ಖುಷಿಯೊಂದಿಗೆ ಸಿದ್ದೇಗೌಡ ಭಾವುಕ ಕ್ಷಣ; ಭಾವನಾಳನ್ನು ಅಡುಗೆ ಮನೆಗೆ ಹೋಗಲು ಬಿಡದ ಅತ್ತೆ; ಲಕ್ಷ್ಮೀ ನಿವಾಸ ಧಾರಾವಾಹಿ
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಅಕ್ಟೋಬರ್ 23ರ ಸಂಚಿಕೆಯಲ್ಲಿ ಖುಷಿಯನ್ನು ಮನೆಗೆ ಬಿಟ್ಟು ಬರುವಂತೆ ಜವರೇಗೌಡ, ಮಗನಿಗೆ ಹೇಳುತ್ತಾನೆ. ಆದರೆ ಅದಕ್ಕೆ ಸಿದ್ದೇಗೌಡ ಒಪ್ಪುವುದಿಲ್ಲ. ಖುಷಿಗೆ ಹಾಲು ಕೊಡಲು ಹೋದಾಗ ಅತ್ತೆ, ಭಾವನಾಳನ್ನು ಅಡುಗೆ ಮನೆಗೆ ಹೋಗದಂತೆ ತಡೆಯುತ್ತಾಳೆ. ಇದರಿಂದ ಭಾವನಾ ಬೇಸರಗೊಳ್ಳುತ್ತಾಳೆ.

ಭಾವನಾಳನ್ನು ಹೆಂಡತಿ ಎಂದು ಒಪ್ಪಿಕೊಂಡು ಮನೆಗೆ ಕರೆ ತಂದರೂ, ಭಾವನಾ ಮಾತ್ರ ಸಿದ್ದೇಗೌಡ್ರನ್ನು ಗಂಡ ಎಂದು ಒಪ್ಪಿಕೊಂಡಿಲ್ಲ. ತನ್ನ ಪ್ರೀತಿಯನ್ನು ಅರ್ಥ ಮಾಡಿಸಲು ಸಿದ್ದೇಗೌಡ ಬಹಳ ಪ್ರಯತ್ನ ಮಾಡುತ್ತಿದ್ದಾನೆ. ಆದರೆ ಭಾವನಾಗೆ ಮಾತ್ರ, ಸಿದ್ದೇಗೌಡ ನನಗೆ ಮೋಸ ಮಾಡಿ ತಾಳಿ ಕಟ್ಟಿರುವುದರ ಬಗ್ಗೆ ಕೋಪವಿದೆ.
ಖುಷಿ, ಶ್ರೀಕಾಂತ್ ಮಗಳು ಎಂಬ ಸತ್ಯ ತಿಳಿದುಕೊಂಡ ಜವರೇಗೌಡ
ಸಿದ್ದೇಗೌಡ ಮನೆಯಲ್ಲಿ ಕೂಡಾ ಭಾವನಾಳನ್ನು ಸೊಸೆ ಎಂದು ಒಪ್ಪಿಕೊಳ್ಳುತ್ತಿಲ್ಲ. ಅದರಲ್ಲೂ ಈಗ ಸಿದ್ದೇಗೌಡ , ಭಾವನಾ ಖುಷಿಯಾಗಿರಲಿ ಎಂದು ಖುಷಿಯನ್ನು ಮನೆಗೆ ಕರೆತಂದಿದ್ದಾನೆ. ಖುಷಿಯನ್ನು ನೋಡಿ ಜವರೇಗೌಡ, ಆ ಮಗು ಯಾರು ಎಂದು ಸಹಾಯಕನಿಗೆ ಕೇಳುತ್ತಾನೆ. ಅಪಘಾತದಲ್ಲಿ ಸಾವನ್ನಪ್ಪಿದ ಶ್ರೀಕಾಂತ್ ಮಗಳು ಎಂದು ಜವರೇಗೌಡನಿಗೆ ತಿಳಿಯುತ್ತದೆ. ನಾನು ಹೇಗಾದರೂ ಮಾಡಿ ಸಿದ್ದೇಗೌಡನನ್ನು ಸೇಫ್ ಮಾಡಬೇಕು ಎಂದು ಎಲ್ಲಾ ಸಾಕ್ಷಿಗಳನ್ನು ನಾಶ ಮಾಡುತ್ತಿದ್ದರೆ, ಇವನು ಸಾಕ್ಷಿಗಳನ್ನು ಮನೆಗೆ ಕರೆತರುತ್ತಿದ್ದಾನೆ. ಹೇಗಾದರೂ ಮಾಡಿ ಮೊದಲು ಈ ಮಗು, ಭಾವನಾಳನ್ನು ಹೊರಗೆ ಕಳಿಸಬೇಕು ಎಂದುಕೊಳ್ಳುತ್ತಾನೆ.
ರೂಮ್ನಲ್ಲಿ ಭಾವನಾ ಜೊತೆ ಇರುವ ಖುಷಿ, ತನಗೆ ಹಸಿವಾಗುತ್ತಿದೆ ಎಂದು ಹೇಳುತ್ತಾಳೆ. ನಿನಗೆ ಹಾಲು ಕೊಡುತ್ತೇನೆ ಬಾ ಎಂದು ಭಾವನಾ ರೂಮ್ನಿಂದ ಎದ್ದು ಅಡುಗೆ ಮನೆ ಕಡೆಗೆ ಹೋಗುತ್ತಾಳೆ. ಆದರೆ ಭಾವನಾ ಅತ್ತೆ ಅವಳನ್ನು ಅಡುಗೆ ಮನೆಗೆ ಹೋಗಲು ಬಿಡುವುದಿಲ್ಲ. ಇದರಿಂದ ಭಾವನ ಬೇಸರದಿಂದ ಖುಷಿಯನ್ನು ಕರೆದುಕೊಂಡು ಮತ್ತೆ ರೂಮ್ಗೆ ವಾಪಸ್ ಹೋಗುತ್ತಾಳೆ. ಭಾವನಾ ಅತ್ತೆ ಹೋದ ನಂತರ, ಮಗ ಸಿದ್ದೇಗೌಡನನ್ನು ಕರೆಯುವ ಜವರೇಗೌಡ, ಮೊದಲು ಆ ಮಗುವನ್ನು ಮನೆಗೆ ಬಿಟ್ಟು ಬಾ ಎಂದು ತಾಕೀತು ಮಾಡುತ್ತಾನೆ. ಆದರೆ ಸಿದ್ದೇಗೌಡ ಒಪ್ಪುವುದಿಲ್ಲ. ನಮ್ಮ ಮನೆಯಲ್ಲಿ ಇಷ್ಟು ಜನ ಇದ್ದೇವೆ, ಇನ್ಮುಂದೆ ಆ ಮಗು ಭಾವನಾ ಜೊತೆ ಇಲ್ಲೆ ಇರುತ್ತದೆ, ಅದಕ್ಕೂ ಯಾರೂ ಇಲ್ಲ ಎಂದು ಸಿದ್ದೇಗೌಡ ಅಪ್ಪನಿಗೆ ಉತ್ತರಿಸುತ್ತಾನೆ. ಮಗನ ಮಾತು ಕೇಳಿ ಜವರೇಗೌಡ ಕೋಪಗೊಳ್ಳುತ್ತಾನೆ.
ನನ್ನನ್ನು ಅಪ್ಪ ಎಂದು ಕರೆಯುವಂತೆ ಖುಷಿ ಮುಂದೆ ಬೇಡಿಕೆ ಇಟ್ಟ ಸಿದ್ದೇಗೌಡ
ಖುಷಿಯನ್ನು ಮಾತನಾಡಿಸುವ ಸಿದ್ದೇಗೌಡ, ನಾನು ಭಾವನಾ ಅಮ್ಮನನ್ನು ಮದುವೆ ಆಗಿದ್ದೇನೆ, ಹಾಗಿದ್ರೂ ಅಂಕಲ್ ಅಂತ ಏಕೆ ಕರೆಯುತ್ತೀಯ, ನನ್ನನ್ನು ಅಪ್ಪ ಎಂದು ಕರೆಯುವುದಾಗಿ ಹೇಳುತ್ತಾನೆ. ಆ ಮಾತು ಕೇಳಿ ಖುಷಿ ಅಳುತ್ತಾಳೆ. ನನಗೆ ಅಪ್ಪ ಎಂದರೆ ಬಹಳ ಇಷ್ಟ. ಆದರೆ ಅಪ್ಪ ನನ್ನನ್ನು ಬಿಟ್ಟು ಹೋದರು. ನಿಮ್ಮನ್ನು ಅಪ್ಪ ಅಂತ ಕರೆದರೆ ನೀವೂ ನನ್ನನ್ನು ಬಿಟ್ಟು ಹೋಗುತ್ತೀರ, ನನಗೆ ನೀವು ಬೇಕು ಅಂಕಲ್ ಎಂದು ಖುಷಿ ಹೇಳುತ್ತಾಳೆ. ಕಂದನ ಮಾತು ಕೇಳಿ ಸಿದ್ದೇಗೌಡ ಭಾವುಕನಾಗುತ್ತಾನೆ.
ನಿಮ್ಮ ಭಾವನಾ ಅಮ್ಮ ಏನು ಮಾಡಿದರೂ ನನ್ನನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಏನು ಮಾಡೋದು ಅಂತ ಸಿದ್ದೇಗೌಡ, ಖುಷಿಯೊಂದಿಗೆ ಬೇಸರ ಹಂಚಿಕೊಳ್ಳುತ್ತಾನೆ. ನೀವು ಭಾವನಾ ಅಮ್ಮನೊಂದಿಗೆ ಗೌಡ್ರು ಮಾತನಾಡುವಂತೆ ಮಾತನಾಡಿ ಎಂದು ಖುಷಿ ಐಡಿಯಾ ಕೊಡುತ್ತಾಳೆ. ಅದಕ್ಕೆ ಖುಷಿಯಾಗುವ ಸಿದ್ದೇಗೌಡ ಈಗಲೇ ಮಾತನಾಡುತ್ತೇನೆ ಎಂದು ಭಾವನಾಗೆ ಕಾಲ್ ಮಾಡುತ್ತಾನೆ. ತನ್ನ ಜೊತೆಗೆ ಮಾತನಾಡುತ್ತಿರುವುದು ಸಿದ್ದೇಗೌಡ ಎಂದು ಗೊತ್ತಿಲ್ಲದೆ ಭಾವನಾ, ಆತನೊಂದಿಗೆ ನಡೆದ ಘಟನೆಯನ್ನು ಹೇಳಿಕೊಳ್ಳುತ್ತಾಳೆ. ಈ ಘಟನೆಯಿಂದ ನೋವಾಗಿರುವುದು ನಿಮ್ಮ ತಂದೆ ತಾಯಿಗೆ. ಅವರ ಸಂತೋಷಕ್ಕಾದರೂ ನೀವು ಅಮ್ಮನ ಮನೆಗೆ ಊಟಕ್ಕೆ ಹೋಗಿ ಬನ್ನಿ ಎಂದು ಸಲಹೆ ನೀಡುತ್ತಾನೆ. ಅವನ ಮಾತು ಭಾವನಾಗೂ ಸರಿ ಎನಿಸುತ್ತದೆ. ನಿಮ್ಮ ಮಾತು ನಿಜ, ಅಪ್ಪ-ಅಮ್ಮನ ಸಂತೋಷಕ್ಕಾದರೂ ನಾನು ಊಟಕ್ಕೆ ಹೋಗಿ ಬರುತ್ತೇನೆ ಎನ್ನುತ್ತಾಳೆ. ಭಾವನಾ ಮಾತು ಕೇಳಿ ಸಿದ್ದೇಗೌಡನಿಗೂ ಖುಷಿಯಾಗುತ್ತದೆ.