ಕನ್ನಡ ಸುದ್ದಿ  /  Karnataka  /  Bajrang Dal Workers Attempt To Purify Dc Office In Shivamogga Against Azaan Call

Shivamogga News: ಶಿವಮೊಗ್ಗ ಡಿಸಿ ಕಚೇರಿ ಹತ್ತಿ ಆಜಾನ್​ ಕೂಗಿದ ಮುಸ್ಲಿಂ ಯುವಕ: ಗೋಮೂತ್ರ ಸಿಂಪಡಿಸಲು ಬಂದ ಬಜರಂಗದಳ ಕಾರ್ಯಕರ್ತರು

ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಮೇಲೆ ‘ಗೋಮೂತ್ರ’ ಸಿಂಪಡಿಸುವ ಮೂಲಕ ಬಲಪಂಥೀಯ ಸಂಘಟನೆಯಾದ ಬಜರಂಗದಳದ ಕಾರ್ಯಕರ್ತರು ಡಿಸಿ ಕಚೇರಿ ಶುದ್ಧೀಕರಣಕ್ಕೆ ಯತ್ನಿಸಿರುವ ಘಟನೆ ಸೋಮವಾರ ನಡೆದಿದೆ. ಆದರೆ, ಪೊಲೀಸರು ಅವರ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ.

ಡಿಸಿ ಕಚೇರಿ ಶುದ್ಧೀಕರಣಕ್ಕೆ ಯತ್ನಿಸಿದ ಬಜರಂಗದಳದ ಕಾರ್ಯಕರ್ತರು
ಡಿಸಿ ಕಚೇರಿ ಶುದ್ಧೀಕರಣಕ್ಕೆ ಯತ್ನಿಸಿದ ಬಜರಂಗದಳದ ಕಾರ್ಯಕರ್ತರು

ಶಿವಮೊಗ್ಗ: ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಮೇಲೆ ‘ಗೋಮೂತ್ರ’ ಸಿಂಪಡಿಸುವ ಮೂಲಕ ಬಲಪಂಥೀಯ ಸಂಘಟನೆಯಾದ ಬಜರಂಗದಳದ ಕಾರ್ಯಕರ್ತರು ಡಿಸಿ ಕಚೇರಿ ಶುದ್ಧೀಕರಣಕ್ಕೆ ಯತ್ನಿಸಿರುವ ಘಟನೆ ಸೋಮವಾರ ನಡೆದಿದೆ. ಆದರೆ, ಪೊಲೀಸರು ಅವರ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ.

ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಆಜಾನ್ ಕುರಿತು ನೀಡಿದ ಹೇಳಿಕೆಯನ್ನು ವಿರೋಧಿಸಿ ಮಾರ್ಚ್​ 17 ರಂದು ಶಿವಮೊಗ್ಗದಲ್ಲಿ ಮುಸ್ಲಿಂ ಸಮುದಾಯದ ನೂರಾರು ಮಂದಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಮುಸ್ಲಿಂ ಯುವಕನೊಬ್ಬ ಡಿಸಿ ಕಚೇರಿ ಮುಂಭಾಗದ ಮೆಟ್ಟಿಲುಗಳನ್ನು ಹತ್ತಿ ಆಜಾನ್ ಕೂಗಿದ್ದನು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು.

ತಕ್ಷಣ ಅಲ್ಲಿದ್ದ ಪೊಲೀಸರು ಆತನನ್ನು ಕೆಳಗಿಳಿಸಿ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಮುಸ್ಲಿಂ ಸಮಾಜದ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಮಾತ್ರವಲ್ಲ, ಬೆಂಗಳೂರಿನ ವಿಧಾನಸೌಧದಲ್ಲೂ ಆಜಾನ್​ ಕೂಗುತ್ತೇವೆ ಎಂದು ಭಾಷಣ ಮಾಡಿದ್ದರು.

ಡಿಸಿ ಕಚೇರಿಯಲ್ಲಿ ಆಜಾನ್​ ಕೂಗಿದ್ದನ್ನು ಖಂಡಿಸಿ ಬಜರಂಗದಳದ ಕಾರ್ಯಕರ್ತರು ಡಿಸಿ ಕಚೇರಿ ಶುದ್ಧೀಕರಣಕ್ಕೆ ಯತ್ನಿಸಿದ್ದಾರೆ. ಆದರೆ, ಪೊಲೀಸರು ಗೋಮೂತ್ರದ ಬಾಟಲಿಯನ್ನು ಕಸಿದುಕೊಂಡು ಅವರ ಪ್ರಯತ್ನವನ್ನು ವಿಫಲಗೊಳಿಸಿದರು. ಇದರಿಂದ ಬಜರಂಗದಳ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ನಗರದಾದ್ಯಂತ ಪೊಲೀಸ್ ಕಟ್ಟೆಚ್ಚರ ವಹಿಸಿ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ ಎಂದು ಜಯನಗರ ಪೊಲೀಸ್ ಇನ್ಸ್‌ಪೆಕ್ಟರ್ ಗಜೇಂದ್ರಪ್ಪ ಹಿಂದೂಸ್ತಾನ್​ ಟೈಮ್ಸ್​ಗೆ ತಿಳಿಸಿದ್ದಾರೆ.

ಡಿಸಿ ಕಚೇರಿಯಲ್ಲಿ ನಡೆದ ಘಟನೆಯನ್ನು ಖಂಡಿಸಿ ಮಾತನಾಡಿದ ಮಾಜಿ ಸಚಿವ ಈಶ್ವರಪ್ಪ, "ಆಜಾನ್ ಶಬ್ದ ಮಾಲಿನ್ಯಕ್ಕೆ ಕಾರಣವಾಗುತ್ತಿದೆ ಮತ್ತು ಪರೀಕ್ಷೆಗೆ ಓದುತ್ತಿರುವ ವಿದ್ಯಾರ್ಥಿಗಳಿಗೆ ಅಡ್ಡಿಯಾಗುತ್ತಿದೆ. ಆಜಾನ್ ಕೂಗಿದ ವ್ಯಕ್ತಿ ಎಸ್‌ಡಿಪಿಐ ಸದಸ್ಯನಾಗಿದ್ದು, ಇದು ದೇಶದ್ರೋಹದ ಕೃತ್ಯ ಎಂದು ಆರೋಪಿಸಿದ್ದಾರೆ ಹಾಗೂ ಆತನ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಒತ್ತಾಯಿಸಿದ್ದಾರೆ.

"ಪೊಲೀಸರು ಆತನ ವಿರುದ್ಧ ಸಿಆರ್‌ಪಿಸಿ 107 ಸೆಕ್ಷನ್‌ನ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಿಟ್ಟು ಕಳುಹಿಸಿದ್ದಾರೆ. ಈ ಬಗ್ಗೆ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ" ಎಂದು ಈಶ್ವರಪ್ಪ ಹೇಳಿದ್ದಾರೆ.

ಆಜಾನ್ ಕುರಿತು ಈಶ್ವರಪ್ಪ ನೀಡಿದ ವಿವಾದಾತ್ಮಕ ಹೇಳಿಕೆ

ಕೆಎಸ್ ಈಶ್ವರಪ್ಪ ಮಂಗಳೂರಿನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ಸಮೀಪದಲ್ಲೇ ಮಸೀದಿಯಿಂದ ಆಜಾನ್ ಶಬ್ದಕೇಳಿದೆ. ಇದರಿಂದ ಕೂಡಲೇ ಸಿಟ್ಟಾದ ಈಶ್ವರಪ್ಪ, "ಎಲ್ಲಿ ಹೋದರೂ ಇದು (ಆಜಾನ್) ನನಗೆ ತಲೆನೋವು, ನಾನು ಎಲ್ಲಿಗೆ ಹೋದರೂ ಇದೇ ಸಮಸ್ಯೆ. ಮೈಕ್‌ನಲ್ಲಿ ಕಿರುಚಿದರೆ ಮಾತ್ರ ಅಲ್ಲಾ ಪ್ರಾರ್ಥನೆಯನ್ನು ಕೇಳುತ್ತಾನೆಯೇ? ಅಲ್ಲಾ ಕಿವುಡನೇ? ಸುಪ್ರೀಂ ಕೋರ್ಟ್ ತೀರ್ಪು ಬರಲಿದೆ. ಇದೆಲ್ಲದಕ್ಕೂ ಶೀಘ್ರದಲ್ಲೇ ಅಂತ್ಯವಿರುತ್ತದೆ ಎಂಬುದರಲ್ಲಿ ಸಂದೇಹವೇ ಇಲ್ಲ" ಎಂದಿದ್ದರು.

"ಎಲ್ಲಾ ಧರ್ಮಗಳನ್ನು ಗೌರವಿಸುವಂತೆ ಪ್ರಧಾನಿ ಮೋದಿ ಕೇಳಿದ್ದಾರೆ, ಆದರೆ ನೀವು ಮೈಕ್‌ನಲ್ಲಿ ಕಿರುಚಿದರೆ ಮಾತ್ರ ಅಲ್ಲಾ ಕೇಳಬಹುದೇ? ಹಿಂದೂಗಳು ದೇವಸ್ಥಾನಗಳಲ್ಲಿ ಪ್ರಾರ್ಥನೆ ಮಾಡುತ್ತಾರೆ, ಶ್ಲೋಕಗಳನ್ನು ಓದುತ್ತಾರೆ ಮತ್ತು ಭಜನೆಗಳನ್ನು ಹಾಡುತ್ತಾರೆ. ನಮಗೆ ಅವರಿಗಿಂತ ಹೆಚ್ಚಿನ ನಂಬಿಕೆ ಇದೆ. ಧರ್ಮಗಳನ್ನು ರಕ್ಷಿಸುವುದು ಭಾರತ ಮಾತೆ. ಆದರೆ ಮೈಕ್‌ನಲ್ಲಿ ಪ್ರಾರ್ಥಿಸಿದರೆ ಮಾತ್ರ ಅಲ್ಲಾ ಕೇಳುತ್ತಾನೆ ಎಂದು ನೀವು ಹೇಳಿದರೆ ಆತ ಕಿವುಡನೇ ಎಂದು ನಾನು ಕೇಳಬೇಕು. ಇದು ಅಗತ್ಯವಿಲ್ಲ, ಈ ಸಮಸ್ಯೆಯನ್ನು ಪರಿಹರಿಸಬೇಕು" ಅಂತ ವೇದಿಕೆಯಲ್ಲಿ ಈಶ್ವರಪ್ಪ ಹೇಳಿದ್ದರು.

ವಿವಾದದ ಬಳಿಕ ಸ್ಪಷ್ಟನೆ

ತಮ್ಮ ಹೇಳಿಕೆ ವಿವಾದ ಸೃಷ್ಟಿಸಿ ರಾಜ್ಯಾದ್ಯಂತ ಮುಸ್ಲಿಂ ಸಮುದಾಯದವರು ಪ್ರತಿಭಟನೆ ನಡೆಸುತ್ತಿದ್ದಂತೆಯೇ ಸ್ಪಷ್ಟನೆ ನೀಡಿದ್ದ ಈಶ್ವರಪ್ಪ, "ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಆಜಾನ್ ಕೇಳಿದಾಗ ತೊಂದರೆಯಾಗುತ್ತದೆ ಎಂದಿದ್ದು, ಯಾವುದೇ ಧರ್ಮವನ್ನು ಖಂಡಿಸುವ ಉದ್ದೇಶವಿಲ್ಲ. ಆದರೆ ಯಾರಾದರೂ ಸಾಮಾನ್ಯ ಜನರ ಭಾವನೆಗಳಿಗೆ ಧ್ವನಿ ನೀಡಬೇಕು. ಇದು ಧರ್ಮವನ್ನು ಖಂಡಿಸುವುದಲ್ಲ" ಅಂತ ತಿಳಿಸಿದ್ದರು.

IPL_Entry_Point

ವಿಭಾಗ