ಕನ್ನಡ ಸುದ್ದಿ  /  ಚುನಾವಣೆಗಳು  /  Raichur News: ಕರ್ನಾಟಕದ ನಿವೃತ್ತ ಐಎಎಸ್‌ ಅಧಿಕಾರಿಗೆ ರಾಯಚೂರಿನಿಂದ ಸಂಸದರಾಗುವ ಬಯಕೆ, ಯಾರವರು

Raichur News: ಕರ್ನಾಟಕದ ನಿವೃತ್ತ ಐಎಎಸ್‌ ಅಧಿಕಾರಿಗೆ ರಾಯಚೂರಿನಿಂದ ಸಂಸದರಾಗುವ ಬಯಕೆ, ಯಾರವರು

IAS ಕರ್ನಾಟಕದಲ್ಲಿ ಮೂರು ದಶಕ ಕಾಲ ಐಎಎಸ್‌ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಕುಮಾರನಾಯಕ್‌ ಅವರು ರಾಯಚೂರಿನಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎನ್ನಲಾಗುತ್ತಿದೆ.

ನಿವೃತ್ತ ಐಎಎಸ್‌ ಅಧಿಕಾರಿ ಜಿ.ಕುಮಾರನಾಯಕ್‌
ನಿವೃತ್ತ ಐಎಎಸ್‌ ಅಧಿಕಾರಿ ಜಿ.ಕುಮಾರನಾಯಕ್‌

ಬೆಂಗಳೂರು: ಅವರು ಈ ಹಿಂದೆ ರಾಯಚೂರು, ಮೈಸೂರು ಜಿಲ್ಲಾಧಿಕಾರಿಯಾಗಿದ್ದರು. ಸಕ್ರಿಯವಾಗಿಯೇ ಕೆಲಸ ಮಾಡಿದವರು. ನಿವೃತ್ತಿಯಾಗಿ ಏಳು ತಿಂಗಳಾಗಿದೆ. ಆಗಲೇ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದಾರೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ರಾಯಚೂರಿನಿಂದ ಸ್ಪರ್ಧಿಸಬೇಕು ಎನ್ನುವುದು ಅವರ ಬಯಕೆ. ಇದಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಚುನಾವಣೆ ಸಮಿತಿಗೆ ಶಿಫಾರಸ್ಸು ಮಾಡಿರುವ ಹೆಸರಿನಲ್ಲಿ ನಿವೃತ್ತ ಐಎಎಸ್‌ ಅಧಿಕಾರಿಯ ಹೆಸರು ಇದೆ. ಅವರು ಕೂಡ ಟಿಕೆಟ್‌ ಘೋಷಣೆಯಾಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದು, ಅವಕಾಶ ಸಿಕ್ಕರೆ ಸ್ಪರ್ಧೆ ಮಾಡಿಕೊಳ್ಳಲು ತಯಾರಿ ಮಾಡಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ರಾಯಚೂರು ಡಿಸಿಯಾಗಿದ್ದ ಜಿ.ಕುಮಾರನಾಯಕ್‌ ಅವರು ಈ ಬಾರಿ ರಾಯಚೂರು ಕ್ಷೇತ್ರಕ್ಕೆ ಕಾಂಗ್ರೆಸ್‌ ಟಿಕೆಟ್‌ ಪ್ರಬಲ ಆಕಾಂಕ್ಷಿ. ಅವರು ಮೈಸೂರು ಡಿಸಿಯಾಗಿಯೂ ಮೂರು ವರ್ಷ ಕೆಲಸ ಮಾಡಿದ್ದವರು. ಇವರ ನಂತರ ರಾಯಚೂರು ಡಿಸಿಯಾಗಿದ್ದ ಸಸಿಕಾಂತ ಸೇಂಥಿಲ್‌ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ ಸೇರಿದ್ದಾರೆ.

ಕುಮಾರನಾಯಕ್‌ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯವರಾದರೂ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಆದರೆ ಶಿಕ್ಷಣವನ್ನು ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆ, ಬೆಂಗಳೂರಿನಲ್ಲಿ ಎಂಜಿನಿಯರಿಂಗ್‌ ಪೂರೈಸಿದವರು. ಬ್ಯಾಂಕ್‌ ಅಧಿಕಾರಿಯಾಗಿದ್ದವರು. ಆನಂತರ ಯುಪಿಎಸ್ಸಿ ಪರೀಕ್ಷೆ ಬರೆದು 1990 ರಲ್ಲಿ ಕರ್ನಾಟಕ ಸೇವೆಗೆ ಆಯ್ಕೆಯಾದವರು.

ವಿವಿಧೆಡೆ ಸೇವೆ

ಮೂರು ದಶಕ ಕಾಲ ಹಲವು ಇಲಾಖೆಯಲ್ಲಿ ಕೆಲಸ ಮಾಡಿದವರು. ಹುಣಸೂರು, ಕುಮಟಾ ಎಸಿಯಾಗಿದ್ದರು. ಬೆಳಗಾವಿ ಜಿಲ್ಲಾಪಂಚಾಯಿತಿ ಸಿಇಒ ಆಗಿದ್ದರು. ನಂತರ ಡಿಸಿಯಾದರು. ಅದರಲ್ಲೂ ಆಹಾರ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ., ಇಂಧನ, ಶಿಕ್ಷಣ, ಬಿಬಿಎಂಪಿ, ಬಿಡಿಎದಲ್ಲಿ ಕಾರ್ಯನಿರ್ವಹಿಸಿ ಕಳೆದ ವರ್ಷ ನಿವೃತ್ತರಾದವರು.

ಕುಮಾರನಾಯಕ್‌ ಅವರು ಮೂರು ವರ್ಷ ರಾಯಚೂರು ಡಿಸಿಯಾಗಿದ್ಧಾಗ ಧರ್ಮಸಿಂಗ್‌ ಉಸ್ತುವಾರಿ ಸಚಿವರಾಗಿದ್ದರು. ಅವರೊಂದಿಗೆ ಆತ್ಮೀಯತೆ ಇತ್ತು. ಆಗ ಜಿಲ್ಲೆಯಲ್ಲಿ ಮಾಡಿದ ಕೆಲಸವನ್ನು ಜನ ಈಗಲೂ ಸ್ಮರಿಸುತ್ತಾರೆ. ರಾಯಚೂರಿನಲ್ಲಿ ಬರ ನಿರ್ವಹಣೆ, ಗ್ರಂಥಾಲಯಗಳ ನಿರ್ಮಾಣದಂತ ಕೆಲಸಗಳು ಪ್ರಮುಖವಾದವು.

ಮೈಸೂರು ದಸರಾಕ್ಕೆ ಹೊಸ ರೂಪ

ಆನಂತರ ಮೈಸೂರಿನಲ್ಲಿ ಡಿಸಿಯಾಗಿದ್ದಾಗ ದಸರಾವನ್ನು ಯಶಸ್ವಿಯಾಗಿ ನಿಭಾಯಿಸಿ ಹೊಸತನ ನೀಡಿದ ಹಿರಿಮೆ ಅವರದ್ದು. ಆಗ ಉಸ್ತುವಾರಿ ಸಚಿವರಾಗಿದ್ದ ಎಚ್.ವಿಶ್ವನಾಥ್‌ ಅವರೊಂದಿಗೆ ಕುಮಾರನಾಯಕ್‌ ಅವರು ಯುವ ದಸರಾ ಸಹಿತ ಹತ್ತಾರು ಹೊಸ ಕಾರ್ಯಕ್ರಮಗಳನ್ನು ಆರಂಭಿಸಿದ್ದರು. ಅಲ್ಲದೇ ದಸರಾಕ್ಕೆ ಪ್ರವಾಸೋದ್ಯಮ ಸ್ಪರ್ಶ ನೀಡಿದ್ದರು.

ನಿವೃತ್ತಿ ನಂತರವೂ ಜನಸೇವೆ ಮಾಡಬೇಕು ಎನ್ನುವುದು ಅವರ ಬಯಕೆಯಾಗಿದ್ದರಿಂದ ಈಗ ರಾಜಕೀಯ ಕ್ಷೇತ್ರ ಮಾಡಿಕೊಂಡಿದ್ದಾರೆ. ಅದರಲ್ಲೂ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾದ ರಾಯಚೂರಿನ ಮೇಲೆ ಕಣ್ಣಿಟ್ಟಿದ್ದಾರೆ.

ರೋಜಾ ಚಿತ್ರ ಮಿಸ್

ಮೂರು ದಶಕದ ಹಿಂದೆ ರೋಜಾ ಎನ್ನುವ ಹಿಟ್‌ ಸಿನೆಮಾ ಬಿಡುಗಡೆಯಾದಾಗ ಆ ಚಿತ್ರದ ನಾಯಕ ಅರವಿಂದ ಸ್ವಾಮಿ ಅವರನ್ನು ನೋಡಿದರೆ ಕುಮಾರನಾಯಕ್‌ ಅವರ ಹೋಲಿಕೆ ಇತ್ತು. ಅವರ ಸಹೋದರ ಇರಬೇಕು ಎನ್ನುವಷ್ಟರ ಮಟ್ಟಿಗೆ ಹೋಲಿಕೆ. ಮಣಿರತ್ನಂ ಅವರು ಮೊದಲು ಕುಮಾರನಾಯಕ್‌ ಅವರನ್ನೇ ರೋಜಾ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದರು.ಆದರೆ ತಾವು ಐಎಎಸ್‌ ಪರೀಕ್ಷೆಗೆ ತಯಾರಾಗಬೇಕು ಎಂದು ಕುಮಾರನಾಯಕ್‌ ಚಿತ್ರರಂಗದಿಂದ ಹಿಂದೆ ಸರಿದು ಸಾರ್ವಜನಿಕ ಆಡಳಿತ ಸೇವೆಗೆ ಬಂದರು ಎಂದು ಅವರ ಆತ್ಮೀಯರು ನೆನಪಿಸಿಕೊಳ್ಳುತ್ತಾರೆ.

ಸಹೋದರ ಕೂಡ ಐಎಎಸ್‌

ಜಿ.ಕುಮಾರನಾಯಕ್‌ ಅವರ ಸಹೋದರ ಅನಂತರಾಂ ಕೂಡ ಆಂಧ್ರಪ್ರದೇಶದಲ್ಲಿ ಹಿರಿಯ ಐಎಎಸ್‌ ಅಧಿಕಾರಿ. ಈಗ ಕಾರ್ಮಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌