ಕನ್ನಡ ಸುದ್ದಿ  /  Karnataka  /  Chitradurga: Folk Artiste Nadoja Belagallu Veeranna Dies In Accident

Belagallu Veeranna Dies: ಕಾರು- ಲಾರಿ ಅಪಘಾತ, ಖ್ಯಾತ ರಂಗಭೂಮಿ ಕಲಾವಿದ ಬೆಳಗಲ್ ವೀರಣ್ಣ ಮೃತ್ಯು, ಗಣ್ಯರ ಸಂತಾಪ

ಭೀಕರ ಅಪಘಾತದಲ್ಲಿ ರಂಗಭೂಮಿ ಮತ್ತು ತೊಗಲು ಗೊಂಬೆಯಾಟದ ಹಿರಿಯ ಕಲಾವಿದರಾದ ಬೆಳಗಲ್ ವೀರಣ್ಣ ಮೃತಪಟ್ಟಿದ್ದಾರೆ. ತಮ್ಮ ಪುತ್ರರಾದ ಹನುಮಂತ ಅವರೊಂದಿಗೆ ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.

Belagallu Veeranna Dies: ಕಾರು- ಲಾರಿ ಅಪಘಾತ, ಖ್ಯಾತ ರಂಗಭೂಮಿ ಕಲಾವಿದ ಬೆಳಗಲ್ ವೀರಣ್ಣ ಮೃತ್ಯು, ಗಣ್ಯರ ಸಂತಾಪ
Belagallu Veeranna Dies: ಕಾರು- ಲಾರಿ ಅಪಘಾತ, ಖ್ಯಾತ ರಂಗಭೂಮಿ ಕಲಾವಿದ ಬೆಳಗಲ್ ವೀರಣ್ಣ ಮೃತ್ಯು, ಗಣ್ಯರ ಸಂತಾಪ

ಚಿತ್ರದುರ್ಗ: ಇಂದು ಬೆಳಗ್ಗೆ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ರಂಗಭೂಮಿ ಮತ್ತು ತೊಗಲು ಗೊಂಬೆಯಾಟದ ಹಿರಿಯ ಕಲಾವಿದರಾದ ಬೆಳಗಲ್ ವೀರಣ್ಣ ಮೃತಪಟ್ಟಿದ್ದಾರೆ. ತಮ್ಮ ಪುತ್ರರಾದ ಹನುಮಂತ ಅವರೊಂದಿಗೆ ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಿದ್ದ ಸಂದರ್ಭದಲ್ಲಿ ಕಾರು-ಲಾರಿ ಮುಖಾಮುಖಿ ಡಿಕ್ಕಿಯಾಗಿದ್ದು, ಈ ದುರ್ಘಟನೆ ಸಂಭವಿಸಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿ ವ್ಯಾಪ್ತಿಯಲ್ಲಿ ಅಪಘಾತ ನಡೆದಿದ್ದು, ಹಿರಿಯ ಕಲಾವಿದ ಬೆಳಗಲ್ ವೀರಣ್ಣರ ಅಗಲಿಕೆಗೆ ಗಣ್ಯರು ಆಘಾತ ವ್ಯಕ್ತಪಡಿಸಿದ್ದಾರೆ.

ತೀವ್ರವಾಗಿ ಗಾಯಗೊಂಡಿದ್ದ ಬೆಳಗಲ್ ವೀರಣ್ಣ‌ ಅವರನ್ನು ಚಳ್ಳಕೆರೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆಸ್ಪತ್ರೆ ತಲುಪುವ ಮೊದಲೇ ಅವರು ಗತಿಸಿದ್ದರು. ವೀರಣ್ಣ ಪುತ್ರ ಹನುಮಂತನಿಗೂ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಹನುಮಂತ ಅವರ ಸ್ಥಿತಿಯೂ ಗಂಭೀರವಾಗಿದೆ ಎಂದು ವರದಿಗಳು ತಿಳಿಸಿವೆ.

ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಬೆಳಗಲ್ ವೀರಣ್ಣ (91) ಅವರು ಹಂಪಿ ಕನ್ನಡ ವಿವಿಯಿಂದ ನಾಡೋಜ, ಕರ್ನಾಟಕ ರಾಜ್ಯೋತ್ಸವ‌, ಜಾನಪದ ಅಕಾಡೆಮಿಯ ಪ್ರಶಸ್ತಿ, ಪುರಸ್ಕಾರಗಳು ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ. ಇವರು ಖ್ಯಾತ ಸಂಗೀತ ಕಲಾವಿದ ಪಂಡಿತ್ ವೆಂಕಟೇಶಕುಮಾರ್ ಅವರ ಮಾವ. ದೇಶ ವಿದೇಶಗಳಲ್ಲಿ ತೊಗಲು ಗೊಂಬೆಯಾಟವನ್ನು ಜನಪ್ರಿಯಗೊಳಿಸಿದ್ದಾರೆ.

"ತೊಗಲು ಗೊಂಬೆಯಾಟ" ಎಂಬ ಜಾನಪದ ಕಲೆಗೆ ಹೊಸ ಸ್ಪರ್ಶ ನೀಡಿ, ಹೊಸ ವೈಭವವನ್ನು ಸೃಷ್ಟಿಸಿದ ಖ್ಯಾತ ರಂಗಭೂಮಿ ಮತ್ತು ಜಾನಪದ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣನವರು ರಸ್ತೆ ಅಪಘಾತಕ್ಕೀಡಾಗಿ ಇಹಲೋಕ ತ್ಯಜಿಸಿದರು ಎಂಬ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು. ಮೃತರ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತೇನೆ. ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್‌ ಮಾಡಿದ್ದಾರೆ.

 

 

ರಂಗಭೂಮಿ ಮತ್ತು ತೊಗಲು ಗೊಂಬೆಯಾಟದ ಹಿರಿಯ ಕಲಾವಿದರಾದ ಶ್ರೀ ಬೆಳಗಲ್ ವೀರಣ್ಣ ಅವರು ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿರುವುದು ನನಗೆ ಬಹಳ ನೋವನ್ನು ಉಂಟು ಮಾಡಿದೆ. ಅವರ ಅಗಲಿಕೆ ಕಲಾಜಗತ್ತಿಗೆ ಆಗಿರುವ ದೊಡ್ಡ ನಷ್ಟ. ನಾಡೋಜ, ಕರ್ನಾಟಕ ರಾಜ್ಯೋತ್ಸವ‌, ಜಾನಪದ ಅಕಾಡೆಮಿ ಪಶಸ್ತಿ ಸೇರಿ ಅನೇಕ ಗೌರವಗಳಿಗೆ ಪಾತ್ರರಾಗಿದ್ದ ಅವರು, ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ದಯಪಾಲಿಸಲೆಂದು ಪ್ರಾರ್ಥಿಸುತ್ತೇನೆ ಎಂದು ಎಚ್‌ಡಿ ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದಾರೆ.

ರಾಜ್ಯದ ಹಿರಿಯ ರಂಗ ಕಲಾವಿದರಲ್ಲಿ ಒಬ್ಬರು, "ತೊಗಲು ಬೊಂಬೆ ಆಟ" ಕಲೆಯ ಮೂಲಕ ಜನಪ್ರಿಯರಾದ ನಾಡೋಜ ಬೆಳಗಲ್ಲು ವೀರಣ್ಣ ಅವರು ರಸ್ತೆ ಅಪಘಾತದಲ್ಲಿ ನಿಧನರಾದ ಸುದ್ಧಿ ಕೇಳಿ ಮನಸ್ಸಿಗೆ ಆಘಾತವಾಯಿತು. ಮೃತರ ಕುಟುಂಬಸ್ಥರಿಗೆ ನೋವು ತಡೆದುಕೊಳ್ಳುವ ಶಕ್ತಿ ನೀಡಲಿ ಹಾಗೂ ಹಿರಿಯ ದಿವ್ಯಾತ್ಮಕ್ಕೆ ಸದ್ಗತಿ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಪ್ರಹ್ಲಾದ್‌ ಜೋಶಿ ಟ್ವೀಟ್‌ ಮಾಡಿದ್ದಾರೆ.

ನಿನ್ನೆಯಷ್ಟೇ ಬೆಳಗಲ್‌ ವೀರಣ್ಣ ಅವರನ್ನು ನೆನೆಸಿಕೊಂಡಿದ್ದೆ. ʼಇತ್ತೀಚೆಗೆ ಮಾತೇ ಆಡಿಲ್ಲ, ಹೇಗಿದ್ದಾರೋ ಏನೋ? ಪ್ರಕಾಶ್‌ ಗೆ ಫೋನ್‌ ಮಾಡಬೇಕುʼ ಅಂದುಕೊಂಡಿದ್ದೆ. ಆದರೆ ಈಗ ಬಂದ ಸುದ್ದಿಯಂತೆ ಅವರು ರಾತ್ರಿ ಅಫಘಾತವೊಂದರಲ್ಲಿ ತೀರಿಕೊಂಡರಂತೆ. ೯೧ ವರ್ಷದ ವಯಸ್ಸಿನ ವೀರಣ್ಣ ತೊಗಲು ಗೊಂಬೆಯ ಅಭಿಜಾತ ಕಲಾವಿದ. ರಂಗಭೂಮಿಯ ಅಸಾಮಾನ್ಯ ನಟ. ತನ್ನ ಅದ್ಭುತವಾದ ಸಿರಿಕಂಠದಿಂದ ಪ್ರೇಕ್ಷಕರಿಗೆ ಮೋಡಿಮಾಡಬಲ್ಲ ಗಂಧರ್ವ. ಬೆಳಗಲ್‌ ವೀರಣ್ಣ ತುಂಬ ಸೃಜನಶೀಲವಾಗಿ ಯೋಚಿಸಬಲ್ಲ ಅಪೂರ್ವ ವ್ಯಕ್ತಿಯಾಗಿದ್ದರು. ಗಾಂಧೀಜಿ ಬಗ್ಗೆ, ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಆಧುನಿಕ ಗೊಂಬೆಗಳನ್ನು ತಯಾರಿಸಿ ದೆಹಲಿಯಲ್ಲಿ ಪ್ರಸಿದ್ಧರಾಗಿದ್ದರು. ಜೆ ಎನ್‌ ಯು ವಿನಲ್ಲಿಯೂ ಅವರದೊಂದು ಪ್ರದರ್ಶನ ಏರ್ಪಡಿಸಿದ್ದೆ. ಜಾನಪದ ಅಕಾಡೆಮಿಯಲ್ಲಿ ನಾನು ಮತ್ತು ಅವರು ಒಟ್ಟಿಗೇ ಮೂರು ವರ್ಷ ಕೆಲಸ ಮಾಡಿದ್ದೆವು. ಅವರ ಸ್ನೇಹ ಬಹಳ ಅಪೂರ್ವವಾದದ್ದು. ನಿಡುಗಾಲದ ಒಡನಾಡಿ ವೀರಣ್ಣ ಅವರಿಗೆ ನಮನಗಳು. ಅವರ ನಿಧನದಿಂದ ತೊಗಲು ಗೊಂಬೆಯಾಟದ ಒಂದು ಅಧ್ಯಾಯ ಮುಗಿದಂತಾಯಿತು ಎಂದು ಲೇಖಕರಾದ ಪುರುಷೋತ್ತಮ ಬಿಳಿಮಲೆ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಹೀಗೆ ಹಲವು ಗಣ್ಯರು ಬೆಳಗಲ್ ವೀರಣ್ಣ ಅವರ ದುರ್ಮರಣಕ್ಕೆ ಸಂತಾಪ ಸೂಚಿಸಿದ್ದಾರೆ. 

IPL_Entry_Point