. ಕನ್ನಡದಲ್ಲಿ 26 ಪುಸ್ತಕಗಳನ್ನು ಬರೆದಿದ್ದಾರೆ. ಪ್ರತಿದಿನ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸುವ 'ದಿನಕ್ಕೊಂದು ಶುಭನುಡಿ' ವಿಡಿಯೊ ಸರಣಿ ಜನಪ್ರಿಯ. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ 'ರಂಗ ನೋಟ' ಪಾಕ್ಷಿಕ ಅಂಕಣ ಬರೆಯುತ್ತಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು