ಕನ್ನಡ ಸುದ್ದಿ  /  ಕರ್ನಾಟಕ  /  ಧಾರೇಶ್ವರ ಭಾಗವತ ಎಂಬ ಬಡಗುತಿಟ್ಟು ಯಕ್ಷಗಾನದ ಹೆಬ್ಬಂಡೆ, ಸುಬ್ರಹ್ಮಣ್ಯ ಧಾರೇಶ್ವರರ ಕೀರ್ತಿ ಅಜರಾಮರ-ಕಲಾವಿದ ಗಣೇಶ್ ಭಟ್ ಬಾಯಾರು ಅಕ್ಷರನಮನ

ಧಾರೇಶ್ವರ ಭಾಗವತ ಎಂಬ ಬಡಗುತಿಟ್ಟು ಯಕ್ಷಗಾನದ ಹೆಬ್ಬಂಡೆ, ಸುಬ್ರಹ್ಮಣ್ಯ ಧಾರೇಶ್ವರರ ಕೀರ್ತಿ ಅಜರಾಮರ-ಕಲಾವಿದ ಗಣೇಶ್ ಭಟ್ ಬಾಯಾರು ಅಕ್ಷರನಮನ

ಯಕ್ಷರಂಗದ ಮೇರು ಪ್ರತಿಭೆ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರು ಇಂದು (ಏಪ್ರಿಲ್ 25) ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಅವರನ್ನು ಹತ್ತಿರದಿಂದ ಬಲ್ಲ ಮತ್ತು ಅವರೊಂದಿಗೆ ನಿರಂತರ ಒಡನಾಡಿದ ಶಿಕ್ಷಕ, ಯಕ್ಷಗಾನ ಸಂಘಟಕ, ಕಲಾವಿದ ಗಣೇಶ್ ಭಟ್ ಬಾಯಾರು ಅವರು ಅಗಲಿದ ಹಿರಿಯ ಚೇತನಕ್ಕೆ ಅಕ್ಷರನಮನ ಸಲ್ಲಿಸಿದ್ದಾರೆ.

ಭಾಗವತ ಸುಬ್ರಹ್ಮಣ್ಯ ಧಾರೇಶ್ವರ (ಎಡ ಚಿತ್ರ); ಕುಟುಂಬ ಸದಸ್ಯರೊಂದಿಗೆ ಸುಬ್ರಹ್ಮಣ್ಯ ಧಾರೇಶ್ವರರ ಇತ್ತೀಚನ ಫೋಟೋ (ಬಲಚಿತ್ರ)
ಭಾಗವತ ಸುಬ್ರಹ್ಮಣ್ಯ ಧಾರೇಶ್ವರ (ಎಡ ಚಿತ್ರ); ಕುಟುಂಬ ಸದಸ್ಯರೊಂದಿಗೆ ಸುಬ್ರಹ್ಮಣ್ಯ ಧಾರೇಶ್ವರರ ಇತ್ತೀಚನ ಫೋಟೋ (ಬಲಚಿತ್ರ)

ಭಾಗವತ ಆಗಬೇಕೆಂಬ ಹಂಬಲ ಖಂಡಿತ ಇರಲಿಲ್ಲ ಮೇಳದಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದ ಹುಡುಗನೊಬ್ಬ ಕಾಳಿಂಗನಾವಡರ ಕಂಠ ದ್ವನಿಗೆ ಮಾರುಹೋಗಿ ತಾನು ಹಾಡಬೇಕೆಂದು ಆಮೇಲೆ ಕಲಿತು ಭಾಗವತನಾದುದೇ ಒಂದು ಅಚ್ಚರಿ ಅದ್ಭುತ ಅಸದೃಶ.

ಸುಮಾರು 80ರ ದಶಕದಲ್ಲಿ ಕಾಳಿಂಗ ನಾವಡ ಎಂಬ ಯಕ್ಷಗಾನದ ಪ್ರಳಯಾಗ್ನಿ ಭೋರ್ಗರೆವ ಜಲ ಪ್ರವಾಹದ ಎದುರು ನಿಂತ ಬೇರೆ ಭಾಗವತರಿಲ್ಲ ಯಕ್ಷಗಾನದಲ್ಲಿ ಒಂದು ಕ್ರಾಂತಿಯನ್ನುಂಟು ಮಾಡಿ ಅತಿ ಸಣ್ಣ ಪ್ರಾಯದ ಅದ್ಭುತ ಭಾಗವತ ನಾವಡರ ಎದುರು ಎತ್ತರದ ಬೆಟ್ಟದಿಂದ ಧುಮ್ಮಿಕ್ಕಿ ಹರಿಯುವ ನದಿಯ ಎದುರು ನಿಂತ ಕಲ್ಲುಬಂಡೆಯಂತೆ ತನ್ನದೇ ಆದವರ ಮಾಧುರ್ಯ ಮತ್ತು , ಜನಪದೀಯ ಶೈಲಿ, ಸಿನಿಮಾ ಹಾಡುಗಳ ರಾಗಗಳನ್ನು ಯಕ್ಷಗಾನಕ್ಕೆ ಸಂಯೋಜಿಸಿ ದುರ್ಗಪ್ಪ ಗುಡಿಗಾರ ಎಂಬ ಮದ್ದಳೆಯ ಮಾಂತ್ರಿಕ ನ ಜೊತೆಯಲ್ಲಿ ಆ ಕಾಲದ ಕೆಲ ಕಲಾವಿದರಾದ ಸುರೇಶ್ ಶೆಟ್ಟಿ ,ತೀರ್ಥಹಳ್ಳಿ ಗೋಪಾಲಚಾರಿ, ಮೂರು ವಿಷ್ಣು ಭಟ್ , ನಿಲ್ಕೋಡು ಶಂಕರ ಹೆಗಡೆ ಇಂಥವರನ್ನು ತಯಾರುಮಾಡಿ ಜೊತೆಯಲ್ಲಿ ಪೆರ್ಡೂರು ಮೇಳವನ್ನು ಅಲ್ಲಾಡದಂತೆ ಮಾಡಿ ತನ್ನ *ಮೆಲೋಡಿ ವಾಯ್ಸ್ ನ ಮುಖಾಂತರ ಬೇರೆ ಅಭಿಮಾನಿ ಪ್ರೇಕ್ಷಕ ವಲಯವನ್ನು ಸೃಷ್ಟಿ ಮಾಡಿ ದ ಸ್ವರಮಾಂತ್ರಿಕ ಅದ್ಭುತ ಭಾಗವತ ಜಾದೂಗಾರ ಧಾರೇಶ್ವರ*

ಒಮ್ಮೆ ಕಾಳಿಂಗನಾವಡರ ಎದುರು ಸೆಟೆದು ನಿಂತ ಮೇಲೆ ಹಿಂದಿರುಗಿ ನೋಡಲೇ ಇಲ್ಲ ಸರಿ ಸುಮಾರು 25 ವರ್ಷಗಳ ಕಾಲ ಪೆರಡೂರು ಮೇಳಕ್ಕೆ ಹೊಸ ಹೊಸ ಪ್ರಸಂಗದ ಹೊಸ ಹೊಸ ರಾಗ ಹೊಸ ಕಲ್ಪನೆ ಮುಂತಾದ ಹತ್ತು ಹಲವು ಗಿಮಿಕ್ಕುಗಳ ಮುಖಾಂತರ ಧಾರೇಶ್ವರ ಭಾಗವತರು ಯಕ್ಷಗಾನ ವಲಯದಲ್ಲಿ ಸ್ಟಾರ್ ಗಿರಿಯನ್ನು ತನಗೆ ಅರಿವಿಲ್ಲದೆ ಸಂಪಾದನೆ ಮಾಡಿದರು ಎಂದರೆ ತಪ್ಪಾಗಲಾರದು.

ಶಾಸ್ತ್ರೀಯ ರಾಗಗಳನ್ನು ಬಲ್ಲ ಶ್ರೀಯುತರು ಯಕ್ಷಗಾನೀಯ ಮಟ್ಟು ಪರಂಪರೆ ಲಯ ಮುಂತಾದವುಗಳ ಆಳವನ್ನು ಕೂಡ ತಿಳಿದು ಇದಮಿಥ್ಥಂ ಎಂಬ ತೀರ್ಮಾನವನ್ನು ಕೊಡುವಷ್ಟರ ಮಟ್ಟಿಗೆ ಜ್ಞಾನಿಯು ಹೌದು. ಯಾವುದೇ ಗೋಷ್ಠಿಯಾಗಲಿ ಪ್ರಾತ್ಯಕ್ಷಿಕೆ ಆಗಲಿ ಯಕ್ಷಗಾನದ ವಿಷಯದಲ್ಲಿ ಆಧಾರ ಸಮೇತ ಗಂಟೆಗಟ್ಟಲೆ ಮಾತಾಡುವಷ್ಟರಮಟ್ಟಿಗೆ ಅದ್ಭುತ ಜ್ಞಾನ ಮತ್ತು ಪಾಂಡಿತ್ಯವನ್ನು ಹೊಂದಿದ್ದ ಏಕಮೇವಾ ದ್ವಿತೀಯ ಭಾಗವತ ಶಿರೋಮಣಿ ಧಾರೇಶ್ವರ ಎಂದು ಇತ್ತೀಚೆಗೆ ಅಸೌಕ್ಯದಿಂದ ಇದ್ದ ಭಾಗವತರನ್ನು ನೋಡಿ ಮಾತಾಡಿ ಬರಲು ಹಿರಿಯರೂ ವಿದ್ವಾಂಸರೂ ಆದ ಶ್ರೀ ಉಜಿರೆ ಅಶೋಕ್ ಭಟ್ಟರ ಜೊತೆಯಲ್ಲಿ ಬೆಂಗಳೂರಿನ ಅವರ ನಿವಾಸಕ್ಕೆ ಹೋಗಿದ್ದ ಸಮಯದಲ್ಲಿ ಉಜಿರೆಯವರು ನನ್ನಲ್ಲಿ ಹೇಳಿದ ಮಾತುಗಳಿವು.

ಆ ಕಾಲಕ್ಕೇ ಚಿಟ್ಟಾಣಿಯವರ ಜೊತೆ ವೇಷ ಮಾಡಿದ ಕಲಾವಿದೆಯನ್ನು ಕೈಹಿಡಿದು ಕಾರ್ತಿಕ ಧಾರೆಶ್ವರನಂತಹ ಮಗನನ್ನು ಇಂಜಿನಿಯರ್ ಉದ್ಯೋಗದಲ್ಲಿದ್ದರೂಯಕ್ಷಗಾನ ಕ್ಷೇತ್ರಕ್ಕೆ ಚೆಂಡೆಗಾರನಾಗಿ ಮಾಡಿ (ಸೊಸೆ ಅನನ್ಯ ಕೂಡ ಕಲಾವಿದೆಯೇ ಹೌದು) ತನ್ನ ಹೆಸರು ಮುಂದುವರಿಯುವಂತೆ ಮಾಡಿದ ಕೀರ್ತಿ ಇವರದು.

ಯಕ್ಷಗಾನ ಪ್ರಪಂಚದಲ್ಲಿ ಹೊಸ ಕ್ರಾಂತಿಯನ್ನು ಎಬ್ಬಿಸಿ ಸುಮಾರಿ 25 ವರ್ಷ ಮೆರೆದ ಅದ್ಭುತ ಕಲಾವಿದ, ಸರಳ ಮಂಚದಲ್ಲಿ ಮಲಗಿ ಉತ್ತರಾಯಣವನ್ನು ಕಾಯುತ್ತಿದ್ದ ಕುರುಕುಲಪಿತಾಮಹ ಭೀಷ್ಮಾಚಾರ್ಯರಂತೆ ಮರಣ ಶಯ್ಯೆಯಲ್ಲಿ ಮಲಗಿದ್ದುದನ್ನು ಕಂಡು ಮೊಮ್ಮಲ ಮರುಗಿದೆ. ಕೆಲವು ಸಮಯದಿಂದ ಬಾಧಿಸುತ್ತಿದ್ದ ಲಂಗ್ಸ್ ಕ್ಯಾನ್ಸರ್ ನಲ್ಲಿ ಬಳಲಿ ಇಹಲೋಕವನ್ನು ಮರೆತು ಕಾಲ ಹರಣ ಮಾಡಿ ತಮ್ಮ ಹಾಡು ತಮ್ಮ ನೆನಪನ್ನು ಮಾತ್ರ ಯಕ್ಷಗಾನ ಪ್ರಪಂಚಕ್ಕೆ ಬಿಟ್ಟು ಬಾರದ ಲೋಕಕ್ಕೆ ಹೋದ ಧಾರೇಶ್ವರ ಭಾಗವತರ ಆತ್ಮಕ್ಕೆ ಮೋಕ್ಷಂ ಗಛ್ಛಾ .. ಅವರ ಪತ್ನಿ, ಪುತ್ರ ಕಾರ್ತಿಕ್ ಧಾರೇಶ್ವರ, ಪುತ್ರಿ ಮತ್ತು ಸೊಸೆ ಹಾಗೂ ಮನೆಯವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಅವರು ಅನವರತ ಸೇವೆಗೈದ “ಪೆರ್ಡೂರು ಮೇಳದ ದೇವರಾದ ಶ್ರೀ ಅನಂತಪದ್ಮನಾಭಸ್ವಾಮಿ” ಕರುಣಿಸಲಿ ಎಂದು ಕೇಳುತ್ತಾ

ಭಾರವಾದ ಮನಸ್ಸಿನಿಂದ ತುಂಬಿದ ಕಣ್ಣಾಲಿಗಳಿಂದ ಭಾಗವತ ಶಿರೋರತುನರಿಗೆ ಅಶ್ರುತರ್ಪಣ ಈ ಅಕ್ಷರನಮನದೊಂದಿಗೆ..

ಗಣೇಶ ಭಟ್ ಬಾಯಾರು, ಬೆಂಗಳೂರು
ಗಣೇಶ ಭಟ್ ಬಾಯಾರು, ಬೆಂಗಳೂರು

ಲೇಖನ: ಗಣೇಶ ಭಟ್ ಬಾಯಾರು, ಬೆಂಗಳೂರು

(ಗಣೇಶ್ ಭಟ್ ಬಾಯಾರು ಬೆಂಗಳೂರು. ಇವರು ಯಕ್ಷಗಾನ ಹವ್ಯಾಸೀ ಕಲಾವಿದ , ಭಾಗವತ, ಶಿಕ್ಷಕ, ಸಂಘಟಕ, ಲೇಖಕ. 40 ವರ್ಷಗಳ ಕಾಲ ಹಿರಿಯ ಕಿರಿಯ ಕಲಾವಿದರ, ವಿದ್ವಾಂಸರ ಸಂಘಟಕ,ಮೇಳದ ಯಜಮಾನರುಗಳ ಜೊತೆಗೆ ಒಡನಾಟ)

IPL_Entry_Point