ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳ ಮೊದಲ ಹಂತದ ವೋಟಿಂಗ್ ಮುಕ್ತಾಯ; ಕ್ಷೇತ್ರವಾರು ಮತದಾನದ ವಿವರ ಹೀಗಿದೆ

ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳ ಮೊದಲ ಹಂತದ ವೋಟಿಂಗ್ ಮುಕ್ತಾಯ; ಕ್ಷೇತ್ರವಾರು ಮತದಾನದ ವಿವರ ಹೀಗಿದೆ

ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳ ಮೊದಲ ಹಂತದ ಮತದಾನ ಮುಕ್ತಾಯವಾಗಿದ್ದು, ಮಂಡ್ಯದಲ್ಲಿ ಅತಿ ಹೆಚ್ಚು ಮತದಾನವಾಗಿದೆ. ಕ್ಷೇತ್ರವಾರು ಮತದಾನದ ವಿವರ ಇಲ್ಲಿದೆ.

ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳ ಮೊದಲ ಹಂತದ ಮತದಾನ ಮುಕ್ತಾಯವಾಗಿದ್ದು, ಮಂಡ್ಯದಲ್ಲಿ ಗರಿಷ್ಠ ಮತದಾನವಾಗಿದೆ. ಬೆಂಗಳೂರಿನಲ್ಲಿ ಮತಗಟ್ಟೆಗಳ ಎದುರು ಜನರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ. (AP)
ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳ ಮೊದಲ ಹಂತದ ಮತದಾನ ಮುಕ್ತಾಯವಾಗಿದ್ದು, ಮಂಡ್ಯದಲ್ಲಿ ಗರಿಷ್ಠ ಮತದಾನವಾಗಿದೆ. ಬೆಂಗಳೂರಿನಲ್ಲಿ ಮತಗಟ್ಟೆಗಳ ಎದುರು ಜನರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ. (AP)

ಬೆಂಗಳೂರು: ಭಾರಿ ಕುತೂಹಲ ಮೂಡಿಸಿದ್ದ ಕರ್ನಾಟಕದ ಲೋಕಸಭಾ ಚುನಾವಣೆಯ (Karnataka Lok Sabha Election 2024) 14 ಕ್ಷೇತ್ರಗಳ ಮೊದಲ ಹಂತದ ಮತದಾನ ಇಂದು (ಏಪ್ರಿಲ್ 26, ಶುಕ್ರವಾರ) ಸಂಜೆ ಮುತ್ತಾಯವಾಗಿದೆ. ಸಣ್ಣ ಪುಟ್ಟ ಗೊಂದಲಗಳನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಕಡೆ ಶಾಂತಿಯುತ ಮತದಾನವಾಗಿದೆ. ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (Ex CM HD Kumaraswamy) ತಮ್ಮ ಕುಟುಂಬದವರೊಂದಿಗೆ ಬಂದು ಮಂಡ್ಯದಲ್ಲಿ ಮತದಾನ ಮಾಡಿದರೆ, ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಮೈಸೂರು ಜಿಲ್ಲೆಯ ಸಿದ್ದರಾಮನಹುಂಡಿಯಲ್ಲಿ ಹಕ್ಕು ಚಲಾಯಿಸಿದ್ದಾರೆ. ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ಜಾವಗಲ್ ಶ್ರೀನಾಥ್, ಸಿನಿಮಾ ನಟ-ನಟಿಯರು ಕೂಡ ಸಮೀಪದ ಮತಗಟ್ಟೆಗಳಲ್ಲಿ ಮತದಾನ ಮಾಡಿದ್ದಾರೆ.

ಶೇಕಡಾವಾರು ಮತದಾನವನ್ನು ನೋಡುವುದಾದರೆ ಮಂಡ್ಯದಲ್ಲಿ (Mandya) ಗರಿಷ್ಠ ಮತದಾನವಾಗಿದೆ. ಮಂಡ್ಯ ಶೇ 81.48 ರಷ್ಟು ಮತದಾನವಾಗಿದೆ. ಕರ್ನಾಟಕದಲ್ಲಿ ಒಟ್ಟಾರೆಯಾಗಿ ಶೇ 69.23 ರಷ್ಟು ಮತದಾನವಾಗಿದೆ. 14 ಲೋಕಸಭಾ ಕ್ಷೇತ್ರಗಳ ಮತದಾನದ ಶೇಕಡಾವಾರು ವಿವರ ಇಲ್ಲಿದೆ.

  1. ಉಡುಪಿ-ಚಿಕ್ಕಮಗಳೂರು ಶೇಕಡಾ 76.06
  2. ಹಾಸನ ಶೇ 77.51
  3. ದಕ್ಷಿಣ ಕನ್ನಡ ಶೇ 77.43
  4. ಚಿತ್ರದುರ್ಗ ಶೇ 73.11
  5. ತುಮಕೂರು ಶೇ 77.70
  6. ಮಂಡ್ಯ ಶೇ 81.48
  7. ಮೈಸೂರು ಶೇ 70.45
  8. ಚಾಮರಾಜನಗರ ಶೇ 76.59
  9. ಬೆಂಗಳೂರು ಗ್ರಾಮಾಂತರ ಶೇ 67.29
  10. ಬೆಂಗಳೂರು ಉತ್ತರ ಶೇ 54.42
  11. ಬೆಂಗಳೂರು ಕೇಂದ್ರ ಶೇ 52.81
  12. ಬೆಂಗಳೂರು ದಕ್ಷಿಣ ಶೇ 53.15
  13. ಚಿಕ್ಕಬಳ್ಳಾಪುರ ಶೇ 76.82
  14. ಕೋಲಾರ ಶೇ 78.07

ಒಟ್ಟಾರೆ ಕರ್ನಾಟಕದಲ್ಲಿ ಮೊದಲ ಹಂತ ಚುನಾವಣೆಯಲ್ಲಿ ಶೇಕಡಾ 69.23 ರಷ್ಟು ಮತದಾನವಾಗಿದೆ. ಕೆಲವರು ಮದುವೆ ಮಂಟಪಕ್ಕೆ ಹೋಗುವ ಮುನ್ನ ಮತದಾನ ಮಾಡಿದರೆ, ಇನ್ನೂ ಕೆಲವೆಡೆ ನವ ದಂಪತಿಗಳು ಮದುವೆ ಮಂಟಪದಿಂದ ನೇರವಾಗಿ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದ್ದಾರೆ. ಮತದಾನಕ್ಕಾಗಿಯೇ ಕೆಲ ಕನ್ನಡಿಗರು ಅಮೆರಿಕ, ಲಂಡನ್ ಹಾಗೂ ದುಬೈ ಸೇರಿದಂತೆ ವಿದೇಶದಿಂದ ಬಂದ ತಮ್ಮ ಹಕ್ಕು ಚಲಾಯಿಸಿದ್ದಾರೆ. ಕೆಲವರು ಬೋಟ್ ಮೂಲಕ ನದಿ ದಾಟಿ ಬಂದು ಮತದಾನ ಮಾಡಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಿ ಖುಷಿ ಪಟ್ಟಿದ್ದಾರೆ.

ಮತಗಟ್ಟೆ ಮೇಲೆ ಕಲ್ಲು ತೂರಾಟ, ಇವಿಎಂಗೆ ಹಾನಿ

ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳ ಮೊದಲ ಹಂತದ ಚುನಾವಣೆ ಬಹುತೇಕ ಶಾಂತಿಯುತವಾಗಿ ಮುಕ್ತಾಯವಾಗಿದೆ. ಕೆಲವೆಡೆ ಸಣ್ಣ ಪುಟ್ಟ ಘಟನೆಗಳ ವರದಿಯಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಮತಗಟ್ಟೆ ಮೇಲೆ ಕಲ್ಲುತೂರಾಟ ನಡೆಸಿ ಇವಿಎಂಗೆ ಹಾನಿ ಮಾಡಿರುವುದಾಗಿ ವರದಿಯಾಗಿದೆ. ಹನೂರು ತಾಲೂಕಿನ ಮಹದೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಮತದಾನ ಬಹಿಷ್ಕರಿಸಲಾಗಿತ್ತು. ಮತಗಟ್ಟೆ ಮೇಲೆ ಕಲ್ಲು ತೂರಾಟ ನಡೆಸಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವಿಎಂಗೆ ಹಾನಿ ಮಾಡಲಾಗಿದೆ ಎಂದು ಹೇಳಲಾಗಿದೆ.

ಮತಚಲಾಯಿಸಿ ಹೃದಯಾಘಾತದಿಂದ ವ್ಯಕ್ತಿ ಸಾವು

ಮತಗಟ್ಟೆಗೆ ಹೋಗಿ ಮತದಾನ ಮಾಡಿ ಹಿಂತಿರುತ್ತಿದ್ದಾಗಲೇ, ಹೃದಯಘಾತವಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ತುಮಕೂರಿನಲ್ಲಿ ನಡೆದಿದೆ, ಮೃತರನ್ನು ರಮೇಶ್ ಎಂದು ಗುರುತಿಸಲಾಗಿದೆ. ನಗರದ ಎಸ್‌ಎಸ್ ಪುರಂನ ಎಸ್‌ವಿಕೆ ಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಬೂತ್ ನಂಬರ್ 149ರಲ್ಲಿ ಕೆ.ಎಸ್.ರಮೇಶ್ ಅವರು ಬೆಳಗ್ಗೆ 11-30ರ ಸಮಯದಲ್ಲಿ ತಮ್ಮ ಪತ್ನಿಯೊಂದಿಗೆ ತೆರಳಿ ಮತ ಚಲಾಯಿಸಿ ಹೊರಬರುವಾಗಲೇ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದರು. ರಮೇಶ್ ಎಸ್.ಎಸ್.ಪುರಂನ ಮುಖ್ಯರಸ್ತೆಯಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದರು.

IPL_Entry_Point