ಕನ್ನಡ ಸುದ್ದಿ  /  ಕರ್ನಾಟಕ  /  Congress Guarantee: ಇಂದಿನಿಂದಲೇ 5 ಗ್ಯಾರಂಟಿ ಜಾರಿ; ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಘೋಷಣೆ

Congress Guarantee: ಇಂದಿನಿಂದಲೇ 5 ಗ್ಯಾರಂಟಿ ಜಾರಿ; ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಘೋಷಣೆ

Congress Guarantee: ಮಹತ್ವಾಕಾಂಕ್ಷೆಯ ಚುನಾವಣಾ ಭರವಸೆಯಾದ 5 ಗ್ಯಾರೆಂಟಿಗಳನ್ನು ಇಂದೇ ಜಾರಿಗೊಳಿಸುವುದಾಗಿ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಘೋಷಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನೀಡಿದ್ದ 5 ಗ್ಯಾರೆಂಟಿಗಳನ್ನು ಇಂದೇ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ (ಮೇ 20) ಘೋಷಿಸಿದರು.

ಅವರು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಕಾರ್ಯಕ್ರಮದ ಧನ್ಯವಾದ ಸಮರ್ಪಣೆ ಮಾಡುವ ವೇಳೆ ಈ ಭರವಸೆ ನೀಡಿದರು.

ಕನ್ನಡದ ಎಲ್ಲ ಜನರಿಗೆ ಧನ್ಯವಾದ ಹೇಳ್ತೀನಿ. ಜನರ ನಿರೀಕ್ಷೆಗೆ ತಕ್ಕ ಆಡಳಿತ ಕೊಡ್ತೇವೆ. ಜನರು ಬದಲಾವಣೆ ಬಯಸಿದ್ದಾರೆ. ಅವರಿಗೆ ಕೊಟ್ಟಿರುವ 5 ಗ್ಯಾರೆಂಟಿಗಳನ್ನೂ ಇವತ್ತು ಕ್ಯಾಬಿನೆಟ್‌ ಒಪ್ಪಿಗೆ ಮೂಲಕ 5 ಗ್ಯಾರಂಟಿ ಜಾರಿ ಮಾಡ್ತೇವೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

ಕಾಂಗ್ರೆಸ್‌ಗೆ ಸಿಕ್ಕ ಜಯ, 7 ಕೋಟಿ ಕನ್ನಡಿಗರ ಜಯ ಇದು. ನಾಡಿನ ಕೋಟ್ಯಂತರ ಜನರ ಆಶೀರ್ವಾದದಿಂದ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬರಲು ಈ ರಾಜ್ಯದ ಜನರ ಆಶೀರ್ವಾದ ಕಾರಣ. ರಾಜ್ಯದಲ್ಲಿ ಪ್ರಚಾರ ಆರಂಭವಾಗಿದ್ದು ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ಮೂಲಕ. ಪ್ರಚಾರ ಮಾಡಿದ ಎಲ್ಲ ನಾಯಕರಿಗೂ ನಾನು ಹೃದಯ ತುಂಬಿದ ಧನ್ಯವಾದ ಅರ್ಪಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು. ತಮ್ಮನ್ನು ಬೆಂಬಲಿಸಿದ ಸಾಹಿತಿಗಳು ಮತ್ತು ಚಿಂತರಕರನ್ನೂ ಸ್ಮರಿಸಿದರು.

ನಾವು ಪ್ರಣಾಳಿಕೆಯಲ್ಲಿ ಕೊಟ್ಟಿರುವ ಎಲ್ಲ ಆಶ್ವಾಸನೆಗಳನ್ನು ಈಡೇರಿಸುತ್ತೇವೆ. ನುಡಿದಂತೆ ನಡೆಯುತ್ತೇವೆ ಎಂದು ಸಿದ್ದರಾಮಯ್ಯ ಭಾಷಣ ಮುಗಿಸಿದರು

ವಂದನಾರ್ಪಣೆ ಮಾಡಲು ಸಿದ್ದರಾಮಯ್ಯ ಮೈಕ್ ಬಳಿಗೆ ಬಂದ ತಕ್ಷಣ ಜನರು ಶಿಳ್ಳೆ ಹೊಡೆದು ಸ್ವಾಗತಿಸಿದರು. ಹರ್ಷೋದ್ಗಾರ, ಘೋಷಣೆಗಳ ಆರ್ಭಟ ಹೆಚ್ಚಾದಾಗ ಸಿದ್ದರಾಮಯ್ಯ ಅವರೇ ಕೈ ಸನ್ನೆ ಮಾಡಿ ಸುಮ್ಮನಾಗಿಸಿದರು.

IPL_Entry_Point