ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Telangana Temple: 11 ಪ್ರದಕ್ಷಿಣೆ ಹಾಕಿ ಹರಕೆ ಕಟ್ಟಿಕೊಂಡ್ರೆ ನಿಮಗೆ ವೀಸಾ ದೊರೆತಂತೆ; ಚಿಲ್ಕೂರು ಬಾಲಾಜಿ ದೇವಸ್ಥಾನ ದರ್ಶನ

Telangana Temple: 11 ಪ್ರದಕ್ಷಿಣೆ ಹಾಕಿ ಹರಕೆ ಕಟ್ಟಿಕೊಂಡ್ರೆ ನಿಮಗೆ ವೀಸಾ ದೊರೆತಂತೆ; ಚಿಲ್ಕೂರು ಬಾಲಾಜಿ ದೇವಸ್ಥಾನ ದರ್ಶನ

Chilkoor Balaji Temple: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿರುವ ಚಿಲ್ಕೂರು ಬಾಲಾಜಿ ದೇವಸ್ಥಾನ ವೀಸಾ ಗಾಡ್‌ ಎಂದೇ ಫೇಮಸ್.‌ ಬಹಳ ದಿನಗಳಿಂದ ವೀಸಾ ಸಮಸ್ಯೆ ಇರುವವರು ಈ ದೇವಸ್ಥಾನಕ್ಕೆ ಬಂದು 11 ಪ್ರದಕ್ಷಿಣೆ ಹಾಕಿ ಹರಕೆ ಕಟ್ಟಿಕೊಂಡರೆ ಸಮಸ್ಯೆ ಪರಿಹಾರವಾದಂತೆ.

ಚಿಲ್ಕೂರು ಬಾಲಾಜಿ ದೇವಸ್ಥಾನ
ಚಿಲ್ಕೂರು ಬಾಲಾಜಿ ದೇವಸ್ಥಾನ (PC: @ramineniraghu , ANI)

ತೆಲಂಗಾಣ: ಸಂಕಟ ಬಂದಾಗ ವೆಂಕಟರಮಣ ಎಂಬ ಮಾತಿದೆ. ಸಾಮಾನ್ಯವಾಗಿ ಬಹುತೇಕರು ಕಷ್ಟ ಬಂದಾಗ ದೇವರ ಮೊರೆ ಹೋಗುತ್ತಾರೆ. ತಮ್ಮ ಇಷ್ಟಾರ್ಥಗಳ ಕೋರಿಕೆಗೆ, ಮನದ ಆಸೆ ನೆರವೇರಿಸೆಂದು ಪ್ರಾರ್ಥಿಸಲು ದೇವಸ್ಥಾನಕ್ಕೆ ಹೋಗಿ ಬರುತ್ತಾರೆ. ಇಷ್ಟ ನೆರವೇರಿದರೆ ವಿವಿಧ ಸೇವೆ ಮಾಡಿಸುವಂತೆ ಹರಕೆ ಕಟ್ಟಿಕೊಂಡು ಬರುತ್ತಾರೆ.

ಸಂತಾನ ಫಲ, ಕಂಕಣ ಭಾಗ್ಯ, ವಿದ್ಯಾರ್ಥಿಗಳ ಪರೀಕ್ಷೆ ಫಲಿತಾಂಶ, ಕೋರ್ಟ್‌ ವ್ಯಾಜ್ಯ ಹೀಗೆ ಒಂದೊಂದು ವಿಚಾರಗಳಿಗೆ ಸಂಬಂಧಿಸಿದಂತೆ ದೇಶದಲ್ಲಿ ಒಂದೊಂದು ದೇವಸ್ಥಾನಗಳು ಫೇಮಸ್‌ ಆಗಿವೆ. ಆದರೆ ಈ ದೇವಸ್ಥಾನ ವೀಸಾ ಸಮಸ್ಯೆ ಪರಿಹಾರಕ್ಕೆ ಬಹಳ ಫೇಮಸ್.‌ ಹೌದು ತೆಲಂಗಾಣದ ಚಿಲ್ಕೂರು ಬಾಲಾಜಿ ದೇವಸ್ಥಾನದಲ್ಲಿ ಪೂಜಿಸಲಾಗುವ ವೆಂಕಟೇಶ್ವರ ಸ್ವಾಮಿಯನ್ನು ವೀಸಾ ಗಾಡ್‌ ಎಂದೇ ಕರೆಯಲಾಗುತ್ತದೆ. ವೀಸಾ ಸಮಸ್ಯೆ ಪರಿಹಾರಕ್ಕೆ ಇಲ್ಲಿಗೆ ಪ್ರತಿ ದಿನ ನೂರಾರು ಭಕ್ತರು ಭೇಟಿ ನೀಡುತ್ತಾರೆ.

ರಂಗಾರೆಡ್ಡಿ ಜಿಲ್ಲೆಯಲ್ಲಿರುವ ದೇವಸ್ಥಾನ

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಗಂಡಿಪೇಟ್‌ ಮಂಡಲದ ಚಿಲ್ಕೂರು ಎಂಬಲ್ಲಿ ಈ ದೇವಸ್ಥಾನ ಇದೆ. ಇಲ್ಲಿ ವೆಂಕಟೇಶ್ವರನನ್ನು ಪೂಜಿಸಲಾಗುತ್ತದೆ. ಸಾಮಾನ್ಯವಾಗಿ ವಿದ್ಯಾಭ್ಯಾಸ, ಕೆಲಸ ಅಥವಾ ಇನ್ನಿತರ ಕಾರಣಗಳಿಗಾಗಿ ಜನರು ವೀಸಾಗಾಗಿ ಅರ್ಜಿ ಹಾಕುತ್ತಾರೆ. ಆದರೆ ಎಷ್ಟೋ ಬಾರಿ ವೀಸಾ ನಿರಾಕರಣೆ ಮಾಡಲಾಗುತ್ತದೆ. ಕೆಲವರಿಗಂತೂ ಒಂದು ಬಾರಿ, ಎರಡು ಬಾರಿ ಪದೇ ಪದೆ ವೀಸಾ ರಿಜೆಕ್ಟ್‌ ಆಗುತ್ತದೆ. ಅಂಥವರು ಈ ದೇವರ ಮೊರೆ ಹೋಗುತ್ತಾರೆ. ವೀಸಾ ಸಮಸ್ಯೆ ಇರುವವರು ಒಮ್ಮೆ ಈ ದೇವಸ್ಥಾನಕ್ಕೆ ಬಂದು 11 ಪ್ರದಕ್ಷಿಣೆ ಹಾಕಿ ಹರಕೆ ಕಟ್ಟಿಕೊಂಡರೆ ನಿಮಗೆ ವೀಸಾ ಸಮಸ್ಯೆ ಬಗೆಹರಿದಂತೆ. ಅಲ್ಲಿಗೆ ನಿಮ್ಮ ಕೆಲಸ ಮುಗಿಯಲಿಲ್ಲ. ಭಗವಂತ ನಿಮಗೆ ಏನಾದರೂ ಕೊಟ್ಟರೆ ಹರಕೆ ತೀರಿಸಬೇಕಲ್ಲವೇ? ನಿಮ್ಮ ಇಷ್ಟಾರ್ಥ ನೆರವೇರಿದ ಬಳಿಕ ನೀವು ಈ ದೇವಸ್ಥಾನದ ಸುತ್ತಲೂ 108 ಪ್ರದಕ್ಷಿಣೆ ಹಾಕಬೇಕು. ಆಗ ನೀವು ದೇವರಿಗೆ ಕಟ್ಟಿಕೊಂಡಿದ್ದ ಹರಕೆ ತೀರಿದಂತೆ.

ಮೊದಲೆಲ್ಲಾ ಆಂಧ್ರಪ್ರದೇಶ, ತೆಲಂಗಾಣದ ಭಕ್ತರು ಮಾತ್ರ ಈ ಊರಿಗೆ ಬರುತ್ತಿದ್ದರು. ಆದರೆ ಈಗ ಬೇರೆ ರಾಜ್ಯಗಳ, ಉತ್ತರ ಭಾರತದ ಜನರು ಕೂಡಾ ಇಲ್ಲಿಗೆ ಬಂದು ಹೋಗುತ್ತಾರೆ. ಈ ಬಾಲಾಜಿ ದೇವಸ್ಥಾನ ಸುಮಾರು 500 ವರ್ಷಗಳಷ್ಟು ಹಳೆಯದು. ದೇವಸ್ಥಾನ ಪ್ರತಿ ದಿನ ಬೆಳಗ್ಗೆ 4 ಗಂಟೆಗೆ ತೆರೆದರೆ ರಾತ್ರಿ 8ಕ್ಕೆ ಮುಚ್ಚಲ್ಪಡುತ್ತದೆ. ಭಕ್ತರಿಗೆ ಬೆಳಗ್ಗೆ 6 ರಿಂದ ಮಧ್ಯಾಹ್ನ 1 ಸಂಜೆ 4 ರಿಂದ 6 ಗಂಟೆವರೆಗೆ ಮಾತ್ರ ದರ್ಶನಕ್ಕೆ ಅವಕಾಶವಿದೆ. ಹಾಗೇ 108 ಪ್ರದಕ್ಷಿಣೆ ಮಾಡುವವರು ಬೆಳಗ್ಗೆ 6:00 ರಿಂದ ಮಧ್ಯಾಹ್ನ 12:30 ಹಾಗೂ ಸಂಜೆ 4 ರಿಂದ 6.30ವರೆಗೆ ಹರಕೆ ಸಲ್ಲಿಸಬಹುದು.

ಈ ದೇವಸ್ಥಾನದಲ್ಲಿ ಹುಂಡಿ ಇಲ್ಲ

ಹಾಗೇ ಈ ದೇವಸ್ಥಾನದಲ್ಲಿ ಹುಂಡಿಯೇ ಇಲ್ಲದಿರುವುದು ಮತ್ತೊಂದು ವೈಶಿಷ್ಟ್ಯ. ಇಲ್ಲಿ ಭಕ್ತರಿಂದ ಹಣದ ರೂಪದಲ್ಲಿ ಯಾವುದೇ ಕಾಣಿಕೆ ತೆಗೆದುಕೊಳ್ಳುವುದಿಲ್ಲ. ತೆಲಂಗಾಣದ ಮೆಹದಿಪಟ್ನಂ, ಮೆಹಬೂಬ್‌ ನಗರ, ಸಿಕಂದರಾಬಾದ್‌ ಸೇರಿದಂತೆ ಪ್ರಮುಖ ನಗರಗಳಿಂದ ಚಿಲ್ಕೂರು ಬಾಲಾಜಿ ದೇವಸ್ಥಾನಕ್ಕೆ ನೇರವಾಗಿ ಬಸ್‌ ವ್ಯವಸ್ಥೆ ಇದೆ. ಇಲ್ಲವಾದರೆ ಹೈದರಾಬಾದ್‌ ಪ್ರಮುಖ ಬಸ್‌ ನಿಲ್ದಾಣವಾದ ಎಂಜಿಬಿಎಸ್‌ನಿಂದ ಕೂಡಾ ಚಿಲ್ಕೂರು ಬಾಲಾಜಿ ದೇವಸ್ಥಾನಕ್ಕೆ ಬಸ್‌ ಇದೆ. ವೀಸಾ ಸಮಸ್ಯೆ ಇರುವವರು ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ಕೊಡಬಹುದು.