Kannada News  /  Lifestyle  /  Inspiring Quotes By Netaji On Birth Anniversary
ಸುಭಾಸ್ ಚಂದ್ರ ಬೋಸ್ ಜಯಂತಿ 2023
ಸುಭಾಸ್ ಚಂದ್ರ ಬೋಸ್ ಜಯಂತಿ 2023 (Photo by Nyksindia on Twitter)

Parakram Diwas: ಇಂದು ನೇತಾಜಿಯವರ 126ನೇ ಜಯಂತಿ; ಶೌರ್ಯದ ನಾಯಕನ ಸ್ಪೂರ್ತಿದಾಯಕ ಸಂದೇಶಗಳು ಇಲ್ಲಿವೆ

23 January 2023, 8:53 ISTJayaraj
23 January 2023, 8:53 IST

ಸುಭಾಸ್ ಚಂದ್ರ ಬೋಸ್ ಜಯಂತಿ ಮತ್ತು 2023ರ ಗಣರಾಜ್ಯೋತ್ಸವಕ್ಕೂ ಮುನ್ನ, ದೇಶಕ್ಕೆ ಸದಾಕಾಲ ನೇತಾಜಿಯಾಗಿ ಉಳಿಯುವ ಬೋಸ್‌ ಅವರ ಸ್ಪೂರ್ತಿದಾಯಕ ಮಾತುಗಳನ್ನು ನಾವು ಕೇಳಲೇ ಬೇಕು.

ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ನೇತಾಜಿ ಸುಭಾಸ್ ಚಂದ್ರ ಬೋಸ್ ಪ್ರಮುಖರು. ಇವರ ಹೆಸರು ಕೇಳಿದಾಗ, ದೇಶಪ್ರೇಮದ ಕಿಚ್ಚು ಮೈಮನಗಳಲ್ಲಿ ಜಾಗೃತವಾಗುತ್ತದೆ. ಪ್ರಖರ ಭಾಷಣಗಳು, ರೋಮಾಂಚನಕಾರಿ ಘೋಷಣೆಗಳು ನೆನಪಿಗೆ ಬರುತ್ತದೆ. ಇಂದು ಇವರ ಜನ್ಮದಿನ.

ಟ್ರೆಂಡಿಂಗ್​ ಸುದ್ದಿ

1897ರ ಜನವರಿ 23ರಂದು ಒಡಿಶಾದ ಕಟಕ್‌ನಲ್ಲಿ ಜನಿಸಿದ ಸುಭಾಸ್ ಚಂದ್ರ ಬೋಸ್ ಅವರ ಜಯಂತಿಯನ್ನು ಕಳೆದ ವರ್ಷದಿಂದ ದೇಶದಲ್ಲಿ 'ಪರಾಕ್ರಮ್ ದಿವಸ್' (ಶೌರ್ಯದ ದಿನ) ಎಂದು ಆಚರಿಸಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟವನ್ನು ನಡೆಸಬೇಕಾಗಿದ್ದ ಬೋಸ್ ಅವರು, 1942ರಲ್ಲಿ ಜರ್ಮನಿಯಲ್ಲಿದ್ದರು. ಈ ವೇಳೆ ಆಜಾದ್ ಹಿಂದ್ ಫೌಜ್ ಅಥವಾ ಭಾರತೀಯ ರಾಷ್ಟ್ರೀಯ ಸೇನೆಯ ಸೈನಿಕರು ಸುಭಾಷ್‌ ಅವರಿಗೆ 'ನೇತಾಜಿ' ಎಂಬ ಗೌರವಾರ್ಥ ಬಿರುದನ್ನು ನೀಡಿದರು.

ಬೋಸ್ ಅವರು, 1923ರಲ್ಲಿ ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮತ್ತು ಬಂಗಾಳ ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ವರ್ಚಸ್ಸು ಹೊಂದಿರುವ ಯುವಕರ ನಾಯಕನಾಗಿ ಪರಿಗಣಿಸಲ್ಪಟ್ಟರು. ಬೋಸ್‌ ಅವರ ಧೈರ್ಯ ಮತ್ತು ಶೌರ್ಯಕ್ಕೆ ಬೆದರಿದ್ದ ಬ್ರಿಟೀಷರು, ಲೆಕ್ಕವಿಲ್ಲದಷ್ಟು ಬಾರಿ ಅವರನ್ನು ಬಂಧಿಸಿದರು. 1925ರಲ್ಲಿ ಬರ್ಮಾ(ಮ್ಯಾನ್ಮಾರ್)ಗೆ ನೇತಾಜಿಯವರನ್ನು ಗಡೀಪಾರು ಮಾಡಲಾಯಿತು. ರಹಸ್ಯ ಕ್ರಾಂತಿಕಾರಿ ಚಳುವಳಿ ನಡೆಸುತ್ತಿದ್ದಾರೆ ಎಂದು ಶಂಕಿಸಿ ಬೋಸ್‌ ಅವರಿಗೆ ಶಿಕ್ಷೆ ನೀಡಲಾಯ್ತು.

1941ರ ವೇಳೆಗೆ ಗೃಹಬಂಧನದಲ್ಲಿದ್ದ ಬೋಸ್‌ ಅವರು, ಅಫ್ಘಾನಿಸ್ತಾನ ಮತ್ತು ಸೋವಿಯತ್ ಒಕ್ಕೂಟದ ಮೂಲಕ ಜರ್ಮನಿಗೆ ಪರಾರಿಯಾಗಲು ವ್ಯವಸ್ಥೆ ಮಾಡಿಕೊಂಡರು. 1945ರ ಆಗಸ್ಟ್ 18 ರಂದು ಅವರು ಪ್ರಯಾಣಿಸುತ್ತಿದ್ದ ವಿಮಾನ ತೈವಾನ್‌ನಲ್ಲಿ ಅಪಘಾತಕ್ಕೀಡಾಗಿ ನೇತಾಜಿ ಸಾವನ್ನಪ್ಪಿದರು ಎಂದು ಹೇಳಲಾಗುತ್ತದೆ. ಆದರೆ, ಇದನ್ನು ಇನ್ನೂ ಭಾರತ ಒಪ್ಪಿಕೊಂಡಿಲ್ಲ. ಅಪಘಾತ ಸಂಭವಿಸಿದೆ ಎಂಬುದನ್ನೇ ಹಲವರು ನಂಬಿಲ್ಲ. ಬೋಸ್ ಅವರು, ಭಾರತಮಾತೆ ದಾಸ್ಯತೆಯ ಸಂಕೋಲೆಯಿಂದ ಮುಕ್ತಳಾಗುವುದನ್ನು ನೋಡಲು ಬಂದೇ ಬರುತ್ತಾರೆ ಎಂದೇ ಭಾರತೀಯರು ನಂಬಿದ್ದರು. ಆದರೆ, ಅದು ಇಂದಿಗೂ ನಿಜವಾಗಿಲ್ಲ.

ನೇತಾಜಿಯವರ ಸಾವು ಇಂದಿಗೂ ಭಾರತದಲ್ಲಿ ಹೆಚ್ಚು ಚರ್ಚೆಗೊಳಗಾದ ಮತ್ತು ನಿಗೂಢವಾಗಿಯೇ ಉಳಿದ ವಿಷಯವಾಗಿದೆ. 1945ರಲ್ಲಿ ಅವರು ಕಣ್ಮರೆಯಾದ ಬಳಿಕ, ನೇತಾಜಿ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಕುತಂತ್ರ ಹಾಗೂ ಪಿತೂರಿಯಿಂದ ಸುಭಾಷ್‌ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಒಂದೆಡೆ ವಾದಿಸಲಾಗುತ್ತಿದೆ.

ಸುಭಾಸ್ ಚಂದ್ರ ಬೋಸ್ ಜಯಂತಿ ಮತ್ತು 2023ರ ಗಣರಾಜ್ಯೋತ್ಸವಕ್ಕೂ ಮುನ್ನ, ದೇಶಕ್ಕೆ ಸದಾಕಾಲ ನೇತಾಜಿಯಾಗಿ ಉಳಿಯುವ ಬೋಸ್‌ ಅವರ ಸ್ಪೂರ್ತಿದಾಯಕ ಮಾತುಗಳನ್ನು ನಾವು ಕೇಳಲೇ ಬೇಕು.

1. "ಸ್ವಾತಂತ್ರ್ಯದ ಬೆಲೆ ತೆರಬೇಕಾದದ್ದು ರಕ್ತ ಮಾತ್ರ. ನನಗೆ ನಿಮ್ಮ ರಕ್ತ ಕೊಡಿ, ನಾನು ನಾನು ನಿಮಗೆ ಸ್ವಾತಂತ್ರ್ಯವನ್ನು ಕೊಡುತ್ತೇನೆ!"

2. "ಜೀವನದ ಅನಿಶ್ಚಿತತೆಗೆ ನಾನು ಹೆದರುವುದಿಲ್ಲ."

3. "ಭವಿಷ್ಯ ಇನ್ನೂ ನನ್ನ ಕೈಯಲ್ಲಿದೆ."

4. "ನಿಜವಾದ ಸೈನಿಕನಿಗೆ ಮಿಲಿಟರಿ ಮತ್ತು ಆಧ್ಯಾತ್ಮಿಕ ತರಬೇತಿ ಎರಡೂ ಬೇಕು."

5. “ಕೇವಲ ಜನರು, ಹಣ ಮತ್ತು ಆಯುಧಗಳಿಂದ ಸ್ವಾತಂತ್ರ್ಯ ಪಡೆಯಲು ಸಾಧ್ಯವಿಲ್ಲ. ಧೈರ್ಯಶಾಲಿಯಾಗಿ ಹೋರಾಡಲು ನಮ್ಮನ್ನು ನಾವು ಪ್ರೇರೇಪಿಸುವ ಪ್ರೇರಕ ಶಕ್ತಿಯನ್ನು ಹೊಂದಿರಬೇಕು."

6. "ಚರ್ಚೆಗಳಿಂದ ಮಾತ್ರವೇ ಇತಿಹಾಸದಲ್ಲಿ ಯಾವುದೇ ನೈಜ ಬದಲಾವಣೆ ಸಾಧ್ಯವಾಗಿಲ್ಲ."

7. "ತಮ್ಮ ರಾಷ್ಟ್ರಕ್ಕೆ ಯಾವಾಗಲೂ ನಿಷ್ಠರಾಗಿರುವ ಸೈನಿಕರು, ತಮ್ಮ ಪ್ರಾಣವನ್ನು ತ್ಯಾಗಮಾಡಲು ಸದಾ ಸಿದ್ಧರಾಗಿರುವವರು ನಿಜಕ್ಕೂ ಅಜೇಯರು."

8. "ರಾಷ್ಟ್ರೀಯತೆಯು ಮಾನವ ಜನಾಂಗದ ಅತ್ಯುನ್ನತ ಆದರ್ಶಗಳಾದ ಸತ್ಯಂ (ಸತ್ಯ), ಶಿವಂ (ಶಿವ ಅಥವಾ ಭಗವಂತ), ಸುಂದರಂ (ಸುಂದರ)ನಿಂದ ಪ್ರೇರಿತವಾಗಿದೆ."

9. "ಸ್ವಾತಂತ್ರ್ಯವನ್ನು ಯಾರೂ ಕೊಡುವುದಿಲ್ಲ, ಅದನ್ನು ನಾವು ಪಡೆಯಬೇಕು."